'ಬಿಗ್ ಬಾಸ್'ನಿಂದ ಪತ್ರಕರ್ತ ರವಿ ಬೆಳಗೆರೆಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?
Recommended Video
ಬೆಂಗಳೂರು, ಅಕ್ಟೋಬರ್ 24: "ನನ್ನ ಪತ್ರಿಕೆಯಲ್ಲಿ ಬಂದ ಎಲ್ಲ ಸುದ್ದಿಯನ್ನೂ ಓದಿರುವುದಕ್ಕೆ ಆಗಲ್ಲ. ವರದಿಗಾರರು ಬರೆದಿರುತ್ತಾರೆ. ಅಚ್ಚಿಗೆ ಕಳುಹಿಸಬೇಕಾಗಿರುತ್ತದೆ. ಆತುರದಲ್ಲಿ ಕಳುಹಿಸಿರುತ್ತೇನೆ. ಹಾಗಂತ ನನಗೆ ಯಾರ ಬಗ್ಗೆಯೂ ನಂಜಿಲ್ಲ" ಎಂದವರೇ ಕ್ಷಣ ಕಾಲ ಮೌನವಾದರು ಪತ್ರಕರ್ತ- ಲೇಖಕ ರವಿ ಬೆಳಗೆರೆ.
ಬಿಗ್ ಬಾಸ್ ಕನ್ನಡದಲ್ಲಿ ಭಾಗವಹಿಸಿ, ಒಂದು ವಾರಕ್ಕೆ ಮನೆಯಿಂದ ಆಚೆ ಬಂದ ನಂತರ ಒನ್ ಇಂಡಿಯಾ ಕನ್ನಡದಿಂದ ಅವರನ್ನು ಮಾತನಾಡಿಸಲಾಯಿತು. ಬಿಗ್ ಬಾಸ್ ಮನೆಯಲ್ಲಿ 'ದುನಿಯಾ' ರಶ್ಮಿ, ನನ್ನ ವಿರುದ್ಧವೂ ರವಿ ಬೆಳಗೆರೆ ಅವರು ಬರೆದಿದ್ದರು ಎಂಬ ಆಕ್ಷೇಪಕ್ಕೆ ಈ ರೀತಿ ಉತ್ತರ ನೀಡಿದರು.
ಬಿಗ್ ಬಾಸ್ ಮನೆಯೊಳಗೆ ಹೋಗಿಬಂದ ಸಂತಸ ಅವರ ಮುಖದಲ್ಲಿ ಹಾಗೇ ಇತ್ತು. ತಮಗೆ ದೊರೆತ ಹೊಸ ಸ್ನೇಹಿತ- ಸ್ನೇಹಿತೆಯರ ಬಗ್ಗೆ ಬಹಳ ಖುಷಿ ವ್ಯಕ್ತಪಡಿಸಿದರು. 'ನನಗೆ ಇರುವ ಮತ್ತೊಂದು ಮುಖವನ್ನು ಪರಿಚಯಿಸುವ ಉದ್ದೇಶ ಇತ್ತು. ಆದ್ದರಿಂದಲೇ ಬಿಗ್ ಬಾಸ್ ಮನೆಗೆ ಹೋಗಲು ತೀರ್ಮಾನ ಮಾಡಿದೆ' ಎಂದು ಅವರು ಹೇಳಿದರು.
ಬಿಗ್ ಬಾಸ್ ಮನೆಗೆ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ; ಏನಿದು ಲೆಕ್ಕಾಚಾರ?
ರವಿ ಬೆಳಗೆರೆ ಅವರು ಇನ್ನಷ್ಟು- ಮತ್ತಷ್ಟು ಸಂಗತಿಗಳನ್ನು ಹೇಳುತ್ತಾ ಹೋದರು.
ಬಿಗ್ ಬಾಸ್ ನಿಂದ ರವಿ ಬೆಳಗೆರೆಗೆ ದೊರೆತ ಸಂಭಾವನೆ ಎಷ್ಟು?
ಬಿಗ್ ಬಾಸ್ ಮನೆಗೆ ಹೋಗಲು ಒಂದು ರುಪಾಯಿ ಹಣವನ್ನು ನಾನು ಕೇಳಿಲ್ಲ, ಅವರಿಂದ ಪಡೆದುಕೊಂಡಿಲ್ಲ. ರವಿ ಬೆಳಗೆರೆ ಅಂದರೆ ಏನೋ ಎಂಬ ಭಾವನೆಯೊಂದು ಇತ್ತಲ್ಲಾ, ಆ ಬಗ್ಗೆ ತಿಳಿಸಿಕೊಡ ಬೇಕಿತ್ತು. ಆದ್ದರಿಂದಲೇ ನಾನು ಅಲ್ಲಿಗೆ ಹೋದೆ. ನನ್ನನ್ನು ಮನೆಯೊಳಗೆ ಬಹಳ ಚೆನ್ನಾಗಿ ನೋಡಿಕೊಂಡರು. ಇನ್ನು ಕಲರ್ಸ್ ಕನ್ನಡ ವಾಹಿನಿಯ ಪರಮೇಶ್ವರ್ ಗುಂಡ್ಕಲ್ ನನ್ನ್ ಸ್ನೇಹಿತರು. ಅವರು ಕೇಳಿದಾಗ ಒಪ್ಪಿಕೊಂಡೆ. ಇಲ್ಲಿಂದ ಹೋಗುವಾಗ ಭಾವನಾ (ಮಗಳು) ಏನೇನೋ ಹೇಳಿ ಕಳುಹಿಸಿದ್ದಳು. ಆದರೆ ಅಲ್ಲಿ ಯಾವುದೂ ನೆನಪೇ ಆಗಲಿಲ್ಲ ಎಂದು ನಕ್ಕರು ಬೆಳಗೆರೆ.
ಎಂದೂ ಮರೆಯದ ಹಾಡು ಮುಂದುವರಿಯಬೇಕು
ಎಂದೂ ಮರೆಯದ ಹಾಡು ಕಾರ್ಯಕ್ರಮವನ್ನು ಮುಂದುವರಿಸಬೇಕು. ಅದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುಂದುವರಿಯಬೇಕು ಎಂದು ಹೇಳಿದ್ದೀನಿ. ಬಿಗ್ ಬಾಸ್ ಮನೆಯೊಳಗೆ ನಡೆಸಿದ ಆ ಕಾರ್ಯಕ್ರಮ ಎಲ್ಲರಿಗೂ ಇಷ್ಟವಾಗಿದೆ. ಈ ಹಿಂದೆ ಈ ಟೀವಿಗಾಗಿ ನಡೆಸಿಕೊಟ್ಟ ಆ ಕಾರ್ಯಕ್ರಮವು ನನ್ನ ಇಮೇಜ್ ಬದಲಿಸಿತು. ಈಗ ಬಿಗ್ ಬಾಸ್ ಕೂಡ ಅಂಥದ್ದೇ ವೇದಿಕೆ ಆಗಿತ್ತು. ಕಲರ್ಸ್ ಕನ್ನಡ ವಾಹಿನಿ ಮೂಲಕ ಕೋಟ್ಯಂತರ ಜನರನ್ನು ತಲುಪಲು ಸಾಧ್ಯವಾಗಿದೆ. ಇಂಥದ್ದೊಂದು ಅವಕಾಶ ನೀಡಿದ್ದಕ್ಕೆ ನನ್ನ ಕಡೆಯಿಂದ ಕೃತಜ್ಞತೆಗಳು ಎಂದು ಹೇಳಿದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುತ್ತಾರಾ?
ರವಿ ಬೆಳಗೆರೆ ಅವರು ಒಂದು ವಾರವಷ್ಟೇ ಇದ್ದು, ಹೊರಗೆ ಬಂದಿದ್ದರ ಹಿಂದೆ ಲೆಕ್ಕಾಚಾರ ಇದೆಯಾ? ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಮತ್ತೆ ಬಿಗ್ ಬಾಸ್ ಮನೆಯನ್ನು ಪ್ರವೇಶಿಸುತ್ತೀರಾ ಎಂಬ ಪ್ರಶ್ನೆಗೆ, ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆಯೇ ಉತ್ತರ ನೀಡಿದರು. ನನಗೆ ಗೊತ್ತಿಲ್ಲ. ಹಾಗೊಂದು ಅವಕಾಶ ಬಂದರೆ ಹೋದರೂ ಹೋಗಬಹುದು. ನನಗೆ ಹೇಗೆ ಕೆಲಸ ಇರುತ್ತದೋ ಅದರ ಆಧಾರದಲ್ಲಿ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಈಗಿನ ಸನ್ನಿವೇಶದಲ್ಲಿ ಹೌದು ಅಥವಾ ಇಲ್ಲ ಹೀಗೆ ಯಾವುದೇ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ರವಿ ಬೆಳಗೆರೆ ಪ್ರತಿಕ್ರಿಯಿಸಿದರು.
ಮನೆಯಲ್ಲಿ ಬಯ್ದು ವಾಪಸ್ ಕಳುಹಿಸಿದರು
ಎರಡನೇ ದಿನ ಬಿಗ್ ಬಾಸ್ ಮನೆಯಲ್ಲಿ ಜಾರಿ ಬಿದ್ದಿದ್ದೆ. ತಕ್ಷಣ ಆಂಬುಲೆನ್ಸ್ ಕಳುಹಿಸಿಕೊಡುವಂತೆ ಕೇಳಿಕೊಂಡೆ. ಅಲ್ಲೇ ವೈದ್ಯರು ಇದ್ದರು. ಆದರೂ ನನ್ನ ಪರ್ಸನಲ್ ವೈದ್ಯರನ್ನು ಭೇಟಿ ಆಗಿ, ಅರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕಿತ್ತು. ಏಕೆಂದರೆ ನನ್ನ ದೇಹ ಪ್ರಕೃತಿಯ ಬಗ್ಗೆ ಅವರಿಗೇ ಚೆನ್ನಾಗಿ ಗೊತ್ತಿರುತ್ತದೆ. ಆದ್ದರಿಂದ ವಾಪಸ್ ಬಂದೆ. ಆದರೆ ಮನೆಯಲ್ಲಿ ಬಯ್ದು ವಾಪಸ್ ಕಳುಹಿಸಿದರು. ಬಿಗ್ ಬಾಸ್ ನಲ್ಲಿ ನನ್ನನ್ನು ನೋಡುವ ಸಲುವಾಗಿಯೇ ಅಷ್ಟು ಮಂದಿ ಕಾಯುತ್ತಾ ಇರುತ್ತಾರೆ, ಮೊದಲು ಹೊರಡು ಅಂದರು. ವಾಪಸ್ ಹೋದ ನಂತರ ಅಲ್ಲಿನವರ ಪ್ರೀತಿ ಕಂಡು, ನಾನೂ ಬಹಳ ಹಚ್ಚಿಕೊಂಡುಬಿಟ್ಟೆ. ಅಲ್ಲಿರುವವರನ್ನು ನೋಡಿದರೆ ನನ್ನ ಮಕ್ಕಳನ್ನು ನೋಡಿದ ಹಾಗೆ ಆಗ್ತಿತ್ತು ಎಂದು ಭಾವುಕರಾದರು ಬೆಳಗೆರೆ.