ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
Recommended Video
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಮಾತಿನಿಂದಲೇ ಈ ಕ್ಷೇತ್ರದ ಬಗ್ಗೆ ನಾವು ಮಾತನಾಡಬೇಕು. ಹೌದು, ಕೇಂದ್ರ ಸಚಿವರಾಗಿದ್ದ ಎಚ್.ಎನ್. ಅನಂತ್ ಕುಮಾರ್ ಅವರು ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಕ್ಷೇತ್ರವಿದು.
ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬೆಂಗಳೂರು ನಗರದ ಪ್ರಖ್ಯಾತ ಬಡಾವಣೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಕ್ಷೇತ್ರ ಇದಾಗಿದೆ. 1996 ರಿಂದ 2014ರ ತನಕ ಬಿಜೆಪಿ ಅಭ್ಯರ್ಥಿಗಳೇ ಗೆದ್ದ ಕ್ಷೇತ್ರವಿದು. ದಿವಂಗತ ಅನಂತ್ ಕುಮಾರ್ ಅವರು ಆ ಮಟ್ಟಿನ ಪ್ರಭಾವವನ್ನು ಕ್ಷೇತ್ರದಲ್ಲಿ ಹೊಂದಿದ್ದರು, ಸಂಸತ್ತಿಗೆ ಸತತವಾಗಿ ಆಯ್ಕೆಯಾಗುತ್ತಿದ್ದರು.
1996ರಲ್ಲಿ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಪತ್ನಿ ವರಲಕ್ಷ್ಮೀ ಅವರ ವಿರುದ್ಧ ಗೆಲುವು ಸಾಧಿಸಿದ ಅನಂತ್ ಕುಮಾರ್ ಕ್ಷೇತ್ರದಲ್ಲಿ ಮತ್ತೆ ಸೋಲಿಲಿಲ್ಲ. ಆದರೆ, ವಿಧಿಯಾಟದ ಮುಂದೆ ಸೋತು ನವೆಂಬರ್ 12ರಂದು ವಿಧಿವಶರಾದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ
ಸದ್ಯ, ಕ್ಷೇತ್ರದಲ್ಲಿ ಸಂಸದರು ಇಲ್ಲ. ಹಾಗೆಯೇ ಮುಂದೆ ಯಾರು? ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಕೇಳಿ ಬರುತ್ತಿರುವ ಮಾಹಿತಿಯ ಪ್ರಕಾರ, ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಕಾಂಗ್ರೆಸ್ನಿಂದ ಇನ್ಫೋಸಿಸ್ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರೂ ಆಗಿದ್ದ ನಂದನ್ ನಿಲೇಕಣಿ ಅವರು ಅಭ್ಯರ್ಥಿಯಾಗಿದ್ದರು.
ಕಾಂಗ್ರೆಸ್ನ ಎಲ್ಲಾ ತಂತ್ರಗಳನ್ನು ವಿಫಲಗೊಳಿಸಿದ್ದ ಅನಂತ್ ಕುಮಾರ್ 633,816 ಮತಗಳನ್ನು ಪಡೆದು ಜಯಗಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅನಂತ್ ಕುಮಾರ್ ಅವರು ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವರಾಗಿದ್ದರು.
ತುರುಸಿನ ಸ್ಪರ್ಧೆ ಕಂಡಿದ್ದ ಕ್ಷೇತ್ರ
2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 1113726 ಮತದಾರರು ಮತ ಚಲಾವಣೆ ಮಾಡಿದ್ದರು. 597291 ಪುರುಷ, 516435 ಮಹಿಳಾ ಅಭ್ಯರ್ಥಿಗಳು ಮತ ಚಲಾಯಿಸಿದ್ದರು. ಒಟ್ಟು ಶೇ.56ರಷ್ಟು ಈ ಕ್ಷೇತ್ರದಲ್ಲಿ ಮತ ಚಲಾವಣೆಯಾಗಿತ್ತು. ಮತದಾನಕ್ಕೂ ಮುನ್ನ ಮುಕ್ತ ವೇದಿಕೆಯ ಮೇಲೆ ಎಲ್ಲ ಅಭ್ಯರ್ಥಿಗಳಿಂದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆದು ವಾಗ್ವಾದಗಳೂ ನಡೆದಿದ್ದವು.
ಭಾರೀ ತುರುಸಿನ ಸ್ಪರ್ಧೆ ಕಂಡಿದ್ದ ಕ್ಷೇತ್ರದಲ್ಲಿ, ನರೇಂದ್ರ ಮೋದಿಯವರ ಅಲೆಯ ಮೇಲೆ ತೇಲಿ ತೇಲಿ ಅನಂತ್ ಕುಮಾರ್ (ಪಡೆದ ಮತ 6,33,816) ಅವರು 228,575 ಮತಗಳ ಭಾರೀ ಅಂತರದಿಂದ ನಂದನ್ ನಿಲೇಕಣಿ (ಪಡೆದ ಮತಗಳು 405,241) ಅವರನ್ನು ಸೋಲಿಸಿದ್ದರು.
ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು
ನಗರದ ಕೇಂದ್ರ ಭಾಗದಲ್ಲಿರುವ ಈ ಬಡಾವಣೆಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇಲ್ಲ. ಕ್ಷೇತ್ರದ ಸಂಚಾರ ದಟ್ಟಣೆಯನ್ನು ನಮ್ಮ ಮೆಟ್ರೋ ಕಡಿಮೆ ಮಾಡಿದೆ. ಆದರೆ, ಬಿ.ಟಿ.ಎಂ, ಜಯನಗರ, ವಿಜಯನಗರ, ಬಸವನಗುಡಿ ಮುಂತಾದ ಕ್ಷೇತ್ರಗಳಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದೆ.
ಜಯನಗರದಲ್ಲಿ ಸುಸಜ್ಜಿತವಾದ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ. ಕಟ್ಟಡ ನಿರ್ಮಾಣಗೊಂಡು 4 ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಕಾಣದ ಕೈಗಳು ಇಲ್ಲಿನ ವ್ಯಾಪಾರಿಗಳಿಗೆ ಮಳಿಗೆ ಸಿಗದಂತೆ ತಡೆದಿವೆ.
ಕಾಂಗ್ರೆಸ್ ಅಧಿಪತ್ಯವಿರುವ ಕಲಬುರಗಿ ಲೋಕಸಭಾ ಕ್ಷೇತ್ರದ ಪರಿಚಯ
ಚಿಕ್ಕಪೇಟೆ ಹೆಸರಿಗೆ ತಕ್ಕಂತೆ ಚಿಕ್ಕ ರಸ್ತೆಗಳನ್ನು ಹೊಂದಿದೆ. ಆದ್ದರಿಂದ, ಸಂಚಾರ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಮಾಮೂಲು. ಒಂದು ಕಾಲದಲ್ಲಿ ಬೆಂಗಳೂರು ನಗರದ ಶಾಪಿಂಗ್ ಪ್ರದೇಶವಿದು. ಈಗಲೂ ನೂರಾರು ಜನರು ಶಾಪಿಂಗ್ಗೆ ಆಗಮಿಸುತ್ತಾರೆ.
ಒಂದು ಕಡೆ ಸ್ಲಂ, ಮತ್ತೊಂದು ಕಡೆ ಸುಸಜ್ಜಿತ ಬಡಾವಣೆಯನ್ನು ಹೊಂದಿರುವ ಬಿ.ಟಿ.ಎಂ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗ ನಮ್ಮ ಮೆಟ್ರೋ ಕಾಮಗಾರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಇದರಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.
ಕ್ಷೇತ್ರದ ಒಟ್ಟು ಜನಸಂಖ್ಯೆ 24,13,299 ಕ್ಷೇತ್ರ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಇರುವುದರಿಂದ ಎಲ್ಲರೂ ನಗರವಾಸಿಗಳೇ. ಇವರಲ್ಲಿ ಶೇ 8.02 ರಷ್ಟು ಎಸ್ಸಿ, ಶೇ 1.71ರಷ್ಟು ಎಸ್ಟಿ ಸಮಯದಾಯದವರು ಇದ್ದಾರೆ.
ಕ್ಷೇತ್ರದ ಚುನಾವಣಾ ಇತಿಹಾಸ
1996ರಲ್ಲಿ ಮೊದಲ ಬಾರಿಗೆ ಅನಂತ್ ಕುಮಾರ್ ಅವರು ವರಲಕ್ಷ್ಮಿ ಗುಂಡೂರಾವ್ ವಿರುದ್ಧ 22 ಸಾವಿರ ಮತಗಳ ಅಂತರದಲ್ಲಿ ಗೆದ್ದರು. 1998ರಲ್ಲಿ ಡಿ.ಪಿ.ಶರ್ಮಾ ವಿರುದ್ಧ 1.8 ಲಕ್ಷ, 1999ರಲ್ಲಿ ಬಿ.ಕೆ.ಹರಿಪ್ರಸಾದ್ ವಿರುದ್ಧ 66 ಸಾವಿರ, 2004ರಲ್ಲಿ ಎಂ.ಕೃಷ್ಣಪ್ಪ ವಿರುದ್ಧ 62 ಸಾವಿರ, 2009ರಲ್ಲಿ ಕೃಷ್ಣ ಬೈರೇಗೌಡ ವಿರುದ್ಧ 38 ಸಾವಿರ, 2014ರ ಚುನಾವಣೆಯಲ್ಲಿ 2.28 ಲಕ್ಷಗಳ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ ಪ್ರಾಬಲ್ಯ?
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಿ.ಟಿ.ಎಂ ಲೇಔಟ್, ಜಯನಗರ, ಗೋವಿಂದರಾಜನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಚಿಕ್ಕಪೇಟೆ, ವಿಜಯನಗರ, ಬಸವನಗುಡಿ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ.
ಬಿ.ಟಿ.ಎಂ ಲೇಔಟ್, ಜಯನಗರ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಅಂಶ ಬಿಜೆಪಿಗೆ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ.