ಭ್ರಷ್ಟಾಚಾರ ಆರೋಪವಿದ್ದರೂ ಸಿಬಿಐ, ಇಡಿ ದಾಳಿ ನಡೆಸದ 7 ರಾಜಕಾರಣಿಗಳಿವರು
ಬೆಂಗಳೂರು, ಆಗಸ್ಟ್ 22: ವಿವಿಧ ಭ್ರಷ್ಟಾಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನೇಕ ರಾಜಕಾರಣಿಗಳ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ದಾಳಿ ನಡೆಸಿವೆ. ಜತೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ಅನೇಕ ಬಾರಿ ಶೋಧ ನಡೆಸಿ ವಿಚಾರಣೆಗೆ ಒಳಪಡಿಸಿದ ನಿದರ್ಶನಗಳಿವೆ.
ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ. ಬುಧವಾರ ಸಾಕಷ್ಟು ನಾಟಕೀಯ ಬೆಳವಣಿಗೆಗಳ ಬಳಿಕ ರಾತ್ರಿ ಚಿದಂಬರಂ ಅವರನ್ನು ಬಂಧಿಸಲಾಗಿದೆ.
ಸೋನಿಯಾ, ರಾಹುಲ್ ಸೇರಿ ಜಾಮೀನಿನ ಮೇಲಿರುವ ಕಾಂಗ್ರೆಸ್ ನಾಯಕರು ಯಾರ್ಯಾರು?
ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಸಿಬಿಐ ಅಮಿತ್ ಶಾ ಅವರನ್ನು ಕೊಲೆ ಆರೋಪದಲ್ಲಿ ಬಂಧಿಸಿತ್ತು. ಆಗ ಚಿದಂಬರಂ ಅವರು ಗೃಹ ಸಚಿವರಾಗಿದ್ದರು. ಈಗ ಚಿದಂಬರಂ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅಮಿತ್ ಶಾ ಅವರು ಗೃಹ ಸಚಿವರ ಸ್ಥಾನದಲ್ಲಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಿಂದ ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಅನೇಕ ರಾಜಕೀಯ ಮುಖಂಡರ ಮೇಲೆ ತನಿಖಾ ಸಂಸ್ಥೆಗಳಿಂದ ನಿರಂತರ ದಾಳಿ ನಡೆಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರು ಹಾಗೂ ಅವರ ಸಂಬಂಧಿಕರ ಆಸ್ತಿಗಳ ಮೇಲೆ ಐಟಿ ದಾಳಿಗಳು ನಡೆದಿದ್ದವು. ವಿರೋಧಪಕ್ಷಗಳು ಇವು ತಮ್ಮನ್ನು ಗುರಿಯನ್ನಾಗಿರಿಸಿಕೊಂಡು ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿರುವ ದಾಳಿಗಳು ಎಂದು ಆರೋಪಿಸಿದ್ದವು.
ಆ ಹೆಂಗಸಿನ ತಪ್ಪೊಪ್ಪಿಗೆ, ಪಿ ಚಿದಂಬರಂ ಬಂಧನಕ್ಕೆ ಕಾರಣವಾಯ್ತು
ತನಿಖಾ ಸಂಸ್ಥೆಗಳು ನಡೆಸುತ್ತಿರುವ ದಾಳಿಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟವಲ್ಲ. ಏಕೆಂದರೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡರ ಮೇಲೆ ಈ ರೀತಿಯ ದಾಳಿಗಳು ನಡೆಯುತ್ತಿಲ್ಲ ಎಂದು ವಿರೋಧಪಕ್ಷಗಳು ಆರೋಪಿಸಿವೆ. ಈ ರೀತಿ ಆರೋಪ ಎದುರಿಸುತ್ತಿದ್ದರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಕೆಲವು ಮುಖಂಡರ ಮೇಲೆ ಮೃದು ಧೋರಣೆ ತಾಳಿವೆ. ಇನ್ನು ಕೆಲವರ ಮೇಲೆ ಪ್ರೀತಿ ಹುಟ್ಟಿಕೊಂಡಿದೆ. ತನಿಖಾ ಸಂಸ್ಥೆಗಳ ಕಣ್ಣಿಗೆ ಬಿದ್ದೂಸ ಬಚಾವಾಗಿರುವ ಏಳು ಮಂದಿ ಪ್ರಮುಖ ರಾಜಕಾರಣಿಗಳ ಪಟ್ಟಿಯನ್ನು 'ದಿ ಪ್ರಿಂಟ್' ಪತ್ರಿಕೆ ನೀಡಿದೆ.
ಬಿಎಸ್ ಯಡಿಯೂರಪ್ಪ
ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಭ್ರಷ್ಟಾಚಾರ ಆರೋಪದಲ್ಲಿ ಸೆರೆವಾಸ ಅನುಭವಿಸಿದ್ದರು. ಈ ಆರೋಪಗಳ ನಡುವೆಯೂ ಅವರು ನಾಲ್ಕನೆಯ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದುಕೊಂಡಿದ್ದಾರೆ. ಭೂ ಮತ್ತು ಗಣಿ ಹಗರಣಗಳ ಆರೋಪ ಅವರ ಮೇಲಿದೆ. ತನಿಖೆ ವೇಳೆ ವಶಪಡಿಸಿಕೊಂಡ ಡೈರಿಗಳು, ಅವರು ಕೇಂದ್ರದಲ್ಲಿರುವ ಪ್ರಮುಖ ಬಿಜೆಪಿ ನಾಯಕರಿಗೆ, ನ್ಯಾಯಾಧೀಶರು ಮತ್ತು ವಕೀಲರರಿಗೆ ಭಾರಿ ಮೊತ್ತದ ಹಣ ಸಂದಾಯ ಮಾಡಿದ್ದಾರೆ ಎಂಬುದನ್ನು ತಿಳಿಸಿವೆ. ಈ ಆರೋಪಗಳ ವಿರುದ್ಧ ಸೆಟೆದು ನಿಂತಿದ್ದ ಯಡಿಯೂರಪ್ಪ ಅವರು ಬಹುತೇಕ ಆರೋಪಗಳಿಂದ ಮುಕ್ತರಾಗಿದ್ದಾರೆ. ಯಡಿಯೂರಪ್ಪ ವಿರುದ್ಧ ಕೆಲವು ವರ್ಷಗಳ ಹಿಂದೆ ತನಿಖೆ ನಡೆಸುತ್ತಿದ್ದ ಇದೇ ಸಿಬಿಐ, ಮೋದಿ ಸರ್ಕಾರ ಬಂದ ಬಳಿಕ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಸಂಗ್ರಹಿಸುವಲ್ಲಿ ವಿಫಲವಾಗಿದೆ. ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧದ ಒಂದು ಪ್ರಕರಣದ ಕುರಿತು ತನಿಖೆಗೆ ಆದೇಶ ನೀಡುವ ಅರ್ಜಿ ಸುಪ್ರೀಂಕೋರ್ಟ್ ಮುಂದೆ ಬಾಕಿ ಇದೆ.
ಬಳ್ಳಾರಿಯ ರೆಡ್ಡಿ ಸಹೋದರರು
2018ರ ಕರ್ನಾಟಕ ಚುನಾವಣೆಗೂ ಮುನ್ನ ಬಳ್ಳಾರಿಯ ರೆಡ್ಡಿ ಸಹೋದರರ ವಿರುದ್ಧದ 16,500 ಕೋಟಿ ರೂ ಮೊತ್ತದ ಗಣಿ ಹಗರಣದ ತನಿಖೆಗೆ ಯಾವುದೇ ತಾರ್ಕಿಕ ಅಂತ್ಯ ನೀಡದೆ ಸಿಬಿಐ ತನಿಖೆಯನ್ನು ತರಾತುರಿಯಲ್ಲಿ ಮುಗಿಸಿತ್ತು. ದೇಶದ ದೊಡ್ಡ ಪ್ರಮಾಣದ ಸಂಪತ್ತಿನ ಲೂಟಿ ಹೊಡೆದ ಆರೋಪವಿದ್ದರೂ ಮೋದಿ ಸರ್ಕಾರವು ಬಳ್ಳಾರಿ ಸೋದರರನ್ನು ಮುಕ್ತವಾಗಿ ಬಿಟ್ಟಿದೆ. ಏಕೆಂದರೆ ಬಿಜೆಪಿಗೆ ಗೆಲ್ಲಲು ಅವರಿಗೆ ರೆಡ್ಡಿ ಸಹೋದರರ ಸಹಾಯ ಅಗತ್ಯವಾಗಿತ್ತು ಎಂದು 'ದಿ ಪ್ರಿಂಟ್' ಹೇಳಿದೆ.
ತಾವೇ ಉದ್ಘಾಟಿಸಿದ ಸಿಬಿಐ ಕಟ್ಟಡದಲ್ಲಿ ಬಂಧಿಯಾದ ಚಿದಂಬರಂ
ಹಿಮಾಂತ ಬಿಸ್ವ ಶರ್ಮಾ
ಈಶಾನ್ಯದ ಅಮಿತ್ ಶಾ ಎಂದೇ ಹೆಸರಾಗಿರುವ ಹಿಮಾಂತ ಬಿಸ್ವ ಶರ್ಮಾ ಒಂದು ಕಾಲದಲ್ಲಿ ಕಾಂಗ್ರೆಸ್ನ ಸದಸ್ಯರಾಗಿದ್ದವರು. ಆಗ ಅವರ ಮೇಲೆ ಭ್ರಷ್ಟಾಚಾರ ಆರೋಪಗಳಿದ್ದವು. ಗುವಾಹಟಿಯಲ್ಲಿನ ನೀರಿನ ಪೂರೈಕೆ ಹಗರಣದಲ್ಲಿ ಪ್ರಮುಖ ಶಂಕಿತ ಎಂದು ಆರೋಪಿಸಿ ಬಿಸ್ವ ಶರ್ಮಾ ವಿರುದ್ಧ ತೀವ್ರ ಪ್ರಚಾರ, ಪ್ರತಿಭಟನೆಗಳನ್ನು ನಡೆಸಿದ್ದ ಬಿಜೆಪಿ, ಅವರ ವಿರುದ್ಧ ಬುಕ್ಲೆಟ್ ಕೂಡ ಬಿಡುಗಡೆ ಮಾಡಿತ್ತು. ಅಮೆರಿಕದ ನಿರ್ಮಾಣ ನಿರ್ವಹಣಾ ಕಂಪೆನಿಯೊಂದು ಇದರಲ್ಲಿ ಭಾಗಿಯಾಗಿದ್ದರಿಂದ ಇದಕ್ಕೆ 'ಲೂಯಿಸ್ ಬರ್ಗರ್' ಪ್ರಕರಣ ಎಂಬ ಹೆಸರು ನೀಡಲಾಗಿತ್ತು. ಅಮೆರಿಕದ ನ್ಯಾಯಾಂಗ ಇಲಾಖೆಯು ತನ್ನ ವಿದೇಶಾಂಗ ಭ್ರಷ್ಟಾಚಾರ ಕಾಯ್ದೆಯಡಿ ಆರೋಪಪಟ್ಟಿ ಸಹ ಸಲ್ಲಿಸಿತ್ತು. ಅನಾಮಧೇಯ ಸಚಿವರಿಗೆ ಕಂಪೆನಿ ಲಂಚ ನೀಡಿದೆ ಎಂದು ಆರೋಪಿಸಿತ್ತು. ಆ ಸಚಿವರು ಶರ್ಮಾ ಎಂದೇ ಆರೋಪಿಸುತ್ತಿದ್ದ ಬಿಜೆಪಿ, ಅವರು 2016ರ;್;ಒ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ತನ್ನ ವರಸೆ ಬದಲಿಸಿತ್ತು. ಅವರ ವಿರುದ್ಧದ ತನಿಖೆಯನ್ನು ಅಸ್ಸಾಂ ಸರ್ಕಾರ ನಿಧಾನಗೊಳಿಸಿತ್ತು. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ತನ್ನ ಬೇಡಿಕೆಯನ್ನು ಬಿಜೆಪಿ ಮರೆತೇಬಿಟ್ಟಿತು.
ಶಿವರಾಜ್ ಸಿಂಗ್ ಚೌಹಾಣ್
ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವ್ಯಾಪಂ ಹಗರಣದಲ್ಲಿ 2017ರಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿತ್ತು. ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಸದಸ್ಯರಾಗಿದ್ದರೆ ಅವರು ಆರೋಪದಿಂದ ಮುಕ್ತಗೊಳ್ಳಲು ಸಾಧ್ಯವಿತ್ತೇ ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದ್ದಾರೆ. ಪ್ರವೇಶ ಪರೀಕ್ಷೆಯ ಬೃಹತ್ ಹಗರಣದಲ್ಲಿ ಒಬ್ಬರ ನಂತರ ಒಬ್ಬರು ಸಾಕ್ಷಿಗಳು ಮತ್ತು ಭಾಗಿದಾರರು ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದರು. ಸುಮಾರು 40 ಕ್ಕೂ ಹೆಚ್ಚು ಮಂದಿ ಹೀಗೆ ಸತ್ತಿದ್ದಾರೆ ಎಂದು ಮಾಧ್ಯಮಗಳು ಅಂದಾಜಿಸಿವೆ.
ಮುಕುಲ್ ರಾಯ್
ಪಶ್ಚಿಮ ಬಂಗಾಳದ ಪ್ರಭಾವಿ ಮುಖಂಡರಲ್ಲಿ ಒಬ್ಬರಾದ ಮುಕುಲ್ ರಾಯ್ ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಎಡಪಂಥೀಯ ಪ್ರಾಬಲ್ಯವುಳ್ಳ ರಾಜ್ಯದಲ್ಲಿ ಬಿಜೆಪಿ ನೆಲೆ ಕಾಣಲು ಪ್ರಯತ್ನಿಸುತ್ತಿರುವಾಗ ಅಲ್ಲಿನ ಪ್ರಬಲ ಮುಖಂಡರೊಬ್ಬರ ನೆರವು ಅಗತ್ಯವಾಗಿತ್ತು. ನಾರದಾ ಸ್ಟಿಂಗ್ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ರಾಯ್ ಅವರಿಗೆ ಸಮನ್ಸ್ ಜಾರಿ ಮಾಡಿದ ಕೆಲವೇ ದಿನಗಳಲ್ಲಿ ಅವರು ಬಿಜೆಪಿ ಸೇರಿಕೊಂಡರು. ಈ ಪ್ರಕರಣದಲ್ಲಿ ಟಿಎಂಸಿಯ ಅನೇಕ ಪ್ರಮುಖ ನಾಯಕರು ಲಂಚ ಪಡೆದುಕೊಳ್ಳುತ್ತಿರುವುದರನ್ನು ಸುದ್ದಿವಾಹಿನಿಯೊಂದು ತನಿಖಾ ವರದಿ ಮೂಲಕ ಬಹಿರಂಗಪಡಿಸಿತ್ತು. ಇದರ ಜತೆಗೆ ರಾಯ್ ಅವರು ಶಾರದಾ ಚಿಟ್ ಫಂಡ್ ಹಗರಣದಲ್ಲಿಯೂ ಆರೋಪಿಯಾಗಿದ್ದರು. ಈಗ ಅವರ ವಿರುದ್ಧದ ಆರೋಪಗಳ ತನಿಖೆಯ ಪ್ರಕ್ರಿಯೆ ನಿಧಾನಗೊಂಡಿದೆ.
ರಮೇಶ್ ಪೋಖ್ರಿಯಾಲ್ ನಿಶಾಂಕ್
ರಮೇಶ್ ಪೋಖ್ರಿಯಾಲ್ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವರು. ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಅವರು ಎರಡು ಪ್ರಮುಖ ದೊಡ್ಡ ಹಗರಣಗಳಿಂದ ಅವರು ಸುದ್ದಿಯಾಗಿದ್ದರು. ಭೂ ಹಗರಣ ಮತ್ತು ಜಲವಿದ್ಯುತ್ ಯೋಜನೆಗಳ ಎರಡು ಪ್ರಕರಣಗಳು ಅವರ ಕೊರಳಿಗೆ ಸುತ್ತಿಕೊಂಡಿದ್ದವು. ಅವರ ಆಡಳಿತಾವಧಿಯಲ್ಲಿ ಅನೇಕ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದವು. ಈ ಕಾರಣಕ್ಕೆ 2011ರಲ್ಲಿ ಅವರು ರಾಜೀನಾಮೆ ನೀಡುವಂತೆ ಬಿಜೆಪಿ ಒತ್ತಡ ಹೇರಬೇಕಾದ ಅನಿವಾರ್ಯತೆ ಉಂಟಾಯಿತು. ಈಗ ಸಿಬಿಐ ಅಥವಾ ಉತ್ತರಾಖಂಡ ಸರ್ಕಾರ ಅವರ ವಿರುದ್ಧದ ಆರೋಪಗಳ ತನಿಖೆಗೆ ಆತುರ ಮಾಡುತ್ತಿಲ್ಲ. ಈಗ ಅವರು ಮೋದಿ ಅವರ ಸರ್ಕಾರದಲ್ಲಿ ಪ್ರಮುಖ ಸಚಿವಾಲಯದ ಖಾತೆಯನ್ನು ಪಡೆದುಕೊಂಡಿದ್ದಾರೆ.
ನಾರಾಯಣ ರಾಣೆ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯಾದ ನಾರಾಯಣ ರಾಣೆ ಅವರನ್ನು ಕಳೆದ ವರ್ಷ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಿಜೆಪಿ ಅವರನ್ನು ರಾಜ್ಯಸಭಾ ಸಂಸದರನ್ನಾಗಿ ಮಾಡಿದೆ. ರಾಣೆ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಮತ್ತು ಭೂ ಅವ್ಯವಹಾರ ಆರೋಪಗಳಿವೆ. ಮಹಾರಾಷ್ಟ್ರ ರಾಜಕಾರಣದಲ್ಲಿ ಸುದೀರ್ಘ ಕಾಲದಿಂದ ಆರೋಪ ಹೊತ್ತಿರುವ ಅವರ ಕುಟುಬದ ಸದಸ್ಯರ ವಿರುದ್ಧವೂ ಪ್ರಕರಣಗಳಿವೆ. ಆದರೆ, ಇದುವರೆಗೂ ಅವರ ಆಸ್ತಪಾಸ್ತಿಗಳ ಮೇಲೆ ಸಿಬಿಐ ಅಥವಾ ಇಡಿ ದಾಳಿ ನಡೆದಿಲ್ಲ ಮತ್ತು ವಿಚಾರಣೆ ಕೂಡ ಆಗಿಲ್ಲ ಎಂದು ದಿ ಪ್ರಿಂಟ್ ವರದಿ ಹೇಳಿದೆ.