ಕೇಂದ್ರ ಸಚಿವ ಸಂಪುಟಕ್ಕೆ ಆಯ್ಕೆಯಾದ ಬೀದರ್ ಸಂಸದ ಭಗವಂತ ಖೂಬಾ ವ್ಯಕ್ತಿ ಪರಿಚಯ
ಬೀದರ್, ಜು. 07: ಬೀದರ್ ಸಂಸದ ಭಗವಂತ ಖೂಬಾ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಬುಧವಾರ ಖಚಿತವಾಗಿದ್ದು ಕರ್ನಾಟಕದ ನಾಲ್ವರು ಸಂಸದರು ಸೇರಿದಂತೆ 43 ಸಂಸದರೊಂದಿಗೆ ಜುಲೈ 8ರಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
Recommended Video
ಗಡಿ ಜಿಲ್ಲೆ ಬೀದರಕ್ಕೆ ಪ್ರಥಮ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದಿದೆ. ಬೀದರ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕೇಂದ್ರದ ಸಚಿವ ಸ್ಥಾನ ಪಡೆಯುವಲ್ಲಿ ಸಂಸದ ಖೂಬಾ ಯಶಸ್ವಿಯಾಗಿದ್ದಾರೆ.
PM Modi Cabinet Reshuffle Live Updates: 12 ಸಚಿವರು ಔಟ್, 43 ಇನ್
ಬುಧವಾರ ಮಧ್ಯಾಹ್ನ ತನಗೆ ಕರೆ ಬಂದಿರುವ ಹಿನ್ನೆಲೆ ಭಗವಂತ ಖೂಬಾ ರಾಷ್ಟ್ರ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗಿವಹಿಸಿ ಪ್ರಮಾಣ ವಚನ ಸ್ವೀಕಾರ ಮಾಡಲು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಹೈದರಾಬಾದ್ನಿಂದ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ''ನನಗೆ ಯಾವುದೇ ಖಾತೆ ನೀಡಿದರೂ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದೇನೆ,'' ಎಂದು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಭಗವಂತ ಖೂಬಾ ಭರವಸೆ ನೀಡಿದ್ದಾರೆ.
''ಜನ ಸಾಮಾನ್ಯರ ಏಳಿಗೆಗೆ ನಾನು ಹೆಚ್ಚಿನ ಆದ್ಯತೆ ನೀಡಿ, ಅನುಕೂಲ ಮಾಡಿಕೊಡುವೆ ಎಂಬ ವಿಶ್ವಾಸ ನನಗೆ ಇದೆ,'' ಎಂದು ಕೂಡಾ ತಿಳಿಸಿದ್ದಾರೆ.
ಭಗವಂತ ಖೂಬಾ ರಾಜಕೀಯ ಹಾಗೂ ವೈಯಕ್ತಿಕ ಜೀವನ
ಬಿಜೆಪಿಯ ಬೀದರ್ ಸಂಸದ ಭಗವಂತ ಖೂಬಾ 17 ನೇ ಲೋಕಸಭೆಯಲ್ಲಿ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷಿಕರೂ ಆಗಿರುವ ಖೂಬಾ, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಲಿಂಗಾಯಿತ ಸಮುದಾಯಕ್ಕೆ ಸೇರಿದ ಖೂಬಾ ಔರಾದ್ನಲ್ಲಿ 1967 ರ ಜೂನ್ 1 ರಂದು ಜನಿಸಿದ್ದಾರೆ. ಖೂಬಾ ಗುರುಬಸಪ್ಪ ಖೂಬಾ ಹಾಗೂ ಮಹಾದೇವಿ ಖೂಬಾ ದಂಪತಿಯ ಪುತ್ರ. ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ ಖೂಬಾ, 1999 ರ ಮೇ 9 ರಂದು ಶೀಲಾ ಖೂಬಾರನ್ನು ವಿವಾಹವಾದರು. 54 ವರ್ಷದ ಖೂಬಾಗೆ ಓರ್ವ ಮಗ ಹಾಗೂ ಒಬ್ಬರು ಹೆಣ್ಣು ಮಕ್ಕಳಿದ್ದಾರೆ.
- 1991 ರಲ್ಲಿ ಕರ್ನಾಕದಲ್ಲಿ ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಹಿರಿಯರಾದ ಲಾಲಕೃಷ್ಣ ಅಡ್ವಾಣಿ ಬೀದರ ನಗರಕ್ಕೆ ಬಂದಾಗ, ನೂರಾರು ಕಾರ್ಯಕರ್ತರೊಂದಿಗೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
- 2002 ರಲ್ಲಿ ಬಿಜೆಪಿ ಜಿಲ್ಲಾಕಾರ್ಯಕಾರಣಿ ಸದಸ್ಯರು
- 2004 ರಲ್ಲಿ ಔರಾದ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಅಪೇಕ್ಷಿತ (ವಂಚಿತ)
- 2007 ರಲ್ಲಿ ಎಮ್.ಎಸ್. ಗೊಲವಾಲ್ಕರ್ ಜನ್ಮ ಶತಾಬ್ದಿ ನಿಮಿತ, ಸಂಘ ಪರಿವಾರದಿಂದ ಜಿಲ್ಲಾಧ್ಯಕ್ಷರಾಗಿ ಸೇವೆ
- 2008 & 2013 ಔರಾದ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ
- 2010 ರಲ್ಲಿ ಚಿತ್ತಾಪೂರ ವಿಧಾನಸಭಾಕ್ಷೇತ್ರದ ಉಪಚುನಾವಣೆಯಲ್ಲಿ ಉಸ್ತುವಾರಿಯಾಗಿ ನೇಮಕ
- 2011 ಕಲಬುರಗಿ (ದಕ್ಷಿಣ) ಉಸ್ತುತವಾರಿಯಾಗಿ ನೇಮಕ
- 2012 ಬಳ್ಳಾರಿ ವಿಧಾನಸಭಾ ಉಪಚುನಾವಣೆಯ ಉಸ್ತುವಾರಿಯಾಗಿ ನೇಮಕ
- 2014 ಮರಾಠಾವಾಡಾ ವಿಧಾನಸಭಾ ಚುನಾವನೆಯಲ್ಲಿ ಉಸ್ತುವಾರಿಯಾಗಿ ನೇಮಕ
- 2014 ರಲ್ಲಿ 16ನೇ ಲೋಕಸಾಭೆ ಚುನಾವಣೆಯಲ್ಲಿ ಬೀದರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ಜಯ
- 2017 ಉತ್ತರ ಪ್ರದೇಶದ ವಾರಣಾಸಿ (ದಕ್ಷಿಣ) ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ನೇಮಕ
- 2019 ಮರಾಠಾವಾಡಾ ಪ್ರದೇಶದಲ್ಲಿ 32 ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೇಮಕ
- 2019 ರಲ್ಲಿ 17 ನೇ ಲೋಕಸಭಾ ಚುನಾವಣೆಯಲ್ಲಿ 2ನೇ ಬಾರಿಗೆ ಸಂಸದನಾಗಿ ಆಯ್ಕೆ. 1 ಲಕ್ಷ 25 ಸಾವಿರಕ್ಕೂ ಅಧಿಕ ಮತಗಳು ಪಡೆದು ಜಯ
ಇನ್ನು ಖೂಬಾ ಮಹಾರಾಷ್ಟ್ರದ ಬಗ್ಗೆ ಪಕ್ಷಪಾತ ತೋರುತ್ತಿದ್ದಾರೆ ಎಂದು ಈ ಹಿಂದೆ ಹೈದರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿಯು ಆರೋಪ ಮಾಡಿದೆ. ಕಲಬುರಗಿಗೆ ರೈಲು ವಿಭಾಗವನ್ನು ಭದ್ರಪಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿಲ್ಲ ಎಂದು ಟೀಕಿಸಿದೆ.
(ಒನ್ಇಂಡಿಯಾ ಸುದ್ದಿ)