ಜೆಡಿಯು-ಎಲ್ಜೆಪಿ ಕಿತ್ತಾಟ ಬಿಹಾರ ರಾಜಕೀಯವನ್ನು ಬದಲಿಸುತ್ತದೆಯೇ?
ಕೊರೊನಾ ವೈರಸ್ ಭೀತಿ, ಪ್ರವಾಹ ಸಂಕಷ್ಟ, ವಲಸೆ ಕಾರ್ಮಿಕರ ನಿರುದ್ಯೋಗ ಸೇರಿದಂತೆ ಸಾಲು ಸಾಲು ಸಂಕಟಗಳ ನಡುವೆಯೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯ ಕಾವು ಶುರುವಾಗಿದೆ. ಎನ್ಡಿಎ ಒಕ್ಕೂಟದ ಭಾಗವಾಗಿರುವ ಲೋಕಜನಶಕ್ತಿ ಪಕ್ಷ (ಎಲ್ಜೆಪಿ) ಈ ಬಾರಿ ಬಿಜೆಪಿ-ಜೆಡಿಯು ನೇತೃತ್ವದ ಎನ್ಡಿಎಗೆ ಬಿಸಿತುಪ್ಪವಾಗಿದೆ.
ಜೆಡಿಯು ಮುಖಂಡರು ಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಎಲ್ಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಅದು ಸೀಟು ಹಂಚಿಕೆಯಲ್ಲಿ ಎನ್ಡಿಎ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ. ಆದರೆ ಅದು ಎನ್ಡಿಎ ಒಕ್ಕೂಟವನ್ನು ತ್ಯಜಿಸಿ ಮಹಾಘಟಬಂಧನಕ್ಕೂ ಬೆಂಬಲ ನೀಡುತ್ತಿಲ್ಲ. ಬಿಹಾರ ವಿಧಾನಸಭೆಯ 243 ಸೀಟುಗಳ ಪೈಕಿ 143 ಸೀಟುಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಎಲ್ಜೆಪಿ ಮುಂದಾಗಿದೆ. ಸರ್ಕಾರ ರಚನೆಯ ಸಂದರ್ಭದಲ್ಲಿ ಎನ್ಡಿಎಗೆ ಬೆಂಬಲ ನೀಡುವುದಾಗಿ ತೀರ್ಮಾನಿಸಿದೆ.
ಮೈತ್ರಿಯಿಲ್ಲದೇ ನಿತೀಶ್ ಕುಮಾರ್ ಆಟ ನಡೆಯಲ್ಲ ಎಂದ ತೇಜಸ್ವಿ ಯಾದವ್
ಕಳೆದು ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಎಲ್ಜೆಪಿ ಮತ್ತು ಜೆಡಿಯು ಮಿತ್ರಪಕ್ಷಗಳ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಕೇಂದ್ರ ಸಚಿವ ಹಾಗೂ ಪಕ್ಷದ ಸಂಸ್ಥಾಪಕ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ, ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರವನ್ನು ಟೀಕಿಸುತ್ತಾ ಬಂದಿದ್ದಾರೆ. ಮುಖ್ಯವಾಗಿ ಲಾಕ್ಡೌನ್ ಬಳಿಕ ಕೊರೊನಾ ವೈರಸ್ ಸೋಂಕಿನ ನಿರ್ವಹಣೆ, ರಾಜ್ಯದ ಅನೇಕ ಕಡೆ ವಿಪರೀತ ಹಾನಿ ಉಂಟುಮಾಡಿರುವ ಪ್ರವಾಹ ಸನ್ನಿವೇಶದ ಕಾರ್ಯಗಳಲ್ಲಿ ದುರ್ಬಲ ಆಡಳಿತ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಂದೆ ಓದಿ.
ಚಿರಾಗ್ 'ಕಾಳಿದಾಸ' ಎಂದ ಜೆಡಿಯು
ಮುಖ್ಯಮಂತ್ರಿ ಮತ್ತು ಎಲ್ಜೆಪಿ ನಡುವೆ ಸಂಪೂರ್ಣವಾಗಿ ಸಂವಹನ ಮುರಿದುಬಿದ್ದಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಐದು ನಿಮಿಷದ ಮಾತುಕತೆ ಹೊರತಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಇಬ್ಬರೂ ಪರಸ್ಪರ ಮಾತನಾಡಿಲ್ಲ ಎಂಬುದನ್ನು ಚಿರಾಗ್ ತಿಳಿಸಿದ್ದಾರೆ.
ನಿತೀಶ್ ಸರ್ಕಾರದಲ್ಲಿ ಎಲ್ಜೆಪಿಯ ಒಂದೂ ಸಚಿವ ಸ್ಥಾನ ನೀಡಿಲ್ಲ. ಆದರೆ ಪಕ್ಷಕ್ಕೆ ಬಿಜೆಪಿ ಹಾಗೂ ಇತರೆ ಮಿತ್ರಪಕ್ಷಗಳ ವಿಚಾರದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದೆ. ಆದರೆ ಜೆಡಿಯು ವಿಚಾರದಲ್ಲಿ ಹೀಗಿಲ್ಲ. ಎಲ್ಜೆಪಿಗೆ ರಾಜ್ಯದಲ್ಲಿ ಇರುವುದು ಎರಡೇ ಸೀಟು. ಇಂತಹ ಪಕ್ಷದ ನಾಯಕನಿಗೆ ಅಷ್ಟೇನೂ ಪ್ರಭಾವಳಿ ಇಲ್ಲ ಎಂದು ಜೆಡಿಯು ಚಿರಾಗ್ ವಿರುದ್ಧ ಟೀಕಾಪ್ರಹಾರ ನಡೆಸಿದೆ. ತಾನು ಕುಳಿತ ಮರದ ಕೊಂಬೆಯನ್ನೇ ಕತ್ತರಿಸುವ ಕವಿ ಕಾಳಿದಾಸನಿಗೆ ಚಿರಾಗ್ರನ್ನು ಹೋಲಿಸಿದೆ.
ಎಲ್ಜೆಪಿ ಹೊಸ ಘೋಷಣೆ
ನಿತೀಶ್ ಕುಮಾರ್ ಹಾಗೂ ಅವರ ಹಳೆಯ ದೋಸ್ತಿ ರಾಮ್ ವಿಲಾಸ್ ಪಾಸ್ವಾನ್ ಸಂಬಂಧ ಅನೇಕ ಏರಿಳಿತಗಳನ್ನು ಹೊಂದಿದೆ. ಇಬ್ಬರೂ ಜತೆಯಾಗಿ ನಡೆದಿದ್ದು ತೀರಾ ಕಡಿಮೆ. ಬಿಹಾರದ ಅತಿ ದೊಡ್ಡ ದಲಿತ ಮುಖ ಎಂದು ಪಾಸ್ವಾನ್ ಬಿಂಬಿತರಾಗಿದ್ದಾರೆ. ಮಹಾದಲಿತ ವರ್ಗವನ್ನು ಸೃಷ್ಟಿಸುವ ನಿತೀಶ್ ಅವರ ತಂತ್ರದಿಂದ ಎಲ್ಜೆಪಿ ಪ್ರಭಾವವು ಪಾಸ್ವಾನ್ ಅವರ ಸಮುದಾಯಕ್ಕೆ ಸೀಮಿತವಾಗಿಬಿಟ್ಟಿದೆ. ಆಸಕ್ತಿಕರ ಸಂಗತಿಯೆಂದರೆ ಎಲ್ಜೆಪಿಯು ಮುಂದಿನ ಚುನಾವಣೆಗಾಗಿ ಅಖಾಡಕ್ಕೆ ಇಳಿಯುವ ಜಾಹೀರಾತುಗಳಲ್ಲಿ ತನ್ನ ಚೌಕಟ್ಟನ್ನು ಮೀರಿದೆ. 'ಧರ್ಮವೂ ಅಲ್ಲ, ಜಾತಿಯೂ ಅಲ್ಲ. ನಾವು ಎಲ್ಲರಿಗಾಗ ನಡೆಯುತ್ತೇವೆ' ಎಂದು ಅದು ಘೋಷಿಸಿಕೊಂಡಿದೆ.
2005ರಿಂದಲೂ ಜೆಡಿಯು ಮತ್ತು ಎಲ್ಜೆಪಿ ಸಂಘರ್ಷ ನಡೆಯುತ್ತಲೇ ಇದೆ. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಸರ್ಕಾರ ರಚನೆಗಾಗಿ ಎಲ್ಜೆಪಿ ಶಾಸಕರನ್ನು ಸೆಳೆಯುವ ತಂತ್ರ ನಡೆಸಿದ ಆರೋಪಕ್ಕೆ ಒಳಗಾಗಿತ್ತು.
'ಲಾಲೂ ಪ್ರಸಾದ್ ಕುಟುಂಬ ಸೊಸೆಗೆ ಏನು ಮಾಡಿದೆ ನೋಡಿ'
ಕುಸಿಯುತ್ತಿರುವ ವರ್ಚಸ್ಸು
ಒಂದು ವೇಳೆ ಎನ್ಡಿಎ ಮೈತ್ರಿಕೂಟದೊಳಗೇ ಇದ್ದರೆ ಎಲ್ಜೆಪಿಗೆ ಚುನಾವಣೆಗೆ ಸ್ಪರ್ಧಿಸಲು ಸಿಗುವ ಸೀಟುಗಳ ಸಂಖ್ಯೆ ಬೆರಳಣಿಕೆಯಷ್ಟು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 42 ಸೀಟುಗಳಲ್ಲಿ ಸ್ಪರ್ಧಿಸಿದ್ದ ಎಲ್ಜೆಪಿ ಗೆದ್ದಿದ್ದು ಎರಡೇ ಸೀಟುಗಳಲ್ಲಿ. ಹೀಗಾಗಿ ಮೈತ್ರಿಕೂಟದಡಿ ಹೆಚ್ಚಿನ ಸಂಖ್ಯೆಯ ಸೀಟುಗಳನ್ನು ಕೇಳುವುದಕ್ಕೂ ಎಲ್ಜೆಪಿಗೆ ಸಾಧ್ಯವಿಲ್ಲ. ಅದಕ್ಕೆ ಒಪ್ಪಿಕೊಂಡರೆ ಪಕ್ಷದ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ.
ಚುನಾವಣೆಯಿಂದ ಚುನಾವಣೆಗೆ ಎಲ್ಜೆಪಿ ತನ್ನ ಸೀಟುಗಳನ್ನು ಕಳೆದುಕೊಳ್ಳುತ್ತಾ ಬಂದಿದೆ. 2005ರ ಚುನಾವಣೆಯಲ್ಲಿ ಎಲ್ಜೆಪಿ 29 ಸೀಟುಗಳನ್ನು ಹೊಂದಿತ್ತು. ಆದರೆ ಆ ವರ್ಷ ಕೆಲವೇ ತಿಂಗಳ ಬಳಿಕ ಅಕ್ಟೋಬರ್-ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಅದರ ಬಲ 10ಕ್ಕೆ ಕುಸಿಯಿತು. 2010ರ ಚುನಾವಣೆಯಲ್ಲಿ 243 ಸೀಟುಗಳ ಸದನದಲ್ಲಿ ಮೂರು ಸೀಟುಗಳಲ್ಲಿ ಗೆದ್ದಿತ್ತು. 2015ರ ಚುನಾವಣೆಯಲ್ಲಿ ಮತ್ತಷ್ಟು ಕೆಳಮಟ್ಟಕ್ಕೆ ಕುಸಿತ ಕಂಡಿತು.
ಭವಿಷ್ಯದತ್ತ ಚಿರಾಗ್ ಕಣ್ಣು
ಎರಡು ಬಾರಿ ಸಂಸದರಾಗಿದ್ದ ಚಿರಾಗ್ ಪಾಸ್ವಾನ್ 2019ರಲ್ಲಿ ಪಕ್ಷದ ಅಧಿಕಾರ ಪಡೆದುಕೊಂಡಿದ್ದಾರೆ. ತಾವು ಒಂದು ದಿನ ಮುಖ್ಯಮಂತ್ರಿಯಾಗಬೇಕು ಎಂಬ ಬಯಕೆಯನ್ನು ಪಕ್ಷದ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಲೇ ಇರುವ ಮಹತ್ವಾಕಾಂಕ್ಷಿ ಅವರು. ಒಂದೆಡೆ ಲಾಲೂ ಪ್ರಸಾದ್ ವಯಸ್ಸು, ಜೈಲು ಶಿಕ್ಷೆಗಳಿಂದ ಹೈರಾಣಾಗಿದ್ದಾರೆ. ನಿತೀಶ್ ಕುಮಾರ್ ಕೂಡ ರಾಜಕೀಯದ ಅಂತಿಮ ಪ್ರಯಾಣದಲ್ಲಿದ್ದಾರೆ. ತೇಜಸ್ವಿ ಯಾದವ್ ಮುಖ್ಯಸ್ಥರಾಗಿರುವ ಆರ್ಜೆಡಿಯ ಎದುರು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಎಲ್ಜೆಪಿ 2025ರ ವೇಳೆಗೆ ಉತ್ತಮ ಸ್ಥಾನಕ್ಕೆ ಏರುವ ಅವಕಾಶವಿದೆ.
ಬಿಹಾರದ ಎಲ್ಲ ಕಡೆಗೂ ಎಲ್ಜೆಪಿ ಪ್ರಭಾವ ಹೊಂದಿಲ್ಲ. ಆದರೆ ಮೈತ್ರಿಕೂಟದಲ್ಲಿ ನೀಡುವ ಸೀಟುಗಳನ್ನಷ್ಟೇ ಒಪ್ಪಿಕೊಂಡು ಕುಳಿತರೆ ಪಕ್ಷದ ಹೆಜ್ಜೆ ಗುರುತುಗಳನ್ನು ಎಲ್ಲೆಡೆ ಮೂಡಿಸುವುದು ಸಾಧ್ಯವಿಲ್ಲ ಎನ್ನುವುದು ಪಕ್ಷದ ಸದಸ್ಯರ ಅಭಿಪ್ರಾಯ.
'' ಸಿಎಂ ನಿತೀಶ್ ವರ್ಚುಯಲ್ ಪ್ರಚಾರ, ಸೂಪರ್ ಡೂಪರ್ ಫ್ಲಾಪ್''
ಜೆಡಿಯುಗೆ ಬೇರೆ ದಿಕ್ಕಿಲ್ಲ
ಎನ್ಡಿಎ ಭಾಗವಾಗಿಯೇ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಎಲ್ಜೆಪಿಗೆ ಕೇಳಿದ್ದರು. ಜೆಡಿಯು ಹಾಗೂ ಎಲ್ಜೆಪಿಯ ಪ್ರತಿ ಅಭ್ಯರ್ಥಿಗೂ ಬೆಂಬಲ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಬಿಹಾರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನಕ್ಕೆ ಸಿದ್ಧತೆ ನಡೆಸಿದೆ. ಎಲ್ಜೆಪಿ ತನ್ನಷ್ಟಕ್ಕೆ ತಾನು ಹೋದರೆ ಅದರ ಲಾಭ ಬಿಜೆಪಿಗೇ ಸಿಗಲಿದೆ ಎಂದು ಬಿಜೆಪಿಯ ಸಂಸದರು ಹಾಗೂ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
ನಿತೀಶ್ ಕುಮಾರ್ ಬಳಿಕ ಬಿಹಾರದಲ್ಲಿ ಜೆಡಿಯುಗೆ ಅಷ್ಟೇನೂ ಭವಿಷ್ಯವಿಲ್ಲ. ಅವರು ರಾಜಕೀಯದಿಂದ ನಿರ್ಗಮಿಸಿದರೆ ಹೆಚ್ಚಿನ ಮುಖಂಡರು ಪಕ್ಷದಲ್ಲಿ ಉಳಿದುಕೊಳ್ಳುವುದು ಅನುಮಾನ. ಜೆಡಿಯುದ ಕೆಲವು ಹಿರಿಯ ನಾಯಕರು ಬಿಜೆಪಿ ಸೇರಬಹುದು ಅಥವಾ ಪಕ್ಷವೇ ಬಿಜೆಪಿ ಜತೆ ವಿಲೀನವಾಗಬಹುದು.
ಬಿಜೆಪಿಗೆ ಎಲ್ಜೆಪಿ ನೆರವು
ಇಂತಹ ಸನ್ನಿವೇಶದಲ್ಲಿ ಎಲ್ಜೆಪಿ, ಮುಂದೆ ಮೈತ್ರಿಯಲ್ಲಿ ಬಿಜೆಪಿಗೆ ಪುಟ್ಟ ಪಾಲುದಾರನಾಗಿ ನೆರವಾಗಬಹುದು. ಈಗಿನ ತನ್ನ ಪ್ರಬಲ ನೆಲೆಗಳನ್ನು ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ವಿಸ್ತರಿಸುವಲ್ಲಿ ಎಲ್ಜೆಪಿ ಯಶಸ್ವಿಯಾದರೂ ಅದು ಬಿಜೆಪಿಯ ಮೂಲಕ ಪ್ರಾಬಲ್ಯವನ್ನು ಅಷ್ಟಾಗಿ ಕುಂದಿಸುವುದಿಲ್ಲ. ಮೇಲ್ವರ್ಗದ ಬೆಂಬಲವನ್ನು ಬಿಜೆಪಿ ಬಲಪಡಿಸಿಕೊಂಡರೆ, ಎಲ್ಜೆಪಿ ಹಿಂದುಳಿದ ವರ್ಗಗಳ ಬೆಂಬಲವನ್ನು ತರಬಹುದು.
ಸೋಮವಾರ ನಡೆದ ಎಲ್ಜೆಪಿ ಸಭೆಯಲ್ಲಿ ಅದು ಎನ್ಡಿಎದಿಂದ ಹೊರತಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಎನ್ಡಿಎದಿಂದ ದೂರ ಇದ್ದು ಸ್ಪರ್ಧಿಸಿದ್ದರೂ, ಅದಕ್ಕೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದೆ. ಹೀಗಾಗಿ ಈ ಚುನಾವಣೆಯಲ್ಲಿ ಎಲ್ಜೆಪಿಯ ಸ್ಪರ್ಧೆ, ಸರ್ಕಾರ ರಚನೆಯಲ್ಲಿ ಅದರ ಪಾತ್ರ ಇರಲಿದೆಯೇ ಎನ್ನುವುದು ಕುತೂಹಲ ಮೂಡಿಸಿದೆ.