ಗುಮ್ಮಟ ನಗರಿ ವಿಜಯಪುರ ಲೋಕಸಭಾ ಕ್ಷೇತ್ರ ಪರಿಚಯ
ವಿಜಯಪುರ ಲೋಕಸಭಾ ಕ್ಷೇತ್ರವು ಈ ಬಾರಿ 17ನೇ ಲೋಕಸಭೆ ಚುನಾವಣೆಯನ್ನು ಎದುರಿಸಲಿದೆ. ಮೂರು-ನಾಲ್ಕು ದಶಕದ ಹಿಂದೆ ರಾಜ್ಯದೆಲ್ಲೆಡೆ ಕಾಂಗ್ರೆಸ್ ಪ್ರಬಲವಾಗಿರುವ ಹೊತ್ತಿನಲ್ಲೂ ಸಹ ಇಲ್ಲಿ ಕಾಂಗ್ರೆಸ್ ಸತತವಾಗಿ ಗೆಲ್ಲಲು ವಿಫಲವಾಗಿತ್ತು. ಎಲ್ಲಾ ಮುಂಚೂಣಿಯ ಪಕ್ಷಗಳಿಗೂ ಅವಕಾಶ ನೀಡಿರುವ ಇಲ್ಲಿನ ಮತದಾರರು ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿಗೇ ಮತ ಹಾಕಿದ್ದಾರೆ.
ಬಿಜ್ಜನಹಳ್ಳಿ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಈಗಿನ ವಿಜಯಪುರವನ್ನು ಕಲ್ಯಾಣಿ ಚಾಲುಕ್ಯರು ಸ್ಥಾಪಿಸಿದರು. ಖಿಲ್ಜಿಗಳು, ಬಹುಮನಿ ಸುಲ್ತಾನರುಗಳಿಂದ ಆಳಿಸಿಕೊಳ್ಳಲ್ಪಟ್ಟ ಈ ಜಿಲ್ಲೆಯು ಇಂಡೋ-ಇಸ್ಲಾಂ ಕಲೆ, ಸಂಸ್ಕೃತಿಗೆ ಸಾಕ್ಷಿಯಾಗಿದೆ. ಸರ್ವ ಧರ್ಮ ಸಮನ್ವಯದ ಈ ನೆಲದಲ್ಲಿ ರಾಜಕೀಯವಾಗಿ ಯಾವುದೇ ಒಂದೇ ಪಕ್ಷ ಹೆಚ್ಚಿನ ಸಮಯ ಪಾರುಪತ್ಯ ಸಾಧಿಸಲು ಆಗಿಲ್ಲವೆಂಬುದು ವಿಶೇಷ. ಬಿಜೆಪಿ ಮಾತ್ರ ಸತತ ನಾಲ್ಕು ಬಾರಿ ಗೆದ್ದು ಪಾರುಪತ್ಯ ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ.
ಬರದ ಕ್ಷೇತ್ರ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾರಮ್ಯ ಮುರಿಯಲು ಸಾಧ್ಯವೆ?
ಈ ವರೆಗೆ 16 ಲೋಕಸಭೆ ಚುನಾವಣೆ ಕಂಡಿರುವ ವಿಜಯಪುರದಲ್ಲಿ ಏಳು ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ ಒಮ್ಮೆ ಕಾಂಗ್ರೆಸ್ (ಐ) ನ ಅಭ್ಯರ್ಥಿ ಗೆದ್ದಿದ್ದಾರೆ. ಒಮ್ಮೆ ಜನತಾ ದಳ, ಒಮ್ಮೆ ಸ್ವತಂತ್ರ್ಯ ಪಕ್ಷ ಒಮ್ಮೆ ಪಕ್ಷೇತರ ಅಭ್ಯರ್ಥಿ ಜಯ ಸಾಧಿಸಿದ್ದಾರೆ. ಜನತಾ ಪಕ್ಷ ಒಮ್ಮೆ ಜಯಗಳಿಸಿದ್ದರೆ, ಬಿಜೆಪಿ ನಾಲ್ಕು ಬಾರಿ ಜಯಗಳಿಸಿದೆ.
ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಅಭ್ಯರ್ಥಿಗಳೇ ಗೆದ್ದು ಲೋಕಸಭೆಗೆ ತೆರಳಿದ್ದಾರೆ. ಮೊದಲೆರಡು ಬಾರಿ ಬಿಜೆಪಿಯ ಫೈರ್ಬ್ರಾಂಡ್ ಸಂಸದ ಬಸವರಾಜ ಪಾಟೀಲ್ ಯಾತ್ನಾಳ್ ಗೆದ್ದಿದ್ದರೆ, ಪ್ರಸ್ತುತ ರಮೇಶ್ ಚಂದಪ್ಪ ಜಿಗಜಿಣಗಿ ಅವರು ಸಂಸದರಾಗಿದ್ದಾರೆ. ಎರಡು ಬಾರಿ ಇದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿರುವ ಇವರು, ಈ ಬಾರಿ ಹ್ಯಾಟ್ರಿಕ್ ಸಾಧನೆಯ ಕನಸು ಕಾಣುತ್ತಿದ್ದಾರೆ.
ವಿಜಯಪುರದ ಸಂಸದ ರಮೇಶ್ ಜಿಗಜಣಗಿ ಅವರು ಐದು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಅನುಭವಿ ಸಂಸತ್ ಪಟು. ಎಂಎ ಓದಿಕೊಂಡಿರುವ ಅವರು ಈ ಬಾರಿ ಲೋಕಸಭೆಯಲ್ಲಿ ರಾಜ್ಯದ ಕುರಿತಾಗಿ 195 ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಸತ್ನಲ್ಲಿ 97% ಹಾಜರಾತಿ ಸಹ ಇದೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರ ಪರಿಚಯ
ವಿಜಯಪುರ ಲೋಕಸಭಾ ಕ್ಷೇತ್ರವು, ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಡಲಲ್ಲಿ ಇಟ್ಟುಕೊಂಡಿದೆ. ಬಬಲೇಶ್ವರ, ಇಂಡಿ, ಬಸವನಬಾಗೇವಾಡಿ, ಮುದ್ದೆಬಿಹಾಳ, ವಿಜಯಪುರ ನಗರ, ಸಿಂಧಗಿ, ನಾಗಠಾಣಾ, ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರಗಳ ಮತದಾರರು ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕುತ್ತಾರೆ.
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕರು ಇದ್ದಾರೆ, ಮುದ್ದೆಬಿಹಾಳದಲ್ಲಿ ಬಿಜೆಪಿ ಶಾಸಕ ಅಧಿಕಾರದಲ್ಲಿದ್ದಾರೆ, ದೇವರ ಹಿಪ್ಪರಗಿಯಲ್ಲಿ ಬಿಜೆಪಿ ಅಭ್ಯರ್ಥಿಯೇ ಶಾಸಕರಾಗಿ ಆಯ್ಕೆ ಆಗಿದ್ದಾರೆ, ಸಿಂಧಗಿಯಲ್ಲಿ ಜೆಡಿಎಸ್, ನಾಗಠಾಣಾದಲ್ಲಿ ಜೆಡಿಎಸ್, ಬಬಲೇಶ್ವರದಲ್ಲಿ ಕಾಂಗ್ರೆಸ್, ಬಸವನಬಾಗೇವಾಡಿಯಲ್ಲಿ ಕಾಂಗ್ರೆಸ್, ಇಂಡಿಯಲ್ಲಿ ಕಾಂಗ್ರೆಸ್ ಶಾಸಕರು ವಿಜಯ ಸಾಧಿಸಿದ್ದಾರೆ. ವಿಜಯಪುರ ಲೋಕಸಭಾ ಕ್ಷೇತ್ರದ ಅಡಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಸಮವಾದ ಶಕ್ತಿ ಹೊಂದಿವೆ. ಜೆಡಿಎಸ್ ಸಹ ಬಲವಾಗಿಯೇ ಇದೆ.
ಲೋಕಸಭೆ ಚುನಾವಣೆ 2019: ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಪರಿಚಯ
ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ಅಂಕಿ-ಸಂಖ್ಯೆ ಪ್ರಕಾರ 16,22,635 ಮತದಾರರು ಇದ್ದರು. ಇದರಲ್ಲಿ 8,47,815 ಪುರುಷ ಮತದಾರರು, 7,74,820 ಮಹಿಳಾ ಮತದಾರರು ಇದ್ದರು. ಈ ನಾಲ್ಕು ವರ್ಷದಲ್ಲಿ ಮತದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ.
ಕ್ಷೇತ್ರದಲ್ಲಿ 21,77,333 ಜನಸಂಖ್ಯೆ ಇದೆ. ಗ್ರಾಮಾಂತರದಲ್ಲಿ ಅತಿ ಹೆಚ್ಚು 76.95% ಜನಸಂಖ್ಯೆ ಇದ್ದರೆ. ನಗರ ಪ್ರದೇಶದಲ್ಲಿ 23.05% ಜನಸಂಖ್ಯೆ ಇದೆ. 2011 ರ ಜನಗಣತಿ ಅನುಸಾರ ಜಿಲ್ಲೆಯಲ್ಲಿ 65% ಹಿಂದೂ ಜನಸಂಖ್ಯೆ ಇದ್ದರೆ, ಮುಸ್ಲಿಂ ಜನಸಂಖ್ಯೆ 29% ರಷ್ಟಿದೆ. ಉತ್ತಮ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ 20.34% ಜನರಿದ್ದಾರೆ ಇವರ ಮತಗಳೂ ಸಹ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
2014 ರ ವಿಜಯಪುರ ಕ್ಷೇತ್ರ ಲೋಕಸಭೆ ಚುನಾವಣೆಯಲ್ಲಿ 9,66,757 ಮತಗಳು ಚಲಾವಣೆ ಆಗಿದ್ದವು. ಇದರಲ್ಲಿ 5,21,565 ಮಂದಿ ಪುರುಷರು ಮತ ಚಲಾಯಿಸಿದ್ದರೆ. 4,45,192 ಮಂದಿ ಮಹಿಳೆಯರು ಮತ ಚಲಾಯಿಸಿದ್ದರು. ಒಟ್ಟು 60% ಮತಚಲಾವಣೆ ಆಗಿತ್ತು. ಗೆದ್ದ ಅಭ್ಯರ್ಥಿ ಬಿಜೆಪಿಯ ರಮೇಶ್ ಜಿಗಣಿಗಿ ಅವರು ಬರೋಬ್ಬರಿ 4,71,757 ಮತ ಗಳಿಸಿದ್ದರು. ತಮ್ಮ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ನ ಪ್ರಕಾಶ್ ರಾಥೋಡ್ ಅವರನ್ನು 69,818 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ಈ ಬಾರಿಯ ಚುನಾವಣೆಯಲ್ಲಿ ಸಹ ರಮೇಶ್ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಿಂದಲೇ ಸ್ಪರ್ಧಿಸಲು ಸರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಅವರಿಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಾಗುವ ಸಾಧ್ಯತೆ ಇದೆ. ಜೊತೆಗೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿಯಾಗಿ ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಜಿಗಜಿಣಗಿ ಅವರಿಗೆ ಗೆಲುವು ಮರೀಚಿಕೆ ಆಗುವ ಸಾಧ್ಯತೆಯೂ ಇದೆ.
ಐದು ನದಿ ಹರಿಯುವ ಜಿಲ್ಲೆಯೆಂದು ಹೆಸರಾಗಿದ್ದ ವಿಜಯಪುರದ ಬಹುದೊಡ್ಡ ಸಮಸ್ಯೆ, ನೀರನ ಕೊರತೆ. ಬರಗಾಲ ಬಂತೆಂದರೆ ಗುಳೆ ಹೋಗುವವರ ಸಂಖ್ಯೆ ವಿಜಯಪುರದಲ್ಲಿ ಹೆಚ್ಚು. ಜೋಳ, ಸಜ್ಜೆ, ಶೆಂಗಾ, ಸೂರ್ಯಕಾಂತಿ, ಚಿಕ್ಕು ಹಣ್ಣುಗಳು ಇಲ್ಲಿನ ಪ್ರಧಾನ ಬೆಳೆಗಳು ಆದರೆ ನೀರಿಲ್ಲದ ಬೇಸಗೆಯ ಸಮಯದಲ್ಲಿ ರೈತರು ಕಂಗಾಲಾಗುವುದು ತಪ್ಪಿಲ್ಲ. ಎಷ್ಟೆ ಸರ್ಕಾರಗಳು ಬದಲಾದರೂ ಸಹ ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಲು ಇನ್ನೂ ಸಾಧ್ಯವಾಗಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಸಮಸ್ಯೆಗಳು ಮುನ್ನೆಲೆಗೆ ಬಂದು ಅದರ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೇ ಅಥವಾ ಪಕ್ಷಗಳು, ನಾಯಕರು ಅವರ ಪ್ರಭಾವಗಳು, ಜಾತಿ, ಧರ್ಮಗಳ ಆಧಾರದ ಮೇಲೆ ಮತಚಲಾವಣೆ ಆಗುತ್ತದೆಯೋ ನೋಡಬೇಕು. ಯಾವುದರ ಆಧಾರದ ಮೇಲೆ ಮತ ಚಲಾಯಿಸಬೇಕೆನ್ನುವ ನಿರ್ಣಯ ಮತದಾರನ ಕೈಯಲ್ಲಿದ.