ಮಗಳಿಗೂ ಮುಂಜಿ ಮಾಡಿ ಸನಾತನ ಧರ್ಮಕ್ಕೆ ಗೌರವ ನೀಡಿದ ಬೆಂಗಳೂರು ವಕೀಲೆ
ಹೆಣ್ಣುಮಕ್ಕಳಿಗೆ ಉಪನಯನ ಮಾಡುವುದು ಅಂದರೆ ನಮ್ಮ ಸಂಪ್ರದಾಯಕ್ಕೆ ಅಭಿಮುಖವಾಗಿ ನಡೆದಂತೆ, ಅದನ್ನು ನಮ್ಮ ಪರಂಪರೆ ಒಪ್ಪುವುದಿಲ್ಲ ಎಂಬ ಭಾವನೆ ಬಹುಪಾಲು ಜನರಲ್ಲಿ ಇಂದಿಗೂ ಇದೆ. ಆದರೆ ಸನಾತನ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ಮುಂಜಿ ಮಾಡುವುದು ಅಥವಾ ಅವರು ಅಪರಕ್ರಿಯೆನ್ನು ನಡೆಸುವುದನ್ನು ತಪ್ಪು ಎಂದು ಎಲ್ಲಿಯೂ ಹೇಳಿಲ್ಲ ಎಂಬುದು ಬೆಂಗಳೂರಿನ ವಕೀಲೆ ಕ್ಷಮಾ ನರಗುಂದ್ ಅವರ ಅಭಿಪ್ರಾಯ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಬೆಳಗಾವಿ ಮೂಲದವರಾದರೂ, ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಕ್ಷಮಾ ಅವರು ಇದೇ ಮೇ ತಿಂಗಳ 8 ನೇ ತಾರೀಖು ತಮ್ಮ ಅವಳಿ ಮಕ್ಕಳಾದ ಸಮ್ವಿತ್, ಅಸ್ಮಿತಾ ಅವರಿಗೆ ಉಪನಯನ ಮಾಡಿದ್ದಾರೆ. ಮಕ್ಕಳಿಗೆ ಉಪನಯನ ಮಾಡೋದೇನು ಆಶ್ಚರ್ಯದ ಸಂಗತಿಯಲ್ಲ. ಆದರೆ ಕ್ಷಮಾ ಅವರು ತಮ್ಮ ಅವಳಿ ಮಕ್ಕಳಲ್ಲಿ ಓರ್ವ ಹೆಣ್ಣು ಮಗುವಿಗೂ ಮುಂಜಿ ಮಾಡುವ ಮೂಲಕ ಹೊಸ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದಾರೆ. ಇದು ಸಮಾನತೆಗಾಗಿ ಮಾಡಿದ ಕ್ರಾಂತಿಯಲ್ಲ, ಸಮಾನತೆ ಎಂಬುದು ನನ್ನ ಪ್ರಕಾರ ಒಂದು ಮಿಥ್. ನನಗೆ ಸನಾತನ ಧರ್ಮದ ಮೇಲಿದ್ದ ಗೌರವ ಮತ್ತು ಹೆಣ್ಣಿಗೂ ಉಪನಯನ ಮಾಡಬಹುದು ಎಂಬ ಬಗ್ಗೆ ಬೇರೆ ಬೇರೆ ಗ್ರಂಥದಲ್ಲಿ ಓದಿದ್ದರಿಂದ ನಮ್ಮ ಸಂತೋಷಕ್ಕಾಗಿ ಮಾಡಿದ್ದಷ್ಟೆ. ನಮ್ಮ ಕುಟುಂಬವೂ ಇದಕ್ಕೆಲ್ಲ ಬೆಂಬಲವಾಗಿ ನಿಂತಿದೆ ಎನ್ನುತ್ತಾರೆ ಕ್ಷಮಾ.
ವನ್ಯಜೀವನದ ಬಗ್ಗೆ ಜಗತ್ತಿನ ಗಮನ ಸೆಳೆದ ಬೆಂಗಳೂರಿನ 'ಕೃತಿ ಕಾರಂತ್'
ಅಷ್ಟಕ್ಕೂ ಈ ಉಪನಯನ ಮಾಡುವ ಯೋಚನೆ ಅವರಲ್ಲಿ ಬಂದಿದ್ದು ಹೇಗೆ? ಅದಕ್ಕೆ ಮನೆಯವರೆಲ್ಲರಿಂದ ಸಿಕ್ಕ ಪ್ರತಿಕ್ರಿಯೆ ಏನು ಎಂಬ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಅವರು ಮಾತನಾಡಿದ್ದು ಹೀಗೆ...
ಆರೆಸ್ಸೆಸ್ ಪ್ರಭಾವ
"ನಮ್ಮದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ. ನಾವು ಚಿಕ್ಕ ವಯಸ್ಸಿನಿಂದಲೂ ಶಾಖೆಗಳಿಗೆ ತೆರಳುತ್ತಿದ್ದೆವು. ಗುರುಕುಲ ಮಾದರಿಯ ಶಿಕ್ಷಣ ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಒಂದು ಶಾಸ್ತ್ರವನ್ನು ಉದಾತ್ತವಾಗಿ ಅಧ್ಯಯನ ಮಾಡುವುದನ್ನು ಈ ಶಾಖೆಗಳು ನಮಗೆ ಕಲಿಸಿದ್ದವು, ಅದು ನಮ್ಮ ಸಂಪ್ರದಾಯ ಕೂಡ ಎಂದು ನಂಬಿದ್ದವರು ನಾವು. ಗುರುಕುಲದ ಶಿಬಿರಕ್ಕೂ ನಾನು ತೆರಳಿದ್ದೆ. ಆ ಸಂದರ್ಭದಲ್ಲಿ ನನಗೆ ಮಂತ್ರೋಪದೇಶವಾಗಿತ್ತು. ಆದರೆ ಉಪನಯನವಾಗಿರಲಿಲ್ಲ"- ಕ್ಷಮಾ ನರಗುಂದ್
ಕಿರಿವಯಸ್ಸಿನಲ್ಲೇ ನ್ಯಾಯಾಧೀಶೆಯರಾಗಿ ದಾಖಲೆ ಬರೆದ ಸವಿತಾ, ಚೈತ್ರಾ
ಆಳವಾದ ಅಧ್ಯಯನದ ನಂತರ ನಿರ್ಧಾರ
ನಾನು ಕಾನೂನುಶಾಸ್ತ್ರದ ಓದು ಮುಗಿಸಿದ ಮೇಲೆ "ಹಿಂದು ಶಾಸ್ತ್ರ"ಗಳ ಬಗ್ಗೆ ಅಧ್ಯಯನ ಮಾಡುವ ಅವಕಾಶ ಸಿಕ್ಕಿತ್ತು. ಆಗ ಹೆಣ್ಣು ಮಕ್ಕಳಿಗೂ ಈ ಎಲ್ಲಕ್ಕೂ ಅವಕಾಶ ಇದೆ ಎಂಬುದು ನನಗೆ ಸ್ಪಷ್ಟವಾಗುತ್ತಾ ಹೋಯ್ತು. ಆ ಕಾರಣದಿಂದ ನಾನು ನಮ್ಮ ಹಿರಿಯರ ಬಳಿ ಮತ್ತು ನಾನು ಗೌರವಿಸುವ ಎಲ್ಲರ ಬಳಿ ಮಾತನಾಡಿ ನನ್ನ ಮಗಳಿಗೂ ಉಪನಯನ ಮಾಡುವ ಬಗ್ಗೆ ಚರ್ಚಿಸಿದೆ. ಅವರ್ಯಾರದೂ ಅಭ್ಯಂತರವಿರಲಿಲ್ಲ. ಕೈಗಾರಿಕೋದ್ಯಮಿ ಪತಿ ವೈವಸ್ವಥ ಅವರೂ ಸಂತೋಷದಿಂದ ಒಪ್ಪಿಕೊಂಡರು. ಆದ್ದರಿಂದ ಉಪನಯನ ಮಾಡಿದೆವು"
ಅಪರ ಕ್ರಿಯೆಯನ್ನೂ ಮಾಡಬಹುದು!
ನಮ್ಮ ಅದೃಷ್ಟ ಅಂದ್ರೆ, ನಮ್ಮ ಮಕ್ಕಳಿಗೆ ಉಪನಯನ ಮಾಡುವುದಕ್ಕೆ ಬಂದಿದ್ದವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವಿಶ್ವನಾಥ್ ಭಟ್ ಎಂಬುವವರು. ಅವರು ಈಗಾಗಲೇ 'ಸದ್ಗತಿ' ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಹೆಣ್ಣು ಮಕ್ಕಳಿಗೆ ಉಪನಯನ ಮಾಡುವುದು ಮಾತ್ರವಲ್ಲ, ಅಪರಕ್ರಿಯೆಗೂ ಅವಕಾಶವಿದೆ ಎಂಬುದನ್ನು ಆಳವಾದ ಅಧ್ಯಯನದ ನಂತರ ಬರೆದಿದ್ದರು. ಆದ್ದರಿಂದ ನಮಗೆ ಉಪನಯನ ಮಾಡುವುದಕ್ಕೆ ಮತ್ತಷ್ಟು ಅನುಕೂಲವಾಯಿತು.
ನಾನು ಯಾರು ಎಂಬುದನ್ನು ತಿಳಿಯಲು...
ನನ್ನ ಮಕ್ಕಳಿಗೆ ಈಗ ಎಂಟು ವರ್ಷ ಅಷ್ಟೆ. ಉಪನಯನ ಮಾಡುವುದು ಯಾಕೆ ಎಂಬಿತ್ಯಾದಿ ವಿಷಯಗಳನ್ನು ಗಹನವಾಗಿ ತಿಳಿದುಕೊಳ್ಳುವ ಮಟ್ಟಿಗೆ ವಿವೇಚನೆ ಬೆಳೆದಿರುವ ವಯಸ್ಸಲ್ಲ. ಅಮ್ಮ ಹೇಳ್ತಾರೆ, ನಾವು ಮಾಡ್ತೀವಿ ಅಂತ ಮಾಡ್ತಾರೆ ಅಷ್ಟೆ. ಆದರೆ ಕ್ರಮೇಣ ಅವರಿಗೆ ಇವುಗಳ ಮಹತ್ವ ಅರ್ಥವಾಗುತ್ತೆ. ಉಪನಯನ ಮಾಡಿದ್ದರಿಂದ ಅಥವಾ ದಿನವೂ ಸಂಧ್ಯಾವಂದನೆ, ಅಗ್ನಿ ಕಾರ್ಯ ಮಾಡುವುದರಿಂದ ಏನೋ ಸಾಧನೆ ಮಾಡ್ತೀವಿ ಅಂತಲ್ಲ. ಆದರೆ ದಿನವೂ ಕೆಲಹೊತ್ತು ಹೀಗೆ ಮಾಡುವುದರಿಂದ ಒಂದಷ್ಟು ಏಕಾಗ್ರತೆ ಸಿದ್ಧಿಸುತ್ತದೆ. ಅಷ್ಟು ಹೊತ್ತು ನಮ್ಮೊಳಗೆ ನಾವೇ ಇಳಿದು ನಮ್ಮನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸಬಹುದು. ನಾನು ಯಾರು ಎಂಬುದನ್ನು ಕೊಂಚ ಮಟ್ಟಿಗಾದರೂ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾದರೆ ಅಷ್ಟರ ಮಟ್ಟಿಗೆ ಬದುಕು ಸಾರ್ಥಕ.
ಸಮಾನತೆ ಎಂಬುದು ಒಂದು ಮಿಥ್
"ಉಪನಯನ ಮಾಡಿದ್ದು ಸಮಾನತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಎಂದು ಕೆಲವರು ವ್ಯಾಖ್ಯಾನಿಸಿದರು. ಆದರೆ ಅಂಥ ಯಾವ ಉದ್ದೇಶವೂ ನಮಗಿರಲಿಲ್ಲ. ನನ್ನ ಪ್ರಕಾರ ಸಮಾನತೆ ಎಂಬುದು ಒಂದು ಮಿಥ್. ನಮ್ಮ ಒಳಗೆ ಏನಿದೆಯೋ, ನಿಮ್ಮ ಒಳಗೆ ಏನಿದೆಯೋ ಅದೆಲ್ಲವೂ ಒಂದೇ. ನಮ್ಮ ಸನಾತನ ಧರ್ಮ "ಭಿನ್ನತೆ"ಯನ್ನು ಗೌರವಿಸುತ್ತದೆ. ಎರಡು ಲಿಂಗ ಅನ್ನೋದು ಒಂದು ಜೈವಿಕ ಅನುಕೂಲತೆಗಾಗಿ ಮಾಡಿದ್ದು ಅಷ್ಟೆ. ಅಲ್ಲಿ ಸಮಾನತೆ, ಅಸಮಾನತೆ ಎಂಬುದು ಒಂದು ಮಿಥ್. ನಾವು ಉಪನಯನ ಮಾಡಿದ್ದು ಸಹ ನಮ್ಮ ಸಂತೋಷಕ್ಕೆ, ಜೊತೆಗೆ ಸನಾತನ ಧರ್ಮದಲ್ಲಿ ಇದ್ಯಾವುದಕ್ಕೂ ನಿರ್ಬಂಧವಿಲ್ಲ, ನಮಗೆ ಅದರ ಮೇಲಿರುವ ನಂಬಿಕೆ, ಗೌರವವನ್ನು ವ್ಯಕ್ತಪಡಿಸಿ, ನಾವೇ ಸಮಾಧಾನ ಪಟ್ಟುಕೊಳ್ಳುವುದಕ್ಕಾಗಿ ಮಾಡಿದ್ದೇವೆ. ಇದರಲ್ಲಿ ಇನ್ನ್ಯಾವ ಉದ್ದೇಶವೂ ಇಲ್ಲ"-ಕ್ಷಮಾ ನರಗುಂದ್