ಉಪ ಚುನಾವಣೆ: ಬಿಜೆಪಿ - ಜೆಡಿಎಸ್ ನಡುವೆ ಒಂದಂತೂ ಸತ್ಯ?
ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು (ಅ 27) ತೆರೆ ಬೀಳಲಿದೆ. ಆ ಮೂಲಕ, ಮೂರು ಪಕ್ಷಗಳ ಸಭ್ಯತೆ ಮೀರಿದ ಆರೋಪ/ಪ್ರತ್ಯಾರೋಪಕ್ಕೆ ಒಂದು ಹಂತಕ್ಕೆ ತೆರೆ ಬೀಳಲಿದೆ.
ಮೇಲ್ನೋಟಕ್ಕೆ ಹಾನಗಲ್ ನಲ್ಲಿ ಬಿಜೆಪಿ - ಕಾಂಗ್ರೆಸ್ ನಡುವೆ ಮತ್ತು ಸಿಂಧಗಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಅಪರೂಪಕ್ಕೆ ಎನ್ನುವಂತೆ ಈ ಇಳಿ ವಯಸ್ಸಿನಲ್ಲೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಸಿಂಧಗಿ ಚುನಾವಣೆಯ ಉಸ್ತುವಾರಿಯನ್ನು ಖುದ್ದು ತಾನೇ ವಹಿಸಿಕೊಂಡಿದ್ದಾರೆ.
ಎಚ್ಡಿಕೆ ಸಮಯಾಧಾರಿತ ರಾಜಕಾರಣಕ್ಕೆ ಮತ್ತೊಂದು ವಿಕೆಟ್ ಪತನ?
ಎರಡು ಕ್ಷೇತ್ರದಲ್ಲಿ ಜೆಡಿಎಸ್, ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲೂ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಿತ್ತು. ಜೆಡಿಎಸ್ ಪಾರ್ಟಿಯ ನಿರ್ಧಾರ, ಕಾಂಗ್ರೆಸ್ ಅನ್ನು ಸೋಲಿಸಲು ಎನ್ನುವ ಆರೋಪ ಅಂದೂ ಕೇಳಿ ಬರುತ್ತಿತ್ತು, ಈಗಲೂ ಕೇಳಿ ಬರುತ್ತಿದೆ.
ಅದೇನೇ ಇರಲಿ, ಒಟ್ಟಾರೆಯಾಗಿ ಸಿಂಧಗಿ ಮತ್ತು ಹಾನಗಲ್ ಉಪ ಚುನಾವಣೆಯ ಪ್ರಚಾರದ ದಿಕ್ಕು ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಎದುರಾದಾಗ ಮೇಲ್ನೋಟಕ್ಕೆ ಕಾಣಿಸುವುದು ಒಂದು ಕಡೆ ಕಾಂಗ್ರೆಸ್, ಇನ್ನೊಂದು ಕಡೆ ಬಿಜೆಪಿ -ಜೆಡಿಎಸ್.
ಒಳ ಹೊಡೆತದ ಭಯ: ಬಿಜೆಪಿಗೆ ಯಡಿಯೂರಪ್ಪ - ವಿಜಯೇಂದ್ರನೇ ಆಸರೆ
ಬಸವಕಲ್ಯಾಣದಲ್ಲಿ ಮಾಡಿದಂತೆ ಈ ಉಪ ಚುನಾವಣೆಯಲ್ಲೂ ಜೆಡಿಎಸ್ ರಾಜಕೀಯ
"ಬಸವಕಲ್ಯಾಣದಲ್ಲಿ ಮಾಡಿದಂತೆ ಈ ಉಪ ಚುನಾವಣೆಯಲ್ಲೂ ಜೆಡಿಎಸ್ ರಾಜಕೀಯ ಆಟವಾಡಿದೆ. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎನ್ನುವುದು ಕುಮಾರಸ್ವಾಮಿಯವರಿಗೂ ಗೊತ್ತಿದೆ. ಜೆಡಿಎಸ್ಸಿಗೆ ಬೀಳುವ ಒಂದೊಂದು ಮತಗಳಿಂದ ಬಿಜೆಪಿಗೆ ಅನುಕೂಲವಾಗಲಿದೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುತ್ತಲೇ ಬರುತ್ತಿದ್ದರು.
ಜೆಡಿಎಸ್ಸಿಗೆ ಕಾಂಗ್ರೆಸ್ ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯ ಟಾರ್ಗೆಟ್
ಇಡೀ ಉಪ ಚುನಾವಣೆಯಲ್ಲಿ ಮೂರು ಪಕ್ಷಗಳ ಪ್ರಚಾರದಲ್ಲಿ ಟಾರ್ಗೆಟ್ ಯಾರು ಎಂದಾಗ, ಕಾಂಗ್ರೆಸ್ಸಿಗೆ ಬಿಜೆಪಿ ಮತ್ತು ಜೆಡಿಎಸ್, ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಕಾಂಗ್ರೆಸ್ ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯ. ಮತದಾರರಲ್ಲಿ ಗೊಂದಲ ಮೂಡಬಾರದು ಎನ್ನುವ ಕಾರಣಕ್ಕಾಗಿ ಎಲ್ಲೋ ಕೆಲವೊಮ್ಮೆ ಬಿಜೆಪಿಯು ಕುಮಾರಸ್ವಾಮಿಯವರ ದ್ವಿಪತ್ನಿ ಮತ್ತು ಜೆಡಿಎಸ್ ಪಕ್ಷವನ್ನು ಟಾರ್ಗೆಟ್ ಮಾಡಿತ್ತು. ಇತ್ತ, ಜೆಡಿಎಸ್ ಕೂಡಾ ಬೆಲೆ ಏರಿಕೆ, ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಅಲ್ಲೊಮ್ಮೆ, ಇಲ್ಲೊಮ್ಮೆ ಹೇಳಿಕೆಯನ್ನು ನೀಡಿತ್ತು.
ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರೇ ಪ್ರಮುಖ ಗುರಿ
ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿವರಂತೂ ದಿನಾ ಬೆಳಗ್ಗೆ ಎದ್ದಾಗ ಮೊದಲು ಗುರಿಯಾಗಿಸುವುದು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರನ್ನು. ದಿನಾ ಬೆಳಗ್ಗೆ ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದರಿಂದ ಸಿದ್ದರಾಮಯ್ಯ ಮತ್ತು ಜಮೀರ್ ಸ್ವಾಭಾವಿಕವಾಗಿ ಇದಕ್ಕೆ ಪ್ರತಿಕ್ರಿಯೆ ನೀಡುವ ಅನಿರ್ವಾತೆಯಲ್ಲಿ ಬಿದ್ದರು. ಆ ಮೂಲಕ, ಕುಮಾರಸ್ವಾಮಿಯವರು ತಮ್ಮ ಪ್ರಚಾರವನ್ನು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಗಿ ಕೇಂದ್ರೀಕರಿಸಿಕೊಂಡಿದ್ದಂತೂ ಸತ್ಯ.
ಉಪ ಚುನಾವಣೆ: ಬಿಜೆಪಿ - ಜೆಡಿಎಸ್ ನಡುವೆ ಒಂದಂತೂ ಸತ್ಯ?
ಇನ್ನು, ಬಿಜೆಪಿಯ ಗೇಂ ಪ್ಲ್ಯಾನ್ ಕೂಡಾ ಅದೇ ರೀತಿಯಲ್ಲಿ ಇದ್ದಂತೆ ಇತ್ತು. ಕಾಂಗ್ರೆಸ್, ನೆಹರೂ-ಗಾಂಧಿ ಪರಿವಾರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ವಿರುದ್ದವೇ ಬಿಜೆಪಿಯ ಪ್ರಚಾರದ ಸುತ್ತುತ್ತಿರುವುದು ರಾಜಕೀಯದ ಗಂಧಗಾಳಿ ಇಲ್ಲದವರಿಗೂ ಅರ್ಥವಾಗುವಂತಹ ಸತ್ಯ. ಕಾಂಗ್ರೆಸ್ ನಾಯಕರು ಮೋದಿ, ರಾಜ್ಯ ಬಿಜೆಪಿ ವಿರುದ್ದ ಪ್ರಚಾರ ಮಾಡುತ್ತಿದ್ದರೂ, ಬರಬರುತ್ತಾ ದಳಪತಿಗಳ ವಿರುದ್ದ ಹೆಚ್ಚು ಮಾತನಾಡುವ ಅನಿವಾರ್ಯತೆಯಲ್ಲಿ ಬಿದ್ದರು. ಆ ಮೂಲಕ, ಪ್ರಮುಖ ವಿಷಯವಾದ ಬೆಲೆ ಏರಿಕೆ ಹೆಚ್ಚಾಗಿ ಮುನ್ನಲೆಗೆ ಬರಲಿಲ್ಲ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಸಿದ್ದರಾಮಯ್ಯನವರ ಬಿಜೆಪಿ - ಜೆಡಿಎಸ್ ಒಳ ಒಪ್ಪಂದ ಎನ್ನುವ ಆರೋಪ ನಿಜವಿದ್ದರೂ ಇರಬಹುದು ಎನ್ನುವ ಗುಮಾನಿ ಯಾರಿಗಾದರೂ ಕಾಡದೇ ಇರದು.
Recommended Video