ಆಗ ಶಾಲಾ ಶಿಕ್ಷಕ, ಈಗ ಬಸವಕಲ್ಯಾಣದ ಬಿಜೆಪಿ ಶಾಸಕ!
ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿಯ ಶರಣು ಸಲಗರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಿದ್ದಾರೆ.
ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಶರಣು ಸಲಗರ್ ಹಿನ್ನಡೆ ನೋಡಿದರೆ ಕನಸು, ಛಲ, ಹಠ, ಮಹತ್ವಾಕಾಂಕ್ಷೆಗಳು ಕಾಣುತ್ತವೆ. ಶಾಲಾ ಶಿಕ್ಷಕರಾಗಿದ್ದ ಅವರು ಈಗ ಶಾಸಕರಾಗಿದ್ದಾರೆ.
ಬಸವಕಲ್ಯಾಣ ಉಪ ಚುನಾವಣೆ; ಅಭ್ಯರ್ಥಿಗಳ ಪಡೆದ ಮತಗಳು
ಹೈಸ್ಕೂಲ್ ಶಿಕ್ಷಕರಾಗಿದ್ದ ಶರಣು ಸಲಗರ್ ವಿಧಾನಸಭೆ ಪ್ರವೇಶ ಮಾಡಿದ್ದೇ ಒಂದು ರೋಚಕ ಕಥೆ. ಬಿಎಸ್ಸಿ-ಬಿಎಡ್ ಪದವೀಧರರಾಗಿದ್ದ ಸಲಗರ್ ಹೆಚ್ಚು ಕಾಲ ಪಾಠ ಮಾಡಿಲ್ಲ. ರಾಜಕೀಯದ ತುಮುಲ ಅವರನ್ನು ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಡುವಂತೆ ಮಾಡಿತು.
ಬಸವಕಲ್ಯಾಣ: ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗೆ ಭಾರೀ ಹಿನ್ನೆಡೆ
ಶರಣು ಸಲಗರ ಅವರು ಬೀದರ್ ಜಿಲ್ಲೆಯವರಲ್ಲ. ಅವರ ಸ್ವಂತ ಊರು ಕಲಬುರಗಿ ಜಿಲ್ಲೆಯ ಈಗಿನ ಕಮಲಾಪುರ ತಾಲೂಕಿನ ವಿಕೆ ಸಲಗರ್ ಗ್ರಾಮ. ಆದರೆ ಬಸವಕಲ್ಯಾಣ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಗ್ರಾಮವಿದಾಗಿದೆ.
ಮಸ್ಕಿ, ಬಸವಕಲ್ಯಾಣ: ಇದುವರೆಗಿನ ಚುನಾವಣಾ ಇತಿಹಾಸ ಏನು ಹೇಳುತ್ತೆ?
ಶಾಸಕರ ಪಿಎ ಆಗಿ ಕೆಲಸ ಮಾಡಿದ್ದಾರೆ
ಶರಣು ಸಲಗರ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆಪ್ತ ಸಹಾಯಕರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ರೇವುನಾಯಕ ಬೆಳಮಗಿ, ಹಾಲಿ ಬಸವಕಲ್ಯಾಣ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶರಣು ಸಲಗರಗೆ ಮತ್ತಿಮೂಡ್ಗೆ ಗೆಲುವು ಸಿಕ್ಕ ಬಳಿಕ ರಾಜಕೀಯದ ಕನಸು ಕಾಣುವಂತೆ ಮಾಡಿತು.
2023ರ ಚುನಾವಣೆಗೆ ಸ್ಪರ್ಧೆಯ ಕನಸು
2-3 ವರ್ಷಗಳ ಹಿಂದೆ ಬಸವಕಲ್ಯಾಣಕ್ಕೆ ಆಗಮಿಸಿದ ಶರಣು ಸಲಗರ 2023ರ ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಹೊಂದಿದ್ದರು. ಆದರೆ ಕೋವಿಡ್ನಿಂದ ಕಾಂಗ್ರೆಸ್ ಶಾಸಕ ಬಿ. ನಾರಾಯಣರಾವ್ ಅಕಾಲಿಕವಾಗಿ ನಿಧನ ಹೊಂದಿದ್ದರಿಂದ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಯಿತು. ಡಜನ್ಗೂ ಹೆಚ್ಚು ಜನ ಟಿಕೆಟ್ ಆಕಾಂಕ್ಷಿಗಳ ನಡುವೆ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಶರಣು ಸಲಗರ ಯಶಸ್ವಿಯಾದರು.
ಶಹಶೀಲ್ದಾರ್ ಆಗಿದ್ದ ಶಾಸಕರ ಪತ್ನಿ
ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಿದ್ದ ಶರಣು ಸಲಗರ ಕಳೆದ ವರ್ಷ ಕೋವಿಡ್ ಕಾಲದಲ್ಲಿ ಬಡವರಿಗೆ ನೆರವಿನ ಹಸ್ತ ಚಾಚಿದ್ದರು. ಶರಣು ಸಲಗರ ಅವರ ಪತ್ನಿ ಸಾವಿತ್ರಿ ಸಲಗರ ಬಸವಕಲ್ಯಾಣದ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಉಪಚುನಾವಣೆ ಘೋಷಣೆಯಾದ ಬಳಿಕ ವರ್ಗಾವಣೆಗೊಂಡಿದ್ದರು. ಕೆಎಎಸ್ ಅಧಿಕಾರಿಯಾಗಿರುವ ಸಾವಿತ್ರಿ ಸಲಗರ ತಹಶೀಲ್ದಾರ್ ಆಗಿದ್ದ ಕ್ಷೇತ್ರದಲ್ಲಿ ಈಗ ಪತಿ ಶರಣು ಸಲಗರ ಶಾಸಕರಾಗಿದ್ದಾರೆ.
Recommended Video
ಸಾಲು-ಸಾಲು ಸವಾಲುಗಳು
ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭಿಸುವ ಬಿ. ಎಸ್. ಯಡಿಯೂರಪ್ಪ ಭರವಸೆ ಹಾಗೇ ಇದೆ. ನೂತನ ತಾಲೂಕಾಗಿ ಘೋಷಣೆಯಾಗಿ ವರ್ಷಗಳೇ ಉರುಳುತ್ತಿವೆ. ಆದರೆ, ಹುಲಸೂರ್ ಕೇಂದ್ರವನ್ನು ಗ್ರಾಮ ಪಂಚಾಯತ್ ಕೇಂದ್ರದಿಂದ ಕನಿಷ್ಠ ಪಟ್ಟಣ ಪಂಚಾಯತ್ ದರ್ಜೆಗೂ ಮೇಲ್ದರ್ಗೇರಿಸಿಲ್ಲ. ಬಹುಪಾಲು ಕೃಷಿಕರೇ ಇರುವ ಬಸವಕಲ್ಯಾಣ ಹಾಗೂ ಹುಲಸೂರ್ ತಾಲೂಕುಗಳಲ್ಲಿ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ. ಚುಳಕಿನಾಲಾ ಯೋಜನೆ ಯಶಸ್ವಿಗೊಳಿಸಬೇಕಿದೆ. ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳಬೇಕಿದ್ದ ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ ಮೊಟ್ಟ ಮೊದಲು ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುವ ಜವಾಬ್ದಾರಿ ನೂತನ ಶಾಸಕರ ಮೇಲಿದೆ.