4 ತಿಂಗಳ ನಂತರ ಬಿಎಸ್ವೈ ಭೇಟಿಯಾದ ಬಿ.ಎಲ್.ಸಂತೋಷ್: ಇದಾ ಕಾರಣ?
ಬೆಂಗಳೂರು, ಅ 16: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ವಿಜಯದಶಮಿಯ ಶುಭಾಶಯದ ಭೇಟಿ.
ಸುಮಾರು ಅರ್ಧ ಗಂಟೆಗಳ ಕಾಲ ಯಡಿಯೂರಪ್ಪನವರ ನಿವಾಸದಲ್ಲಿದ್ದ ಸಂತೋಷ್ ಅವರನ್ನು, ಬಿಎಸ್ವೈ ಪುತ್ರ ವಿಜಯೇಂದ್ರ ಕೂಡಾ ಭೇಟಿಯಾಗಿದ್ದಾರೆ. ಈ ವೇಳೆ, ಮೂವರೂ ನಾಯಕರು ಶಮೀಪತ್ರೆ ನೀಡಿ ಬನ್ನಿ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಚರ್ಚೆಯಾಗಿವೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣೆ: ಬಿಜೆಪಿ ಬೆಚ್ಚಿಬೀಳಿಸುವ ಆಂತರಿಕ ಸಮೀಕ್ಷಾ ವರದಿ ಬಹಿರಂಗ?
ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವೇಳೆ, ಮುಂದಿನ ಸಿಎಂ ಯಾರಾಗಬಹುದು ಎನ್ನುವ ಚರ್ಚೆ ತಾರಕಕ್ಕೇರಿದ್ದಾಗ ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ ಸೇರಿದಂತೆ, ಸಂತೋಷ್ ಅವರ ಹೆಸರೂ ಸಂಭಾವ್ಯರ ಪಟ್ಟಿಯಲ್ಲಿ ಕೇಳಿ ಬರುತ್ತಿತ್ತು.
ಸುಮಾರು ನಾಲ್ಕು ತಿಂಗಳುಗಳ ನಂತರ ಬಿ.ಎಲ್.ಸಂತೋಷ್ ಅವರು ಯಡಿಯೂರಪ್ಪನವರನ್ನು ಅದೂ ಉಪ ಚುನಾವಣೆಯ ಸಂದರ್ಭದಲ್ಲಿ ಭೇಟಿಯಾಗಿರುವುದರಿಂದ, ಸ್ವಾಭಾವಿಕವಾಗಿ ಇದಕ್ಕೆ ರಾಜಕೀಯ ಬಣ್ಣ ಅಂಟಿಕೊಂಡಿದೆ.
ಕೊನೆಗೂ ಉಪ ಚುನಾವಣೆ ಅಖಾಡಕ್ಕಿಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ!
ಯಡಿಯೂರಪ್ಪನವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲೇ ಬೇಕು
ಬಿಜೆಪಿಗೆ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅತ್ಯಂತ ಮಹತ್ವದ್ದಾಗಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆ ಸಂಬಂಧ, ಬಿಜೆಪಿ, ಖಾಸಗಿ ಸಂಸ್ಥೆಯೊಂದರ ಮೂಲಕ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರಲ್ಲಿ ಬಿಜೆಪಿಗೆ ಪೂರಕ ವಾತಾವರಣ ಇಲ್ಲ ಮತ್ತು ಯಡಿಯೂರಪ್ಪನವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲೇ ಬೇಕು ಎನ್ನುವ ಅಂಶ ವರದಿಯಾಗಿತ್ತು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಬಿ.ಎಲ್.ಸಂತೋಷ್ ಅವರು ಬಿಎಸ್ವೈ ಅವರನ್ನು ಭೇಟಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ ಬಿಎಸ್ವೈ ವಿಚಾರವನ್ನೇ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿತ್ತು
ಯಡಿಯೂರಪ್ಪನವರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯ ನಂತರ, ಚುನಾವಣಾ ಪ್ರಚಾರದಲ್ಲಿ ಯಡಿಯೂರಪ್ಪ ಭಾಗವಹಿಸುವುದಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ಮುಂದಾಗಿ, ಬಿಎಸ್ವೈ ವಿಚಾರವನ್ನೇ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆಯಿತ್ತು. ಪಕ್ಷ ಕಟ್ಟಿದ ವ್ಯಕ್ತಿಯನ್ನು ಬಿಜೆಪಿಯ ವರಿಷ್ಠರು ಮೂಲೆಗುಂಪು ಮಾಡಿದರು ಎಂದು ಪ್ರಚಾರಕ್ಕೆ ಕಾಂಗ್ರೆಸ್ ಬಳಸುವ ಮಾತುಗಳು ಕೇಳಿ ಬರುತ್ತಿದ್ದವು. ಹಾಗಾಗಿ, ಯಡಿಯೂರಪ್ಪನವರನ್ನು ಪ್ರಚಾರಕ್ಕೆ ಕರೆತರುವುದು ಬಿಜೆಪಿಗೆ ಮುಖ್ಯವಾಗಿತ್ತು. ಈ ಕಾರಣಕ್ಕಾಗಿ ಬಿ.ಎಲ್.ಸಂತೋಷ್ ಅವರ ಭೇಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸಂತೋಷ್ ಅವರು ಭೇಟಿಯಾಗಿದ್ದಾರೆ
ಉತ್ಸಾಹದಿಂದ ಯಡಿಯೂರಪ್ಪನವರು ಉಪ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸಂತೋಷ್ ಅವರು ಭೇಟಿಯಾಗಿದ್ದಾರೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎನ್ನುವ ಸಂದೇಶವೂ ಜನತೆಗೆ ಹೋಗಬೇಕಿದೆ. ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪನವರು ಮತ್ತು ಸಿ.ಎಂ.ಉದಾಸಿ ಕುಟುಂಬದ ಸದಸ್ಯರೂ ಪ್ರಚಾರದಲ್ಲಿ ಭಾಗವಹಿಸ ಬೇಕು ಎನ್ನುವ ಅಂಶ, ಆಂತರಿಕ ವರದಿಯಲ್ಲಿ ಉಲ್ಲೇಖವಾಗಿದೆ ಎನ್ನುವ ಮಾತಿದೆ.
ಯಡಿಯೂರಪ್ಪನವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದಾಗ
ಯಡಿಯೂರಪ್ಪನವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದಾಗ ಮತ್ತು ಉಪ ಚುನಾವಣೆಗೆ ಬಿ.ವೈ.ವಿಜಯೇಂದ್ರ ಅವರ ಹೆಸರು ಉಸ್ತುವಾರಿ ಪಟ್ಟಿಯಲ್ಲಿ ಇಲ್ಲದೇ ಇದ್ದಾಗ, ಸಾಮಾಜಿಕ ತಾಣದಲ್ಲಿ ಬಿ.ಎಲ್.ಸಂತೋಷ್ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಸಂತೋಷ್ ಅವರ ಭೇಟಿಗೆ ಇದೂ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಪ್ರಚಾರಕ್ಕೆ ಬರುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಬಿಎಸ್ವೈ ಭೇಟಿಯಾಗಿದ್ದರು. ಅಕ್ಟೋಬರ್ ಇಪ್ಪತ್ತರ ನಂತರ ಬಿಎಸ್ವೈ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಬೊಮ್ಮಾಯಿಯವರು ಹೇಳಿದ್ದರು. ಕರ್ನಾಟಕದ ರಾಜಕೀಯದಲ್ಲಿ ಸಂತೋಷ್ ಅವರು ಉತ್ತಮ ಹಿಡಿತವನ್ನು ಹೊಂದಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ.