ವೈಲ್ಡ್ಲೈಫ್ ಫೋಟೋಗ್ರಾಫಿ ''ಆಸ್ಕರ್'' Nominee ಬೆಂಗಳೂರು ಹುಡ್ಗ
ಲಂಡನ್ನಿನ ವೈಲ್ಡ್ಲೈಫ್ ಫೋಟೋಗ್ರಾಫರ್ ಆಫ್ ದ ಇಯರ್ ಡಾಟ್ ಕಾಂ ನಡೆಸುವ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದ ಶೃಂಗೇರಿಯ ರವಿಪ್ರಕಾಶ್ ಎಸ್ಎಸ್ ಅವರ ಪುತ್ರ ವಿದ್ಯುನ್ ಹೆಬ್ಬಾರ್ ಅವರು ಇದೇ ಪ್ರಶಸ್ತಿಯನ್ನು ಜ್ಯೂನಿಯರ್ ವಿಭಾಗದಲ್ಲಿ ಟಾಪ್ 5ರಲ್ಲಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಾಫರ್ ಆಫ್ ದಿ ಇಯರ್ ಸ್ಪರ್ಧೆ ಕಳೆದ 56 ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ 10ವರ್ಷದೊಳಗಿನ ವಿಭಾಗದಲ್ಲಿ 9 ವರ್ಷ ವಯಸ್ಸಿನ ವಿದ್ಯುನ್ ಅವರು ತೆಗೆದ ಫೋಟೋ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದೆ. ಅಂತಿಮವಾಗಿ ಈ ವಿಭಾಗದ ಪ್ರಶಸ್ತಿ ಸ್ಪೇನಿನ ಆಂಡ್ರೆಸ್ ಎಂಬ ಬಾಲಕನ ಪಾಲಾಗಿದೆ.
ಅತಿ ಕಿರಿಯ ವನ್ಯಜೀವಿ ಛಾಯಾಗ್ರಾಹಕ ವೇದಾಂಶ್ ಪಾಂಡೆ
9 ವರ್ಷ ವಯಸ್ಸಿನ ವಿದ್ಯುನ್ ಅವರು ಬೆಂಗಳೂರಿನ ಹುಳಿಮಾವಿನ ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಎಳೆ ವಯಸ್ಸಿನಲ್ಲೆ ವೈಲ್ಡ್ ಲೈಫ್ ಫೋಟೋಗ್ರಾಫಿಯ ಆಸ್ಕರ್ ಎಂದೇ ಕರೆಯಲಾಗುವ Wildlife photographer of the year 2020 ಕೊನೆ ಸುತ್ತಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಚಿತ್ರ ನೋಡಿ
ಪ್ರಶಸ್ತಿ ಸುತ್ತಿಗೆ ಆಯ್ಕೆಯಾದ ಚಿತ್ರ: ನಿಕಾನ್ ಡಿ5000+ 85 ಎಂಎಂ ಲೆನ್ಸ್+ ಕ್ಯಾಮೆರಾ ಹಿಡಿದು ಬೆಂಗಳೂರಿನ ರಸ್ತೆ ಬದಿ ಇದ್ದ ಜೇಡ ಹುಳು ಹಾಗೂ ಬಲೆ ಚಿತ್ರ ತೆಗೆದಿರುವ ಲಂಡನ್ ನಲ್ಲಿ ಅಕ್ಟೋಬರ್ 16ರಿಂದ ಜೂನ್ 2021ರ ತನಕ ಪ್ರದರ್ಶನಕ್ಕಿಡಲಾಗುತ್ತದೆ. ವಿಶ್ವದ ವಿವಿಧೆಡೆಗಳಿಂದ ಬಂದ ಚಿತ್ರಗಳ ನಡುವೆ ಈ ಚಿತ್ರಕ್ಕೆ ವಿಶೇಷ ಮನ್ನಣೆ ಸಿಗಲಿದೆ.
ಕೊರೊನಾವೈರಸ್ ಸೋಂಕಿನ ಭೀತಿ ಇರುವುದರಿಂದ ಈ ಬಾರಿ ಅಕ್ಟೋಬರ್ 14ರಂದು ವರ್ಚ್ಯುಯಲ್ ಸಮಾರಂಭ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇಲ್ಲದಿದ್ದರೆ ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು.
ಅಪ್ಪನ ಹಾದಿಯಲ್ಲಿ ಸಾಗಿರುವ ವಿದ್ಯುನ್
ಅಪ್ಪ ರವಿಪ್ರಕಾಶ್ ಎಸ್ಎಸ್ ಅವರು ಫೋಟೋಗ್ರಾಫಿ ಅದರಲ್ಲೂ ವಿಶೇಷವಾಗಿ ಮ್ಯಾಕ್ರೋ ಫೋಟೋಗ್ರಾಫಿಯಲ್ಲಿ ಸಾಧನೆ ಮಾಡಿ ಜಾಗತಿಕ ಮನ್ನಣೆ ಗಳಿಸಿದವರು. ಅಪ್ಪನ ಬಳಿ ಇದ್ದ ಡಿಎಸ್ಎಲ್ ಆರ್ ಕ್ಯಾಮೆರಾದ ಜೊತೆ ಆಡಿ ಬೆಳೆದ ವಿದ್ಯುನ್ಗೆ ಚಿಕ್ಕಂದಿನಿಂದಲೇ ಫೋಟೋಗ್ರಾಫಿ ಬಗ್ಗೆ ಸಹಜವಾಗಿ ಆಸಕ್ತಿ ಬೆಳೆದಿದೆ. 2014ರಲ್ಲಿ ವೈಲ್ಡ್ ಲೈಫ್ ಫೋಟೋಗ್ರಾಫಿಯ ಸರಿಸೃಪ, ಉಭಯವಾಸಿ ವಿಭಾಗದಲ್ಲಿ ರವಿಪ್ರಕಾಶ್ ಎರಡು ಪ್ರಶಸ್ತಿ ಗಳಿಸಿದ್ದರು.
ಪರಿಸರದ ಬಗ್ಗೆ ಕಾಳಜಿ, ಕುತೂಹಲ
ಬೆಂಗಳೂರು ನಿವಾಸಿಗಳಾದರೂ ಪರಿಸರದ ಬಗ್ಗೆ ಕಾಳಜಿ, ಕುತೂಹಲ ಹೊಂದಿರುವ ಕುಟುಂಬವಾದ್ದರಿಂದ ವಿದ್ಯುನ್ ಎಳೆ ವಯಸ್ಸಿನಲ್ಲೇ ಸೂಕ್ಷ್ಮ ಕಣ್ಣುಗಳಿಂದ ಎಲ್ಲವನ್ನು ನೋಡಿ ಕಲಿತು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಕಲೆ ಕಲಿಯಲು ಸಾಧ್ಯವಾಯಿತು ಎನ್ನಬಹುದು.
ಭವಿಷ್ಯದಲ್ಲಿ ಅಪ್ಪನಂತೆ ವೈಲ್ಡ್ ಲೈಫ್ ಫೋಟೋಗ್ರಾಫರ್ ಅಥವಾ ಗಗನಯಾತ್ರಿಯಾಬೇಕು ಎಂಬುದು ವಿದ್ಯುನ್ ಕನಸು. ಎಲ್ಲಾ ಮಕ್ಕಳಂತೆ ಈ ವಯಸ್ಸಿನಲ್ಲಿ ಲೆಗೋ ಬ್ಲಾಕ್ಸ್ ನಲ್ಲಿ ಕಟ್ಟಡ ಕಟ್ಟುತ್ತಾ, ಹಾಟ್ ವ್ಹೀಲ್ಸ್ ರೇಸಿಂಗ್ ಆಡುತ್ತಾ ಕಾಲಕಳೆಯುವುದು ವಿದ್ಯುನ್ಗೆ ಇಷ್ಟ.
ತಂದೆ ರವಿಪ್ರಕಾಶ್ ಎಸ್ ಎಸ್ ಅವರ ಬೆಂಬಲ
ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಹುಟ್ಟಿ, ಕೊಪ್ಪದಲ್ಲಿ ಬೆಳೆದು ಪ್ರಸ್ತುತ ಬೆಂಗಳೂರಿನ ಟಿಸಿಎಸ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವಿಪ್ರಕಾಶ್ ಎಸ್ ಎಸ್ ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ರವಿಪ್ರಕಾಶ್ ಅವರು ಹುಟ್ಟೂರಾದ ಶೃಂಗೇರಿಯಲ್ಲಿ ಕ್ಲಿಕ್ ಮಾಡಿದ 'ಪ್ಯೂರ್ ಮ್ಯಾಜಿಕ್' ಚಿತ್ರ ವಿಶ್ವದ 96 ದೇಶದ ಸುಮಾರು 42 ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸಿದ್ದು ಈಗ ಇತಿಹಾಸ. ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಆಸ್ಕರ್ ಗಳಿಸಿದ ರವಿಪ್ರಕಾಶ್ ಅವರು ಮ್ಯಾಕ್ರೋ ಫೋಟೋಗ್ರಾಫಿಯಲ್ಲಿ ಪರಿಣಿತಿ ಪಡೆದುಕೊಂಡಿದ್ದು, ತಮ್ಮ ಮಗ ವಿದ್ಯುನ್ ಅವರ ಫೋಟೋಗ್ರಾಫಿ ಆಸಕ್ತಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ.