"ಬೂತಯ್ಯನ ಮಗ ಅಯ್ಯು" ಸಿನಿಮಾ ಚಿತ್ರೀಕರಣಗೊಂಡ ಈ ಊರು ಈಗ ಹೇಗಿದೆ?
"ಬೂತಯ್ಯನ ಮಗ ಅಯ್ಯು"- ಹೊಸ ಅಲೆಯೊಂದನ್ನು ಹುಟ್ಟುಹಾಕಿದ ಈ ಸಿನಿಮಾ, ಕನ್ನಡ ಚಿತ್ರರಂಗಕ್ಕೆ ದಂತಕಥೆಯಿದ್ದಂತೆ. 45 ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಸಿನಿಮಾಗಳು ಬಂದವು, ಹೋದವು. ಅದೆಷ್ಟೋ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಕರಗಿ ಹೋದವು. ಆದರೆ ಬೂತಯ್ಯನ ಮಗ ಅಯ್ಯು ಎನ್ನುತ್ತಿದ್ದಂತೆ ಇಂದಿಗೂ ಜನರ ಮುಖದಲ್ಲಿ ಭಾವವೊಂದು ಮೂಡುತ್ತದಲ್ಲ, ಅದೇ ಈ ಸಿನಿಮಾದ ಗಟ್ಟಿತನವನ್ನು ಹೇಳಿಬಿಡುತ್ತದೆ.
ಈ ಚಿತ್ರದ ಒಂದೊಂದು ದೃಶ್ಯವೂ ಕಣ್ಣಲ್ಲಿ ಕಟ್ಟುವಂತೆ ಮಾಡುವಂಥವು. ದೇವಯ್ಯ ನೇಣು ಹಾಕಿಕೊಂಡಿದ್ದು, ಆತನ ಶವವನ್ನು ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ... ಅನ್ನ... ಎನ್ನುತ್ತಾ ಊಟ ಮಾಡಿದ್ದು... ಎಷ್ಟೇ ನೋಡಿದರೂ ಮತ್ತೆ ಮತ್ತೆ ಕೆಣಕುವ ದೃಶ್ಯಗಳು.
ಕಾಡುವ ಸಾವಿರಾರು ಹಾಡುಗಳು, ಇನ್ನು ಹಾಡಲೊಲ್ಲೆಯೆಂದ ಜಾನಕಮ್ಮ...
ಈ ಎಲ್ಲಾ ದೃಶ್ಯಗಳಿಗೂ ಸಾಕ್ಷಿಯಾಗಿದ್ದ, ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಈ ಸಿನಿಮಾ ಚಿತ್ರೀಕರಣ ನಡೆದ ಊರು ಈಗ ಹೇಗಿದೆ ಗೊತ್ತಾ? ಇಲ್ಲಿ ನೋಡಿ...
ಇಂದಿಗೂ ಚಿತ್ರದ ದೃಶ್ಯಗಳನ್ನು ಕಣ್ಮುಂದೆ ತರುವ ಗ್ರಾಮ
1974ರಲ್ಲಿ ತೆರೆಕಂಡ, ಸಿದ್ದಲಿಂಗಯ್ಯ ನಿರ್ದೇಶನದ "ಬೂತಯ್ಯನ ಮಗ ಅಯ್ಯು" ಸಾಹಸ ಸಿಂಹ ವಿಷ್ಣುವರ್ಧನ್ ಗೆ ಹೆಸರು ತಂದುಕೊಟ್ಟ ಸಿನಿಮಾ. ಆ ಚಿತ್ರದಲ್ಲಿ ಬೂತಯ್ಯನ ಮನೆ, ಊಟ ಮಾಡಿದ ಹೋಟೆಲ್, ವಿಷ್ಣುವರ್ಧನ್ ತಂದೆ ಪಾತ್ರಧಾರಿ ದೇವಯ್ಯ ಆತ್ಮಹತ್ಯೆ ಮಾಡಿಕೊಂಡ ಅರಳಿ ಮರ, ಬೂತಯ್ಯನ ಶವವನ್ನು ಮೆರವಣಿಗೆ ಮಾಡಿದ ಬೀದಿಗಳು... ಈ ಎಲ್ಲಾ ದೃಶ್ಯಗಳು ಇಂದಿಗೂ ಈ ಗ್ರಾಮಕ್ಕೆ ಬಂದೊಡನೆ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ.
ಸಿನಿಮಾ ಚಿತ್ರೀಕರಣ ನಡೆದ ಗ್ರಾಮ ಯಾವುದು?
ಬೂತಯ್ಯನ ಮಗ ಅಯ್ಯು ಸಿನಿಮಾ ಚಿತ್ರೀಕರಣ ನಡೆದದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರ ಎಂಬ ಗ್ರಾಮದಲ್ಲಿ. ಸಿನಿಮಾ ತೆರೆಗೆ ಬಂದು 46 ವರ್ಷಗಳು ಕಳೆದರೂ, ಆ ಸಿನಿಮಾ ನೆನಪನ್ನು ಉಳಿಸುವಂತೆ ಈ ಗ್ರಾಮ ಇಂದಿಗೂ ಹಾಗೇ ಇದೆ. ಸಿನಿಮಾದಲ್ಲಿ ಚಿತ್ರೀಕರಣ ಮಾಡಿದ ಮನೆ ಹಾಗೇ ಇದೆ. ಚಿತ್ರೀಕರಣ ನಡೆದ ಊರಿನ ಜಾಗಗಳು ಕೂಡ ಹಾಗೇ ಇವೆ.
"ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದ, ವಿಷ್ಣುವರ್ಧನ್ ಮಚ್ಚನ್ನು ಮಸೆದ ಜಾಗ ಸೇರಿದಂತೆ ಚಿತ್ರದ ಒಂದೊಂದು ದೃಶ್ಯಗಳು ಚಿತ್ರೀಕರಣಗೊಂಡ ಜಾಗವನ್ನು ಕಂಡು ಸಿನಿಮಾವನ್ನು ಈ ಗ್ರಾಮದ ಜನರು ನೆನೆಯುತ್ತಿದ್ದಾರೆ" ಎಂದು ಹೇಳುತ್ತಾರೆ ಚಿತ್ರೀಕರಣ ನಡೆದಿದ್ದ ಮನೆ ಮಾಲೀಕ ರೇಣುಕಾ ಮೂರ್ತಿ.
ಹೋಟೆಲಾಗಿದ್ದ ಮನೆ ಈಗಲೂ ಹಾಗೇ ಇದೆ
ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು ಅನ್ನ... ಅನ್ನ... ಅಂತ ಊಟ ಮಾಡಿದ ದೃಶ್ಯವನ್ನು ಮರೆಯಲು ಸಾಧ್ಯವೇ? ಜನರನ್ನು ನಕ್ಕು ನಲಿಸಿದ ಈ ದೃಶ್ಯದ ಚಿತ್ರೀಕರಣ ನಡೆದದ್ದು ಈ ಊರಿನ ಹೋಟೆಲ್ ನಲ್ಲಲ್ಲ. ಮನೆಯಲ್ಲಿ. ಆ ಮನೆಯನ್ನೇ ಹೋಟೆಲ್ ಆಗಿ ಬದಲಾಯಿಸಲಾಗಿತ್ತು. ಆ ಮನೆ ಇಂದಿಗೂ ಹಾಗೆಯೇ ಇದೆ.
ಸಣ್ಣ ವಿಷಯದ ಬಗ್ಗೆ ಸಣ್ಣ ಜಿಜ್ಞಾಸೆ
ಊರಿನ ಜನ ಇಟ್ಟ ಹೆಸರು "ಬೂತಯ್ಯನ ಸರ್ಕಲ್"
ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದ, ಕಳಸಾಪುರ ಗ್ರಾಮದ ಮಧ್ಯೆ ಇರುವ ಅರಳಿ ಮರವನ್ನು ಊರಿನ ಯುವಕರು ದಶಕಗಳಿಂದಲೂ ಜೋಪಾನ ಮಾಡಿಕೊಂಡು ಬಂದಿದ್ದಾರೆ. ಮರದ ಸುತ್ತಲೂ ಕಟ್ಟೆ ಕಟ್ಟಿ ಹೂವಿನ ಗಿಡ ಹಾಕಿ ಮರವನ್ನು ರಕ್ಷಿಸುತ್ತಿದ್ದಾರೆ. ಬೂತಯ್ಯನನ್ನು ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆಯೇ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿಯಲಾಗಿದೆ ಅಷ್ಟೆ. ಊರಿನ ಜನ ಬೂತಯ್ಯನನ್ನು ಮೆರವಣಿಗೆ ಮಾಡಿದ ಬೀದಿಗೆ ಬೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ.