ಕನ್ನಡ ಸಾಹಿತ್ಯ ಜಾಲ: ಪುಸ್ತಕಪ್ರೇಮಿಗಳಿಗೆ ಬುಕ್ ಬ್ರಹ್ಮ
ಬೆಂಗಳೂರು, ಆಗಸ್ಟ್ 13: ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಮಾದರಿ ನೆಟ್ವರ್ಕ್ ಪರಿಚಯಿಸುವ ನಿಟ್ಟಿನಲ್ಲಿ, ಲೇಖಕರು, ಓದುಗರು, ಪ್ರಕಾಶಕರು ಮತ್ತು ವಿಮರ್ಶಕರನ್ನು ಒಂದೆಡೆ ಸೇರುವ ಉದ್ದೇಶ ಹೊಂದಿರುವ 'ಬುಕ್ ಬ್ರಹ್ಮ' ಅಂತರ್ಜಾಲ ತಾಣವು ಆಗಸ್ಟ್ 15ರಂದು ಲೋಕಾರ್ಪಣೆಗೊಳ್ಳಲಿದೆ.
ಪ್ರತಿವರ್ಷ ಕನ್ನಡದಲ್ಲಿ ಪ್ರಕಟವಾಗುವ ಸುಮಾರು 6000 ಪುಸ್ತಕಗಳ ಪೈಕಿ ಸರಿ ಸುಮಾರು 1,000 ಪುಸ್ತಕಗಳಿಗೆ ಮಾತ್ರ ವಿವಿಧ ಮಾಧ್ಯಮ (ಪತ್ರಿಕೆ, ಸೋಷಿಯಲ್ ಮೀಡಿಯಾ)ಗಳಿಂದ 'ಪರಿಚಯ'ದ ಅವಕಾಶ ದೊರೆಯುತ್ತಿದೆ. ಅದರಿಂದಾಗಿ ಓದುಗರಿಗೆ ಪ್ರಕಟವಾಗುವ ಎಲ್ಲಾ ಪುಸ್ತಕಗಳ ಮಾಹಿತಿ ದೊರೆಯುತ್ತಿಲ್ಲ, ಎಲ್ಲಾ ಲೇಖಕರಿಗೆ ಓದುಗರನ್ನು ತಲುಪುವುದು ಸಾಧ್ಯವಾಗುತ್ತಿಲ್ಲ ಮತ್ತು ಪುಸ್ತಕದ ವಿಮರ್ಶೆಯೂ ಸಾಧ್ಯವಾಗುತ್ತಿಲ್ಲ.
ಈ ಕೊರತೆಗಳನ್ನು ನೀಗುವ ಉದ್ದೇಶದಿಂದ 'ಬುಕ್ ಬ್ರಹ್ಮ' ಎನ್ನುವ ಮಲ್ಟಿಮೀಡಿಯಾ ವೇದಿಕೆ ರೂಪಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಪ್ರಯತ್ನವಿದು.
ಅಂದು ಉಪನ್ಯಾಸಕಿ, ಇಂದು ಸಾಹಿತ್ಯ ಪ್ರಸಾರಕಿ
ಬುಕ್ ಬ್ರಹ್ಮ ಯೋಜನೆಯು ಕನ್ನಡ ಸಾಹಿತ್ಯ ಪೋಷಕರು ಹಾಗೂ ಲೇಖಕರನ್ನು ಒಂದೇ ವೇದಿಕೆಯಲ್ಲಿ ಸೇರಿಸುತ್ತದೆ. ಇದರಿಂದಾಗಿ, ಓದುಗರಿಗೆ ಅತ್ಯುತ್ತಮ ಸಾಹಿತ್ಯ ಹಾಗೂ ಲೇಖಕರ ಮಾಹಿತಿ ದೊರೆಯುತ್ತದೆ. ಹಾಗೆಯೇ, ಲೇಖಕರು ಹೆಚ್ಚಿನ ಓದುಗರನ್ನು ತಲುಪಲು ಸಾಧ್ಯವಾಗುತ್ತದೆ. ಈ ಯೋಜನೆಯ ಮುಂದಿನ ಹಂತದಲ್ಲಿ ಕನ್ನಡದ ಇ-ಪುಸ್ತಕಗಳನ್ನು ಪ್ರಕಟಿಸುವ ಉದ್ದೇಶವನ್ನು ಹೊಂದಿದ್ದೇವೆ, ಎಂದು ಬುಕ್ಬ್ರಹ್ಮ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾದ ವಿನಯ್ ಕುಮಾರ್ ಅವರು ತಿಳಿಸಿದರು.
2000ಕ್ಕೂ ಅಧಿಕ ಲೇಖಕರ ಪರಿಚಯ
ಮುಖ್ಯವಾಗಿ ಇದು ಪುಸ್ತಕ ಪ್ರೀತಿಯನ್ನು ಬೆಳೆಸುವ ತಾಣ. ಸದ್ಯಕ್ಕೆ ಇದರಲ್ಲಿ ಈಗಾಗಲೇ ಸುಮಾರು 4,000 ಪುಸ್ತಕಗಳ ಮಾಹಿತಿ ಇದೆ. ಜೊತೆಗೆ ಸುಮಾರು 2,000 ಕನ್ನಡ ಲೇಖಕರ ಪರಿಚಯವೂ ಇದೆ. ಸೃಜನಶೀಲ ಸಾಹಿತ್ಯ, ವಿಜ್ಞಾನ, ವ್ಯಕ್ತಿತ್ವ ವಿಕಸನ, ಸಂಪಾದನೆ, ವಿಮರ್ಶೆ, ಸಿನಿಮಾ, ಜನಪದ, ದೃಶ್ಯಕಲೆ, ಮಾನವಿಕ, ಕೃಷಿ, ಧರ್ಮ, ಹಾಸ್ಯ, ಮಕ್ಕಳ ಸಾಹಿತ್ಯ ಹೀಗೆ ಹಲವು ವಿಭಾಗ ಮಾಡಿಕೊಂಡು ಪುಸ್ತಕಗಳ ಮುಖಪುಟ ಮತ್ತು ಮಾಹಿತಿಯನ್ನು ನೀಡಲಾಗಿದೆ.
ನಿಮ್ಮ ಇಷ್ಟದ ಪುಸ್ತಕ ಓದಲೊಂದು ವೆಬ್ ತಾಣ
ದೇವು ಪತ್ತಾರ ಸಂಪಾದಕರು
'ಓದುಗರಿಗೆ ಪುಸ್ತಕದ ಮಾಹಿತಿ ಕೊಡುವುದು, ಲೇಖಕರಿಗೆ ವಿಮರ್ಶೆಯನ್ನು ಒದಗಿಸಿಕೊಡುವುದು, ಪ್ರಕಾಶಕರಿಗೆ ಹೊಸ ಓದುಗ ವರ್ಗವನ್ನು ಒದಗಿಸಿಕೊಡುವುದು ಮತ್ತು ಈ ಎಲ್ಲರ ನಡುವಿನ ಅಂತರವನ್ನು ತಗ್ಗಿಸುವಂತಹ ಒಂದು ವೇದಿಕೆಯನ್ನು ರೂಪುಗೊಳಿಸುವುದು ನಮ್ಮ ಉದ್ದೇಶ' ಎನ್ನುತ್ತಾರೆ 'ಬುಕ್ ಬ್ರಹ್ಮ'ದ ಸಂಪಾದಕ ದೇವು ಪತ್ತಾರ.
ಅಂತರ್ಜಾಲದ ಹೊಸ ಸಾಧ್ಯತೆ
ಬುಕ್ ಬ್ರಹ್ಮವು ಪುಸ್ತಕಗಳ ಮಾಹಿತಿಗಷ್ಟೇ ಮಾತ್ರ ಸೀಮಿತವಾಗಿಲ್ಲ. ಅಂತರ್ಜಾಲದ ಹೊಸ ಸಾಧ್ಯತೆಗಳನ್ನು ಬಳಸಿಕೊಂಡು ಬಹುಮಾಧ್ಯಮದ ಮೂಲಕ ಪುಸ್ತಕ ಕಂಪನ್ನು ಹರಡಲಾಗುತ್ತದೆ. ಅಕ್ಷರರೂಪದ ಮಾಹಿತಿಯ ಜೊತೆಗೆ ಆಡಿಯೊ, ವಿಡಿಯೊ ಮೂಲಕ ಪುಸ್ತಕ ಕುರಿತ ಚರ್ಚೆ, ಮಾತುಕತೆ, ಸಂದರ್ಶನ, ಪರಿಚಯ ನೀಡಲಾಗುತ್ತದೆ. ಬುಕ್ ಬ್ರಹ್ಮ ತಯಾರಿಸಿದ ಆಡಿಯೊ ವಿಡಿಯೊಗಳ ಜೊತೆಗೆ ಈಗಾಗಲೇ ಸಾರ್ವಜನಿಕವಾಗಿ ಇರುವ ಮಹತ್ವದ ಆಡಿಯೊ, ವಿಡಿಯೊಗಳ ಲಿಂಕ್ ಅನ್ನೂ ನೀಡಲಾಗುತ್ತದೆ.
ಕರಣಂ ಅವರ ಅರಿವಿನ ಸತ್ಯ ಹುಡುಕಾಟ ಗ್ರಸ್ತ ಕಾದಂಬರಿ
ಒಂದು ಪುಟ್ಟ ಟಿಪ್ಪಣಿ, ಖರೀದಿ ಮಾಹಿತಿ
ಪ್ರತಿ ಪುಸ್ತಕದ ಪುಟ, ಬೆಲೆ, ಪ್ರಕಾಶನಗಳ ತಾಂತ್ರಿಕ ವಿವರಗಳು, ಆಯಾ ಕೃತಿಯಲ್ಲಿ ಏನಿದೆ ಎನ್ನುವುದರ ಕುರಿತು ಒಂದು ಪುಟ್ಟ ಟಿಪ್ಪಣಿ ಮತ್ತು ಆ ಕೃತಿಯನ್ನು ಎಲ್ಲಿ ಕೊಳ್ಳಬಹುದು ಎಂಬುದರ ಮಾಹಿತಿ ಇರುತ್ತದೆ. ಆನ್ಲೈನ್ ಮೂಲಕ ಖರೀದಿಸಬಹುದಾದರೆ ವೆಬ್ಸೈಟ್ ವಿಳಾಸ ಮತ್ತು ನೇರವಾಗಿ ಖರೀದಿಸುವವರಿಗೆ ಪ್ರಕಾಶಕರ ವಿಳಾಸವನ್ನು ನೀಡಲಾಗಿದೆ. 'ಫರ್ಬೆಂಡನ್ ಕಮ್ಯೂನಿಕೇಶನ್' ಎನ್ನುವ ಬೆಂಗಳೂರು ಮೂಲದ ಕಂಪನಿ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದೆ. 20 ಜನರ ತಂಡ ಒಂದೂವರೆ ವರ್ಷದಿಂದ ಈ ವೆಬ್ಸೈಟ್ ಈಗಿನ ಸ್ವರೂಪಕ್ಕೆ ಬರಲು ಶ್ರಮಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಬುಕ್ ಬ್ರಹ್ಮ.ಕಾಂ ವೆಬ್ ತಾಣಕ್ಕೆ ಭೇಟಿ ನೀಡಬಹುದು.