ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ್ ಪರಿಚಯ
ಬಾಗಲಕೋಟೆ, ಏಪ್ರಿಲ್ 02 : ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದ ಮಹಿಳೆ ಇಂದು ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ನಿಂದ ಟಿಕೆಟ್ ಪಡೆದ ಏಕೈಕ ಮಹಿಳೆ ಇವರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ವೀಣಾ ಕಾಶಪ್ಪನವರ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ವೀಣಾ ಅವರು ಈಗ ಸಂಸತ್ನತ್ತ ಹೆಜ್ಜೆ ಇಟ್ಟಿದ್ದಾರೆ.
'ರಾಜಕೀಯ ಎಂದರೆ ನನಗೆ ಆಗದು, ಮಾವ ಎಸ್.ಆರ್.ಕಾಶಪ್ಪನವರ್ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿ ಸಾಕಷ್ಟು ಹೆಸರು ಮಾಡಿದ್ದರೂ ನನಗೆ ರಾಜಕೀಯ ಇಷ್ಟವಿರಲಿಲ್ಲ' ಎಂದು ಹಿಂದೆ ಸಂದರ್ಶನವೊಂದರಲ್ಲಿ ವೀಣಾ ಕಾಶಪ್ಪನವರ್ ಹೇಳಿದ್ದರು.
ಪ್ರವಾಸೋದ್ಯಮ ಗರಿ ಬಾಗಲಕೋಟೆ ಬಿಜೆಪಿ ಭದ್ರಕೋಟೆಯಾಗಿಯೇ ಉಳಿಯುತ್ತಾ?
ಬಾಗಲಕೋಟೆ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ವೀಣಾ ಕಾಶಪ್ಪನವರ್ ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ನಾಯಕ ಪಿ.ಸಿ.ಗದ್ದಿಗೌಡರ್ ಅವರು ಚುನಾವಣೆಯಲ್ಲಿ ಎದುರಾಳಿಯಾಗಿದ್ದಾರೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.....
ಬೆಂಗಳೂರಿನವರು
ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರಿಯಾದ ವೀಣಾ ಕಾಶಪ್ಪನವರ್ ಪದವೀಧರರು. ಕರ್ನಾಟಕದ ರಾಜಕೀಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎಸ್.ಆರ್.ಕಾಶಪ್ಪನವರ್ ಅವರ ಪುತ್ರ ವಿಜಯಾನಂದ ಕಾಶಪ್ಪನವರ್ ಅವರನ್ನು ವಿವಾಹವಾಗುವ ಮೂಲಕ ಕಾಶಪ್ಪನವರ್ ಅವರ ಕುಟುಂಬಕ್ಕೆ ಸೊಸೆಯಾಗಿ ಬಂದರು.
ಅನಿವಾರ್ಯವಾಗಿ ರಾಜಕೀಯಕ್ಕೆ ಬಂದರು
ವೀಣಾ ಕಾಶಪ್ಪನವರ್ ಅವರಿಗೆ ರಾಜಕಾರಣ ಇಷ್ಟವಿರಲಿಲ್ಲ. 2002ರಲ್ಲಿ ಎಸ್.ಆರ್.ಕಾಶಪ್ಪನವರ್ ಕಾರು ಅಪಘಾತದಲ್ಲಿ ಮೃತಪಟ್ಟರು. ಆಗ ಅವರ ಪತ್ನಿ ಗೌರಮ್ಮ ಮತ್ತು ವಿಜಯಾನಂದ ಕಾಶಪ್ಪನವರ್ ರಾಜಕೀಯಕ್ಕೆ ಬಂದರು. ವೀಣಾ ಕಾಶಪ್ಪನವರ್ ಅವರು ಆಗ ಅನಿವಾರ್ಯವಾಗಿ ರಾಜಕೀಯಕ್ಕೆ ಬರಬೇಕಾಯಿತು.
ಬಾಗಲಕೋಟೆ ಜಿಲ್ಲೆ
ವಿಜಯಾನಂದ ಕಾಶಪ್ಪನವರ್ ಅವರು ಶಾಸಕರಾಗಿದ್ದಾಗ 2016ರ ಮೇ 7ರಂದು ವೀಣಾ ಕಾಶಪ್ಪನವರ್ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದರು. ಅನಿರೀಕ್ಷಿತವಾಗಿ ರಾಜಕೀಯಕ್ಕೆ ಬಂದರೂ ವೀಣಾ ಅವರು ಪತಿ ಮತ್ತು ಮಾವನ ವರ್ಚಸ್ಸನ್ನು ಮೀರಿ ಬೆಳೆದರು. ಜನರ ಮೆಚ್ಚುಗೆಗೆ ಪಾತ್ರರಾದರು.
ಜನರ ಕಷ್ಟವನ್ನು ಅರಿತರು
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗುತ್ತಿದ್ದಂತೆ ಬಾಗಲಕೋಟೆಗೆ ವಾಸ್ತವ್ಯ ಬದಲಿಸಿದರು. ಮಕ್ಕಳನ್ನು ಇಲ್ಲಿಯೇ ಶಾಲೆಗೆ ಸೇರಿಸಿದರು. ಗ್ರಾಮ ವಾಸ್ತವ್ಯ ನಡೆಸಿ ಜನರ ಕಷ್ಟಗಳನ್ನು ಅರಿತರು. ಬಯಲು ಶೌಚಕ್ಕೆ ಹೋಗುತ್ತಿದ್ದ ಮಹಿಳೆಯರ ಸಂಕಷ್ಟ ತಿಳಿದು ಸರ್ಕಾರದ ವತಿಯಿಂದ ಶೌಚಾಲಯಗಳನ್ನು ನಿರ್ಮಿಸಲು ಸಹಕಾರ ನೀಡಿದರು.
ಲಿಂಗಾಯತ ಸಮುದಾಯಕ್ಕೆ ಸೇರಿದವರು
ವೀಣಾ ಕಾಶಪ್ಪನವರ್ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಬಳಿಕ ವೀಣಾ ಅವರ ಜನಪರ ನಿಲುವನ್ನು ಗುರುತಿಸಿ ಈ ಬಾರಿಯ ಚುನಾವಣೆ ಟಿಕೆಟ್ ಕೊಡಿಸಿದ್ದಾರೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಸೇರಿದಂತೆ ಹಲವು ಪ್ರಭಾವಿ ನಾಯಕರು ವೀಣಾ ಅವರ ಬೆಂಬಲಕ್ಕೆ ನಿಂತಿದ್ದಾರೆ. ಚುನಾವಣೆಯಲ್ಲಿ ಜಯಗಳಿಸುವರೇ? ಎಂದು ಕಾದು ನೋಡಬೇಕು.