ಬಿಬಿಬಿಎಂಪಿ 53ನೇ ಮೇಯರ್ ಗೌತಮ್ ಕುಮಾರ್ ಪರಿಚಯ
ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಬೆಂಗಳೂರು ನಗರದ ಆಡಳಿತ 4 ವರ್ಷಗಳ ಬಳಿಕ ಬಿಜೆಪಿಯ ಕೈಗೆ ಸಿಕ್ಕಿದೆ.
ಮಂಗಳವಾರ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ನೇತೃತ್ವದಲ್ಲಿ ಬಿಬಿಎಂಪಿ ಮೇಯರ್ ಚುನಾವಣೆ ನಡೆಯಿತು. ಗೌತಮ್ ಕುಮಾರ್ 129 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಆರ್. ಎಸ್. ಸತ್ಯನಾರಾಯಣ 112 ಮತಗಳನ್ನು ಪಡೆದರು.
ಬಿಬಿಎಂಪಿ ಮೇಯರ್ ಆಯ್ಕೆ; ಬಿಜೆಪಿ ವಿರುದ್ದ ಕನ್ನಡ ಸಂಘಟನೆಗಳು ಗರಂ
198 ಸದಸ್ಯ ಬಲದ ಬಿಬಿಎಂಪಿಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 101 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದ್ದವು. ನಾಲ್ಕು ವರ್ಷಗಳ ಬಳಿಕ ಪಾಲಿಕೆ ಅಧಿಕಾರ ಬಿಜೆಪಿ ಕೈಗೆ ಬಂದಿದೆ.
ವ್ಯಕ್ತಿಚಿತ್ರ: ಬಿಜೆಪಿ ಸರ್ಕಾರಕ್ಕೆ ಸೆಡ್ಡು ಹೊಡೆದ ಐಎಎಸ್ ಅಧಿಕಾರಿ ಹರ್ಷಗುಪ್ತ
ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿಯಲ್ಲಿ ಗೊಂದಲ ಉಂಟಾಗಿತ್ತು. ಪದ್ಮನಾಭ ರೆಡ್ಡಿ ಮತ್ತು ಗೌತಮ್ ಕುಮಾರ್ ಜೈನ್ ಇಬ್ಬರೂ ನಾಮಪತ್ರವನ್ನು ಸಲ್ಲಿಸಿದ್ದರು. ಅಂತಿಮವಾಗಿ ಪದ್ಮನಾಭ ರೆಡ್ಡಿ ಮನವೊಲಿಸಲು ಪಕ್ಷದ ನಾಯಕರು ಯಶಸ್ವಿಯಾದರು.
ಬಿಬಿಎಂಪಿ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ
ಜೋಗುಪಾಳ್ಯ ವಾರ್ಡ್ ಸದಸ್ಯ
ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗುಪಾಳ್ಯ ವಾರ್ಡ್ (89) ಸದಸ್ಯರು ಗೌತಮ್ ಕುಮಾರ್ ಜೈನ್ ಜೈನ ಸಮುದಾಯಕ್ಕೆ ಸೇರಿದವರು. ಎರಡು ಬಾರಿ ಅವರು ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ
ಗೌತಮ್ ಕುಮಾರ್ ಬಿಕಾಂ ಪದವೀಧರರು. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಶಾಂತಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಕೆಲಸ ಮಾಡಿದ್ದಾರೆ.
ಲೆಕ್ಕಪತ್ರ ಸಮಿತಿಯಲ್ಲಿ ಕಾರ್ಯ
2015ಕ್ಕೂ ಮೊದಲು ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ 2013-14ರಲ್ಲಿ ಗೌತಮ್ ಕುಮಾರ್ ಜೈನ್ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದರು. ಗೌತಮ್ ಕುಮಾರ್ ಆಯ್ಕೆಯಲ್ಲಿ ಆರ್ಎಸ್ಎಸ್ ಪ್ರಮುಖ ಪಾತ್ರವಹಿಸಿದೆ.
ಕನ್ನಡ ಪರ ಸಂಘಟನೆಗಳ ಆಕ್ರೋಶ
ಗೌತಮ್ ಕುಮಾರ್ ಜೈನ್ ಆಯ್ಕೆ ಬಗ್ಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಜೈನ ಸಮುದಾಯದವರನ್ನು ಮೇಯರ್ ಮಾಡಿದ್ದು ಏಕೆ, ಕನ್ನಡಿಗರು ಸಿಗಲಿಲ್ಲವೇ? ಎಂದು ಸಂಘಟನೆಗಳು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿವೆ.