ಬ್ಲಡ್ ಬ್ಯಾಂಕ್ನಲ್ಲಿ ತೀವ್ರ ರಕ್ತದ ಕೊರತೆ: ಲಸಿಕೆ ಪಡೆಯುವ ಮುನ್ನವೇ ಮಾಡಿ ರಕ್ತದಾನ
ಬೆಂಗಳೂರು, ಜು.23: ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಸಂದರ್ಭದಲ್ಲಿ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಆರಂಭವಾದ ಬಳಿಕ ಬೆಂಗಳೂರಿನ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಕೊರತೆಯು ಉಂಟಾಗಿದೆ. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ರಕ್ತ ಸಂಗ್ರಹವು ಹೆಚ್ಚಾಗಿತ್ತು. ಆದರೆ ಈ ವರ್ಷ 45 ವರ್ಷಕ್ಕಿಂತ ಕೆಳಪಟ್ಟವರು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯುತ್ತಿರುವ ಕಾರಣದಿಂದಾಗಿ ರಕ್ತದಾನದ ಶಿಬಿರಗಳು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬ್ಲಡ್ ಬ್ಯಾಂಕುಗಳು ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನವು ಆರಂಭಿಸಿದ್ದಾರೆ. ಜನರು ಕೋವಿಡ್ ಲಸಿಕೆಯನ್ನು ಪಡೆಯುವ ಮುನ್ನ ರಕ್ತದಾನ ಮಾಡಲು ಪ್ರೋತ್ಸಾಹಿಸುವ ಮೂಲಕ ವೈದ್ಯಕೀಯ ವಿಧಾನಗಳಿಗಾಗಿ ರಕ್ತದ ಕೊರತೆಯನ್ನು ನಿಭಾಯಿಸುವ ಪ್ರಯತ್ನ ನಡೆಯುತ್ತಿದೆ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ 'ಶಸ್ತ್ರ ಚಿಕಿತ್ಸೆ' ಮುಂದಕ್ಕೆ: ಕಾರಣವೇನು?
ಈ ಬಗ್ಗೆ ಮಾಹಿತಿ ನೀಡಿರುವ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಯ ಮುಖ್ಯಸ್ಥೆ ಡಾ.ಸೀತಾಲಕ್ಷ್ಮಿ, "ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ (ಎನ್ಬಿಟಿಸಿ) ಲಸಿಕೆ ಹಾಕಿದ ನಂತರ ರಕ್ತದಾನಕ್ಕಾಗಿ ಮುಂದೂಡುವ ಅವಧಿಯನ್ನು ಎರಡು ವಾರಗಳಿಗೆ ಇಳಿಸುದೆ. ಇದರಿಂದಾಗಿ ರಕ್ತದ ಸಂಗ್ರಹಣೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿದೆ. ಆದರೆ ನಿರಂತರವಾಗಿ ಸಾಕಷ್ಟು ಬೇಡಿಕೆಗಳನ್ನು ಪೂರೈಸಬೇಕಾಗಿದೆ," ಎಂದು ತಿಳಿಸಿದ್ದಾರೆ.
ಲಸಿಕೆ ಪಡೆದರೆ ರಕ್ತದಾನ ಮಾಡುವಂತಿಲ್ಲವೇ?
ಕೋವಿಡ್ ಲಸಿಕೆ ಪಡೆದವರು ರಕ್ತದಾನ ಮಾಡುವಂತಿಲ್ಲ ಹೌದು. ಆದರೆ ಇದು ಖಾಯಂ ಆಗಿ ಅಲ್ಲ. ಅದಕ್ಕಾಗಿ ಆರೋಗ್ಯ ಇಲಾಖೆಯು ದಿನ ನಿಗದಿ ಮಾಡಿದೆ. ಲಸಿಕೆ ನೀಡಿದ ನಂತರ, ರಕ್ತದಾನ ಮಾಡಲು ರಕ್ತ ದಾನಿಗಳು 28 ದಿನಗಳು ಅಥವಾ ನಾಲ್ಕು ವಾರಗಳವರೆಗೆ ಕಾಯಬೇಕಾಗಿದೆ ಎಂದು ಮಾರ್ಚ್ 5 ರ ಆದೇಶದಲ್ಲಿ ಎನ್ಟಿಬಿಸಿ ಹೇಳಿದೆ. ಕೋವಿಡ್ನಿಂದ ಚೇತರಿಸಿಕೊಂಡ ರೋಗಿಗಳು ರಕ್ತದಾನ ಮಾಡಲು ಪೂರ್ಣ ಚೇತರಿಕೆಯ ನಂತರ ಕನಿಷ್ಠ 28 ದಿನಗಳವರೆಗೆ ಕಾಯಬೇಕು. ಆದರೆ ಈ ಆದೇಶವನ್ನು ಬಳಿಕ ಪರಿಶೀಲನೆ ಮಾಡಲಾಗಿದೆ. ಕೋವಿಶೀಲ್ಡ್ನಂತಹ ಲೈವ್-ಅಟೆನ್ಯೂಯೇಟ್ ಲಸಿಕೆಗಳನ್ನು ತೆಗೆದುಕೊಂಡವರಿಗೆ ಈ ಅವಧಿಯನ್ನು ಈಗ ಎರಡು ವಾರಗಳು ಅಥವಾ 14 ದಿನಗಳವರೆಗೆ ಪರಿಷ್ಕರಿಸಲಾಗಿದೆ. ಅಂದರೆ ಕೋವಿಡ್ ಲಸಿಕೆ ಪಡೆದ 14 ದಿನಗಳ ಬಳಿಕ ರಕ್ತ ದಾನ ಮಾಡಬಹುದಾಗಿದೆ. ಹಾಗೆಯೇ ಇನ್ನೊಂದು ಡೋಸ್ ಲಸಿಕೆ ಪಡೆದ ಬಳಿಕವೇ ರಕ್ತ ದಾನ ಮಾಡಬೇಕು ಎಂಬ ಆರೋಗ್ಯ ಸೂಚನೆಯೂ ಇಲ್ಲ.
ರಕ್ತದಾನಿಗಳ ಸಂಖ್ಯೆಯಲ್ಲಿ ಕುಸಿತ
ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡರ ಎರಡು ಪ್ರಮಾಣಗಳ ನಡುವಿನ ಅಂತರಕ್ಕೆ ಸಂಬಂಧಿಸಿದಂತೆ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ನೀಡಲಾಗಿದೆ. ಆದರೂ ಕೂಡಾ ರಕ್ತದಾನದ ಮೇಲೆ ಇನ್ನೂ ಪರಿಣಾಮ ಅತಿಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಲಯನ್ಸ್ ಬ್ಲಡ್ ಬ್ಯಾಂಕಿನ ದೀಪಕ್ ಸುಮನ್, ''ರಕ್ತದಾನ ಅಭಿಯಾನಗಳು ನಾವು ಈ ಹಿಂದೆ ನಡೆಸಿದಷ್ಟು ವೇಗವನ್ನು ಹೊಂದಿಲ್ಲ. ಶಾಲೆಗಳು, ಬಹುರಾಷ್ಟ್ರೀಯ ಕಂಪನಿಗಳು ಇನ್ನೂ ಮುಚ್ಚಲ್ಪಟ್ಟಿವೆ. ಜನರು ರಕ್ತ ದಾನ ಮಾಡಲು ಬಹಳ ಹಿಂಜರಿಯುತ್ತಿದ್ದಾರೆ. ಇದು ಈಗ ಭಾರೀ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಶಸ್ತ್ರಚಿಕಿತ್ಸೆಗಳು ಮತ್ತು ಇತರ ಕಾರ್ಯವಿಧಾನಗಳಿಗೆ ರಕ್ತದ ಅವಶ್ಯಕತೆ ಇನ್ನೂ ಅಧಿಕವಾಗುತ್ತಿದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಜನರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಹೆಚ್ಚಿನ ಜನರು ತಮ್ಮ ಕೋವಿಡ್ ಲಸಿಕೆಯ ಡೋಸ್ ಪಡೆಯುವ ಮೊದಲು ರಕ್ತದಾನ ಮಾಡಲು ಮುಂದೆ ಬರಬೇಕು,'' ಎಂದು ಮನವಿ ಮಾಡಿದ್ದಾರೆ.
World Blood Donor Day 2021: ವಿಶ್ವ ರಕ್ತದಾನಿಗಳ ದಿನ 2021: ಉದ್ದೇಶ ಮತ್ತು ಇತಿಹಾಸ
ಸಮಸ್ಯೆಯಾಗಿಯೇ ಉಳಿದ ರಕ್ತದ ಕೊರತೆ
ಇನ್ನು ಈ ಬಗ್ಗೆ ಬೆಂಗಳೂರಿನ ವಿಶೇಷ ಆಸ್ಪತ್ರೆಯ ರೋಗಶಾಸ್ತ್ರಜ್ಞ ಡಾ. ತ್ರಿಚಾ ಕುಲ್ಹಳ್ಳಿ ಮಾತನಾಡಿ, ''ದೇಶದಲ್ಲಿ ರಕ್ತದ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿ ಉಳಿದಿದೆ. ಭಾರತದ 80% ಕ್ಕಿಂತ ಹೆಚ್ಚು ರಕ್ತ ಪೂರೈಕೆಯು ಸ್ವಯಂಪ್ರೇರಿತ ಸಂಭಾವನೆ ಪಡೆಯದ ರಕ್ತದಾನಿಗಳಿಂದ ಪಡೆಯಲಾಗುತ್ತಿದೆ,'' ಎಂದು ತಿಳಿಸಿದ್ದಾರೆ. ''ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ನಿಯಮದಂತೆ ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಭಾರತದಲ್ಲಿ 1.9 ಮಿಲಿಯನ್ ಯುನಿಟ್ (ಅಥವಾ 15%) ರಕ್ತದ ಕೊರತೆ ಇತ್ತು. ಆರೋಗ್ಯವಂತ ಜನರು ರಕ್ತದಾನ ಮಾಡುವುದನ್ನು ಮುಂದುವರಿಸುವುದು ಬಹಳ ಮುಖ್ಯವಾಗಿದೆ. ಇದರಿಂದಾಗಿ ಅಗತ್ಯವಿರುವ ರೋಗಿಗಳಿಗೆ ಸಹಾಯವಾಗುತ್ತದೆ,'' ಎಂದು ಕೂಡಾ ಹೇಳಿದ್ದಾರೆ. ವೈದ್ಯರ ಸೂಚನೆಯಂತೆ 18 ರಿಂದ 65 ವರ್ಷದೊಳಗಿನ ಮತ್ತು ಕನಿಷ್ಠ 50 ಕೆಜಿ ತೂಕದ ಉತ್ತಮ ಆರೋಗ್ಯದಲ್ಲಿರುವವರು ರಕ್ತದಾನ ಮಾಡಬಹದಾಗಿದೆ.
ಜಗತ್ತಿಗೆ ಸಮಸ್ಯೆಯಾಗಿರುವ ರಕ್ತದ ಕೊರತೆ
ಇನ್ನು ಈ ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಕೊರತೆಯು ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲದೇ, ದೇಶದೆಲ್ಲೆಡೆ ಕಾಡುತ್ತಿದೆ. ವಿಶ್ವದ ಇತರೆ ದೇಶಗಳಲ್ಲೂ ಈ ಕೋವಿಡ್ ಸಂದರ್ಭದಲ್ಲಿ ರಕ್ತದ ಕೊರತೆ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಕೋವಿಡ್ನ ಲಸಿಕೆ 18 ರಿಂದ 45 ವರ್ಷದವರಿಗೆ ಆರಂಭವಾದ ಬಳಿಕ ಈ ರಕ್ತದ ಕೊರತೆ ಇನ್ನಷ್ಟೂ ಅಧಿಕವಾಗಿದೆ. 18 ರಿಂದ 65 ವರ್ಷದೊಳಗಿನ ಮತ್ತು ಕನಿಷ್ಠ 50 ಕೆಜಿ ತೂಕದ ಉತ್ತಮ ಆರೋಗ್ಯದಲ್ಲಿರುವ ಹೆಚ್ಚಿನ ಜನರು ರಕ್ತದಾನ ಮಾಡಬಹುದಾಗಿದೆ. ಮೊದಲ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲೂ ರಕ್ತದ ಕೊರತೆ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಜನರಲ್ಲಿ ರೆಡ್ ಕ್ರಾಸ್ ಮೊದಲಾದ ಸಂಸ್ಥೆಗಳು ಜಾಗೃತಿ ಮೂಡಿಸಿ ರಕ್ತದಾನ ಮಾಡುವಂತೆ ಮನವಿ ಮಾಡಿದ್ದರು. ಹಾಗೆಯೇ ಡಿವೈಎಫ್ಐ, ಹಸಿರು ದಳ ಮೊದಲಾದ ಸಂಘಟನೆ, ಎನ್ಜಿಒಗಳು ತಮ್ಮ ಕಾರ್ಯಕರ್ತರನ್ನು ಒಟ್ಟುಗೂಡಿಸಿ ರಕ್ತದಾನ ಅಭಿಯಾನ ನಡೆಸಿದ್ದರು. ಪ್ರಸ್ತುತ ಈ ಎರಡನೇ ಕೋವಿಡ್ ಅಲೆಯ ಸಂದರ್ಭದಲ್ಲೂ ರಕ್ತದ ಕೊರತೆ ಕಂಡು ಬಂದಿದೆ.
ಬೆಂಗಳೂರು:35 ವರ್ಷಗಳಲ್ಲಿ 200 ಬಾರಿ ರಕ್ತದಾನ ಮಾಡಿದ್ದಾರೆ 56 ವರ್ಷದ ಎಂಜಿನಿಯರ್
ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ರಕ್ತದಾನ ಕಡಿಮೆಯಾಗುವ ಸಮಯ. ಆದರೆ ಆರೋಗ್ಯ ತಜ್ಞರು "ಈ ಬೇಸಿಗೆಯು ವಿಶೇಷವಾಗಿ ಹೆಚ್ಚಿನ ಸವಾಲನ್ನು ಒಡ್ಡಿದೆ," ಎಂದು ಹೇಳಿದ್ದಾರೆ. ಗ್ರೇಟರ್ ಚಿಕಾಗೋದ ಅಮೇರಿಕನ್ ರೆಡ್ ಕ್ರಾಸ್ ಸಿಇಒ ಸೆಲೆನಾ ರೋಲ್ಡನ್ ಮಾತನಾಡಿ, "ಜನರಿಗೆ ರಕ್ತ ಬೇಕು. ಆದರೆ ರಕ್ತ ಲಭಿಸುತ್ತಿಲ್ಲ. ನಾವು ಅದನ್ನು ಕಣ್ಣಾರೆ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ," ಎಂದು ಹೇಳಿದ್ದಾರೆ.
Recommended Video
ಮಹಾರಾಷ್ಟ್ರದಲ್ಲೂ ರಕ್ತದ ಕೊರತೆ
ಇನ್ನು ಕೋವಿಡ್ ಲಸಿಕೆಯು 18 ರಿಂದ 45 ವರ್ಷದವರಿಗೆ ಆರಂಭವಾದ ಬಳಿಕ ಮಹಾರಾಷ್ಟ್ರದಲ್ಲೂ ಈ ರಕ್ತದ ಕೊರತೆ ಕಾಣಿಸಿಕೊಂಡಿದೆ. ಹೆಚ್ಚಿನ ಜನರು ಮೊದಲ ಡೋಸ್ ಪಡೆದ ಬಳಿಕ ಹದಿನಾಲ್ಕು ದಿನಗಳು ಕಳೆದರೂ ರಕ್ತದಾನ ಮಾಡಲು ಮುಂದೆ ಬರುತ್ತಿಲ್ಲ. ರಕ್ತದಾನ ಮಾಡಿದರೆ ತಮ್ಮ ದೇಹದಲ್ಲಿ ಲಸಿಕೆಯಿಂದ ಸೃಷ್ಟಿಯಾದ ಪ್ರತಿಕಾಯಗಳನ್ನು ಕಳೆದುಕೊಳ್ಳುತ್ತೇವೆ ಎಂಬ ಅಪನಂಬಿಕೆಯನ್ನು ಕೆಲವು ಜನರು ಹೊಂದಿದ್ದಾರೆ ಎನ್ನಲಾಗಿದೆ.
ಮುಂಬೈ ಪ್ರಸ್ತುತ ರಕ್ತದ ತೀವ್ರ ಕೊರತೆಯನ್ನು ಎದುರಿಸುತ್ತಿದೆ. ರಕ್ತದ ಬ್ಯಾಂಕುಗಳು ಶಿಬಿರಗಳನ್ನು ನಡೆಸಲು ಸಂಸ್ಥೆಗಳನ್ನು ಒತ್ತಾಯಿಸುತ್ತಿದೆ. ರಾಜ್ಯ ರಕ್ತ ವರ್ಗಾವಣೆ ಮಂಡಳಿಯ ಉಸ್ತುವಾರಿ ಡಾ.ಅರುಣ್ ಥೋರತ್, "ಮಹಾರಾಷ್ಟ್ರದಾದ್ಯಂತ 22,000 ಯುನಿಟ್ ದಾಸ್ತಾನು ಇದೆ. ಸಾಮಾನ್ಯವಾಗಿ ಇರುವ ಯುನಿಟ್ನ ಅರ್ಧದಷ್ಟು ಇದೆ. ಅಂದರೆ 40,000-50,000 ಯುನಿಟ್ಗಳು ಸಾಮಾನ್ಯವಾಗಿ ಇರುತ್ತಿತ್ತು. ಮುಂಬೈಯಲ್ಲಿ 3,200 ಯುನಿಟ್ಗಳು ಉಳಿದಿವೆ. ಆದರೆ ಸಾಮಾನ್ಯವಾಗಿ 5,000 ಯೂನಿಟ್ಗಳು ಇರುತ್ತಿತ್ತು," ಎಂದು ತಿಳಿಸಿದ್ದಾರೆ. "ಕೋವಿಡ್ ಲಸಿಕೆ ಅಭಿಯಾನವು ರಕ್ತದಾನಕ್ಕೆ ಕುತ್ತಾಗಿ ಪರಿಣಮಿಸಿದೆ. ಲಸಿಕೆ ಪಡೆದ ಜನರು 14 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ. ದಾಸ್ತಾನು ಮಾಡಲು ಇದು ದೊಡ್ಡ ಅಡಚಣೆಯಾಗಿದೆ," ಎಂದು ಕೂಡಾ ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)