ಚಾರಣಕ್ಕೆ ಕರೆಯುವ ಹೆಬ್ಬಂಡೆಗಳ ಕಲ್ಲೂರಪ್ಪನ ಗುಡ್ಡ
ಈಗಾಗಲೇ ಮಳೆ ಸುರಿದಿದೆ. ಬಿಸಿಲಿನ ಬೇಗೆಗೆ ಬೆಂಡಾಗಿದ್ದ ನಿಸರ್ಗದಲ್ಲೀಗ ನವ ಚೇತನ... ಎಲ್ಲೆಡೆಯೂ ಹಸಿರಿನ ಹಚ್ಚಡ... ಪ್ರಕೃತಿ ಪ್ರೇಮಿಗಳಿಗೆ ಇನ್ನೇನು ಬೇಕು ಹೇಳಿ? ಉಲ್ಲಾಸ ತುಂಬುವ ಈ ನಿಸರ್ಗದ ನಡುವೆ ಒಂದಷ್ಟು ಸಮಯ ಕಳೆಯ ಬೇಕೆನ್ನುವವರಿಗೆ ಇದು ಸಕಾಲವೂ ಹೌದು.
ಚಾರಣ ಮಾಡಬೇಕೆನ್ನುವ ಪರಿಸರ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಹ ನೂರಾರು ತಾಣಗಳು ನಮ್ಮ ರಾಜ್ಯದಲ್ಲಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರುವ ಕಲ್ಲೂರಪ್ಪನ ಗುಡ್ಡವೂ ಒಂದು. ಇದನ್ನು ಕೈಲಾಸ ಬೆಟ್ಟವೆಂದೂ ಕರೆಯಲಾಗುತ್ತದೆ. ನಿಸರ್ಗ ಸುಂದರ ಪರಿಸರದ ಹೆಬ್ಬಂಡೆಗಳ ನಡುವೆ ನೆಲೆನಿಂತ ಈ ಸುಂದರ ನಿಸರ್ಗ ನಿರ್ಮಿತ ತಾಣ ಎಲ್ಲರನ್ನೂ ತನ್ನತ್ತ ಸೆಳೆಯುತ್ತಲೇ ಬಂದಿದೆ.
ಜೋರು ಮಳೆಯಲ್ಲೂ ಕೊಡಚಾದ್ರಿ ಚಾರಣ, ಮೈ ನಡುಗಿಸುವ ಜೀಪ್ ಪಯಣ
ಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದರೆ ಸುತ್ತಲೂ ಹಸಿರನ್ನೊದ್ದ ಸುಂದರ ದೃಶ್ಯ ಒಂದೊಂದೇ ಮೆಟ್ಟಿಲನ್ನೇರಲು ಉತ್ಸಾಹ ತುಂಬುತ್ತದೆ. ಹಾಗೆಯೇ ಮುನ್ನಡೆದರೆ ಗುಡ್ಡದ ಮೇಲೆ ಆಳೆತ್ತರ ನಿಂತ ಬೃಹತ್ ಬಂಡೆಕಲ್ಲುಗಳು, ಅದರ ನಡುವೆ ವಿರಾಜಮಾನನಾಗಿರುವ ಕಲ್ಲೂರೇಶ್ವರಸ್ವಾಮಿ ಬೆಟ್ಟವೇರಿ ಬಂದ ಭಕ್ತರನ್ನು ಹರಸಲೆಂದೇ ನಿಂತಿರುವಂತೆ ಭಾಸವಾಗುವುದು ಸಹಜ.
ಕಲ್ಲೂರೇಶ್ವರ ಗುಡ್ಡವನ್ನೇರಲು ರಸ್ತೆಯಿಂದ ಸುಮಾರು 70 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಈ ಮೆಟ್ಟಿಲುಗಳನ್ನೇರುತ್ತಾ ಹೋದರೆ 50ಕ್ಕೂ ಹೆಚ್ಚು ಥರಾವರಿ ಕಲ್ಲುಬಂಡೆಗಳು ನಮ್ಮನ್ನು ಆಕರ್ಷಿಸುತ್ತವೆ. ಈ ಬಂಡೆಕಲ್ಲುಗಳೇ ಇಲ್ಲಿನ ಪ್ರಮುಖ ಆಕರ್ಷಣೆ. ಗುಡ್ಡದ ತುಂಬಾ ನೆಲೆನಿಂತಿರುವ ಬೃಹತ್ ಗಾತ್ರದ ಬಂಡೆಗಳು ಅಚ್ಚರಿ ಹುಟ್ಟಿಸುವುದಲ್ಲದೆ, ಕುತೂಹಲ ಕೆರಳಿಸುತ್ತವೆ. ಮೆಟ್ಟಿಲನ್ನೇರುವಾಗ ಬೀಸುವ ತಂಗಾಳಿ ಆಯಾಸವನ್ನು ಹೊಡೆದೋಡಿಸುತ್ತದೆ. ಗುಡ್ಡದ ಮೇಲ್ಭಾಗವನ್ನು ತಲುಪಿದ ಮೇಲೆ ಇಲ್ಲಿ ಎರಡು ಬೃಹತ್ ಬಂಡೆಗಳು ದೂರದಿಂದ ಆಮೆಯಂತೆ ಗೋಚರಿಸುತ್ತಾ ಯಾವುದೇ ಆಸರೆಯಿಲ್ಲದೆ ನಿಂತಿರುವುದು ವಿಸ್ಮಯಗೊಳಿಸುತ್ತದೆ.
ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ
ಈ ಎರಡು ಬೃಹತ್ ಬಂಡೆಗಳ ನಡುವೆ ಕಲ್ಲೂರೇಶ್ವರನ ಪ್ರತಿಮೆ, ನೂರೊಂದು ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿನ ಮತ್ತೊಂದು ಬಂಡೆಯ ಗುಹೆಯಲ್ಲಿ ಲಿಂಗವಿದ್ದು, ಈ ಲಿಂಗಕ್ಕೆ ನಿತ್ಯ ಪೂಜೆ ನಡೆಯುತ್ತದೆ.
ಮಡಿಕೇರಿಯ ನಿಶಾನೆಮೊಟ್ಟೆ ಏರೋಕೆ ಗುಂಡಿಗೆ ಬೇಕು
ಹಿಂದಿನ ಕಾಲದಲ್ಲಿ ಈ ಕೈಲಾಸ ಬೆಟ್ಟವು ದಟ್ಟಾರಣ್ಯದಿಂದ ಕೂಡಿ, ಹುಲಿಗಳ ಆವಾಸ ತಾಣವಾಗಿತ್ತು. ಆದರೆ ಈಗ ಸುತ್ತಲಿನ ಅರಣ್ಯವೆಲ್ಲ ಸಾಗುವಳಿ ಭೂಮಿಯಾಗಿದೆ. ಆಗ ಹುಲಿಗಳು ಇದ್ದವು ಎಂಬುದಕ್ಕೆ ಇಲ್ಲಿರುವ ಹುಲಿಗುಹೆ ಸಾಕ್ಷಿಯಾಗಿ ನಿಂತಿದೆ.
ಕಲ್ಲೂರಪ್ಪನ ಗುಡ್ಡ ಅರ್ಥಾತ್ ಕೈಲಾಸಬೆಟ್ಟವು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದೆ. ಹುಣಸೂರಿನಿಂದ ನಾಗರಹೊಳೆ ರಸ್ತೆಯ ಮೂಲಕ ಹೊಸ ಪೆಂಜಳ್ಳಿ ಗೇಟ್ಗೆ ತೆರಳಿ ಅಲ್ಲಿಂದ ಹನಗೋಡಿಗೆ ಹೋಗುವ ರಸ್ತೆಯಿಂದ ಹರಳಹಳ್ಳಿ ಕಡೆಗೆ ತೆರಳಿದರೆ ಮಾದಳ್ಳಿ ಪಕ್ಕದಲ್ಲೇ ಕಲ್ಲೂರಪ್ಪನ ಗುಡ್ಡ ಸಿಗುತ್ತದೆ. ಇಲ್ಲಿಗೆ ಹನಗೋಡು ಕಡೆಯಿಂದ ಕಿರಂಗೂರು ಮಾರ್ಗವಾಗಿಯೂ ಹೋಗಬಹುದು, ಹನಗೋಡಿನಿಂದ ಸುಮಾರು ಐದು ಕಿ.ಮೀ. ದೂರವಾಗುತ್ತದೆ.