ಕಾಂಗ್ರೆಸ್- ಬಿಎಸ್ಪಿ ಕಾದಾಟದಲ್ಲಿ ಬಿಜೆಪಿಗೆ ಲಾಭ: ಇಲ್ಲಿದೆ ಒಳೇಟಿನ ಹುನ್ನಾರ
ಶತ್ರುವಿನ ಅಥವಾ ವಿರೋಧಿಯ ಬಲ ಅತಿ ಹೆಚ್ಚು ಎಂದು ಮನದಟ್ಟಾದ ಮೇಲೆ ಸಣ್ಣ ಪ್ರಮಾಣದ ಶಕ್ತಿ ಇರುವ ಇತರರನ್ನು ಒಗ್ಗೂಡಿಸಿಕೊಂಡು, ದೊಡ್ಡ ಶತ್ರುವಿನ ವಿರುದ್ಧ ಬಡಿದಾಡಬೇಕು ಎಂಬುದು ಲೋಕ ಒಪ್ಪುವಂಥ ಮಾತು. ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಪ್ರವೇಶಿಸಿದ ಮೇಲೆ ಮಾಯಾವತಿ ಅವರ ಬಿಎಸ್ ಪಿ ಮತ ಬುಟ್ಟಿಗೆ ತೂತು ಬಿದ್ದಂತಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೀಗೆ ಆದರೆ ಆಗುವ ಲಾಭ ಯಾರಿಗೆ ಅಂತ ತಿಳಿಯುವುದಕ್ಕೆ ವಿಶೇಷವಾದ ಜ್ಞಾನ ಬೇಡ. ಏಕೆಂದರೆ ಬಿಜೆಪಿ ಸಂಭ್ರಮ ಪಡುತ್ತಿದೆ. ಪ್ರಧಾನಮಂತ್ರಿ ಹೇಳ್ತಾರಲ್ಲ, ನ ಖಾವೂಂಗಾ ನ ಖಾನೇದೂಂಗಾ ಎಂಬ ಮಾತು ಈಗಿನ ಸನ್ನಿವೇಶಕ್ಕೆ ಚೆನ್ನಾಗಿ ಒಪ್ಪುತ್ತದೆ. ಕಾಂಗ್ರೆಸ್ ಹಾಗೂ ಬಿಎಸ್ ಪಿ ಪರಸ್ಪರ ವೋಟ್ ಬ್ಯಾಂಕ್ ಗಾಗಿ ಕಿತ್ತಾಟ ಮಾಡಿಕೊಳ್ಳುತ್ತಾ ಅವೆರಡರ ಸಾಮಾನ್ಯ ಶತ್ರು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆ.
ಪಂಚ ರಾಜ್ಯ ಚುನಾವಣೆಯಲ್ಲಿ ಕಳೆದ ನವೆಂಬರ್ ವೇಳೆ ಮಾಯಾವತಿ ಅವರು ಕಾಂಗ್ರೆಸ್ ನ ಮೈತ್ರಿ ಆಹ್ವಾನಕ್ಕೆ ನಕ್ಕೋ ನಕ್ಕೋ ಎಂದಿದ್ದರು. ಎಷ್ಟು ಸಾಧ್ಯವೋ ಅಷ್ಟು ಕಾಂಗ್ರೆಸ್ ಗೆ ಪೆಟ್ಟು ಬೀಳುವಂತೆ ನೋಡಿಕೊಂಡರು. ಅಷ್ಟೇ ಅಲ್ಲ, ಉತ್ತರಪ್ರದೇಶದಲ್ಲಿ ಅಖಿಲೇಶ್ ಜತೆಗೆ ದೋಸ್ತಿ ಮಾಡಿಕೊಳ್ಳಬಹುದು ಎಂಬ ಲೆಕ್ಕಕ್ಕೂ ಕಲ್ಲು ಹಾಕಿದರು ಎಂದು ಸಿಟ್ಟು ಕಾಂಗ್ರೆಸ್ ಗಿದೆ.
ಕಳೆದ ಜನವರಿಯಲ್ಲಿ ಸಮಾಜವಾದಿ ಪಕ್ಷದ ಜತೆ ಮಾಯಾವತಿ ದೋಸ್ತಿಯನ್ನು ಘೋಷಿಸಿದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಕತ್ತಿ ಝಳಪಿಸುತ್ತಲೇ ಇದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಮಧ್ಯಪ್ರದೇಶ, ಉತ್ತರಾಖಂಡ್ ನಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಪಾಲಿಗೆ ಹೊಡೆತ ನೀಡಬಹುದೋ ಅಲ್ಲೆಲ್ಲ್ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಉದ್ದೇಶ ಹೊಂದಿದ್ದಾರೆ.
ಮುಸ್ಲಿಮರೇ ದಯವಿಟ್ಟು ಕಾಂಗ್ರೆಸ್ಸಿಗೆ ಮತಹಾಕಬೇಡಿ: ಮಾಯಾವತಿ
ಮಾಯಾವತಿಯವರು ಬಿಜೆಪಿ ಗೆಲುವಿಗಾಗಿ ಹೀಗೆ ಮಾಡಿದ್ದಾರೆ. ಆಕೆ ಉತ್ತರಪ್ರದೇಶದ ಮುಖ್ಯಮಂತ್ರಿ ಅವಧಿಯಲ್ಲಿ ನಡೆದ ಹಗರಣಗಳ ಆರೋಪದ ತನಿಖೆ ಮಾಡುವುದಾಗಿ ಕೇಂದ್ರ ಸರಕಾರ ಹೆದರಿಸಿರುವುದರಿಂದ ಮಾಯಾವತಿ ಹೀಗೆ ಮಾಡುತ್ತಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ. ಆದರೆ ಇವೆಲ್ಲ ಏನೂ ಇಲ್ಲ ಎನ್ನುತ್ತಾರೆ ಬಿಎಸ್ ಪಿ ನಾಯಕರು.