ಬಿಬಿಎಂಪಿ ಇತಿಹಾಸ: ಬೆಂಗಳೂರು ಪುರಸಭೆ ಆಡಳಿತದ ಮಾಹಿತಿ
ಬೆಂಗಳೂರು ಜೂ.25: ರಾಜ್ಯ ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡಗಳ ಪುನರ್ ವಿಂಗಡನೆ ಮಾಡಿ 198 ರಿಂದ 243ಕ್ಕೆ ಹೆಚ್ಚಿಸುವ ಕರಡು ಅಧಿಸೂಚನೆ ಹೊರಡಿಸಿದೆ. ಬಿಬಿಎಂಪಿಗೆ ನಾಮಕರಣ, ಹಂತ ಹಂತವಾಗಿ ಆದ ವಾರ್ಡಗಳ ಮಾಹಿತಿ ಇಲ್ಲಿದೆ. ನಿಮ್ಮ ವಾರ್ಡಗಳ ಬಗೆಗಿನ ಮಾಹಿತಿ ತಿಳಿದುಕೊಳ್ಳಿ.
ಸರ್ಕಾರ ಸುಪ್ರೀಂಕೋರ್ಟ್ ಆದೇಶದ ಬಳಿಕ ಬಿಬಿಎಂಪಿಯ ವಾರ್ಡ್ ಪುನರ್ ವಿಂಗಡನೆ ಚುರುಕುಗೊಳಿಸಿತು. ವಾರ್ಡ್ ವಿಂಗಡನೆ ಬಗ್ಗೆ ಆಕ್ಷೇಪಣೆಗಳಿದ್ದರೆ ಸಲ್ಲಿಕೆ ಮಾಡಲು ಸಹ ಅವಕಾಶ ನೀಡಲಾಗಿದೆ. ಈಗ ಪಾಲಿಕೆ 243 ವಾರ್ಡ್ಗಳನ್ನು ಹೊಂದಿದೆ. ಇದಕ್ಕೂ ಮುನ್ನ ಪಾಲಿಕೆ ಆರಂಭ (1881) ಕಾಲದಿಂದಲೂ ಇದ್ದ ವಾರ್ಡಗಳೆಷ್ಟು?, ಎಷ್ಟು ಬಾರಿ ವಿಂಗಡಿಸಲಾಯಿತು, ಪಾಲಿಕೆಗೆ ಇದ್ದ ಹೆಸರು ಮತ್ತು ಹಾಲಿ ವಾರ್ಡಗಳ ಒಂದಷ್ಟು ಮಾಹಿತಿ ಇಲ್ಲಿವೆ.
ಬಿಬಿಎಂಪಿ ಚುನಾವಣೆ: ಸುಪ್ರೀಂಕೋರ್ಟ್ ತೀರ್ಪು ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ
ಬ್ರಿಟಿಷರು ತಮ್ಮ ಆಳ್ವಿಕೆಯಿಂದ ರಾಜ್ಯ ರಾಜಧಾನಿ ಬೆಂಗಳೂರು ನಗರವನ್ನು ಮುಕ್ತಗೊಳಿಸಿ 1881ರಲ್ಲಿ ಮೈಸೂರು ಸಂಸ್ಥಾನದ ಚಾಮರಾಜ ಒಡೆಯರ್ಗೆ ವಾಪಸ್ ನೀಡಿದರು. ನಂತರ ಬೆಂಗಳೂರು ನಗರ ಮುನಿಸಿಪಾಲಿಟಿ ಮತ್ತು ಬೆಂಗಳೂರಿನ ನಾಗರಿಕ ಮತ್ತು ಮಿಲಿಟರಿ ಸ್ಟೇಷನ್ ಅನ್ನು ಕಾನೂನು ಬದ್ಧಗೊಳಿಸಲಾಯಿತು.
ಬೆಂಗಳೂರು ಕಾರ್ಪೋರೇಷನ್ ಕಾಯ್ದೆಯಡಿಯಲ್ಲಿ 1949ರ ಸಂದರ್ಭದಲ್ಲಿ ಎರಡು ಮುನ್ಸಿಪಲ್ ಮಂಡಳಿಗಳು ವಿಲೀನಗೊಂಡವು. ಆಗ ಪಾಲಿಕೆ ಕೇವಲ 75 ಪ್ರತಿನಿಧಿಗಳನ್ನು ಮಾತ್ರ ಒಳಗೊಂಡು ಆಡಳಿತ ನಡೆಸುತ್ತಿತ್ತು. ಈ ವೇಳೆ 'ಬೆಂಗಳೂರು ನಗರ ಕಾರ್ಪೋರೇಷನ್ (ಬಿಸಿಸಿ)' ಎಂದು ನಾಮಕರಣ ಮಾಡಲಾಯಿತು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಅದೇ ವರ್ಷ ಮೊದಲ ಮಹಾಪೌರರಾಗಿ ಆರ್. ಸುಬ್ಬಣ್ಣ ಆಯ್ಕೆಯಾದರು.
36 ಹೊಸ ವಾರ್ಡಗಳ ಸೇರ್ಪಡೆ
ಮೊದಲ ಮೇಯರ್ ಆರ್. ಸುಬ್ಬಣ್ಣ ಆಡಳಿತದ ಅವಧಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 64 ವಾರ್ಡ್ಗಳಿದ್ದವು. ನಂತರ 1995ರ ಅವಧಿಯಲ್ಲಿ ಹೊಸದಾಗಿ 36 ವಾರ್ಡ್ಗಳನ್ನು ಸೇರಿಸಿದ ಬಳಿಕ ಒಟ್ಟು ವಾರ್ಡ್ಗಳ ಸಂಖ್ಯೆ 100ಕ್ಕೆ ಏರಿಕೆ ಆಯಿತು. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಗಳು, ವಾರ್ಡ್ ಸಂಖ್ಯೆ ವಿಸ್ತರಣೆ ಆದವು. ಹೀಗಾಗಿ "ಬೆಂಗಳೂರು ನಗರ ಕಾರ್ಪೋರೇಷ್' ಬದಲಾಗಿ 'ಬೆಂಗಳೂರು ಮಹಾನಗರ ಪಾಲಿಕೆ' ಎಂದು ಪುನಃ ಮತ್ತೊಮ್ಮೆ ಬದಲಿಸಲಾಯಿತು.
110 ಹಳ್ಳಿ ಸೇರ್ಪಡೆ-ಅಸ್ತಿತ್ವಕ್ಕೆ ಬಂದ ಬಿಬಿಎಂಪಿ ಕಾಯ್ದೆ
ಹಂತ ಹಂತವಾಗಿ ಬೆಳೆಯುತ್ತಾ ಬಂದ ಬೆಂಗಳೂರಿನ ವಿಸ್ತರಣೆಗೆ ಮಿತಿಯೇ ಇಲ್ಲವೆಂಬಂತಾಗಿದೆ. ಈ ಮಾತಿಗೆ ಪೂರಕವೆಂಬಂತೆ 2007 ಮತ್ತು 2008ರಲ್ಲಿ ನಗರದ ಸುತ್ತಮುತ್ತಲಿನ ಪ್ರದೇಶಗಳೆಲ್ಲವು ಸೇರಿ ಒಟ್ಟು 110 ಹಳ್ಳಿಗಳನ್ನು 'ಬೆಂಗಳೂರು ಮಹಾನಗರ ಪಾಲಿಕೆ' ವ್ಯಾಪ್ತಿಗೆ ತಂದು ಸರ್ಕಾರ ಆದೇಶ ಹೊರಡಿಸಿತು. ಅದರನ್ವಯ ಒಂದು ಆಡಳಿತಾತ್ಮಕ ಮಂಡಳಿಯನ್ನು ರೂಪಿಸಲಾಯಿತು.
ಇದಾಗಿ ಕೆಲವೇ ದಿನಗಳಲ್ಲಿ ಪಾಲಿಕೆ ಪುನಃ ನಾಮಕರಣ ಗೊಂಡಿತು. "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)" ಎಂದು ಬದಲಿಸಲಾಯಿತು. ಇದೇ ಹೆಸರು ಈಗಲೂ ಚಾಲ್ತಿಯಲ್ಲಿದೆ. ಜನಸಂಖ್ಯೆ ಹೆಚ್ಚಾದಂತೆ ವಾರ್ಡ್ , ವಾರ್ಡ್ ಹೆಚ್ಚಾದಂತೆ ಪಾಲಿಕೆ ಹೆಸರು ಭೌಗೋಳಿಕತೆ ಆಧಾರದಲ್ಲಿ ಬದಲಾಗುತ್ತಾ ಬಂದಿರುವುದು ವಿಶೇಷ ಎನ್ನಬಹುದು. ಇನ್ನು ಕಳೆದ ವರ್ಷ 2021ರಲ್ಲಿ ರಾಜ್ಯ ಸರ್ಕಾರದ ನಿದೇಶನ ಮೇರೆಗೆ 'ಬಿಬಿಎಂಪಿ ಕಾಯ್ದೆ 2020' ಅಸ್ತಿತ್ವಕ್ಕೆ ತರಲಾಯಿತು.
ವಾರ್ಡ್ ಸಂಖ್ಯೆ 198ರಿಂದ 243ಕ್ಕೆ ಏರಿಕೆ
ಹೊಸದಾಗಿ 110ಹಳ್ಳಿ ಸೇರ್ಪಡೆಯಾದ ಬಳಿಕ ಇದ್ದ 100 ವಾರ್ಡ್ 198 ವಾರ್ಡ್ ವಿಂಗಡಣೆಯಾದವು. ಅಲ್ಲಿಂದ ಪಸ್ತುತ 2022ರವರೆಗೂ ಪಾಲಿಕೆ ಅಷ್ಟು ವಾರ್ಡಗಳ ಜನರಿಗೆ ಆರೋಗ್ಯ, ತ್ಯಾಜ್ಯ ನಿರ್ವಹಣೆ, ಶಿಕ್ಷಣ, ತೆರಿಗೆ, ಮಾರುಕಟ್ಟೆ, ಆಸ್ತಿ ದಾಖಲಾತಿ ಸೇರಿದಂತೆ ವಿವಿಧ ವಿಭಾಗದಲ್ಲಿ ಸೇವೆ ನೀಡುತ್ತಾ ಬಂದಿದೆ. ಇದೀಗ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ನಗರದ ಜನಸಂಖ್ಯೆ ಸುಮಾರು 1.30ಕೋಟಿ ಎನ್ನಲಾಗುತ್ತಿದೆ.
ಬಿಬಿಎಂಪಿ ಚುನಾವಣೆ, ಸುಪ್ರೀಂಕೋರ್ಟ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಬಿಬಿಎಂಪಿ ಇದ್ದ 198 ವಾರ್ಡ್ಗಳನ್ನು 243 ವಾರ್ಡ್ಗಳಾಗಿ ವಿಂಗಡಿಸಿದೆ. ಇದಕ್ಕೆ ಸಾಕಷ್ಟು ಪರ ವಿರೋಧ ವ್ಯಕ್ತವಾದರೂ ಸಹ ಬಿಬಿಎಂಪಿ ಸಿದ್ಧಪಡಿಸಿದ ವಾರ್ಡ್ ವಿಂಗಡನೆ ಕರಡಿಗೆ ರಾಜ್ಯಸರ್ಕಾರ ಅಧಿಸೂಚನೆ ಹೊರಡಿಸಿದೆ. ಬೆನ್ನಲ್ಲೆ ಹಾಲಿ ಎಲ್ಲ ವಾರ್ಡಗಳ ನಕ್ಷೆ, ಮಾಹಿತಿ, ಗಡಿಯನ್ನು ಗುರುತಿಸಿದೆ. ಈ ಕುರಿತು ರಾಜಕೀಯ ಪಕ್ಷಗಳು, ಕ್ಷೇಮಾಭಿವೃದಧಿ ಸಂಘ ಸೇರಿದಂತೆ ಸಾರ್ವಜನಿಕರ ಆಕ್ಷೇಪಣೆ, ಸಲಹೆಗಳನ್ನು ಕೇಳಲಾಗಿದೆ.
ಸುಪ್ರೀಂಕೋರ್ಟ ಆದೇಶವೇನು?
ಹಲವು ಕಾರಣಗಳಿಂದ ಕಳೆದ ಎರಡು ವರ್ಷದಿಂದ ಬಿಬಿಎಂಪಿಗೆ ಚುಣಾವಣೆ ನಡೆದಿಲ್ಲ. ಇನ್ನೇನು ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗುವಷ್ಟರಲ್ಲಿ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೋಂಕೋರ್ಟ ಚುನಾವಣೆಗೂ ಮುನ್ನ ವಾರ್ಡ್ಗಳ ಮರ ವಿಂಗಡಣೆ ಮಾಡಿ ಮತ್ತು ಮೀಸಲಾತಿ ಅಂತಿಮಗೊಳಿಸುವ ಕಾರ್ಯ ಎಂಟು ವಾರಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿತ್ತು.
ಸುಪ್ರೀಂನ ಆದೇಶದಂತೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯು ವಾರ್ಡ್ ಮರು ವಿಂಗಡಣೆ ಕುರಿತು ವಾರ್ಡಗಳ ಪುನರ್ ವಿಂಗಡಣಾ ಸಮಿತಿಯೊಂದಿಗೆ ಪತ್ರದ ಮೂಲಕ ಸಂಪರ್ಕದಲ್ಲಿತ್ತು. ಆದೇಶದಂತೆ ಇದೀಗ 243 ವಾರ್ಡ್ಗಳಾಗಿ ವಿಂಗಡಣೆ ಆಗಿದೆ. ನಂತರವೇ ಬಿಬಿಎಂಪಿ ಚುನಾವಣೆಗೆ ಮಹೂರ್ತ ನಿಗದಿ ಆಗಲಿದೆ. ವಾರ್ಡ್ ವಿಂಗಡಣೆಯಿಂದ ಚುನಾವಣೆ ನಡೆಸಲು, ಮತದಾರ ಪಟ್ಟಿ ಸಿದ್ದಪಡಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ವಾರ್ಡ್ ವಿಂಗಡಣೆಗೆ ಆಕ್ರೋಶ!
ವಾರ್ಡ್ ವಿಂಗಡಣೆ ಕುರಿತು ಆರಂಭದಿಂದಲೂ ರಾಜಕೀಯ ಪಕ್ಷಗಳಿಂದ ಪರ, ವಿರೋಧ ಚರ್ಚೆನಡೆಯುತ್ತಲೇ ಇತ್ತು. ಸದ್ಯ ವಿಂಗಡಿಸಲಾಗಿರುವ 245 ವಾರ್ಡ್ ಪೈಕಿ ಅನೇಕ ಐತಿಹಾಸಿಕ ವಾರ್ಡ್ಗಳ ಹೆಸರುನ್ನು ಬಿಬಿಎಂಪಿ ಕೈ ಬಿಟ್ಟಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೆಂಗೇರಿ, ಜಯನಗರ, ದೇವರ ಜೀವನಹಳ್ಳಿ, ಮಂಜುನಾಥ ನಗರ, ಶೇಷಾದ್ರಿಪುರ, ಕೆ. ಆರ್. ಮಾರುಕಟ್ಟೆ ಸೇರಿದಂತೆ ಕೆಲವು ಪ್ರಸಿದ್ಧ ಹಾಗೂ ಐತಿಹಾಸಿಕ ಹಿನ್ನೆಲೆ ವಾರ್ಡ್ ಹೆಸರುಗಳನ್ನು ಕೈಬಿಟ್ಟಿದ್ದಕ್ಕೆ ಜನರು ಬಿಬಿಎಂಪಿ ವಿರುದ್ಧ ಕೆಂಡ ಕಾರಿದ್ದಾರೆ. ಈ ಮಧ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ತೀವ್ರಾ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಅವೈಜ್ಞಾನಿಕ ವಾರ್ಡ್ ವಿಂಗಡಣೆ. ಕರಡು ಪಟ್ಟಿಗೆ ಅಧಿಕಾರಿಗಳು ಕಣ್ಣು ಮುಚ್ಚಿ ಸಹಿ ಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಹೊಸ ವಾರ್ಡ್ ನಕ್ಷೆ, ಗಡಿ ಬಗ್ಗೆ ಮಾಹಿತಿ
ಬಿಬಿಎಂಪಿ ವಿಂಗಡಣೆ ಮಾಡಿದ 243 ಹೊಸ ವಾರ್ಡ್ ನಕ್ಷೆ, ಅವುಗಳ ಗಡಿ, ಮತದಾರರ ಪಟ್ಟಿ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಕುರಿತು ಕೇಂದ್ರ ಕಚೇರಿ ಹಾಗೂ ಎಂಟು ವಲಯ ಕಚೇರಿಗಳಲ್ಲಿ ಇದೇ ಶನಿವಾರದಿಂದ ಪಡೆಯಬಹುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಈ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪಣೆಗಳು ಇಲ್ಲವೆ ಸಲಹೆಗಳು ಇದ್ದಲ್ಲಿ ಲಿಖಿತ ರೂಪದಲ್ಲಿ 15ದಿನದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ ಬೆಂಗಳೂರು -56001ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ಅಲ್ಲದೇ ಹೊಸ ವಾರ್ಡಗಳ ಮಾಹಿತಿಯನ್ನು ವಿಭಜಿತ ವಾರ್ಡ್ಗಳಲ್ಲಿ ಲಭ್ಯವಿರುವುದಿಲ್ಲ. ಬಿಬಿಎಂಪಿ ವಲಯ ಕಚೇರಿ ಅಥವಾ ಅಧಿಕಾರಿಗಳು ಹೊಸ ವಾರ್ಡ್ ಕುರಿತು ಆಕ್ಷೇಪಣೆ ಸಲಹೆ ಪಡೆಯುವ ಅಧಿಕಾರ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.