ಅಜ್ಞಾತವಾಸದಿಂದ ಮರಳಿ ಕಾಣಿಸಿಕೊಂಡ ಪ್ರಾಣಿಪ್ರಿಯರ ಭಗೀರ...
ಮೈಸೂರು, ಅಕ್ಟೋಬರ್ 31: ಕಬಿನಿ ಹಿನ್ನೀರಿನ ಕಾಡಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಪ್ರಾಣಿಪ್ರಿಯರನ್ನು ಸಂತಸಗೊಳಿಸುತ್ತಿದ್ದ ಕರಿಚಿರತೆ ಅರ್ಥಾತ್ ಭಗೀರ ಕಳೆದ ಎರಡು ತಿಂಗಳ ಕಾಲ ಅಜ್ಞಾತವಾಸಕ್ಕೆ ತೆರಳಿತ್ತು. ಇದನ್ನು ನೋಡುವ ಸಲುವಾಗಿ ಕಾದು ಕುಳಿತವರು ನಿರಾಸೆಯಿಂದ ಹಿಂತಿರುಗುತ್ತಿದ್ದರು. ಆದರೆ ಇದೀಗ ಮತ್ತೆ ಪ್ರತ್ಯಕ್ಷಗೊಂಡು ದರ್ಶನ ನೀಡುತ್ತಿರುವುದು ಖುಷಿ ತಂದಿದೆ.
ನಾಗರಹೊಳೆ ಅಭಯಾರಣ್ಯದ ಕಬಿನಿ ಅರಣ್ಯದಲ್ಲಿ ಸಫಾರಿಗೆ ಹೋದವರಿಗೆ ಆಗಾಗ್ಗೆ ಕರಿಚಿರತೆ ಕಾಣಿಸಿಕೊಳ್ಳುತ್ತಿತ್ತು. ಇಲ್ಲಿ ಎರಡು ಕರಿಚಿರತೆ ಇವೆ ಎಂದು ಹೇಳಲಾಗುತ್ತಿತ್ತು. ಇವುಗಳನ್ನು ನೋಡುವುದೇ ಹಬ್ಬವಾಗುತ್ತಿತ್ತು. ಹಾಗೆಂದು ಇದನ್ನು ನೋಡಲು ಹೋದ ತಕ್ಷಣ ಇದೇನು ಪ್ರವಾಸಿಗರ ಮುಂದೆ ಬರುತ್ತಿರಲಿಲ್ಲ. ಅದನ್ನು ನೋಡಲೆಂದೇ ಕಾದು ಕುಳಿತುಕೊಳ್ಳಬೇಕಾಗಿತ್ತು. ಕಾಡಿನ ನಡುವೆ ಮರಗಳ ಕೊಂಬೆಯಲ್ಲಿ ಕಾಣಿಸಿಕೊಳ್ಳುತ್ತಾ ತನ್ನ ಪಾಡಿಗೆ ತಾನಿರುತ್ತಿತ್ತು. ಇದು ಕಾಣಿಸಿಕೊಂಡಾಗಲೆಲ್ಲ ಸುದ್ದಿಯಾಗುತ್ತಿತ್ತು. ಇದನ್ನು ಪ್ರೀತಿಯಿಂದ ಭಗೀರ ಎಂದೇ ಕರೆಯುತ್ತಿದ್ದರು.
ಬಂಡೀಪುರದಲ್ಲಿ ಕ್ಯಾಮರಾ ಕಣ್ಣಿಗೆ ಬಿದ್ದ ಕರಿ ಚಿರತೆ!
ಪುಳಕ ನೀಡುವ ಹಸಿರ ನಿಸರ್ಗ
ನಾಗರಹೊಳೆಯಲ್ಲಿ ಸಫಾರಿಗೆ ತೆರಳುವ ಹೆಚ್ಚಿನ ಜನರು ಹುಲಿ, ಕಾಡಾನೆ, ಕಾಡುಕೋಣ, ಜಿಂಕೆಗಳು ಹೀಗೆ ಹಲವು ಪ್ರಾಣಿಗಳನ್ನು ನೋಡಿದರೂ ಕರಿ ಚಿರತೆ ಎಲ್ಲಾದರೂ ಕಾಣಿಸುತ್ತಾ ಎಂದು ಎಲ್ಲರೂ ಹುಡುಕುತ್ತಿದ್ದರು. ಇದು ಕಾಣಿಸಿದ ಕೂಡಲೇ ಅಚ್ಚರಿಯ ನೋಟ ಹರಿಸುತ್ತಿದ್ದರು. 843 ಚ.ಕಿ.ಮೀ ಸುತ್ತಳತೆ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಮುಂಗಾರು ಮಳೆಯಿಂದ ಮಿಂದೆದ್ದು, ಹಸಿರು ಹಚ್ಚಡದ ನಿಸರ್ಗ ಪುಳಕ ನೀಡುತ್ತಿದ್ದು, ಅದರ ನಡುವಿನ ವನ್ಯಪ್ರಾಣಿಗಳು ಅಲ್ಲಲ್ಲಿ ದರ್ಶನ ನೀಡಿ ರೋಮಾಂಚನಗೊಳಿಸುವುದರೊಂದಿಗೆ ಸಫಾರಿ ಮಾಡುವವರಿಗೆ ಹೊಸ ಅನುಭವ ನೀಡುತ್ತದೆ. ಇದರ ನಡುವೆ ಕರಿಚಿರತೆ ಕಾಣಿಸಿದರೆ ತಾವು ಮಾಡಿದ ಸಫಾರಿ ಸಾರ್ಥಕಭಾವ ಪ್ರತಿಯೊಬ್ಬರಲ್ಲೂ ಬರುತ್ತದೆ.
ಅಜ್ಞಾತ ಸ್ಥಳದಲ್ಲಿದ್ದ ಕರಿ ಚಿರತೆ
ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಸ್ಥಗಿತಗೊಂಡಿದ್ದ ಸಫಾರಿ ಅಕ್ಟೋಬರ್ 11 ರಿಂದ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಸಫಾರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬರುವವರು ಕರಿ ಚಿರತೆಯ ದರ್ಶನದ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಕಳೆದ ಎರಡು ತಿಂಗಳಿನಿಂದ ಇದು ಕಾಣಿಸಿರಲಿಲ್ಲ. ಕಾರಣ ಇದು ಮತ್ತೊಂದು ಚಿರತೆ ಜೊತೆ ಕಾಳಗ ನಡೆಸಿ ಗಾಯ ಮಾಡಿಕೊಂಡಿತ್ತು. ಬಳಿಕ ಅಜ್ಞಾತ ಸ್ಥಳಕ್ಕೆ ತೆರಳಿದ್ದರಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಸಾಮಾನ್ಯವಾಗಿ ಗಾಯಗಳಾದರೆ ಸ್ವಾಭಾವಿಕವಾಗಿಯೇ ವಾಸಿಯಾಗುತ್ತವೆ. ಆದರೆ ಮಳೆ ಕಾರಣದಿಂದಾಗಿ ಗಾಯ ವಾಸಿಯಾಗಿರಲಿಲ್ಲ. ಇದು ಯಾರ ಕಣ್ಣಿಗೂ ಬೀಳದಿದ್ದಾಗ ಏನಾಯಿತು? ಎಲ್ಲಿಗೆ ಹೋಯಿತು ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿಕೊಂಡು ಬೇಸರಪಟ್ಟಿದ್ದರು.
ಮೈಸೂರು ಮೃಗಾಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಅತಿಥಿಗಳು
ಮತ್ತೆ ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಭಗೀರ
ಇದೀಗ ಮತ್ತೆ ಪ್ರವಾಸಿಗರ ಕ್ಯಾಮೆರಾ ಕಣ್ಣಿಗೆ ಕರಿಚಿರತೆ ಭಗೀರ ಸಿಕ್ಕಿದ್ದಾನೆ. ಕಣ್ಣಿನ ಭಾಗದಲ್ಲಿ ರಕ್ತ ಸುರಿಯುವ ಫೋಟೊವನ್ನು ಕಡೆಯದಾಗಿ ಪ್ರವಾಸಿಗರು ಸೆರೆ ಹಿಡಿದಿದ್ದರು. ಆದರೆ ಇದೀಗ ಗಾಯ ವಾಸಿ ಮಾಡಿಕೊಂಡು ಅಜ್ಞಾತ ಸ್ಥಳದಿಂದ ಮರಳಿ ಮತ್ತೆ ಪ್ರವಾಸಿಗರ ಕ್ಯಾಮೆರಾಕ್ಕೆ ಫೋಸ್ ನೀಡಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರಾಣಿಪ್ರಿಯರು ಖುಷಿಯಾಗಿದ್ದಾರೆ. ಈ ಭಗೀರ ಹಾಗೆಲ್ಲ ಸಹಜವಾಗಿ ಕಾಡಿನಲ್ಲಿ ಓಡಾಡುವಾಗ ಕಾಣಿ ಸಫಾರಿಗೆ ಹೋದ ಕೆಲವರಿಗೆ ಮಾತ್ರ ಕಾಣಿಸುತ್ತದೆ. ಇದು ನಿಲ್ಲುವ ಭಂಗಿಯೇ ಒಂಥರಾ ಖುಷಿಕೊಡುತ್ತದೆ.
ದಿನಕ್ಕೆ ನಾಲ್ಕು ಬಾರಿ ಸಫಾರಿ
ಇದು ಹುಟ್ಟುವಾಗ ಕಪ್ಪು ಬಣ್ಣ ಹೊಂದಿಲ್ಲವಾದರೂ ಸಾಮಾನ್ಯ ಚಿರತೆಯ ಜಾತಿಗೆ ಸೇರುವ ಈ ಕಪ್ಪು ಚಿರತೆ ಚರ್ಮರೋಗದ ಹಿನ್ನೆಲೆಯಲ್ಲಿ ಇಡೀ ದೇಹದ ಮೈಬಣ್ಣ ಕಪ್ಪಾಗುತ್ತದೆ. ಇದರಿಂದ ಪ್ರಾಣಿಯ ಆರೋಗ್ಯಕ್ಕೆ ತೊಂದರೆಯಾಗಲ್ಲ ಎನ್ನಲಾಗಿದೆ. ಚಿರತೆ ನಡುವೆ ಹುಟ್ಟಿ ಮಾಮೂಲಿ ಚಿರತೆಗಿಂತ ಭಿನ್ನವಾಗಿ ಗೋಚರಿಸುವ ಕರಿ ಚಿರತೆ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ. ಈಗಾಗಲೇ ನಾಗರಹೊಳೆಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಅರಣ್ಯ ಇಲಾಖೆ ಪ್ರವಾಸಿಗರಿಗೆ ಸಫಾರಿಗೆ ಅವಕಾಶ ಮಾಡಿಕೊಡುತ್ತಿದೆ.
ಸಫಾರಿ ದಿನಕ್ಕೆ ನಾಲ್ಕು ಬಾರಿ ನಡೆಯಲಿದ್ದು, ಮೊದಲನೆಯದು ಬೆಳಿಗ್ಗೆ 6ರಿಂದ 7.30, ಎರಡನೆಯದು 7.30ರಿಂದ 9 ಗಂಟೆ ಹಾಗೂ ಮಧ್ಯಾಹ್ನ 2ರಿಂದ 4ರವರೆಗೆ ಮತ್ತು ಸಂಜೆ 4 ರಿಂದ 5.30ರವರೆಗೆ ನಡೆಯಲಿದೆ. ಸಫಾರಿಗೆ ಟಿಕೆಟ್ ಗಳನ್ನು ಬೆಳಿಗ್ಗೆ 6 ರಿಂದ 7.30 ಹಾಗೂ ಮಧ್ಯಾಹ್ನ 2 ರಿಂದ 3.30ರೊಳಗೆ ಪಡೆದುಕೊಳ್ಳಬೇಕಿದೆ.