2ನೇ ಉಪ ಚುನಾವಣೆ ಎದುರಿಸುತ್ತಿರುವ ವಿಜಯನಗರ ಪರಿಚಯ
ಬಳ್ಳಾರಿ, ಸೆಪ್ಟೆಂಬರ್ 23 : ಬಳ್ಳಾರಿ ಜಿಲ್ಲೆಯ ವಿಜಯನಗರ ಪ್ರತ್ಯೇಕ ಜಿಲ್ಲೆಯಾಗುವ ಬೇಡಿಕೆಗೆ ಪ್ರಾಥಮಿಕ ಒಪ್ಪಿಗೆ ಸಿಕ್ಕಿದೆ. ಇದರ ಜೊತೆಗೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ವಿಧಾನಸಭಾ ಕ್ಷೇತ್ರ ಎದುರಿಸುತ್ತಿರುವ 2ನೇ ಉಪ ಚುನಾವಣೆ ಇದಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆನಂದ್ ಸಿಂಗ್ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಆದರೆ, ಚುನಾವಣೆ ನಡೆದು ಒಂದು ವರ್ಷದಲ್ಲಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಚುನಾವಣೆ ಎದುರಾಗಲು ಕಾರಣವಾದರು.
ಆನಂದ್ ಸಿಂಗ್ ವಿಜಯನಗರ ಕ್ಷೇತ್ರದ ಪ್ರಭಾವಿ ಶಾಸಕ 3 ಬಾರಿ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ. ಸಚಿವರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದ ಅವರು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುವಾಸವನ್ನು ಅನುಭವಿಸಿದ್ದಾರೆ.
ಸಂಪಾದಕರಿಗೆ ಪತ್ರ: ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದರೆ ಬರೀ ತೊಂದರೆ
ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಿ ಅದರ ಮೂಲಕ ರಾಜಕೀಯ ಲಾಭ ಪಡೆಯಬೇಕು ಎಂಬುದು ಆನಂದ್ ಸಿಂಗ್ ತಂತ್ರವಾಗಿದೆ ಎಂಬುದು ತಾಲೂಕಿನ ಕೆಲವು ಜನರ ಆರೋಪ. ತಾಲೂಕಿನ ಪಶ್ಚಿಮ ಭಾಗದ ಯಾರ ಜೊತೆಗೂ ಮಾತುಕತೆ ನಡೆಸದೇ ಅವರು ಜಿಲ್ಲಾ ರಚನೆ ಬಗ್ಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಿದ್ದಾರೆ ಎಂಬ ದೂರುಗಳಿವೆ.
ವಿಜಯನಗರ ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಆನಂದ್ ಸಿಂಗ್ಗೆ ಚುನಾವಣಾ ಕಣಕ್ಕಿಳಿಯಲು ಅವಕಾಶ ಸಿಗುವುದೇ ಎಂಬುದು ಸುಪ್ರೀಂಕೋರ್ಟ್ ಆದೇಶದ ಮೇಲೆ ನಿಂತಿದೆ. ಪುತ್ರ ಸಿದ್ಧಾರ್ಥರನ್ನು ಕಣಕ್ಕಿಳಿಸಲು ಸಹ ವಯಸ್ಸಿನ ಅಡ್ಡಿ ಇದೆ. ಆದ್ದರಿಂದ, ಕುಟುಂಬದಲ್ಲೇ ಯಾರಿಗಾದರೂ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಳ್ಳಬೇಕು.
ಹೊಸಪೇಟೆ-ಕೊಟ್ಟೂರು ನಡುವೆ ರೈಲು; ದಶಕಗಳ ಕನಸು ನನಸು
2018ರ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ಬಿಟ್ಟು ಆನಂದ್ ಸಿಂಗ್ ಕಾಂಗ್ರೆಸ್ ಸೇರಿದ್ದರು. ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು 83,214 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಎಚ್. ಆರ್. ಗವಿಯಪ್ಪ 74,986 ಮತಗಳನ್ನು ಪಡೆದು ಸೋಲು ಕಂಡಿದ್ದರು. ಜೆಡಿಎಸ್ಗೆ ಕ್ಷೇತ್ರದಲ್ಲಿ ನೆಲೆಯೇ ಇಲ್ಲ.
ಆನಂದ್ ಸಿಂಗ್ಗೆ ಯಾವ ಪಕ್ಷದಿಂದ ಟಿಕೆಟ್ ಸಿಗಲಿದೆ? ಎಂಬುದನ್ನು ಕಾಂಗ್ರೆಸ್ ಕಾದು ನೋಡುತ್ತಿದೆ. ಒಂದು ವೇಳೆ ಎಚ್. ಆರ್. ಗವಿಯಪ್ಪಗೆ ಬಿಜೆಪಿ ಟಿಕೆಟ್ ಕೈ ತಪ್ಪಿದರೆ, ಟಿಕೆಟ್ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಸಿದ್ಧವಿದೆ.
2018ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 4,69,54,443 ಮತದಾರರು ಇದ್ದರು. 3,64,24,365 ಜನರು ಮತದಾನ ಮಾಡಿದ್ದರು.
ಇದು 2ನೇ ಉಪ ಚುನಾವಣೆ : ವಿಜಯನಗರ ಕ್ಷೇತ್ರಕ್ಕೆ ಇದು ಎರಡನೇ ಉಪ ಚುನಾವಣೆ. 1989ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಗೆದ್ದಿದ್ದ ಗುಜ್ಜಲ್ ಹನುಮಂತಪ್ಪ 1991ರಲ್ಲಿ ಅಕಾಲಿಕವಾಗಿ ಮರಣ ಹೊಂದಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ರತನ್ ಸಿಂಗ್ ಗೆಲುವು ಸಾಧಿಸಿದ್ದರು.
ಈಗ ಜಿಂದಾಲ್ಗೆ ಸರ್ಕಾರ ಭೂಮಿ ಹಸ್ತಾಂತರ ಮಾಡಬಾರದು, ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಆನಂದ್ ಸಿಂಗ್ ರಾಜೀನಾಮೆ ನೀಡಿರುವುದರಿಂದ ಮತ್ತೆ ಉಪ ಚುನಾವಣೆ ಎದುರಾಗಿದೆ.
ಪ್ರಸ್ತುತ ಬಳ್ಳಾರಿ ಜಿಲ್ಲೆಯಲ್ಲಿರುವ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಪ್ರಾಥಮಿಕ ಹಂತದ ಕೆಲಸಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಪ್ರಸ್ತುತ ಬಳ್ಳಾರಿ 11 ಕಂದಾಯ ತಾಲೂಕು, 3 ಕಂದಾಯ ಉಪ ವಿಭಾಗಗಳನ್ನು ಹೊಂದಿರುವ ದೊಡ್ಡ ಜಿಲ್ಲೆ.
ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರಗುಪ್ಪ, ಸಂಡೂರು ಮತ್ತು ಕೂಡ್ಲಗಿ ಉಳಿಸಿಕೊಂಡು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡುವುದು ಪ್ರಸ್ತಾವನೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಟಿಪ್ಪಣಿ ಮಂಡನೆ ಮಾಡಲು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ.
ವಿಜಯನಗರ ಪ್ರತ್ಯೇಕ ಜಿಲ್ಲೆಯಾದರೆ ಹೊಸಪೇಟೆ ಕೇಂದ್ರ ಸ್ಥಾನವಾಗಲಿದೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳು ಹೊಸ ಜಿಲ್ಲೆಗೆ ಸೇರಲಿವೆ. ಅಕ್ಟೋಬರ್ 21ರಂದು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದ್ದ, 24ರಂದು ಫಲಿತಾಂಶ ಪ್ರಕಟವಾಗಲಿದೆ.