ಮಳೆಗೆ ಮೈತೊಳೆದುಕೊಂಡ ಬಂಡೀಪುರದ ಚೆಲುವ ವನಸಿರಿ...
ಚಾಮರಾಜನಗರ, ಮೇ 31: ಬಂಡೀಪುರ ವ್ಯಾಪ್ತಿಯಲ್ಲಿ ಇದೀಗ ಮಳೆಯಾಗುತ್ತಿದೆ. ಬಿಸಿಲಿಗೆ ಸಿಕ್ಕಿ ಒಣಗಿಹೋಗಿದ್ದ ಗಿಡಮರಗಳಿಗೆ ಮರುಜೀವ ಬಂದಿದೆ. ಈಗ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಚ್ಚಡದ ನಿಸರ್ಗ ಸುಂದರ ನೋಟ ಕಣ್ಣನ್ನು ತಂಪಾಗಿಸುತ್ತದೆ. ಜತೆಗೆ ಅದರೊಳಗೆ ಶಿಸ್ತಿನ ಸಿಪಾಯಿಗಳಂತೆ ಹಾದುಹೋಗುವ ಕಾಡಾನೆಗಳು... ಛಂಗನೆ ನೆಗೆದು ಓಡುವ ಜಿಂಕೆ, ಸಾರಂಗಗಳು...
ಅಲ್ಲೊಂದು ಇಲ್ಲೊಂದು ಎಂಬಂತೆ ದಾಹ ತಣಿಸಲು ನೀರಿನ ಸೆಲೆ ಅರಸಿ ಸಾಗುವ ಹುಲಿ. ಸದಾ ಬೇಟೆಯ ಗುಂಗಿನಲ್ಲಿಯೇ ಕಳ್ಳಹೆಜ್ಜೆಯಿಡುವ ಚಿರತೆ... ಹೀಗೆ ಹತ್ತಾರು ಸುಂದರ ದೃಶ್ಯಗಳು ಬಂಡೀಪುರದಲ್ಲಿ ಕಾಣಸಿಗುತ್ತಿದೆ. ಇವುಗಳನ್ನು ಕಣ್ತುಂಬಿಕೊಳ್ಳುವುದೇ ಸೋಜಿಗ...
ಬಂಡೀಪುರಕ್ಕೆ ಸಂದ "ಬೆಸ್ಟ್ ನ್ಯಾಷನಲ್ ಪಾರ್ಕ್" ಪ್ರಶಸ್ತಿ
ಲಾಕ್ ಡೌನ್ ನಿಂದ ಜನರ ಓಡಾಟ ತಗ್ಗಿತ್ತು
ಈ ಬಾರಿಯ ಬೇಸಿಗೆಯಲ್ಲಿ ಅರಣ್ಯವನ್ನು ಕಾಡ್ಗಿಚ್ಚಿನಿಂದ ಹೇಗಪ್ಪಾ ಕಾಯೋದು ಎಂಬ ದುಗುಡ ಅರಣ್ಯಾಧಿಕಾರಿಗಳನ್ನು ಕಾಡಿದ್ದಂತು ನಿಜ. ಅದಕ್ಕಾಗಿ ಸರ್ವ ರೀತಿಯ ತಯಾರಿಗಳನ್ನು ಕೂಡ ಅರಣ್ಯ ಇಲಾಖೆ ಮಾಡಿಕೊಂಡಿತ್ತು. ಜತೆಗೆ ಎಲ್ಲೆಂದರಲ್ಲಿ ಹದ್ದಿನ ಕಣ್ಣಿಟ್ಟು ಕಾದಿತ್ತು. ಇದರ ನಡುವೆ ಲಾಕ್ ಡೌನ್ ಮಾಡಿದ್ದರಿಂದಾಗಿ ಸಾರ್ವಜನಿಕರ ಓಡಾಟ ಬಂಡೀಪುರದೊಳಗೆ ಹಾದು ಹೋಗಿರುವ ಹೆದ್ದಾರಿಗಳಲ್ಲಿ ಕಡಿಮೆಯಾದ್ದರಿಂದ ಒಂದಷ್ಟು ಉಪಕಾರವೂ ಆಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಬಂಡೀಪುರಕ್ಕೆ ಕೃಪೆ ತೋರಿದ ವರುಣ
ವನ್ಯ ಪ್ರಾಣಿಗಳು ಯಾವುದೇ ತೊಂದರೆಯಿಲ್ಲದೆ ನಿರ್ಭಯವಾಗಿ ಓಡಾಡಲಾರಂಭಿಸಿದವು. ಕಿಡಿಗೇಡಿಗಳಿಗೆ ಅರಣ್ಯ ಪ್ರವೇಶವೂ ಸಾಧ್ಯವಾಗಲಿಲ್ಲ. ಜತೆಗೆ ಕಳ್ಳಬೇಟೆಯಲ್ಲಿ ತೊಡಗುತ್ತಿದ್ದ ಕೆಲವು ಬೇಟೆಗಾರರನ್ನು ಹೆಡೆಮುರಿ ಕಟ್ಟಲಾಗಿತ್ತು. ಇದೆಲ್ಲದರ ಕಾರಣದಿಂದಾಗಿ ಬಂಡೀಪುರದ ಅರಣ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಇನ್ನು ವರುಣನ ಕೃಪೆಯಿಂದಾಗಿ ಒಂದಷ್ಟು ಮಳೆ ಸುರಿದಿರುವುದು ಇವತ್ತು ಬಂಡೀಪುರ ಹಸಿರು ಹಚ್ಚಡದಿಂದ ಕಂಗೊಳಿಸಲು ಸಾಧ್ಯವಾಯಿತು.
ಬಂಡೀಪುರದ ಚೆಲುವಿಗೆ ಮನಸೋತ ಪ್ರವಾಸಿಗರು
ಖುಷಿಯಾಗಿ ವಿಹರಿಸುವ ವನ್ಯಪ್ರಾಣಿಗಳು
ಕಳೆದ ಬಾರಿ ಸುರಿದ ಮುಂಗಾರು ಮತ್ತು ಹಿಂಗಾರು ಮಳೆಗೆ ಬಂಡೀಪುರದ ನೀರಿನ ಸೆಲೆಗಳಾದ ಕೆರೆಕಟ್ಟೆಗಳು ತುಂಬಿದ್ದವು. ಹಾಗಾಗಿ ವನ್ಯ ಪ್ರಾಣಿಗಳಿಗೆ ನೀರಿನ ಸಮಸ್ಯೆ ಕಾಣಿಸಿರಲಿಲ್ಲ. ಜತೆಗೆ ಲಾಕ್ ಡೌನ್ ಕಾರಣ ಪ್ರವಾಸಿಗರು ಇತ್ತ ಬಾರದ ಕಾರಣದಿಂದ ಕಾಡಾನೆ, ಕಾಡುಕೋಣ, ಜಿಂಕೆ, ಸಾರಂಗಗಳು, ಕರಡಿ ಸೇರಿದಂತೆ ಹಲವು ಪ್ರಾಣಿ, ಪಕ್ಷಿಗಳು ತಮ್ಮದೇ ಲೋಕದಲ್ಲಿ ವಿಹರಿಸುತ್ತಾ ಖುಷಿಯಾಗಿದ್ದವು.
ಚೆಲುವಿಗೆ ಮನಸೋಲದವರಿಲ್ಲ
ಆದರೆ ಕೆಲ ವರ್ಷಗಳ ಹಿಂದೆ ಹೀಗಿರಲಿಲ್ಲ. ಸಮರ್ಪಕವಾಗಿ ಮಳೆಯಾಗದ ಕಾರಣದಿಂದಾಗಿ ಕೆರೆಕಟ್ಟೆಗಳು ಭರ್ತಿಯಾಗಿರಲಿಲ್ಲ. ಪ್ರಾಣಿಗಳಿಗೆ ಹಸಿರು ಮೇವಿಗೂ ತೊಂದರೆಯಾಗಿತ್ತು. ಜತೆಗೆ ಬೇಸಿಗೆಯಲ್ಲಿ ಬಿದ್ದ ಕಾಡ್ಗಿಚ್ಚು ವನ್ಯ ಪ್ರಾಣಿಗಳನ್ನು ಇನ್ನಿಲ್ಲದಂತೆ ಕಾಡಿತ್ತು. ಆದರೆ ಎರಡು ವರ್ಷಂದೀಚೆಗೆ ವರುಣ ಕೃಪೆ ತೋರಿರುವುದರಿಂದ ಅರಣ್ಯ ಹಸಿರಾಗಿದೆ. ಜತೆಗೆ ಈ ಬಾರಿ ಯಾವುದೇ ಅಗ್ನಿ ಅನಾಹುತಗಳು ಸಂಭವಿಸದಿರುವುದು ನೆಮ್ಮದಿಯನ್ನು ತಂದಿದ್ದು, ಅರಣ್ಯ ಹಸಿರಾಗಿರಲು ಸಾಧ್ಯವಾಗಿದೆ. ಇದೀಗ ಬಂಡೀಪುರದ ಸುಂದರ ದೃಶ್ಯಗಳನ್ನು ನೋಡಿದವರು ಒಂದು ಕ್ಷಣ ಮೈಮರೆಯದಿರಲಾರರು.