ಬೊಂಬೆನಾಡಿನ ದಸರಾ ಸಂಭ್ರಮಕ್ಕೆ ಅಡ್ಡಿಯಾದ ದಶಪಥ ಹೆದ್ದಾರಿ... ಕಳೆಗುಂದಿದೆ ಬೊಂಬೆ ಉದ್ಯಮ
ವಿಶ್ವ ದೊಡ್ಡಣ್ಣ ಅಮೆರಿಕದ ವೈಟ್ ಹೌಸ್ನಲ್ಲಿ ಸ್ಥಾನ ಪಡೆದ, ಹಾಗೂ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಿಂದ ಹೊಗಳಿಕೆ ಪಡೆದ ವಿಶ್ವ ವಿಖ್ಯಾತ ಚನ್ನಪಟ್ಟಣದ ಮರದ ಅಟಿಕೆಗಳ ಬೊಂಬೆ ಉದ್ಯಮಕ್ಕೆ ಬೆಂಗಳೂರು- ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾರಕವಾಗಿದೆ.
ಅಭಿವೃದ್ಧಿಗೆ ವರ ವಾಗಬೇಕಿದ್ದ ಬೆಂಗಳೂರು - ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ಬೊಂಬೆನಾಡಿದ ಮರದ ಬೊಂಬೆ ಉದ್ಯಮಕ್ಕೆ ಶಾಪವಾಗಿ ಪರಿಣಮಿಸಿದೆ. ಕಳೆದ ಎರಡು ವರ್ಷ ಕೊರೋನಾ ಹಾವಳಿಯಿಂದ ಸಂಪೂರ್ಣ ನೆಲ ಕಚ್ಚಿದ್ದ ಬೊಂಬೆ ಉದ್ಯಮ ಇತ್ತೀಚಿನ ದಿನಗಳಲ್ಲಿ ಚೇತರಿಕೆ ಕಾಣುತ್ತಿತ್ತು. ಅದರೆ ಬೈಪಾಸ್ ಸಂಚಾರಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಪಟ್ಟಣದ ರಸ್ತೆಯಲ್ಲಿ ಪ್ರವಾಸಿಗರು ಬಾರದೇ ಬೊಂಬೆ ಮಳಿಗೆಗಳು ಖಾಲಿ ಖಾಲಿಯಾಗಿವೆ.
ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಉದ್ಯಮಕ್ಕೆ ಕಂಟಕವಾದ ಬೈಪಾಸ್ ಹೆದ್ದಾರಿ
ನಾಡಹಬ್ಬ ದಸರಾ ಬಂದರೆ ಇಡೀ ನಾಡಿಗೆ ಹಬ್ಬ ಅದರಲ್ಲೂ ಬೊಂಬೆ ನಾಡು ಚನ್ನಪಟ್ಟಣದ ಬೊಂಬೆ ತಯಾರಿಕರಲ್ಲಿ ದಸರಾ ಹಬ್ಬದ ಸಂಭ್ರಮ ಇಮ್ಮಡಿಯಾಗುತ್ತದೆ. ದಸರಾ ಹಬ್ಬವನ್ನು ಕಣ್ತುಂಬಿಕೊಳ್ಳಲು ಬರುವ ದೇಶ ವಿದೇಶದ ಪ್ರವಾಸಿಗರು ವಿಶ್ವವಿಖ್ಯಾತ ಚನ್ನಪಟ್ಟಣದ ಬೊಂಬೆ ಮಳಿಗೆಗಳಿಗೆ ಬೇಟಿ ನೀಡಿ ಬೊಂಬೆಗಳನ್ನು ಖರೀದಿಸುತ್ತಿದ್ದರು.
ಪಟ್ಟಣದಲ್ಲಿ ಹಾದು ಹೋಗಿರುವ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಸುಮಾರು 20 ಕ್ಕೂ ಹೆಚ್ಚು ಟಾಯ್ಸ್ ಎಂಪೋರಿಯಂಗಳ ಬೃಹತ್ ಮಳಿಗೆಗಳಿವೆ. ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರ ಉದ್ಯೋಗ ಕತ್ತರಿ ಬೀಳಲಿದೆ. ಅಲ್ಲದೇ ಬಣ್ಣದ ಅಟಿಕೆಗಳಿಗೆ ವಿಶ್ವ ವಿಖ್ಯಾತಿಯನ್ನು ತಂದುಕೊಟ್ಟ ಕುಶಲಕರ್ಮಿಗಳ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ.
ಪ್ರವಾಸಿಗರ ಸಂಖ್ಯೆ ಕಡಿತ
ವಿಶ್ವ ವಿಖ್ಯಾತ ದಸರಾ ಹಬ್ಬದ ಸೊಬಗನ್ನು ಕಣ್ಣತುಂಬಿಕೊಳ್ಳುವ ದೇಶ ವಿದೇಶಗಳಿಂದ ಮೈಸೂರಿಗೆ ಬರುವ ಲಕ್ಷಾಂತರ ಪ್ರವಾಸಿಗರು ಚನ್ನಪಟ್ಟಣ ಬೊಂಬೆ ಮಳಿಗೆಗಳಿಗೆ ಬೇಟಿ ನೀಡಿ ವಿಶ್ವ ವಿಖ್ಯಾತ ಬಣ್ಣ ಬಣ್ಣದ ಮರದ ಅಟಿಕೆಗಳು, ಇತಿಹಾಸ ಹಾಗೂ ಪುರಾಣ ಪುಣ್ಯ ಕಥೆಗಳನ್ನು ಸಾರುವ ನಾನಾ ಬಗೆಯ ಬೊಂಬೆಗಳನ್ನು ನೋಡಿ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಬೊಂಬೆ ಖರೀದಿಸುತ್ತಿದ್ದರು.
National Highway: NH ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಖ್ಯೆ ಹೇಗೆ ನೀಡಲಾಗಿದೆ?
ಅದರೆ ಇದೀಗ ಪ್ರವಾಸಿಗರ ಸಂಚಾರ ಅವದಿ ಕಡಿಮೆ ಮಾಡುವ ಹಿನ್ನಲೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣದ ಹೊರಬಾಗದಲ್ಲಿ ಬೈಪಾಸ್ ನಿರ್ಮಾಣ ಮಾಡಿರುವ ಕಾರಣ ಪ್ರವಾಸಿಗರು ಬೊಂಬೆನಗರಿ ಚನ್ನಪಟ್ಟಣಕ್ಕೆ ಹೆಚ್ಚಾಗಿ ಬರದೇ ಬೈಪಾಸ್ ನಲ್ಲಿ ಸಂಚಾರ ಮಾಡುತ್ತಿರುವ ಕಾರಣ ಇತಿಹಾಸ ಪ್ರಸಿದ್ಧವಾಗಿದ್ದ ಮರದ ಅಟಿಕೆ ವ್ಯಾಪಾರ ನೆಲಕಚ್ಚಿದೆ.
ಸ್ಥಳಿಯ ವ್ಯಾಪಾರಗಳನ್ನು ಉತ್ತೇಜನ ಅಗತ್ಯ
ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಎಲ್ಲರಿಗೂ ಸಂತಸದ ವಿಷಯವೇ. ಹೆದ್ದಾರಿ ಪಕ್ಕದಲ್ಲೇ ಬದುಕು ಕಟ್ಟಿಕೊಂಡ ಅಂಗಡಿ ಹೋಟೆಲ್ಗಳು, ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳುವ ರೀತಿ ಎಂಟ್ರಿ ಮತ್ತು ಎಕ್ಸಿಟ್ ಕೊಟ್ಟು, ಪ್ರವಾಸಿಗರನ್ನು ಸೆಳೆಯುವ ಕೆಲಸ ಸರಕಾರ ಹಾಗೂ ಪ್ರಾಧಿಕಾರ ಮಾಡಬೇಕಿದೆ. ಒಂದು ವೇಳೆ ಈ ಕೆಲಸ ರಸ್ತೆ ಸಂಪೂರ್ಣವಾಗಿ ಕಾಮಗಾರಿ ಮುಗಿಯೋದರ ಒಳಗೆ ಆಗದೇ ಹೋದರೆ ಈ ಸಮಸ್ಯೆ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಕಾಡುವುದಂತೂ ಸತ್ಯ.
ಹೆದ್ದಾರಿಯಿಂದಾಗಿ ಸಮಸ್ಯೆಗೆ ಸಿಲುಕಿರುವ ಉದ್ಯಮಗಳ ರಕ್ಷಣೆಗೆ ಸರಕಾರ ಮುಂದಾಗಿ ಹೆದ್ದಾರಿ ಪ್ರಾಧಿಕಾರದ ಜೊತೆಗೂಡಿ ಸ್ಥಳಿಯ ವ್ಯಾಪಾರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನುವು ಮಾಡಿಕೊಡುವ ಮೂಲಕ ಹೆದ್ದಾರಿಯಿಂದ ಬದುಕು ಕಳೆದುಕೊಂಡಿರುವ ಬಡ ವ್ಯಾಪಾರಿಗಳಿಗೆ ನೆರವಿಗೆ ಧಾವಿಸಬೇಕಿದೆ.
ನಷ್ಟದಲ್ಲಿದ್ದ ಉದ್ಯಮಕ್ಕೆ ಮತ್ತೊಂದು ಆಘಾತ
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮ ಚನ್ನಪಟ್ಟಣದ ಬಣ್ಣದ ಬೊಂಬೆ ಉದ್ಯಮವನ್ನು ಪ್ರಶಂಸೆ ಮಾಡಿದ್ದರು ಹಾಗೂ ಉದ್ಯಮಕ್ಕೆ ಜೈತನ್ಯ ತುಂಬುವುದಾಗಿ ಹೇಳಿದ್ದರು, ದಶಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆಯಲ್ಲೇ ಚನ್ನಪಟ್ಟಣ ಮಧ್ಯಬಾಗದಲ್ಲಿ ಹೆದ್ದಾರಿ ಹಾದು ಹೋಗಿದ್ದರೆ ಬೊಂಬೆ ಉದ್ಯಮ ಮತ್ತಷ್ಟು ಪ್ರಸಿದ್ದಿ ಪಡೆಯುತ್ತಿತ್ತು. ಕಳೆದ ಹಲವು ವರ್ಷಗಳಿಂದ ಬೊಂಬೆ ಉದ್ಯಮ ನಷ್ಟದಲ್ಲಿದೆ ಪ್ರಾರಂಭದಲ್ಲಿ ಚೀನಿ ಪ್ಲಾಸ್ಟಿಕ್ ಅಟಿಕೆಗಳಿಂದ ವ್ಯಾಪಾರ ಕಡಿಮೆಯಾಗಿತ್ತು. ನಂತರ ಎರಡು ವರ್ಷ ಕೊರೊನಾ ಹಾವಳಿಗೆ ವ್ಯಾಪಾರ ಬಂದ್ ಆಗಿತ್ತು. ಈ ಬಾರಿ ದಸರಾ ಹಬ್ಬದ ಸಮಯದಲ್ಲಿ ವ್ಯಾಪಾರ ನಮ್ಮ ಕೈ ಹಿಡಿಯುತ್ತೇ ಎಂಬ ನಂಬಿಕೆ ಇತ್ತು ಅದರೆ ಬೈಪಾಸ್ ನಿರ್ಮಾಣ ದಿಂದ ಮತ್ತೆ ಬೊಂಬೆಗಳ ವ್ಯಾಪಾರ ಕುಸಿದಿದೆ ಎನ್ನತ್ತಾರೆ ವರ್ತಕ ನಟರಾಜ್.
ಬೊಂಬೆನಗರಿಯ ಖ್ಯಾತಿ ಕಣ್ಮರೆ
ಮರದ ಬಣ್ಣದ ಅಟಿಕೆಗಳು ಹಾಗೂ ಆಕರ್ಷಕ ಬೊಂಬೆ ಮಾರಾಟ ಹಾಗೂ ತಯಾರಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೊಡ್ಡ ಮೊತ್ತದ ದಶಪಥ ಹೆದ್ದಾರಿ ಪ್ರಾಜೆಕ್ಟ್ ಮಾಡಿದ ಸರಕಾರ ಬೊಂಬೆನಗರಿಗೆ ಸರಿಯಾದ ರೀತಿಯಲ್ಲಿ ಎಂಟ್ರಿ ಮತ್ತು ಎಕ್ಸಿಟ್ ಕೊಡಬೇಕಿತ್ತು. ಹೆದ್ದಾರಿಯಲ್ಲಿ ನಾಮಫಲಕಗಳ ಜೊತೆ ಒಂದಷ್ಟು ಆಕರ್ಷಣೆಯವಾದ ದೊಡ್ಡ ದೊಡ್ಡ ಬೋರ್ಡ್ ಹಾಕಿ, ಭಾವಚಿತ್ರ ಸಮೇತ ತೋರಿಸಬೇಕು. ಇಲ್ಲವಾದಲ್ಲಿ ಬೊಂಬೆನಗರಿಯ ಖ್ಯಾತಿ ಕಣ್ಮರೆಯಾಗುವುದು ಸತ್ಯ ಎನ್ನುತ್ತಾರೆ ಎಂದು ವ್ಯಾಪಾರಿ ಮಾಲಿನಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.