ಪಂಚ ರಾಜ್ಯಗಳಲ್ಲಿ ಬಿಜೆಪಿ ಪಂಚರಾಗ; ಒಲಿಯೋದ್ಯಾರಿಗೆ ಅಧಿಕಾರ ಯೋಗ?
ನವದೆಹಲಿ, ಮಾರ್ಚ್ 26: ಪಂಚರಾಜ್ಯಗಳಲ್ಲಿ ಗೆಲುವಿನ ಮಂತ್ರ ಜಪಿಸುತ್ತಿರುವ ಭಾರತೀಯ ಜನತಾ ಪಕ್ಷವು ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಅಸ್ತ್ರ ಪ್ರಯೋಗವನ್ನು ಮಾಡುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಗಳು ಬಿಜೆಪಿಗೆ ಪ್ರಚಾರದ ಅಸ್ತ್ರವಾಗುತ್ತಿದೆ.
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅದೇ ಕಾಯ್ದೆ ಬಗ್ಗೆ ತಮಿಳುನಾಡು, ಕೇರಳದಲ್ಲಿ ಸೊಲ್ಲೆತ್ತುವುದಿಲ್ಲ. ಕೇರಳ ಮತ್ತು ತಮಿಳುನಾಡಿನಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗರು ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಈ ಬಗ್ಗೆ ತುಟಿ-ಪಿಟಿಕ್ ಅನ್ನುತ್ತಿಲ್ಲ.
ತಮಿಳುನಾಡಿನಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿ ಬಗ್ಗೆ ಚಿದಂಬರಂ ಪ್ರಶ್ನೆ
ಪಂಚರಾಜ್ಯಗಳ ಪೈಕಿ ಒಂದು ರಾಜ್ಯದಲ್ಲಿ ಒಂದೊಂದು ರೀತಿಯ ಅಸ್ತ್ರಗಳನ್ನು ಪ್ರಯೋಗಿಸುತ್ತಿರುವ ಬಿಜೆಪಿಗರ ಯೋಜನೆ ಮತ್ತು ಯೋಜನೆ ಹೇಗಿದೆ. ನಾಲ್ಕು ರಾಜ್ಯ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಒಲವು ಯಾರ ಕಡೆಗಿದೆ. ತಮಿಳುನಾಡಿನಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಗದ್ದುಗೆ ಒಲಿಯಲಿದೆ. ರಾಜಕೀಯ ನಾಯಕರು ಮತ್ತು ಮತದಾರರ ನಡುವಿನ ಚುನಾವಣಾ ಲೆಕ್ಕಾಚಾರಗಳು ಹೇಗಿವೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
ಬಂಗಾಳದಲ್ಲಿ ಅಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಸ್ತಾಪ
ಅಸ್ಸಾಂ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಉಲ್ಲೇಖವೇ ಇಲ್ಲ. ಆದರೆ ಪಕ್ಕದ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮಟುವಾ ಜನಾಂಗದ ಮತಬ್ಯಾಂಕ್ ಅನ್ನು ಸೆಳೆಯುವ ಉದ್ದಶದಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದಾಗಿ ಭರವಸೆ ನೀಡಲಾಗಿದೆ.
ತಮಿಳುನಾಡು ಮತ್ತು ಕೇರಳದಲ್ಲಿ ಗೋಹತ್ಯೆ ಪ್ರಸ್ತಾಪ
ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಎರಡು ರಾಜ್ಯಗಳಲ್ಲಿ ಒಂದೇ ವಿಷಯವನ್ನು ಬಿಜೆಪಿ ಎರಡು ರೀತಿಯಲ್ಲಿ ಬಳಸಿಕೊಂಡಿದೆ. ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧಿಸುವುದಾಗಿ ಭರವಸೆ ನೀಡಿದೆ. ಆದರೆ ಅದೇ ಪಕ್ಕದ ರಾಜ್ಯ ಕೇರಳದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಲೇ ಇಲ್ಲ.
ಟೈಮ್ಸ್ ನೌ ಸಿ-ವೋಟರ್ ಸಮೀಕ್ಷೆ: ಅಸ್ಸಾಂನಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಎನ್ಡಿಎ ಯಶಸ್ವಿ
ಎರಡು ರಾಜ್ಯದಲ್ಲಿ ಗೋಹತ್ಯೆ ಬಗ್ಗೆ ಎರಡು ನಿಲುವು
ತಮಿಳುನಾಡಿನಲ್ಲಿ 2016 ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿರುವ ಬಿಜೆಪಿ ಈ ಬಾರಿ ಆಡಳಿತ ಪಕ್ಷ ಎಐಎಡಿಎಂಕೆ ಜೊತೆಗೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದೆ. 20 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸಿದೆ. ತಮಿಳುನಾಡಿನಲ್ಲಿ ಗೋವುಗಳ ಮಾರಾಟ, ಬೇರೆ ರಾಜ್ಯಗಳಿಗೆ ಗೋವಿನ ಸಾಗಾಟಕ್ಕೆ ಕಡಿವಾಣ ಹಾಕಲಾಗುವುದು. ದೇವಸ್ಥಾನದ ಅಧೀನದಲ್ಲಿ ಇರುವ ಗೋ-ಸಾಕಾಣಿಕೆ ಕೇಂದ್ರಕ್ಕೆ ಗೋವುಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದೆ.
ತಮಿಳುನಾಡು ಪಕ್ಕದಲ್ಲೇ ಇರುವ ಕೇರಳದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಬಿಜೆಪಿ ಒಂದು ವಾಕ್ಯವನ್ನೂ ಹೇಳಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಯಾವ ಉಲ್ಲೇಖವೂ ಕಂಡು ಬಾರದಿರುವುದು ಅಚ್ಚರಿ ಮೂಡಿಸುತ್ತಿದೆ.
ಕೇರಳ, ತಮಿಳುನಾಡಿನಲ್ಲಿ ಬಿಜೆಪಿ ಭಿನ್ನರಾಗಕ್ಕೇನು ಕಾರಣ?
ಭಾರತದ ರಿಜಿಸ್ಟ್ರಾರ್ ಜನರಲ್ 2016ರ ಸಮೀಕ್ಷೆಯ ಪ್ರಕಾರ, ತಮಿಳುನಾಡು ಮತ್ತು ಕೇರಳದಲ್ಲಿ ಶೇ.97ರಷ್ಟು ಮಾಂಸಹಾರಿಗಳಿದ್ದಾರೆ. ಎರಡೂ ರಾಜ್ಯಗಳಲ್ಲಿ ಒಂದೇ ಪ್ರಮಾಣದ ಮಾಂಸಹಾರಿಗಳೇ ಇದ್ದರೂ, ಕೇರಳದಲ್ಲಿ ಗೋಮಾಂಸ ಸೇವನೆ ಪ್ರಮಾಣ ಹೆಚ್ಚಾಗಿ ಕಂಡು ಬಂದಿದೆ. 2011-12ನೇ ಸಾಲಿನಲ್ಲಿ ಎನ್ಎಸ್ಎಸ್ಓ ನಡೆಸಿರುವ ಸಮೀಕ್ಷೆ ಪ್ರಕಾರ, ತಮಿಳುನಾಡಿಗಿಂತ ಕೇರಳದಲ್ಲಿ ಎರಡು ಪಟ್ಟು ಗೋಮಾಂಸ ಸೇವಿಸುತ್ತಿರುವುದು ಗೊತ್ತಾಗಿದೆ. ತಮಿಳುನಾಡಿನಲ್ಲಿ 40 ಲಕ್ಷ ಜನರು ಗೋಮಾಂಸ ಸೇವಿಸಿದರೆ, ಕೇರಳದಲ್ಲಿ ಸುಮಾರು 80 ಲಕ್ಷ ಜನರು ಗೋವಿನ ಮಾಂಸವನ್ನು ಸೇವನೆ ಮಾಡುತ್ತಾರೆ. ಗೋಮಾಂಸ ಎಂದರೆ ಇಲ್ಲಿ ಎಮ್ಮೆ ಮಾಂಸವಾಗಿರುತ್ತದೆಯೇ ವಿನಃ ಹಸುವಿನ ಮಾಂಸ ಎಂಬ ಕಲ್ಪನೆಗೆ ವಿರುದ್ಧವಾಗಿರುತ್ತದೆ.
ದೇಶಾದ್ಯಂತ ಎನ್ಆರ್ಸಿ ಜಾರಿ ಬಗ್ಗೆ ನಿರ್ಧರಿಸಿಲ್ಲ: ಸರ್ಕಾರ ಮಾಹಿತಿ
ಗೋಮಾಂಸದ ಬಗ್ಗೆ ಕೇರಳದಲ್ಲಿ ಸೂಕ್ಷ್ಮತೆ
ಕೇರಳದಲ್ಲಿ ಇತ್ತೀಚಿನ ದಿನಗಳಲ್ಲಿ ಗೋಮಾಂಸ ಸೇವನೆ ಬಗ್ಗೆ ಸಾಕಷ್ಟು ಸೂಕ್ಷ್ಮತೆಗಳನ್ನು ಹೊಂದಿದೆ. 2015ರಲ್ಲಿ ಗೋವಿನ ಮಾಂಸ ಮಾರಾಟದ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನೆಲೆ ದೆಹಲಿಯ ಕೇರಳ ಹೌಸ್ ಕ್ಯಾಂಟೀನ್ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಉಮನ್ ಚಾಂಡಿ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗಿತ್ತು. 2017ರಲ್ಲಿ ಕೇಂದ್ರ ಸರ್ಕಾರ ಜಾನುವಾರು ಮಾರುಕಟ್ಟೆಗಳಲ್ಲಿ ಪ್ರಾಣಿಗಳ ಮಾರಾಟ ನಿಷೇಧಿಸುವ ಉದ್ದೇಶದಿಂದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ(ಪಿಸಿಎಸಿ) ಪರಿಷ್ಕರಿಸಲು ಮುಂದಾಯಿತು. ಅಂದು ತಮಿಳುನಾಡು ಸರ್ಕಾರಕ್ಕಿಂತ ಕೇರಳದಲ್ಲಿ ಎಲ್ಡಿಎಫ್ ಸರ್ಕಾರವೇ ಜಾನುವಾರು ಮಾರಾಟ ನಿಷೇಧ ಕಾಯ್ದೆ ಬಗ್ಗೆ ಚರ್ಚಿಸುವುದಕ್ಕಾಗಿ ವಿಶೇಷ ಅಧಿವೇಶನವನ್ನು ಕರೆಯಿತು.
ಅಸ್ಸಾಂ ಮತ್ತು ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ
ಕೇಂದ್ರವು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಗಳನ್ನು ಜಾರಿಗೊಳಿಸುವ ಬಗ್ಗೆ ಘೋಷಿಸಿದಾಗಲೇ ಅಸ್ಸಾಂನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. 2019ರಲ್ಲಿ ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲಾ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆದವು. ಈ ಸೂಕ್ಷ್ಮತೆಯನ್ನು ಅರಿತುಕೊಂಡೇ ಅಸ್ಸಾಂನಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ವೇಳೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿರಲಿಲ್ಲ, ಪ್ರಣಾಳಿಕೆಯಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಉಲ್ಲೇಖಿಸಿರಲಿಲ್ಲ.
ಸಿಎಎ ಮೂಲಕ ಬಂಗಾಳದಲ್ಲಿ ಮತಬ್ಯಾಂಕ್ ರಾಜಕಾರಣ
ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮುಸ್ಲಿಂ ಸಮುದಾಯವು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಾಗಿರುವ ಮಟುವಾ ಸಮುದಾಯದ ವೋಟ್ ಬ್ಯಾಂಕ್ ಸೆಳೆಯುವುದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಪೂರ್ಣಗೊಂಡ ನಂತರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ.