ಒಡೆ ಮಗ, ಒಡೆ ಮಗ! ಗುರಿ ಬದಲಿಸಿದ ಬಿಜೆಪಿ ಈಗ ಮೈತ್ರಿ ಸರಕಾರದ ಕತ್ತು ಹಿಸುಕಲು ರೆಡಿ
Recommended Video
ಕಾಂಗ್ರೆಸ್ ನ ಶಾಸಕರನ್ನು ಸೆಳೆದು, ಮೈತ್ರಿ ಸರಕಾರವನ್ನು ಬೀಳಿಸುವ ಆಟ ಕೈ ಬಿಟ್ಟಿದೆಯಾ ಬಿಜೆಪಿ? ಏಕಾಏಕಿ ಬದಲಾಗಿರುವ ಯೋಜನೆಯ ಮೊದಲ ಗುರಿ ಆಗಲಿದೆಯಾ ಜೆಡಿಎಸ್? ಹೀಗೆ ಎರಡು ಪ್ರಶ್ನೆಗಳ ಹಿಂದೆ ಹೋದರೆ ಹಲವು ಸಂಗತಿಗಳು ತೆರೆದುಕೊಳ್ಳುತ್ತವೆ. ಲೋಕಸಭಾ ಚುನಾವಣೆ ಹಾಗೂ ಎರಡು ಉಪಚುನಾವಣೆ ಫಲಿತಾಂಶದ ನಂತರ ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಹುಟ್ಟಿಕೊಂಡಿದೆ.
ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರವನ್ನು ತಾವಾಗಿಯೇ ಕೆಡವುವ ಬದಲು ಅದಾಗಿಯೇ ಬೀಳುವಂತೆ ಮಾಡಿದರೆ ಹೆಚ್ಚಿನ ಲಾಭ ಇದೆ ಎಂಬುದು ಬಿಜೆಪಿ ಹೈ ಕಮಾಂಡ್ ಗೆ ಮನವರಿಕೆ ಆಗಿದೆ. ಆ ಕಾರಣಕ್ಕೆ ಇನ್ನಷ್ಟು ಸಮಯ ಕಾದು, ಈಗಿನ ಮೈತ್ರಿ ಸರಕಾರ ಬಿದ್ದ ಮೇಲೆ ಚುನಾವಣೆಗೆ ಹೋಗುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದೆ.
ಲಿಂಗಾಯತ ಮುಖಂಡರು 'ಸಿಎಂ' ಗಾದಿಗೆ,ಎಂಬಿ ಪಾಟೀಲರ ನೆರವು ಕೇಳಿದ ರವಿ
ಆ ನಿರ್ಧಾರದ ಭಾಗವಾಗಿಯೇ ಈಗ ಬಿಜೆಪಿಯಿಂದ ಯಾವ ಆಪರೇಷನ್ ಗೂ ಕೈ ಹಾಕುತ್ತಿಲ್ಲ. ಬದಲಿಗೆ ದೋಸ್ತಿ ಸರಕಾರದಲ್ಲಿನ ಅಸಮಾಧಾನದ ಬೆಂಕಿಯನ್ನು ಇನ್ನಷ್ಟು ಹೆಚ್ಚು ಮಾಡಲಾಗುತ್ತಿದೆ. ಜತೆಗೆ ಈ ಸರಕಾರದ ವೈಫಲ್ಯವನ್ನು ಜನರ ಎದುರು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಸಿದ್ಧತೆ ನಡೆದಿದೆ. ಇದರ ಸುಳಿವು ಅರಿತಿರುವ ಕುಮಾರಸ್ವಾಮಿ ಅವರು, ಗ್ರಾಮ ವಾಸ್ತವ್ಯದ ಅಸ್ತ್ರ ಪ್ರಯೋಗಿಸಿದ್ದಾರೆ.
ಯಡಿಯೂರಪ್ಪ ಸ್ಪೀಡ್ ಗೆ ಬ್ರೇಕ್
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಆಪರೇಷನ್ ಕಮಲಕ್ಕೆ ಇಳಿದರು ಎಂಬ ಕೆಟ್ಟ ಹೆಸರು ತೆಗೆದುಕೊಳ್ಳುವುದು ಹೈಕಮಾಂಡ್ ಗೆ ಬೇಕಿಲ್ಲ. ಜನರು ತಮ್ಮನ್ನು ಗೆಲ್ಲಿಸಿರುವ ರೀತಿಗೆ ತಕ್ಕ ಘನತೆಯಿಂದ ನಡೆದುಕೊಳ್ಳದಿದ್ದಲ್ಲಿ ಮುಂದೆ ಕಷ್ಟವಾಗುತ್ತದೆ. ಆ ಕಾರಣಕ್ಕೆ ಆಪರೇಷನ್ ಬದಲಿಗೆ ಚುನಾವಣೆಗೆ ಹೋಗುವುದೇ ಉತ್ತಮ. ಈಗಿನ್ನೂ ನರೇಂದ್ರ ಮೋದಿ ಅಲೆ ಹಾಗೇ ಇದೆ. ಇಂಥ ಸನ್ನಿವೇಶದಲ್ಲೇ ಚುನಾವಣೆಗೆ ಹೋದರೆ ಲಾಭ ಮಾಡಿಕೊಳ್ಳಬಹುದು ಎಂಬುದು ಲೆಕ್ಕಾಚಾರ. ಇಪ್ಪತ್ತೆರಡು ಸ್ಥಾನಗಳನ್ನು ಗೆದ್ದು ಬನ್ನಿ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇರುತ್ತದೆ ಎಂದಿದ್ದ ಅಮಿತ್ ಶಾ ಅವರ ಮಾತನ್ನು ನಂಬಿದ್ದ ಯಡಿಯೂರಪ್ಪ, ಅದೇ ಲೆಕ್ಕಾಚಾರದಲ್ಲಿ ಇದ್ದರು. ಈಗ ಅವರ ಸ್ಪೀಡ್ ಗೆ ಬ್ರೇಕ್ ಬಿದ್ದಿದೆ. ಕಾಂಗ್ರೆಸ್ ಅಥವಾ ಜೆಡಿಎಸ್ ಯಾವ ಶಾಸಕರಾದರೇನು ಮೊದಲಿಗೆ ಈ ಸರಕಾರ ಬೀಳಿಸಬೇಕು ಎಂಬ ಸನ್ನಾಹದಲ್ಲಿ ಇದ್ದಾರೆ ಯಡಿಯೂರಪ್ಪ.
ಎರಡೂ ಪಕ್ಷಗಳಿಗೆ ಸರಕಾರವೇ ಗುಟುಕು ಜೀವ
ಕಾಂಗ್ರೆಸ್ ನಿಂದ ಶಾಸಕರನ್ನು ಬಿಜೆಪಿ ಬಳಿಗೆ ಕಳುಹಿಸಿದವರೇ ಸಿದ್ದರಾಮಯ್ಯ ಎಂಬುದು ನನ್ನ ಅಂದಾಜು ಎಂದು ಸ್ವತಃ ಯಡಿಯೂರಪ್ಪ ನೀಡಿದ ಹೇಳಿಕೆ ಕೂಡ ಇತ್ತೀಚಿನ ವರಸೆಯ ಫಲಿತಾಂಶ. ರಾಜಕೀಯದಲ್ಲಿ ಪಳಗಿದ ಪಂಟರ್ ಯಡಿಯೂರಪ್ಪನವರಿಗೆ ಅಂಥ ಪಟ್ಟುಗಳು ಸಹ ಗೊತ್ತಾಗುವುದಿಲ್ಲವಾ? ಸಿದ್ದರಾಮಯ್ಯ ತಮ್ಮ ಬೆಂಬಲಿಗರನ್ನು, ಆಪ್ತರನ್ನು ಕಳುಹಿಸಿದ ಮಾತ್ರಕ್ಕೆ ಏಕಾಏಕಿ ಸರಕಾರ ಬೀಳಿಸುವ ಆಟಕ್ಕೆ ಯಡಿಯೂರಪ್ಪ ಇಳಿದು ಬಿಡುತ್ತಾರಾ? ಈ ಮಾತು ಆಡುತ್ತಿರುವುದು ಸರಕಾರದಲ್ಲಿ ಅಪನಂಬಿಕೆ ಮೂಡಿಸಿ, ಸಿದ್ದರಾಮಯ್ಯ ಅವರಿಗೆ ಈ ಸರಕಾರ ಇರುವುದು ಬೇಡ ಎಂಬ ಸಂದೇಶ ಕಳಿಸುವ ಸಲುವಾಗಿಯೇ ವಿನಾ ಬೇರೇನೂ ಅಲ್ಲ. ಇನ್ನು ನಿತ್ರಾಣಗೊಂಡಂತೆ ಆಗಿರುವ ಜೆಡಿಎಸ್- ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಸದ್ಯದ ಮಟ್ಟಿಗೆ ಸರಕಾರ ನಡೆಸುತ್ತಿರುವುದೇ ಗುಟುಕು ಜೀವ ಇದ್ದಂತೆ. ಅದರ ಕತ್ತು ಹಿಸುಕಿ ಬಿಟ್ಟರೆ ಕಾಂಗ್ರೆಸ್ ಆದರೂ ಬದುಕೀತು. ಜೆಡಿಎಸ್ ಗೆ ಮಾತ್ರ ಸಾವು ನಿಶ್ಚಿತ.
ಗ್ರಾಮ ವಾಸ್ತವ್ಯದ ಮೂಲಕ ಹೊಸ ನಾಟಕ : ಯಡಿಯೂರಪ್ಪ
ಗ್ರಾಮ ವಾಸ್ತವ್ಯ ಎಂಬ ಜನಪ್ರಿಯ ಅಸ್ತ್ರ ಕೈಗೆ
ಒಂದು ವೇಳೆ ಈಗಿನ ಮೈತ್ರಿ ಸರಕಾರ ವಿಸರ್ಜನೆ ಆದರೂ ಐದಾರು ತಿಂಗಳು ಚುನಾವಣೆಗೆ ಹೋಗಲು ಸಾಧ್ಯವಿಲ್ಲ. ಸರಕಾರ ಬೀಳುವ ಮೊದಲು ಹೈಡ್ರಾಮಾವೊಂದು ಅಗಿ, ಜನರ ಎದುರು ಕಾಂಗ್ರೆಸ್- ಜೆಡಿಎಸ್ ವಿಲನ್ ಆಗಿ ಕಾಣಿಸಿಕೊಳ್ಳಬೇಕು. ಅತಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿಯನ್ನು ದೂರ ಇಡುವ ಸಲುವಾಗಿಯೇ ಇಂಥ ಅಪವಿತ್ರ ಮೈತ್ರಿ ಮಾಡಿಕೊಂಡು, ಸರಕಾರವೂ ನಡೆಸಲಾಗದೆ, ನೀಡಿದ ಭರವಸೆಯನ್ನೂ ಈಡೇರಿಸದೆ ಈಗ ಕಿತ್ತಾಡಿಕೊಂಡು ದೂರ ಆಗಿದ್ದಾರೆ ಎಂದು ಪ್ರಚಾರ ಮಾಡುವುದು ಬಿಜೆಪಿ ಲೆಕ್ಕಾಚಾರ. ಹಾಗೆ ನೋಡಿದರೆ ಈ ಆರೋಪ ಎಲ್ಲವೂ ಸದ್ಯದ ಸನ್ನಿವೇಶದಲ್ಲಿ ನಿಜ. ಆದರೆ ಈಗಿನ ಸರಕಾರವನ್ನು ಶತಾಯ ಗತಾಯ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯ ಎಂಬ ತಮ್ಮ ಈ ಹಿಂದಿನ ಅವಧಿಯ ಜನಪ್ರಿಯ ಅಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕನ್ನಡ ಎಂಬ ಭಾವನಾತ್ಮಕ ವಿಚಾರವನ್ನೂ ತೆಗೆದುಕೊಳ್ಳಬೇಕು ಎಂಬ ಕಾರಣಕ್ಕೆ ಸರಕಾರಿ ಶಾಲೆಗಳಲ್ಲಿ ವಾಸ್ತವ್ಯ ಹೂಡುವ ಯೋಜನೆ ಹಾಕಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಕೆಲ ಗೊಂದಲಗಳಿವೆ
ರಾಜ್ಯದಲ್ಲಿ ಚುನಾವಣೆಗೆ ಹೋಗುವುದು ಅಂತಾದ ಮೇಲೆ ಬಿಜೆಪಿಯಲ್ಲಿ ಕೆಲ ಗೊಂದಲಗಳಿವೆ. ಮುಖ್ಯವಾಗಿ ಯಡಿಯೂರಪ್ಪ ಅವರ ನಾಯಕತ್ವ ವಿಚಾರ. ಬಿಜೆಪಿ ಅಧಿಕಾರ ಹಿಡಿದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕಾ ಎಂಬುದು ಸದ್ಯಕ್ಕೆ ದೊಡ್ಡ ಪ್ರಶ್ನೆಯಾಗಿದೆ. ಉನ್ನತ ಮೂಲಗಳ ಪ್ರಕಾರ, ಆರಂಭದ ಕೆಲ ತಿಂಗಳು ಬಿಎಸ್ ವೈರನ್ನೇ ಸಿಎಂ ಮಾಡಿ, ಆ ನಂತರ ದಲಿತ ಸಮುದಾಯದ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದು ಅಥವಾ ಆರಂಭದಲ್ಲೇ ದಲಿತರೊಬ್ಬರನ್ನು ಗಾದಿಯಲ್ಲಿ ಕೂರಿಸುವ ಲೆಕ್ಕಾಚಾರ ನಡೆದಿದೆ. ಅಂಥ ಸನ್ನಿವೇಶ ಎದುರಾದರೆ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದೊಳಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಕ್ರಮೇಣ ಸರಕಾರದ ಒಳಗೆ ಹುದ್ದೆ ನೀಡಬಹುದು. ಸದ್ಯದ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರ ನಿರೀಕ್ಷೆಗೆ ಹಾಗೂ ಅಪೇಕ್ಷೆಗೆ ಕೇಂದ್ರ ಹೈ ಕಮಾಂಡ್ ಸ್ಪಂದಿಸುತ್ತಿಲ್ಲ. ಆದರೆ ಮೈತ್ರಿ ಸರಕಾರವನ್ನು ಬೀಳಿಸುವುದು ಖಾತ್ರಿ ಎಂಬ ಸಂದೇಶ ರವಾನಿಸಿದೆ.