ನಿವೃತ್ತಿ ಪರ್ವ ಸುಷ್ಮಾರಿಂದ ಆರಂಭವಷ್ಟೇ; ಲೋಕಸಭೆ ಚುನಾವಣೆಗೆ ಏನೆಲ್ಲ ಬದಲಾವಣೆ?
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಇಲ್ಲ ಎಂದು ಹೇಳಿದ್ದಾರೆ. ಇಂಥದ್ದೊಂದು ಬೆಳವಣಿಗೆಗೆ ಆರಂಭ ನೀಡಿದ್ದಾರೆ ಸುಷ್ಮಾ. ಇದೇ ರೀತಿ ಬಿಜೆಪಿಯ ಇನ್ನಷ್ಟು ಮುಖಂಡರು ಹೇಳುವ ಸಾಧ್ಯತೆಗಳಿವೆ. ಒಂದು ವೇಳೆ ಹೇಳದಿದ್ದಲ್ಲಿ ಪಕ್ಷದಿಂದಲೇ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎನ್ನುತ್ತಿವೆ ಆಂತರಿಕ ಮೂಲಗಳು.
ಹಾಗೆ ನೋಡಿದರೆ ಅರುಣ್ ಜೇಟ್ಲಿ, ಮನೋಹರ್ ಪರಿಕರ್, ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರಿಗೆ ಪಕ್ಷದೊಳಗೆ ಪ್ರಾಶಸ್ತ್ಯ ಸಿಗುವ ಕೊನೆ ಲೋಕಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿದೆ. ಆ ನಂತರ ಇವರೂ ಸೇರಿದಂತೆ ಇನ್ನೂ ಅನೇಕ ನಾಯಕರು ತೆರೆ ಮರೆಗೆ ಸರಿಯುವುದು ಅನಿವಾರ್ಯ ಆಗುತ್ತದೆ.
ನಿವೃತ್ತಿ ಪರ್ವ ಸುಷ್ಮಾರಿಂದ ಆರಂಭವಷ್ಟೇ; ಲೋಕಸಭೆ ಚುನಾವಣೆಗೆ ಏನೆಲ್ಲ ಬದಲಾವಣೆ?
ಇಂಥದ್ದೊಂದು ಆಲೋಚನೆ ಬಹಳ ಹಿಂದಿನಿಂದ ಇದ್ದ ಕಾರಣಕ್ಕೆ ಕಡಿಮೆ ವಯಸ್ಸಿನವರನ್ನೇ ಅಂದರೆ ಮಹಾರಾಷ್ಟ್ರಕ್ಕೆ 48 ವರ್ಷದ ದೇವೇಂದ್ರ ಫಡ್ನವೀಸ್, ಉತ್ತರಪ್ರದೇಶಕ್ಕೆ 46 ವರ್ಷದ ಯೋಗಿ ಆದಿತ್ಯನಾಥ್, ತ್ರಿಪುರಾಗೆ 46 ವರ್ಷದ ಬಿಪ್ಲಬ್ ದೇಬ್, ಉತ್ತರಾಖಂಡ್ ಗೆ 57 ವರ್ಷದ ತ್ರಿವೇಂದ್ರ ರಾವತ್ ರನ್ನು ಬಿಜೆಪಿಯಿಂದ ಮುಖ್ಯಮಂತ್ರಿ ಆಗಿ ಮಾಡಲಾಯಿತು.
ಯಡಿಯೂರಪ್ಪ, ರಾಜೇ, ರಮಣ್ ಸಿಂಗ್ ಗೆ ಕೊನೆ ಅವಕಾಶ
ಇನ್ನು ರಾಜಸ್ತಾನದ ವಸುಂಧರಾ ರಾಜೇ ಹಾಗೂ ಛತ್ತೀಸ್ ಗಢದ ರಮಣ್ ಸಿಂಗ್ ಚುನಾವಣೆಯಲ್ಲಿ ಬಿಜೆಪಿಯ ನೇತೃತ್ವ ವಹಿಸುವುದು ಇದೇ ಕೊನೆ. ನಂತರ ಆ ರಾಜ್ಯಗಳಲ್ಲಿ ಪರ್ಯಾಯ ನಾಯಕತ್ವ ತರಲಾಗುವುದು. ಇದೇ ನಿಯಮ ಕರ್ನಾಟಕಕ್ಕೂ ಅನ್ವಯ ಆಗುತ್ತದೆ. ಲೋಕಸಭೆ ಚುನಾವಣೆ ನಂತರ ಯಡಿಯೂರಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲಾಗುತ್ತದೆ ಎನ್ನುತ್ತವೆ ಪಕ್ಷದ ಮೂಲಗಳು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮುಂದಿನ ಲೋಕಸಭೆ ಚುನಾವಣೆ ನಂತರ ಮತ್ತೊಂದು ಅವಧಿಗೆ ನಾಯಕತ್ವ ವಹಿಸುವುದಿಲ್ಲ ಎಂಬುದು ಸದ್ಯಕ್ಕೆ ಚರ್ಚೆಯಲ್ಲಿದೆ.
2024ರ ಲೋಕಸಭಾ ಚುನಾವಣೆಗೆ ಯುವ ನಾಯಕತ್ವದಡಿ ಕಾದಾಟ
ಮುಂದಿನ ಲೋಕಸಭಾ ಅವಧಿ ಪೂರ್ಣವಾದ ನಂತರ ಚುನಾವಣೆಗೆ ಹೋಗುವುದಾದರೆ 2024ಕ್ಕೆ ಚುನಾವಣೆ ಎದುರಾಗುತ್ತದೆ. ಆಗ ಬಿಜೆಪಿಯು ಬೇರೆ ನಾಯಕತ್ವದ ಅಡಿಯಲ್ಲಿ ಚುನಾವಣೆಯನ್ನು ಎದುರಿಸುತ್ತದೆ. ಆದ್ದರಿಂದ ಈಗಾಗಲೇ ಯಾರು ಆ ಜವಾಬ್ದಾರಿ ಹೊರಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಹಾಗೂ ಬಿಜೆಪಿಯ ಉನ್ನತ ಮಟ್ಟದ ಚರ್ಚೆ ನಡೆದಿದ್ದು, ಅರವತ್ತು ವರ್ಷದೊಳಗಿನ ನಾಯಕರೊಬ್ಬರನ್ನು ಮುಂಚೂಣಿಗೆ ತರಲಾಗುವುದು ಎಂದು ತಿಳಿದುಬಂದಿದೆ. ಏಕೆಂದರೆ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ, ಯುವ ನಾಯಕರೊಬ್ಬರ ವಿರುದ್ಧ ಬಿಜೆಪಿಯಿಂದಲೂ ಯುವ ನಾಯಕರೊಬ್ಬರನ್ನು ಕಣಕ್ಕೆ ಇಳಿಸುವುದು ಈ ಆಯ್ಕೆ ಹಿಂದಿನ ಉದ್ದೇಶ.
ದಕ್ಷಿಣದಲ್ಲಿ ಆರೆಸ್ಸೆಸ್ ನ ತಾತ್ಕಾಲಿಕ ಅಧ್ಯಕ್ಷರೊಬ್ಬರ ನೇಮಕ
ಅಷ್ಟೇ ಅಲ್ಲ, ದಕ್ಷಿಣದಲ್ಲಿ ದಲಿತ ನಾಯಕರಿಗೆ ಪಕ್ಷದ ಪ್ರಮುಖ ಹುದ್ದೆಯೊಂದನ್ನು ನೀಡಬೇಕು. ಆ ಮೂಲಕ ಬಿಜೆಪಿಯಲ್ಲಿ ಬ್ರಾಹ್ಮಣರಿಗೆ ಮಾತ್ರ ಬೆಳೆಯಲು ಅವಕಾಶ ಎಂಬ ಅಪವಾದದಿಂದ ಹೊರಬರಬೇಕು ಎಂಬ ಲೆಕ್ಕಾಚಾರ ಕೂಡ ಪಕ್ಷದಲ್ಲಿ ಇದೆ. ಆ ಕಾರಣಕ್ಕೆ ಕೆಲವು ಆಯ್ಕೆಗಳನ್ನು ಪರಿಗಣಿಸಲಾಗಿದೆ. ಆದರೆ ಮೊದಲಿಗೆ ಪಕ್ಷದಲ್ಲಿ ಶಿಸ್ತು ತರುವುದಕ್ಕೆ ಆದ್ಯತೆ ನೀಡಲಾಗುವುದು. ಆರೆಸ್ಸೆಸ್ ಮುಖಂಡರೊಬ್ಬರನ್ನು ತಾತ್ಕಾಲಿಕವಾಗಿ ಅಧ್ಯಕ್ಷರನ್ನಾಗಿ ಮಾಡಿ, ಮುಂದೆ ವಿಧಾನಸಭೆ ಚುನಾವಣೆ ನಡೆಯುವ ವೇಳೆಗೆ ಹೊಸ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವುದು ಅಥವಾ ಅಧಿಕಾರಕ್ಕೆ ಬಂದಲ್ಲಿ ಹೊಸ ಅಭ್ಯರ್ಥಿಯನ್ನು ಗದ್ದುಗೆ ಮೇಲೆ ಕೂರಿಸುವುದು ಬಿಜೆಪಿ ಲೆಕ್ಕಾಚಾರಗಳಲ್ಲಿ ಒಂದು.
ಸಿದ್ಧಾಂತದ ಆಧಾರದಲ್ಲಿ ನಡೆಯಲಿದೆಯಾ ಲೋಕ ಸಮರ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಲಿದೆ. ಕಳೆದ ಬಾರಿ ಪಡೆದಷ್ಟು ಸ್ಥಾನಗಳಲ್ಲಿ ಗೆಲ್ಲದಿರಬಹುದು. ಆದರೆ ಬಹುಮತ ಪಡೆಯುವುದಕ್ಕೆ ಯಾವ ಸಮಸ್ಯೆಯೂ ಆಗಲಾರದು. ಏಕೆಂದರೆ ಮೋದಿ ನಾಯಕತ್ವದ ವಿರುದ್ಧ ವಿರೋಧಿ ಪಾಳಯದಲ್ಲಿ ಪ್ರಬಲ ನಾಯಕರಿಲ್ಲ. ಹಿಂದುತ್ವ, ರಾಷ್ಟ್ರೀಯತೆ, ಸಿದ್ಧಾಂತದ ಆಧಾರದಲ್ಲೇ ಈ ಬಾರಿಯ ಚುನಾವಣೆ ನಡೆಯಲಿದೆ. ರಫೇಲ್ ಯುದ್ಧ ವಿಮಾನ ಖರೀದಿ, ಅಪನಗದೀಕರಣ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ಪೆಟ್ರೋಲ್-ಡೀಸೆಲ್ ಬೆಲೆ ಇತ್ಯಾದಿ ವಿಚಾರಗಳು ಲೋಕಸಭಾ ಚುನಾವಣೆಗೆ ವಿಷಯಗಳಾಗಿರುವುದಿಲ್ಲ. ಮುಖ್ಯವಾಗಿ ದೇಶವನ್ನು ಒಡೆಯುವ ಕೆಲಸ ಆಗುತ್ತಿದೆ. ಅದನ್ನು ತಡೆಯುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಪಕ್ಷದ ಪ್ರಮುಖ ಸ್ಥಾನದಲ್ಲಿರುವವರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.