ಬ್ರಾಹ್ಮಿ ಮುಹೂರ್ತ ಏಕೆ ಆರೋಗ್ಯಕ್ಕೆ ಹಿತ?
ಈಗ ನಮ್ಮ ಜೀವನ ಶೈಲಿ ಬದಲಾಗಿದೆ. ಹೀಗಾಗಿ ಮುಂಜಾನೆ ಇಷ್ಟೇ ಸಮಯಕ್ಕೆ ಏಳಬೇಕು, ಹೀಗೆಯೇ ಕೆಲಸ ಆರಂಭಿಸಬೇಕೆನ್ನುವ ಯಾವುದೇ ಕಟ್ಟುಪಾಡುಗಳನ್ನು ಅಳವಡಿಸಿಕೊಳ್ಳದ ಕಾರಣದಿಂದಾಗಿ ಕೆಲವೊಂದು ಸಮಸ್ಯೆಗಳನ್ನು ನಾವು ನಮಗೆ ಗೊತ್ತಿಲ್ಲದಂತೆ ಮೈಮೇಲೆ ಎಳೆದುಕೊಳ್ಳುತ್ತಿದ್ದೇವೆ.
ಹಿಂದಿನ ಕಾಲದವರು ಕೆಲವೊಂದು ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದರು. ಅದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿತ್ತು. ಆದರೆ ಬದಲಾದ ಕಾಲದಲ್ಲಿ ಹಿಂದಿನ ಹಲವು ಸಂಪ್ರದಾಯಗಳನ್ನು ನಾವು ಬಿಟ್ಟು ಬಿಟ್ಟಿದ್ದೇವೆ. ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ನಮ್ಮ ಪೂರ್ವಜರು ಕೆಲವೊಂದು ಸಂಪ್ರದಾಯ, ಕಟ್ಟುಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದಲೇ ಮಾಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಬ್ರಾಹ್ಮಿ ಮುಹೂರ್ತದಲ್ಲಿ ಮಾನಸಿಕ ನೆಮ್ಮದಿ
ಪ್ರತಿಯೊಬ್ಬ ಮನುಷ್ಯನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಕಾರ್ಯ ಪ್ರಾರಂಭಿಸಿದರೆ ಶುಭದಾಯಕವಾಗಿರುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಅದರಂತೆ ಬ್ರಾಹ್ಮಿ ಕಾಲದಲ್ಲೆದ್ದು, ಒಂದಷ್ಟು ಹೊತ್ತು ನಡೆದಾಡಿ ಬಂದರೆ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅನುಕೂಲವಂತೆ. ಜನಜಂಗುಳಿ, ವಾಹನ ಸಂಚಾರವಿಲ್ಲದೆ ನೀರವ ವಾತಾವರಣ ಪಡೆಯಬೇಕಾದರೆ ಅದು ಬ್ರಾಹ್ಮಿ ಮುಹೂರ್ತದಲ್ಲಿ ಮಾತ್ರ ಸಾಧ್ಯ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಕೊಡಗಿನಲ್ಲಿರುವ ಇರ್ಪುವಿನ ವೈಶಿಷ್ಟ್ಯವೇನು ಗೊತ್ತಾ?
ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ
ಇವತ್ತು ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಿಯೋ ಅಥವಾ ಸಿನಿಮಾ, ಟಿವಿ ನೋಡಿಯೋ ಮಲಗಿದವರು ಬೆಳಿಗ್ಗೆ ಬೇಗ ಏಳಬೇಕೆಂದರೆ ಹೇಗೆ? ಹೀಗಾಗಿ ಸೂರ್ಯ ನೆತ್ತಿಗೆ ಬಂದರೂ ಕೆಲವರು ಹಾಸಿಗೆ ಬಿಟ್ಟು ಏಳುವುದೇ ಇಲ್ಲ. ಆದರೆ ಪ್ರಾತಃಕಾಲದ ಒಂದಷ್ಟು ವಿಧಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನಸಿಕ ಮತ್ತು ದೈಹಿಕವಾಗಿ ಒಳ್ಳೆಯ ಆರೋಗ್ಯವನ್ನು ಪಡೆಯಬಹುದು ಎಂಬುದಾಗಿ ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ.
ಬೆಡ್ ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ
ಕೆಲವರು ಬೆಳಿಗ್ಗೆ ಎದ್ದಕೂಡಲೇ ಬೆಡ್ ಕಾಫಿ, ಟೀ ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಆರೋಗ್ಯಕರ ಅಭ್ಯಾಸವಲ್ಲ. ಬೆಳಿಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಉತ್ತಮ. ಇದರಿಂದ ಆಹಾರ ಜೀರ್ಣಗೊಂಡು ಅಳಿದುಳಿದ ತ್ಯಾಜ್ಯಗಳ ವಿಸರ್ಜನೆಗೆ ಅನುಕೂಲವಾಗುತ್ತದೆ. ಪ್ರಾತಃಕಾಲ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದು, ಮಲ ಮೂತ್ರಾದಿಗಳನ್ನು ವಿಸರ್ಜಿಸಿ, ಹಲ್ಲುಜ್ಜಿ ಮುಖ ತೊಳೆದು ಮುಂದಿನ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಈ ರೀತಿಯ ಪದ್ಧತಿಯ ರೂಢಿಸಿಕೊಂಡರೆ ಶಿಸ್ತಿನ ಜೀವನ ನಡೆಸಲು ಸಾಧ್ಯವಾಗುತ್ತದೆ.
ಬದುಕಿನಲ್ಲಿ ನೆಮ್ಮದಿಯಾಗಿರಬೇಕಾದರೆ ಏನು ಮಾಡಬೇಕು?
ಆರೋಗ್ಯ ವರ್ಧನೆಗೆ ಉತ್ತಮ ಹಾದಿ
ಪ್ರಾತಃಕಾಲದ ವಾಯು ಸೇವನೆಯೂ ಆರೋಗ್ಯಕ್ಕೆ ಸಹಕಾರಿಯಾಗಿದೆ. ವಾಯು ಮಾಲಿನ್ಯದ ಸೋಂಕಿಲ್ಲದೆ ನಿರ್ಮಲ ವಾತಾವರಣವಿರುವ ಈ ವೇಳೆಯಲ್ಲಿ ನಡೆದಾಡುವುದು, ಓಡುವುದು, ವ್ಯಾಯಾಮ, ಯೋಗಾಸನ, ಪ್ರಾಣಾಯಾಮಗಳನ್ನು ಮಾಡುವುದು ಆರೋಗ್ಯ ವರ್ಧನೆಗೆ ಉತ್ತಮ ಹಾದಿಯಾಗಿದೆ. ಇನ್ನು ವಿದ್ಯಾರ್ಥಿಗಳು ಪ್ರಾತಃಕಾಲ ಕ್ರೀಡೆಗಳನ್ನು ಆಡುವುದು ಮತ್ತು ಓದುವುದನ್ನು ಮಾಡಿದರೆ ಒಳ್ಳೆಯದು.
ಒಂದಷ್ಟು ಹೊತ್ತು ನಡೆದಾಡಿ ಬನ್ನಿ
ವಿದ್ಯಾರ್ಥಿಗಳು ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಎದ್ದು ಓದುವ ಪರಿಪಾಠ ಬೆಳೆಸಿಕೊಂಡರೆ ಉತ್ತಮ. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಪ್ರಾತಃಕಾಲ ಬಹುಮುಖ್ಯ ಪಾತ್ರ ವಹಿಸುವುದರಿಂದಲೇ ಪ್ರತಿಯೊಬ್ಬರೂ ಪ್ರಾತಃಕಾಲದ ಸದ್ಭಳಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಆಶಿಸಿದ್ದರೆ ಮೊದಲಿಗೆ ಪ್ರಾತಃಕಾಲ(ಬ್ರಾಹ್ಮಿ ಮುಹೂರ್ತ)ದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಳಿಕ ಒಂದಷ್ಟು ಹೊತ್ತು ನಡೆದಾಡಿ ಬನ್ನಿ ಆಗ ಅದರ ಮಹತ್ವ ಅರಿವಾಗುತ್ತದೆ.