ವಿಶ್ವದ ಹಣೆಬರಹ ಬದಲಿಸುವ ಶಕ್ತಿ ಯುವಜನತೆಗಿದೆ : ನರೇಂದ್ರ ಮೋದಿ
ನವದೆಹಲಿ, ಏಪ್ರಿಲ್ 08 : "ಭಾರತ ಯುವಶಕ್ತಿಯಿಂದ ತುಂಬಿದಂಥ ರಾಷ್ಟ್ರ. ಹೆಚ್ಚಿನ ಭಾಗ ಯುವಜನತೆಯಿಂದಲೇ ತುಂಬಿರುವ ದೇಶಕ್ಕೆ ತನ್ನನ್ನು ತಾನು ಮಾತ್ರವಲ್ಲ ಇಡೀ ವಿಶ್ವದ ಹಣೆಬರಹವನ್ನೇ ಬದಲಿಸುವ ಶಕ್ತಿಯಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಯುವಶಕ್ತಿಯನ್ನು ಬಣ್ಣಿಸಿದ್ದಾರೆ.
ಸಂಪೂರ್ಣ ಹೊಸ ಭಾರತವನ್ನು ನಿರ್ಮಿಸಲು ಅನುಕೂಲವಾಗಲೆಂದು, ಭಾರತದ ಭವಿಷ್ಯತ್ತಿನ ಯುವಶಕ್ತಿಗಾಗಿ, ನಾವು ಯಶಸ್ಸಿನ ಮೆಟ್ಟಿಲುಗಳನ್ನು ನಿರ್ಮಿಸಬೇಕು. ಆಗ ಮಾತ್ರ ಉತ್ತಮ ಸಮೃದ್ಧ ಹೊಸ ಭಾರತವನ್ನು ನಿರ್ಮಿಸಲು ಸಾಧ್ಯ ಎಂದು, ಸೋಮವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ತಿಳಿಸಿದೆ.
ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು
2014ರ ಚುನಾವಣೆಯಲ್ಲಿ ಶೇ.68ರಷ್ಟು ಮೊದಲ ಬಾರಿ ವೋಟು ಹಾಕುತ್ತಿರುವವರು ಸೇರಿದಂತೆ ಯುವಜನತೆ ಮತದಾನ ಮಾಡಿತ್ತು. ಈಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕೋರಿದ್ದಾರೆ ಮತ್ತು ಯುವಜನತೆಯನ್ನು ಮತದಾನಕ್ಕಾಗಿ ಉತ್ತೇಜಿಸುವಂತೆ ಹಲವಾರು ಸೆಲೆಬ್ರಿಟಿಗಳಿಗೆ ಮನವಿ ಮಾಡಿದ್ದಾರೆ.
ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಯುವಶಕ್ತಿಯನ್ನು ಹುಟ್ಟುಹಾಕಲು ಏನೇನು ನೀಡಲಿದ್ದೇವೆ ಎಂಬುದನ್ನು ವಿವರಿಸಲಾಗಿದೆ. 10 ಅಂಶಗಳನ್ನು ಪ್ರಣಾಳಿಕೆಯಲ್ಲಿ ನೀಡಿದೆ.
ಚಾಂಪಿಯನ್ ವಲಯದಲ್ಲಿ ಉದ್ಯೋಗ ಸೃಷ್ಟಿ
ಭಾರತದ ಆರ್ಥಿಕತೆಯನ್ನು ಮುನ್ನಡೆಸಲು ಗುರುತಿಸಲಾಗಿರುವ 22 ಪ್ರಮುಖ 'ಚಾಂಪಿಯನ್ ವಲಯ'ಗಳಲ್ಲಿ ಉದ್ಯೋಗ ಸೃಷ್ಟಿಸಲು ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ದೇಶದಲ್ಲಿ ವಿದೇಶದಲ್ಲಿ ಲಭ್ಯವಿರುವ ಹಲವಾರು ಉದ್ಯೋಗದ ಅವಕಾಶಗಳು ಯುವಜನತೆಗೆ ಸಿಗುವಂತೆ, ಉದ್ಯೋಗಾವಕಾಶದ ಸಾಮರ್ಥ್ಯ ಇರುವ ರಕ್ಷಣಾ ಮತ್ತು ಫಾರ್ಮಾಸ್ಯುಟಿಕಲ್ ಕ್ಷೇತ್ರಗಳಿಗೆ ಒತ್ತು ನೀಡಲಾಗುತ್ತದೆ.
ಯುವ ಉದ್ಯಮಿಗಳಿಗೆ ಪ್ರೋತ್ಸಾಹ
ಯುವ ಉದ್ಯಮಿಗಳನ್ನು ಉತ್ತೇಜಿಸಲು, ಯಾವುದೇ ಪೂರ್ವ ಪೂರಕ ದಾಖಲೆಯಿಲ್ಲದೆ 50 ಲಕ್ಷ ರು.ವರೆಗೆ ಸಾಲ ನೀಡಲಾಗುವ ಹೊಸ ಯೋಜನೆ ಆರಂಭಿಸಲಾಗುವುದು. ಪುರುಷರಿಗಿಂದ ಮಹಿಳಾ ಉದ್ಯಮಿಗಳಿಗೆ ಆದ್ಯತೆ. ಈಶಾನ್ಯ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿಯಾಗುವಂತೆ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಹಣಕಾಸಿನ ಸಹಾಯ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಈವರೆಗೆ 17 ಕೋಟಿ ಉದ್ಯಮಿಗಳು ಸಾಲ ಪಡೆದಿದ್ದಾರೆ. ಇದನ್ನು 30 ಕೋಟಿಗೆ ಹೆಚ್ಚಿಸಲಾಗುವುದು. ಸ್ಟಾರ್ಟಪ್ ಕಂಪನಿಗಳನ್ನು ಪ್ರೋತ್ಸಾಹಿಸಲೆಂದು, 'ಸೀಡ್ ಸ್ಟಾರ್ಟಪ್ ಫಂಡ್' ಸ್ಥಾಪಿಸಿ 20,000 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು.
ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ 10 ಮುಖ್ಯಾಂಶಗಳು
|
ಸಮಾಜದೊಡನೆ ಯುವಸಮೂಹ
ಯುವಜನತೆ ಸಮಾಜದೊಂದಿಗೆ ಮಿಳಿತವಾಗುವಂತೆ ಪ್ರೋತ್ಸಾಹಿಸಲು, ಶಾಲೆ, ಆಸ್ಪತ್ರೆ, ಕೆರೆ, ಸಾರ್ವಜನಿಕ ಉದ್ಯಾನವನ ಮುಂತಾದವುಗಳನ್ನು ದತ್ತು ತೆಗೆದುಕೊಳ್ಳಲು ಇಚ್ಛಿಸುವ ಸ್ವಸಂಘಟಿತ ಯುವ ಸಮೂಹಗಳಿಗೆ ಉತ್ತೇಜನಾತ್ಮಕ ಧನ ಸಹಾಯ ಮಾಡಲಾಗುವುದು. ಇದರಿಂದ ಅವರು ದತ್ತು ತೆಗೆದುಕೊಂಡ ಆಸ್ತಿಯನ್ನು ಸ್ವಚ್ಛವಾಗಿಲು ಮತ್ತು ನಿರ್ವಹಿಸಲು ಅನುಕೂಲವಾಗುವುದು. ಮಾದಕ ವ್ಯಸನಿಗಳನ್ನು ಅದರಿಂದ ಹೊರತರಲು ಅವರಲ್ಲಿ ಜಾಗೃತಿ ಮೂಡಿಸಲು ವಿಶೇಷವಾದ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು.
ಸ್ಥಳೀಯ ಸಂಸ್ಥೆಗಳಲ್ಲಿ ಯುವಕರಿಗೆ ತರಬೇತಿ
ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಲಿಚ್ಛಿಸುವ ಯುವ ಜನತೆಗೆ ಇಂಟರ್ನ್ ಶಿಪ್ ಆರಂಭಿಸಲಾಗುವುದು. ನಗರದ ಸಮಸ್ಯೆಗಳು ಅವರಿಗೆ ಅರಿವಾಗಲೆಂದು ಮತ್ತು ಅವುಗಳ ಪರಿಹಾರಕ್ಕೆ ಸ್ಪಂದಿಸಲೆಂದು ಯುವಜನತೆಗೆ ಅದಕ್ಕೆ ಬೇಕಾದ ನೈಪುಣ್ಯತೆಯನ್ನು ನೀಡಲಾಗುವುದು. ಇಂಥ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೂ ಮಾಡಿದ್ದರು. ಸರಕಾರದ ಕೆಲಸದಲ್ಲಿ ಯುವ ಜನರು ತೊಡಗುವಂತೆ ಮಾಡಿದ್ದರು.
ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?
ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ
ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಉತ್ತೇಜಿಸಲು ಮತ್ತು ಅವರು ಇನ್ನಷ್ಟು ಸಾಧನೆ ಮಾಡುವಂತಾಗಲು, ಆಯಾ ರಾಜ್ಯಗಳಲ್ಲಿ ಜಿಲ್ಲಾ ಕ್ರೀಡಾಪಟುಗಳಲ್ಲಿನ ಪ್ರತಿಭೆಯನ್ನು ಮತ್ತು ಸಾಮರ್ಥ್ಯವನ್ನು ಗುರುತಿಸಿ, ಸಾಂಪ್ರದಾಯಿಕ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು. ಆಯಾ ಪ್ರದೇಶಕ್ಕೆ ತಕ್ಕಂತೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುವುದು.
ಮಹಿಳೆಯರಿಗೆ ಮತ್ತು ಗುಡ್ಡಗಾಡು ಪ್ರೋತ್ಸಾಹ
'ಖೇಲೋ ಇಂಡಿಯಾ' ಎಂಬ ಮಹತ್ವಾಕಾಂಕ್ಷೆಯ ಯೋಜನೆಯ ಮೂಲಕ ಭಾರತದಲ್ಲಿ ಕ್ರೀಡಾ ಸಂಸ್ಕೃತಿಗೆ ನೀರೆರೆಯಲು ಬಿಜೆಪಿ ಸರಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಾಧನೆ ತೋರುವಂತಾಗಲು ಕ್ರೀಡಾಪಟುಗಳಿಗೆ ಬೇಕಾದ ಎಲ್ಲ ಮೂಲಸೌಕರ್ಯವನ್ನು ಒದಗಿಸಲು ಬಿಜೆಪಿ ಸರಕಾರ ಬದ್ಧವಾಗಿದೆ. ಈ ಯೋಜನೆಯಡಿಯಲ್ಲಿ ಎಲ್ಲಾ ಕ್ರೀಡಾಪಟುಗಳ ಜೊತೆ ಮಹಿಳೆಯರಿಗೆ ಮತ್ತು ಗುಡ್ಡಗಾಡು ಜನರಿಗೆ ಹೆಚ್ಚಿನ ಉತ್ತೇಜನರವನ್ನು ನೀಡಲಾಗುವುದು.
ಶಿಕ್ಷಣದಲ್ಲಿ ಪ್ರಾಕ್ಟಿಕಲ್ ಸ್ಪೋರ್ಟ್ಸ್
ದೇಶದಲ್ಲಿ ಕ್ರೀಡೆಗೆ ಹಿಂದೆಂದಿಗಿಂತ ಹೆಚ್ಚಿನ ಪ್ರೋತ್ಸಾಹ ನೀಡಲು ಶಿಕ್ಷಣದಲ್ಲಿ ಪ್ರಾಕ್ಟಿಕಲ್ ಸ್ಪೋರ್ಟ್ಸ್ ಅನ್ನು ಅಳವಡಿಸಲಾಗುವುದು. ಕ್ರೀಡಾಪಟುಗಳ ಅಭಿವೃದ್ಧಿಗಾಗಿ ನ್ಯಾಷನಲ್ ಸ್ಪೋರ್ಟ್ಸ್ ಎಜ್ಯುಕೇಷನ್ ಬೋರ್ಡ್ (ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ) ಅನ್ನು ಸ್ಥಾಪಿಸಲಾಗುವುದು.
ಜಿಲ್ಲೆಜಿಲ್ಲೆಗಳಲ್ಲಿ ಮಿನಿ ಸ್ಟೇಡಿಯಂ
ಆಯಾ ರಾಜ್ಯಗಳ ಸಹಕಾರಗಳೊಂದಿಗೆ ಜಿಲ್ಲೆಗಳಲ್ಲಿ ಮಿನಿ ಸ್ಟೇಡಿಯಂ ಅನ್ನು ಕ್ರೀಡಾಪಟುಗಳ ಉತ್ತೇಜನಕ್ಕಾಗಿ ನಿರ್ಮಿಸಲಾಗುವುದು. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯ ಒದಗುವಂತೆ ನೋಡಲಾಗುವುದು ಎಂದು ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು
ಮೂಲಸೌಕರ್ಯ ಸುಲಭವಾಗಿ ಸಿಗಬೇಕು
ಈಗಾಗಲೆ ಕ್ರೀಡಾಪಟುಗಳಿಗಾಗಿ ಒದಗಿಸಲಾಗಿರುವ ಮೂಲಸೌಕರ್ಯಗಳು ಅತ್ಯಂತ ಸುಲಭವಾಗಿ ಎಲ್ಲಾ ಕ್ರೀಡಾಪಟುಗಳಿಗೆ ಸಿಗುವಂತೆ ಮಾಡಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಒದಗಿಸಲಾಗಿರುವ ಮೂಲಸೌಕರ್ಯ ಮತ್ತಿತರ ಕ್ರೀಡಾ ಆಸ್ತಿಗಳ ನಿರ್ವಹಣೆಗಾಗಿ ಪಿಪಿಪಿ ಸೇರಿದಂತೆ ಹೊಸ ಮಾದರಿಯನ್ನು ಜಾರಿಗೆ ತರಲಾಗುವುದು.
'ಫಿಟ್ ಇಂಡಿಯಾ' ಯೋಜನೆ
ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಫಿಟ್ ಇಂಡಿಯಾ' ಯೋಜನೆಯನ್ನು ಪ್ರಚಾರ ಮಾಡಲಾಗುವುದು ಮತ್ತು ಅದನ್ನು ಕ್ರೀಡೆಯ ಅವಿಭಾಜ್ಯ ಅಂಗವನ್ನಾಗಿ ಮಾಡಲಾಗುವುದು. ಮತ್ತು ಯುವಜನತೆಯಲ್ಲಿ ಕ್ರೀಡೆಯ ಬಗ್ಗೆ ಹೆಚ್ಚಿ ಆಸಕ್ತಿ ಕೆರಳುವಂತಾಗಲು ಅವರಲ್ಲಿ ಜಾಗೃತಿ ಮೂಡಿಸುವ ಮತ್ತು ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗುವುದು.