ಮಕ್ಕಳ ಕಳ್ಳನೆಂದು ಜನರು ಕೊಂದ ಮೊಹ್ಮದ್ ಅಜಂ ಮಗನ ಅಳು ಕೇಳಿಸಿಕೊಳ್ಳಿ..
"ನನ್ನ ಸೋದರನ ಮಗ ಹಾಸಿಗೆ ಬಿಟ್ಟು ಎದ್ದ ಕ್ಷಣದಿಂದ ಅಪ್ಪ ಬೇಕೂ ಅಂತ ಅಳೋದಿಕ್ಕೆ ಶುರು ಮಾಡ್ತಾನೆ. ಅವನಪ್ಪ ಮತ್ತೆ ಬರೋದಿಲ್ಲ ಅನ್ನೋ ಮಾತನ್ನ ಆ ಪುಟ್ಟ ಹುಡುಗನಿಗೆ ಹೇಳೋದು ಹೇಗೆ ಅಂತ ಆ ತಾಯಿಗೆ ಗೊತ್ತಾಗ್ತಾ ಇಲ್ಲ" ಎಂದು ಹೇಳುವಷ್ಟರಲ್ಲಿ ಮೊಹ್ಮದ್ ಅಜಮ್ ಅವರ ಸೋದರ ಮೊಹ್ಮದ್ ಅಕ್ರಮ್ ಗದ್ಗಿದಿತರಾಗುತ್ತಾರೆ. ಕೊರಳ ಸೆರೆ ಉಬ್ಬಿ ಬಂದಿರುತ್ತದೆ.
ಹೈದರಾಬಾದ್ ನ ಆಕ್ಸೆಂಚರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮೂವತ್ತೆರಡು ವರ್ಷದ ಟೆಕಿ ಮೊಹ್ಮದ್ ಅಜಮ್ ಅವರನ್ನು ಬೀದರ್ ನ ಮುರ್ಕಿ ಗ್ರಾಮದಲ್ಲಿ ಶುಕ್ರವಾರ ಹತ್ಯೆ ಮಾಡಲಾಯಿತು. ಅದೂ ಈಗಾಗಲೇ ಹಲವು ಮಂದಿಯ ಪ್ರಾಣ ತೆಗೆದಿರುವ ವಾಟ್ಸಾಪ್ ವದಂತಿಯಿಂದಲೇ. ಮಕ್ಕಳ ಕಳ್ಳ ಎಂಬ ಗುಮಾನಿಯಿಂದ ಅಜಮ್ ರನ್ನು ಜನರ ಗುಂಪು ಕೊಂದುಹಾಕಿತು.
ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ, ಇಬ್ಬರ ಜೀವ ಉಳಿಸಿದ ಎಸ್.ಪಿ ದೇವರಾಜ್
ಮೊಹ್ಮದ್ ಅಜಂ ಕುಟುಂಬದ ಇವತ್ತಿನ ಸ್ಥಿತಿ ನೆನೆದರೆ ಎಂಥವರ ಹೃದಯವೂ ಕರಗುತ್ತದೆ. ಒಂದು ಕ್ಷಣವಾದರೂ ಏನು ಮಾತನಾಡುವುದು ಎಂಬುದೇ ತೋಚುವುದಿಲ್ಲ. ಇರಲಿ, ಆ ದಿನ ನಡೆದ ಘಟನೆ ಏನು ಎಂಬುದನ್ನು ತಮ್ಮ ಸೋದರ ಸಂಬಂಧಿಗಳು ಹೇಳಿಕೊಂಡ ಮಾಹಿತಿ ಪ್ರಕಾರ ವಿವರಿಸಿದ್ದಾರೆ ಅಕ್ರಮ್.
ಗುರುವಾರ ರಾತ್ರಿ ಬೀದರ್ ನ ಸ್ನೇಹಿತನ ಮನೆಗೆ ಹೋಗಿದ್ದರು
"ಗುರುವಾರ ರಾತ್ರಿ ನನ್ನ ಸೋದರ ಮತ್ತು ಇತರ ಐವರು ಸಂಬಂಧಿಗಳು ಬೀದರ್ ನಲ್ಲಿ ಗೆಳೆಯನೊಬ್ಬನ ಬೀದರ್ ಗೆ ತೆರಳಿದರು. ಹಾಗೆ ಹೋಗಿದ್ದವರ ಪೈಕಿ ಒಬ್ಬ ಸೋದರ ಸಂಬಂಧಿ, ಮೊಹ್ಮದ್ ಸಲ್ಹಾಮ್-ಬಿನ್-ಇದ್ ಕತಾರ್ ನಲ್ಲಿ ಪೊಲೀಸ್ ಅಧಿಕಾರಿ. ಆಗಾಗ ಹೈದರಾಬಾದ್ ಗೆ ಬರ್ತಿದ್ದ. ಎಲ್ಲರೂ ಸೇರಿ ಬೀದರ್ ಗೆ ಹೋಗಲು ತೀರ್ಮಾನಿಸಿದರು. ಅಲ್ಲಿ ಸಲ್ಹಾಮ್ ನ ಸ್ನೇಹಿತ ಇದ್ದಾನೆ" ಎಂದು ಬೇಸರದಿಂದ ಹೇಳುತ್ತಾರೆ ಅಕ್ರಮ್.
ಕೆಂಪು ಬಣ್ಣದ ಕಾರು, ಅದರಲ್ಲಿ ಮಕ್ಕಳ ಕಳ್ಳರಿದ್ದಾರೆ
ಆ ಮೇಲೆ ಕಾರಲ್ಲಿ ಸ್ವಲ್ಪ ದೂರ ಹೋಗಿಬರಲು ತೀರ್ಮಾನಿಸಿದ್ದಾರೆ. ಶಾಲೆಯೊಂದರ ಬಳಿ ಬಸ್ ನಿಲ್ದಾಣದ ಹತ್ತಿರ ಹೋದಾಗ ಮಕ್ಕಳಿಗೆ ಚಾಕೊಲೇಟ್ ಕೊಟ್ಟಿದ್ದಾರೆ. ಆಗ ಹಳ್ಳಿಗರು ಇವರನ್ನು ಮಕ್ಕಳ ಕಳ್ಳರು ಅಂದುಕೊಂಡು, ದಾಳಿ ಮಾಡಿದ್ದಾರೆ. ಅಜಂ ಮತ್ತು ಇತರರು ಜೀವ ಭಯದಿಂದ ಬೂತಕುಲದಿಂದ ತಪ್ಪಿಸಿಕೊಂಡಾಗ, ಈ ಹಳ್ಳಿಗರು ಮುರ್ಕಿ ಗ್ರಾಮದ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ.
ಕೆಂಪು ಬಣ್ಣದ ಕಾರನ್ನು ತಡೆಯಿರಿ. ಅದರೊಳಗೆ ಮಕ್ಕಳ ಕಳ್ಳರಿದ್ದಾರೆ ಎಂದು ಹೇಳಿದ್ದಾರೆ. ಮುರ್ಕಿ ಗ್ರಾಮಸ್ಥರು ರಸ್ತೆಗೆ ತಡೆ ಮಾಡಿ, ಕಾರು ತಡೆದಿದ್ದಾರೆ. ಹಾಗೆ ಕಾರು ತಡೆಯುವಾಗ ಮುಂಭಾಗದ ಗಾಜಿಗೆ ಹೊದಿಕೆ ಎಸೆದಿದ್ದಾರೆ. ಮುಂದೆ ರಸ್ತೆ ಕಾಣದೆ ಕಾರು ನಿಲ್ಲಿಸಿದಾಗ, ಸಾವಿರಾರು ಮಂದಿ ಹಳ್ಳಿಗರು ಕಾರಿನೊಳಗೆ ಇದ್ದವರನ್ನು ಹೊರಗೆ ಎಳೆದು ಬಡಿಯಲು ಆರಂಭಿಸಿದ್ದಾರೆ.
ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರು
ಪೊಲೀಸರು ಕೂಡ ಜನರನ್ನು ಬೇಡಿಕೊಂಡರು
ಹೊಡೆಯುವುದು ನಿಲ್ಲಿಸಿ ಎಂದು ಪೊಲೀಸರು ಕೂಡ ಜನರಲ್ಲಿ ಬೇಡಿಕೊಂಡಿದ್ದಾರೆ. ಆದರೆ ಜನರನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಇವೆಲ್ಲ ವಿಡಿಯೋದಲ್ಲಿ ದಾಖಲಾಗಿದೆ. ಕಾರಿನಲ್ಲಿ ಇರುವವರು ಅಮಾಯಕರು ಎಂದು ನಂಬುವ ಸ್ಥಿತಿಯಲ್ಲಿ ಪೊಲೀಸರು ಕೂಡ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅಕ್ರಮ್.
ಕಲ್ಲು, ಬಡಿಗೆಗಳಿಂದ ಹೊಡೆತ ಬಿದ್ದು ಅಜಂ ಸಾವನ್ನಪ್ಪಿದ್ದಾರೆ. ನೂರ್ ಮೊಹ್ಮದ್ ಹಾಗೂ ಅಫ್ರೋಜ್ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದಾರೆ. ಮೊಹ್ಮದ್ ಸಲ್ಮಾನ್, ಸಲ್ಹಾಮ್ ಮತ್ತು ಅಲ್ ಕಿವೈಸಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಕೈ ಮುರಿದಿದೆ. ತಲೆಗೆ ಹಲವು ಹೊಲಿಗೆ ಹಾಕಲಾಗಿದೆ. ಸ್ವಲ್ಪ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ.
ಅಜಂ ತಂದೆಗೆ ಹೃದಯದ ಕಾಯಿಲೆ
"ನನ್ನ ಸೋದರನ ಮಗನಿಗೆ ಈಗ ಹದಿನೆಂಟು ತಿಂಗಳು. ಅವನಿಗೆ ಮಕ್ಕಳೆಂದರೆ ಬಹಳ ಇಷ್ಟ. ಪುಟ್ಟ ಮಕ್ಕಳು ಕಂಡಾಗ ಚಾಕೊಲೇಟ್ ಕೊಡ್ತಿದ್ದ. ಬಡವರಿಗೆ ಅಕ್ಕಿ ಹಂಚುತ್ತಿದ್ದ. ಒಳ್ಳೆ ಮನಸ್ಸಿನ, ಸಹೃದಯ ವ್ಯಕ್ತಿ" ಎಂದು ಭಾರವಾದ ಹೃದಯದಿಂದ ತಮ್ಮ ಸೋದರ ಅಜಂ ಬಗ್ಗೆ ಮಾತನಾಡುತ್ತಾರೆ ಅಕ್ರಮ್.
ಅಜಂ ತಂದೆಗೆ ಹೃದಯ ಕಾಯಿಲೆ ಇದೆ. ತಮ್ಮ ಮಗನ ಸಾವಿನ ನಂತರ ಅವರು ಮಾತಾಡುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಪೊಲೀಸರಿಂದ ತಮ್ಮ ಕುಟುಂಬಕ್ಕೆ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಇಲ್ಲ ಎನ್ನುವ ಅಕ್ರಮ್, ತಮ್ಮ ಪ್ರಾಣ ಉಳಿಸುವಂತೆ ಬೇಡಿಕೊಳ್ಳುತ್ತಿದ್ದಾಗ ಪೊಲೀಸರು ನೆರವಾಗಲಿಲ್ಲ. ಮೂವತ್ತು ಜನರನ್ನು ಬಂಧಿಸಿದ್ದಾರೆ. ಈಗ ಸಾಕ್ಷ್ಯ ಎಲ್ಲಿದೆ? ಸಾವಿರಾರು ಮಂದಿ ಸೇರಿ ಕೊಂದಿದ್ದಾರೆ. ಅವರಿಗೆಲ್ಲ ಏನು ಮಾಡ್ತೀರಿ ಎನ್ನುತ್ತಾರೆ.
ಎಸ್ ಪಿ ಹೇಳುವ ಪ್ರಕಾರ, ಅವರು ಮಕ್ಕಳ ಕಳ್ಳರು ಅನ್ನೋ ವದಂತಿ ಏನೂ ಇರಲಿಲ್ಲ. ಆದರೆ ನಾವು ಪೊಲೀಸರನ್ನು ನಂಬುವುದಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಮೊಹ್ಮದ್ ಅಕ್ರಮ್.