ಬಜೆಟ್ನಲ್ಲಿ ಪ್ರಸ್ತಾಪಿಸಿರುವ "ಬ್ಲಾಕ್ ಚೈನ್" ಎಂದರೇನು?, ಏನಿದರ ಉಪಯೋಗ?
ಬೆಂಗಳೂರು, ಮಾರ್ಚ್ 08 : ರಾಜಧಾನಿ ಬೆಂಗಳೂರು ಅಂತಹ ನಗರದಲ್ಲಿ ಒಂದೇ ದಿನದಲ್ಲಿ ಬೋಗಸ್ ದಾಖಲೆ ಸೃಷ್ಟಿಸಿ ಆಸ್ತಿಯನ್ನು ಕಬಳಿಸುತ್ತಾರೆ. ಯಾರದ್ದೋ ಆಸ್ತಿಯನ್ನು ಮೂರೇ ದಿನಕ್ಕೆ ಇನ್ನೊಬ್ಬರಿಗೆ ಮಾರಾಟ ಮಾಡುತ್ತಾರೆ. ಲಂಚ ಪಡೆದ ಅಧಿಕಾರಿಗಳು ಕೂಡ ಭೂ ಬಕಾಸುರರ ಜತೆ ಶಾಮೀಲಾಗಿ ಅಕ್ರಮ ಎಸಗುತ್ತಾರೆ. ಇನ್ನು ಸರ್ಕಾರಿ ಜಮೀನಿನ ಕಥೆಯಂತೂ ಕೇಳುವುದೇ ಬೇಡ ! ಇವತ್ತು ಸರ್ಕಾರಿ ಹೆಸರಿನಲ್ಲಿರುವ ಭೂಮಿಗೆ ಮೂರೇ ದಿನದಲ್ಲಿ ಖಾಸಗಿ ವ್ಯಕ್ತಿ ಮಾಲೀಕನಾಗಿರುತ್ತಾನೆ. ಲಂಚಕ್ಕಾಗಿ ಸರ್ಕಾರಿ ಜಮೀನನ್ನು ಪರಭಾರೆ ಮಾಡಿ ಎಷ್ಟೋ ಅಧಿಕಾರಿಗಳು ಜೈಲಿಗೆ ಹೋಗಿದ್ದಾರೆ. ಇದನ್ನು ಕಡಿವಾಣ ಹಾಕಲಿಕ್ಕೆ ಇರುವುದು ಒಂದೇ ಟೆಕ್ನಾಲಜಿ ! ಅದನ್ನು ಈ ಬಾರಿ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪ ಮಾಡಿದ್ದಾರೆ. ಆ ಯೋಜನೆ ಬಂದರೆ ನಿಮ್ಮ ಜಮೀನು ಏನಾಗಲಿದೆ?
ಆಸ್ತಿ ವಂಚನೆ ಮತ್ತು ದಾಖಲೆಗಳನ್ನು ಬೋಗಸ್ ಮಾಡಿ ಆಸ್ತಿ ಲಪಟಾಯಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲಿಕ್ಕೆ ಬ್ಲಾಕ್ ಚೈನ್ ತಂತ್ರಜ್ಞಾನ ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದಾರೆ. ಈ ಯೋಜನೆ ಪ್ರಾಯೋಗಿಕ ಜಾರಿಗಾಗಿ ಒಂದು ಕೋಟಿ ರೂ. ಮೀಸಲಿಟ್ಟಿರುವುದಾಗಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಪ್ರಸ್ತಾಪವನ್ನು ಕೊಟ್ಟಿರುವ ಅಧಿಕಾರಿ ಯಾರೋ ಗೊತ್ತಿಲ್ಲ. ಅವರಿಗೆ ರಾಜ್ಯದ ಜನತೆ ಮಾತ್ರ ಚಿರ ಋಣಿಯಾಗಿರಬೇಕು.
ಕರ್ನಾಟಕ ಬಜೆಟ್ 2021: ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ? ಮುಖ್ಯಾಂಶಗಳು
ಭೂ ಅಕ್ರಮ ತಡೆಯಲಿಕ್ಕೆ ನ್ಯಾಯಾಲಯಗಳಿಂದ ಸಾಧ್ಯವಿಲ್ಲ. ಅಧಿಕಾರಿಗಳ ಕಥೆ ಹೇಳುವಂತಿಲ್ಲ. ತಂತ್ರಜ್ಞಾನದ ಮೂಲಕ ತಡೆಯುವ ಏಕೈಕ ಮಾರ್ಗ ಎಂದು ಅರಿತಿರುವ ಅಧಿಕಾರಿ ಕೊಟ್ಟಿರುವ ಈ ಪ್ರಸ್ತಾವನೆ ತುಂಬಾ ಮಹತ್ವವಾಗಿದೆ. ಆಸ್ತಿ ಅಕ್ರಮ ತಡೆಯಲಿಕ್ಕೆ ಬ್ಲಾಕ್ ಚೈನ್ ತಂತ್ರಜ್ಞಾನ ತಂದಿದ್ದೇ ಆದಲ್ಲಿ ರಾಜ್ಯದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಅನ್ಯರು ಕಬಳಿಸಲು ಸಾಧ್ಯವಿಲ್ಲ. ಒಂದು ಸಣ್ಣ ಬೋಗಸ್ ದಾಖಲೆ ಸೃಷ್ಟಿ ಮಾಡಲಿಕ್ಕೆ ಸಾಧ್ಯವಿಲ್ಲ. ಅದು ಕೇವಲ ಬ್ಲಾಕ್ ಚೈನ್ ತಂತ್ರಜ್ಞಾನದಿಂದ ಮಾತ್ರ ಸಾಧ್ಯ.
ಏನಿದು ಬ್ಲಾಕ್ ಚೈನ್ ತಂತ್ರಜ್ಞಾನ
ಬ್ಲಾಕ್ ಚೈನ್ ತಂತ್ರಜ್ಞಾನ ಅಂದ್ರೆ ಇಷ್ಟೇ. ಈಗಾಗಲೇ ವಿಶ್ವದೆಲ್ಲೆಡೆ ಚಾಲ್ತಿಯಲ್ಲಿರುವ ಕ್ರಿಪ್ಟೋ ಕರೆನ್ಸಿ ಸೃಷ್ಟಿಯಾಗಿರುವುದೇ ಬ್ಲಾಕ್ ತಂತ್ರಜ್ಞಾನ. ಬಿಟ್ಕಾಯಿನ್ ರಚನೆಯ ಮೂಲ ಧಾತು ಇದೇ ಬ್ಲಾಕ್ ಚೈನ್ ತಂತ್ರಜ್ಞಾನ. ಹೀಗಾಗಿಯೇ ಬಿಟ್ ಕಾಯಿನ್ ನಕಲಿ ಮಾಡಲಿಕ್ಕೆ ಸಾಧ್ಯವಿಲ್ಲ. ಇನ್ನು ಲೆಕ್ಕದ ವಿಚಾರಕ್ಕೆ ಬಂದರೆ ಅದು ಪಬ್ಲಿಕ್ ಡೊಮೈನ್ನಲ್ಲಿ ಎಲ್ಲಾ ವಿವರಗಳು ಜನ ಸಾಮಾನ್ಯರಿಗೆ ಲಭ್ಯವಾಗಲಿದೆ.
ಒಂದಿಂಚು ಜಾಗವನ್ನೂ ಕಬಳಿಸಲು ಸಾಧ್ಯವಿಲ್ಲ
ಇದೇ ಟೆಕ್ನಾಲಜಿಯನ್ನು ಆಸ್ತಿ ನೋಂದಣಿಗೆ ತಂದರೆ, ಭೂ ಹಗರಣಗಳ ಮೂಲಕ ಲಂಚ ತಿನ್ನುತ್ತಿರುವ ಅಧಿಕಾರಿಗಳ ಕೆಲಸ ಸಂಪೂರ್ಣ ನಿಂತು ಹೋಗುತ್ತದೆ. ಮಾತ್ರವಲ್ಲ, ಒಂದಿಂಚು ಜಾಗವನ್ನೂ ಕಬಳಿಸಲು ಸಾಧ್ಯವಿಲ್ಲ. ನಿಮ್ಮ ಹೆಸರಿನಲ್ಲಿ ಇರುವ ಆಸ್ತಿಗೆ ಬ್ಲಾಕ್ ಚೈನ್ ಅಡಿ ಕೋಡ್ ಕ್ರಿಯೇಟ್ ಆದರೆ, ಅದನ್ನು ಬೇರೆ ಯಾರೂ ನಕಲು ಮಾಡಲಿಕ್ಕೆ ಸಾಧ್ಯವಿಲ್ಲ. ಆ ರೀತಿಯ ಕೋಡ್ ಸೃಷ್ಟಿಯಾಗುತ್ತದೆ. ರಾಜ್ಯದೆಲ್ಲೆಡೆ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಸ್ತಿ ನೋಂದಣಿಗೆ ತಂದಿದ್ದೇ ಆದಲ್ಲಿ ರಾಜ್ಯದಲ್ಲಿ ಭೂ ವಂಚನೆಗಳು ಸಂಪೂರ್ಣ ನಿಂತು ಹೋಗಲಿವೆ.
ಸರ್ಕಾರಿ ಆಸ್ತಿ ರಕ್ಷಣೆ
ಇನ್ನು ರಾಜ್ಯದಲ್ಲಿ ಸರ್ಕಾರಿ ಜಮೀನನ್ನು ಲೂಟಿ ಮಾಡುವರ ಸಂಖ್ಯೆ ಕಡಿಮೆಯಿಲ್ಲ. ಅದರಲ್ಲೂ ಪ್ರಭಾವಿಗಳೇ ಹೆಚ್ಚು ಕಬಳಿಸಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಬ್ಲಾಕ್ ಚೈನ್ ತಂತ್ರಜ್ಞಾನ ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲಿದೆ. ಒಮ್ಮೆ ಸರ್ವೆ ಮಾಡಿ ಪ್ರತಿ ಸರ್ವೆ ನಂಬರ್ ಗೂ ಒಂದು ಕೋಟ್ ಜನರೇಟ್ ಆಗುತ್ತದೆ. ಅದು ಪಬ್ಲಿಕ್ ಡೊಮೈನ್ ನಲ್ಲಿ ಇರುತ್ತದೆ. ಹೀಗಾಗಿ ಇನ್ನೊಬ್ಬರು ಈ ಆಸ್ತಿ ಕಬಳಿಸಲಿಕ್ಕೆ ನಕಲಿ ದಾಖಲೆ ಸೃಷ್ಟಿಸಲು ಸಾಧ್ಯವೇ ಆಗುವುದಿಲ್ಲ ಎಂದು ಬ್ಲಾಕ್ ಚೈನ್ ವಿಷಯ ತಜ್ಞೆ ರೇಖಾ ಅಂಜನ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ
ಬ್ಲಾಕ್ ಚೈನ್ ತಂತ್ರಜ್ಞಾನ ಕಡಿವಾಣ ಹಾಕಲಿದೆ
ಈಗಿರುವ ಸ್ಥಿತಿಯಲ್ಲಿ ಜಮೀನನ್ನು ಒಂದೇ ದಿನಕ್ಕೆ ಕಬಳಿಸಬಹುದು. ಇದೆಲ್ಲದ್ದಕ್ಕೂ ಬ್ಲಾಕ್ ಚೈನ್ ತಂತ್ರಜ್ಞಾನ ಕಡಿವಾಣ ಹಾಕಲಿದೆ. ಆದರೆ ಇಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಲಿಕ್ಕೆ ಕಂದಾಯ ಅಧಿಕಾರಿಗಳು ಬಿಡುತ್ತಾರೆಯೇ ಎಂಬುದು ಅನುಮಾನ. ಸದ್ಯ ಯಡಿಯೂರಪ್ಪ ಅವರು ಘೋಷಣೆ ಮಾಡಿರುವ ಬ್ಲಾಕ್ ಚೈನ್ ತಂತ್ರಜ್ಞಾನ ಆಸ್ತಿ ರಕ್ಷಣೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಲಿದೆ.