ಬಿಜೆಪಿ, ಕಾಂಗ್ರೆಸ್ಸಿನ ಪಕ್ಷಾಂತರ ಎನ್ನುವ ಸೂತ್ರವಿಲ್ಲದ ಗಾಳಿಪಟ
ಜಿಲ್ಲಾ ಉಸ್ತುವಾರಿ ನೇಮಕದ ಹಿಂದಿರುವ ಅಸಮಾಧಾನದ ಬೆನ್ನಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷಾಂತರದ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಎರಡೂ ಪಕ್ಷಗಳು ಹಾರಿಸುತ್ತಿರುವ ಗಾಳಿಪಟಕ್ಕೆ ಸದ್ಯಕ್ಕೆ ಸೂತ್ರಧಾರರು ಯಾರು ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಬಿಜೆಪಿಯವರು ಮತ್ತೆ ಆಪರೇಶನ್ ಕಮಲದ ಬಗ್ಗೆ ಮಾತನಾಡುತ್ತಿದ್ದರೆ, ಮೂಲ ಮತ್ತು ವಲಸೆ ಬಿಜೆಪಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ.
ತುಮಕೂರು: ಡಿಕೆಶಿ ಬ್ರದರ್ಸ್ ವಿರುದ್ದ ಕಾಂಗ್ರೆಸ್ ಮುಖಂಡನ ಮೂಲಕವೇ ಬಿಜೆಪಿ ಭರ್ಜರಿ ರಣತಂತ್ರ?
ವರಿಷ್ಠರ ಏನೇ ಫರ್ಮಾನು ಇದ್ದರೂ, ತಾನು ನಡೆದಿದ್ದೇ ದಾರಿ ಎಂದು ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷಾಂತರದ ಬಗೆಗಿನ ಸುದ್ದಿಗೆ ತುಪ್ಪ ಸುರಿದಿದ್ದಾರೆ. ಇವರ ಹೇಳಿಕೆಯ ನಂತರ ಕಾಂಗ್ರೆಸ್ ಮುಖಂಡರ ನಿಲುವು ತೀವ್ರತೆಯನ್ನು ಪಡೆದುಕೊಂಡಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಕಡೆ ಹೋಗುತ್ತಿರುವ ಸುದ್ದಿಗಳಿಗೆ ಆಧಾರಗಳಿದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್ ವಿಚಾರದಲ್ಲಿ ಹಾಗಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷಾಂತರದ ಬಗ್ಗೆ ಯಾವುದೇ ಖಚಿತ ಆಧಾರವಿಲ್ಲದಿದ್ದರೂ, ಸದ್ಯದ ರಾಜಕೀಯ ವಿದ್ಯಮಾನ ಕುತೂಹಲಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ಬಗ್ಗೆ'ಅಯ್ಯೋ ಪಾಪ' ಎಂದು ಬೇಸರ ವ್ಯಕ್ತ ಪಡಿಸಿದ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ
"ನಮ್ಮ ಪಕ್ಷದ ನಮ್ಮ ಜಿಲ್ಲೆಯ (ವಿಜಯಪುರ) ಪ್ರಮುಖ ನಾಯಕರೊಬ್ಬರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಪಂಚ ರಾಜ್ಯಗಳಲ್ಲಿ ಚುನಾವಣೆ ಮುಗಿಯುವ ತನಕ ಕಾಯದೇ, ಸಂಪುಟ ವಿಸ್ತರಣೆ ಮಾಡಿದರೆ, ಪಕ್ಷಾಂತರವಾಗುವುದು ತಪ್ಪುತ್ತದೆ. ಇಲ್ಲದಿದ್ದರೆ, ಕಾಂಗ್ರೆಸ್ ಕಡೆ ನಿಯತ್ತು ಬದಲಾಯಿಸಲಿದ್ದಾರೆ" ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
"ಪಕ್ಷದ ಚೌಕಟ್ಟನ್ನು ಮೀರಬಾರದು, ಬಹಿರಂಗವಾಗಿ ಮಾತನಾಡುತ್ತಿರುವವರಿಗೆ ಎಚ್ಚರಿಕೆ ನೀಡಲಾಗುವುದು"ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ, ಇವರ ಎಚ್ಚರಿಕೆಗೆ ಯತ್ನಾಳ್ ಸೊಪ್ಪುಹಾಕುವರೇ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಷ್ಟೇ ಎಚ್ಚರಿಕೆಯನ್ನು ನೀಡಿದರೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಮತ್ತು ರಾಜ್ಯದ ಪ್ರಮುಖ ಮುಖಂಡರ ವಿರುದ್ದ ವಾಗ್ದಾಳಿಯನ್ನು ನಡೆಸುತ್ತಾ, ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ದುತ್ತಲೇ ಇದ್ದಾರೆ.
ಎಂ.ಟಿ.ಬಿ ನಾಗರಾಜ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದು
ಇದರ ಮಧ್ಯೆ ಸಚಿವ ಎಂ.ಟಿ.ಬಿ ನಾಗರಾಜ್ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಸಂಪರ್ಕಿಸಿದ್ದು ರಾಜಕೀಯವಾಗಿ ಇನ್ನೊಂದು ಆಯಾಮವನ್ನು ಪಡೆದುಕೊಂಡಿದೆ. "ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಅಭಿವೃದ್ದಿಗೆ ಸಂಬಂಧಿಸಿದಂತೆ ಆವಾಗಾವಾಗ ಸಿದ್ದರಾಮಯ್ಯನವರನ್ನು ಸಂಪರ್ಕಿಸುತ್ತಿರುತ್ತೇನೆ"ಎಂದು ಸಿದ್ದರಾಮಯ್ಯನವರ ಶಿಷ್ಯ ಎಂಟಿಬಿ ಹೇಳಿಕೆ ನೀಡಿ, ಪಕ್ಷಾಂತರದ ವಿಚಾರದ ಬಗೆಗಿನ ಸುದ್ದಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಿಜೆಪಿಯ ಬಲವರ್ಧನೆ ನಿಶ್ಚಿತ, ಅದು ಹೇಗೆ ಎನ್ನುವುದನ್ನು ಕಾದು ನೋಡಿ
"ಬಿಜೆಪಿಯ ವಲಸಿಗರು ಮತ್ತು ಮೂಲ ಶಾಸಕರು ಕಾಂಗ್ರೆಸ್ ಬರಲು ಸಿದ್ದರಾಗಿದ್ದಾರೆ. ಆ ಪಟ್ಟಿ ದೊಡ್ಡದಾಗಿದೆ, ಅವರ ಹೆಸರುಗಳನ್ನು ಈಗ ಬಹಿರಂಗ ಪಡಿಸಲು ಸಾಧ್ಯವಿಲ್ಲ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. "ಮುಂದಿನ ಬೆಳವಣಿಗೆಯ ಬಗ್ಗೆ ಈಗ ಹೇಳುವಿದಿಲ್ಲ, ಬಿಜೆಪಿಯ ಬಲವರ್ಧನೆ ನಿಶ್ಚಿತ, ಅದು ಹೇಗೆ ಎನ್ನುವುದನ್ನು ಕಾದು ನೋಡಿ"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿಯ ರಮೇಶ್ ಜಾರಕಿಹೊಳಿ ಹೇಳಿಕೆ
ಈ ಎಲ್ಲಾ ಬೆಳವಣಿಗೆಯ ಬಗ್ಗೆ ಬಿಜೆಪಿಯ ರಮೇಶ್ ಜಾರಕಿಹೊಳಿ, "ಸುಮಾರು 36 ಶಾಸಕರು ಸಂಪರ್ಕದಲ್ಲಿದ್ದಾರೆ, ಜೆಡಿಎಸ್ ನಾಯಕರೂ ನನ್ನ ಜೊತೆ ಮಾತನಾಡುತ್ತಿದ್ದಾರೆ. ಆದರೆ, ಕುಮಾರಸ್ವಾಮಿಯವರ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದರಿಂದ, ಜೆಡಿಎಸ್ ಪಕ್ಷಕ್ಕೆ ಕೈಹಾಕಲು ಹೋಗುವುದಿಲ್ಲ. ನಮ್ಮ ವರಿಷ್ಠರು ಗ್ರೀನ್ ಸಿಗ್ನಲ್ ಕೊಟ್ಟರೆ, ಮುಂದುವರಿಯುತ್ತೇನೆ"ಎಂದು ಜಾರಕಿಹೊಳಿ ಹೇಳಿದ್ದಾರೆ. ಆದರೆ, ಜಾರಕಿಹೊಳಿ ಈ ರೀತಿಯ ಹೇಳಿಕೆ ನೀಡುತ್ತಿರುವುದು ಹೊಸದೇನೂ ಅಲ್ಲವಾಗಿರುವುದರಿಂದ, ಬಿಜೆಪಿ ಮತ್ತು ಕಾಂಗ್ರೆಸ್ಸಿನ ಪಕ್ಷಾಂತರದ ಸುದ್ದಿ ಸದ್ಯ ಸೂತ್ರವಿಲ್ಲದ ಗಾಳಿಪಟದಂತೆ ಹಾರಾಡುತ್ತಿದೆ.