ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೆಂಬ ವೈವಿಧ್ಯ, ವೈಶಿಷ್ಟ್ಯ
Recommended Video
ಕೆಲವು ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕುತೂಹಲಕಾರಿ ಆಗಿರುತ್ತದೆ. ಏಕೆಂದರೆ ಅಲ್ಲಿನ ಜಾತಿ-ಧರ್ಮ ಮತ್ತಿತರ ಲೆಕ್ಕಾಚಾರಗಳನ್ನೂ ಮೀರಿ ಅಭ್ಯರ್ಥಿ ಜಯ ದಾಖಲಿಸುವಾಗ ಅಂಥ ಅಚ್ಚರಿ ಸಹಜ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಂಥ ಅಚ್ಚರಿಯ ಫಲಿತಾಂಶ ನೀಡಿರುವ ಕ್ಷೇತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣಗಳನ್ನು ತೆರೆದಿಡುತ್ತಾ ಆ ಕ್ಷೇತ್ರದ ಪರಿಚಯ ಮಾಡಿಕೊಡುತ್ತಿದ್ದೇವೆ.
2008ರಲ್ಲಿ ಪುನರ್ ವಿಂಗಡಣೆಯಾದ ನಂತರ ಜನ್ಮ ತಳೆದ ಕ್ಷೇತ್ರ ಇದು. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ವಿಭಜಿಸಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿ ಆಯಿತು. ಇಲ್ಲಿಗೆ ಮೊದಲ ಬಾರಿಗೆ ಸಂಸತ್ ಚುನಾವಣೆ ನಡೆದಿದ್ದು 2009ರಲ್ಲಿ. ಆ ಸಲ ಕಡಿಮೆ ಮಂತರಗಳ, ಅಂದರೆ ಮೂವತ್ತೈದು ಸಾವಿರ ಮತಗಳ ಅಂತರದಿಂದ ಬಿಜೆಪಿಯ ಪಿ.ಸಿ.ಮೋಹನ್ ಅವರು ಕಾಂಗ್ರೆಸ್ ನ ಎಚ್.ಟಿ.ಸಾಂಗ್ಲಿಯಾನ ವಿರುದ್ಧ ಗೆದ್ದಿದ್ದರು.
ಕರ್ನಾಟಕದಲ್ಲಿ ಯಾರಿಗೆಷ್ಟು ಸ್ಥಾನ; ಇಲ್ಲಿದೆ ರಿಪಬ್ಲಿಕ್ ಟಿವಿ ಸಮೀಕ್ಷೆ
ಆ ನಂತರ 2014ರಲ್ಲಿ ಮತ್ತೆ ಗೆದ್ದಿರುವ ಪಿ.ಸಿ.ಮೋಹನ್ ಸದ್ಯಕ್ಕೆ ಸಂಸದರಾಗಿದ್ದಾರೆ. ಮೊದಲ ಅವಧಿಗೆ ಮೂವತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಮೋಹನ್ ಅವರಿಗೆ, ಎರಡನೇ ಬಾರಿಗೆ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ರ ವಿರುದ್ಧ ಒಂದು ಲಕ್ಷದ ಮೂವತ್ತೈದು ಸಾವಿರಕ್ಕೂ ಹೆಚ್ಚು ಮತದ ಗೆಲುವು ದೊರೆತಿದೆ.
ಆದರೆ, ಬೆಂಗಳೂರು ಸೆಂಟ್ರಲ್ ಬಹಳ ವೈವಿಧ್ಯತೆಯಿಂದ ಕೂಡಿರುವ ಕ್ಷೇತ್ರ. ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಅದರ ಜತೆಗೆ ವಿವಿಧ ಮಾತೃ ಭಾಷೆಯ ಜನರೂ ಇದ್ದಾರೆ. ಮುಸ್ಲಿಮರು, ಕ್ರಿಶ್ಚಿಯನ್ನರು, ತಮಿಳು ಭಾಷಿಕರು, ಜೈನರು, ಮಾರವಾಡಿಗಳು ಹೀಗೆ ನಾನಾ ಭಾಷೆ-ಧರ್ಮದ ಜನರಿಂದ ಕೂಡಿರುವ ಕ್ಷೇತ್ರವು ಬಹಳ ಸವಾಲಿನದು.
ಇನ್ನು ಈ ಕ್ಷೇತ್ರ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳ ವಿವರ ಹೀಗಿದೆ:
ಸರ್ವಜ್ಞನಗರ
ಸಿ.ವಿ.ರಾಮನ್ ನಗರ್
ಶಿವಾಜಿ ನಗರ್
ಗಾಂಧಿ ನಗರ್
ರಾಜಾಜಿ ನಗರ್
ಚಾಮರಾಜಪೇಟೆ
ಮಹದೇವಪುರ
ಸದ್ಯಕ್ಕೆ ಈ ಎಂಟು ಕ್ಷೇತ್ರಗಳಲ್ಲಿ ಆಯ್ಕೆ ಆಗಿರುವ ಶಾಸಕರು ಯಾರು ಅನ್ನೋದನ್ನು ನೋಡುವುದಾದರೆ ಮಹದೇವಪುರ, ರಾಜಾಜಿನಗರ ಹಾಗೂ ಸಿ.ವಿ.ರಾಮನ್ ನಗರ್ ಹೊರತುಪಡಿಸಿದರೆ ಉಳಿದ ಐದು ಕಡೆ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರಾ ನೇರ ಹಣಾಹಣಿ ಕಂಡುಬರುತ್ತದೆ.
ಫಸ್ಟ್ ನ್ಯೂಸ್ ಸಮೀಕ್ಷೆ: ಮೋದಿ-ಅತ್ಯಂತ ವಿಶ್ವಾಸಾರ್ಹ ರಾಜಕೀಯ ನಾಯಕ
2019ರ ಲೋಕಸಭಾ ಚುನಾವಣೆಗೆ ಇದೇ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡುವುದಾಗಿ ನಟ ಪ್ರಕಾಶ್ ರೈ ಘೋಷಣೆ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ಸಾಂಗ್ಲಿಯಾನ ಅವರೇ ಸ್ಪರ್ಧೆ ಮಾಡಲಿ ಎಂಬ ಅಭಿಯಾನ ಶುರು ಆಗಿದೆ. ರಿಜ್ವಾನ್ ಅರ್ಷದ್ ಕೂಡ ಒಂದು ಕೈ ನೋಡದೇ ಬಿಡುವವರಲ್ಲ. ಮೂರನೇ ಸಲ ಆಯ್ಕೆ ಆಗುವ ಉತ್ಸಾಹವು ಪಿ.ಸಿ.ಮೋಹನ್ ಗೆ ಇರುವಂತೆ ಕಂಡುಬರುತ್ತಿದೆ.
ಪಿ.ಸಿ.ಮೋಹನ್ ಅವರ ಪಾಲಿನ ಸಂಸದ ನಿಧಿಯ ಮೊತ್ತ 25 ಕೋಟಿ ರುಪಾಯಿ. ಅದರಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿರುವುದು 12.5 ಕೋಟಿ ರುಪಾಯಿ. ಬಡ್ಡಿ ಸಹಿತ ಖರ್ಚು ಮಾಡಲು ದೊರೆತ ಮೊತ್ತ 12.86 ಕೋಟಿ. ಬಾಕಿ ಉಳಿದ ಮೊತ್ತವು ಸೇರಿ ಸಂಸದರು ಶಿಫಾರಸು ಮಾಡಿದ ವೆಚ್ಚದ ಮೊತ್ತ 18.66 ಕೋಟಿ ರುಪಾಯಿ. ಜಿಲ್ಲಾ ಅಧಿಕಾರಿಗಳಿಂದ ಮಂಜೂರಾದ ಮೊತ್ತ 13.16 ಕೋಟಿ. ಜಿಲ್ಲಾ ಅಧಿಕಾರಿಗಳು ಖರ್ಚು ಮಾಡಿರುವ ಮೊತ್ತ 9.92 ಕೋಟಿ. ಖರ್ಚಾಗದೆ ಉಳಿದಿರುವ ಮೊತ್ತ 2.94 ಕೋಟಿ ರುಪಾಯಿ.
ಇಂಡಿಯಾ ಟುಡೇ ಸಮೀಕ್ಷೆ: ಅತಂತ್ರ ಪರಿಸ್ಥಿತಿ ನಿರ್ಮಾಣ, ಎನ್ಡಿಎಗೆ 99 ಸ್ಥಾನ ಕಮ್ಮಿ
2014ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಈ ಕ್ಷೇತ್ರದ ಲೆಕ್ಕಾಚಾರಗಳು ಹೀಗಿದ್ದವು. ಒಟ್ಟು ಮತದಾರರ ಸಂಖ್ಯೆ 19,31,663. ಅದರಲ್ಲಿ ಪುರುಷ ಮತದಾರರ ಸಂಖ್ಯೆ 10,10,586 ಹಾಗೂ ಮಹಿಳಾ ಮತದಾರರ ಸಂಖ್ಯೆ 9,21,077. ಇನ್ನು ಒಟ್ಟು ಮತದಾರರ ಸಂಖ್ಯೆಯಲ್ಲಿ ಮತದಾನ ಮಾಡಿದ್ದು 10,74,589 ಮತದಾರರು. ಮತದಾನ ಪ್ರಮಾಣ 56%. ಸಂಸದ ಪಿ.ಸಿ.ಮೋಹನ್ ಅವರಿಗೆ ಬಂದಿದ್ದು 5,57,130 ಮತಗಳು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಜನಸಂಖ್ಯೆ 23,92,833. ಆ ಪೈಕಿ ಗ್ರಾಮೀಣ ಭಾಗದ ವಾಪ್ತಿಗೆ ಬರುವವರು 3.95%. ಇನ್ನು ನಗರ ಭಾಗದ ವ್ಯಾಪ್ತಿಗೆ ಸೇರುವವರು 96.05%. ಪರಿಶಿಷ್ಟ ಜಾತಿಯವರ ಜನಸಂಖ್ಯೆ 16.06% ಇದ್ದರೆ, ಪರಿಶಿಷ್ಟ ಪಂಗಡದವರ ಜನಸಂಖ್ಯೆ 1.61%.
ಸಂಸತ್ ನಲ್ಲಿ ಪಿ.ಸಿ.ಮೋಹನ್ ಅವರ ಸಾಧನೆ ಹೇಗಿದೆ ಅನ್ನೋದನ್ನು ನೋಡುವುದಾದರೆ 21 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ. 296 ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಹಾಜರಾತಿ ಪ್ರಮಾಣ 82% ಇದೆ.
ಆರಂಭದಲ್ಲೇ ಹೇಳಿದ ಹಾಗೆ ಗಾಂಧಿನಗರ್ ನಿಂದ ರಾಜಾಜಿ ನಗರ್ ತನಕ ಚಾಮರಾಜ ಪೇಟೆಯಿಂದ ಸಿ.ವಿ.ರಾಮನ್ ನಗರ್ ತನಕ ಬೆಂಗಳೂರಿನ ವೈವಿಧ್ಯವನ್ನೆಲ್ಲ ತನ್ನೊಳಗೆ ಇಟ್ಟುಕೊಂಡಿರುವ ಈ ಕ್ಷೇತ್ರಕ್ಕೆ ಬೇಕು-ಬೇಡಗಳ ಪಟ್ಟಿಯಲ್ಲೂ ಬಹಳ ವಿಭಿನ್ನತೆಯಿದೆ. ಸಂಸದರಾಗಿ ಆಯ್ಕೆ ಆದವರಿಗೆ ಇರುವ ಅತಿ ದೊಡ್ಡ ಸವಾಲು ಕೂಡ ಅದೇ.