ಕೊರೊನಾ ಸೋಂಕಿಗೆ ಕೆಂಪಿರುವೆ ಚಟ್ನಿ ಮದ್ದಂತೆ...
ಒಡಿಶಾ, ಜನವರಿ 01: ವಿಶ್ವಕ್ಕೇ ಮಾರಕವಾಗಿರುವ ಕೊರೊನಾ ಸೋಂಕಿನ ನಿವಾರಣೆಗೆ ಅಥವಾ ಸೋಂಕಿನ ತಡೆಗೆ ಏನೆಲ್ಲಾ ಆಹಾರ ಪದ್ಧತಿ ಅನುಸರಿಸಬೇಕು ಎಂಬುದೇ ಕೊರೊನಾ ಆರಂಭಗೊಂಡ ಮೊದಲ ದಿನದಿಂದಲೂ ಜನರು ಯೋಚಿಸುತ್ತಿರುವ ವಿಷಯ.
ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡರೆ, ಈ ಸೋಂಕಿನ ವಿರುದ್ಧ ಹೋರಾಡಬಹುದು ಎಂಬ ಕಾರಣಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸುವವರೂ ಹೆಚ್ಚಾದರು. ವೈದ್ಯರೂ ಹಲವು ರೀತಿಯ ಆಹಾರ ಪದ್ಧತಿಗಳನ್ನು ಸಲಹೆ ನೀಡಿದರು. ಆದರೆ ಇದೀಗ ಕೊರೊನಾ ಸೋಂಕನ್ನು ನಿವಾರಿಸಲು ಕೆಂಪು ಇರುವೆ ಬಳಸಿ ತಯಾರಿಸುವ ಚಟ್ನಿ ಅತಿ ಪರಿಣಾಮಕಾರಿ ಎನ್ನಲಾಗುತ್ತಿದೆ. ಈ ಕುರಿತು ಸಂಶೋಧನೆ ನಡೆಸಲು ಆಯುಷ್ ಸಚಿವಾಲಯಕ್ಕೆ ಒಡಿಶಾ ಹೈಕೋರ್ಟ್ ಸೂಚನೆ ನೀಡಿದೆ. ಮುಂದೆ ಓದಿ...
ಕೊರೊನಾಗೆ ಹೋಮಿಯೋಪತಿ ಪದ್ಧತಿಯಲ್ಲೂ ಔಷಧಿ ಆವಿಷ್ಕಾರ
ಕೊರೊನಾಗೆ ಕೆಂಪು ಇರುವೆ ಚಟ್ನಿ ಪರಿಣಾಮಕಾರಿ?
ಕರ್ನಾಟಕದ ಹಲವು ಕಡೆಗಳಲ್ಲಿ ಕೆಂಪು ಇರುವೆಯನ್ನು ಬಳಸಿ ಚಟ್ನಿ ಮಾಡುವುದನ್ನು ನೋಡಿದ್ದೇವೆ. ಇದಕ್ಕೆ ಚಿಗಳಿ ಎಂತಲೂ ಕರೆಯುತ್ತಾರೆ. ಕೆಂಪು ಇರುವೆಗಳನ್ನು ಬಿಡಿಸಿ, ಅದನ್ನು ಹುರಿದು ಚಟ್ನಿ ಮಾಡಿ ಸೇವಿಸುವುದು ರೂಢಿ. ಪ್ರಸಿದ್ಧ ಬಾಣಸಿಗ ಗೋರ್ಡನ್ ರಾಮ್ಸೆ ಮೆನುವಿನಲ್ಲೂ ಸ್ಥಾನ ಪಡೆದುಕೊಂಡಿರುವ ಈ ಕೆಂಪು ಇರುವೆ ಚಟ್ನಿ ಕುರಿತು ಶೀಘ್ರವೇ ಆಯುಷ್ ಸಚಿವಾಲಯ ಸಂಶೋಧನೆ ನಡೆಸಲಿದ್ದು, ಕೊರೊನಾ ವಿರುದ್ಧ ಹೋರಾಡುವ ಆಹಾರವಾಗಬಹುದೇ ಎಂದು ತಿಳಿಸಲಿದೆ.
ಪ್ರಸ್ತಾವನೆ ಸಲ್ಲಿಸಿದ್ದ ಎಂಜಿನಿಯರ್
ಕೊರೊನಾಗೆ ಚಿಕಿತ್ಸೆ ನೀಡಲು ಕೆಂಪು ಇರುವೆ ಚಟ್ನಿ ಬಳಸುವ ಪ್ರಸ್ತಾವನೆಯನ್ನು ಮೂರು ತಿಂಗಳ ಒಳಗೆ ತೀರ್ಮಾನಿಸಲು ಒಡಿಶಾ ಹೈ ಕೋರ್ಟ್ ಆಯುಷ್ ಸಚಿವಾಲಯ, ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿಗೆ ಗುರುವಾರ ಸೂಚಿಸಿರುವುದಾಗಿ ತಿಳಿದುಬಂದಿದೆ. ಕೊರೊನಾ ವೈರಸ್ ಚಿಕಿತ್ಸೆಗೆ ಈ ಕೆಂಪು ಇರುವೆ ಚಟ್ನಿ ಪರಿಣಾಮಕಾರಿ ಎಂಬ ಪ್ರಸ್ತಾವನೆಯ ಸಾರ್ವಜನಿಕ ಹಿತಾಸಕ್ತಿ ಮನವಿ ಮೇಲೆ ಕೋರ್ಟ್ ನಿರ್ದೇಶನ ನೀಡಿದೆ. ಆಯುಷ್ ಸಚಿವಾಲಯದ ಮಹಾನಿರ್ದೇಶಕರು ಹಾಗೂ ವೈಜ್ಞಾನಿಕ ಕೈಗಾರಿಕಾ ಸಂಶೋಧನಾ ಮಂಡಳಿಯ ಮಹಾನಿರ್ದೇಶಕರು ಸಂಶೋಧನೆ ನಡೆಸಿ ನಿರ್ಣಯ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಈ ಅರ್ಜಿಯನ್ನು ಬಾರಿಪಾದ ಮೂಲದ ಎಂಜಿನಿಯರ್ ನಯಾದರ್ ಪದಿಯಾಲ್ ಸಲ್ಲಿಸಿದ್ದಾರೆ.
ಆಯುಷ್ ವೈದ್ಯರು 'ರೋಗಕ್ಕೆ ಈ ಔಷಧ ಪರಿಹಾರ' ಎನ್ನುವ ಜಾಹೀರಾತು ನೀಡುವಂತಿಲ್ಲ: ಸುಪ್ರೀಂಕೋರ್ಟ್
ಕೆಂಪು ಇರುವೆ ಸೂಪ್, ಚಟ್ನಿ ಸೇವಿಸುವ ಬುಡಕಟ್ಟು ಜನರು
ಒಡಿಶಾ ಹಾಗೂ ಛತ್ತೀಸ್ ಗಡ ರಾಜ್ಯಗಳ ಹಲವು ಬುಡಕಟ್ಟು ಸಮುದಾಯಗಳು ಕೆಂಪು ಇರುವೆ ಚಟ್ನಿಯನ್ನು ಯಥೇಚ್ಛವಾಗಿ ಸೇವಿಸುತ್ತಾರೆ. ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಆಯಾಸ ಇತರೆ ಆರೋಗ್ಯ ಸಮಸ್ಯೆಗಳ ನಿವಾರಣೆಗೆಂದು ಸೂಪ್ ನಲ್ಲಿಯೂ ಕೆಂಪು ಇರುವೆಗಳನ್ನು ಬಳಸುತ್ತಾರೆ. ಅವರ ಆರೋಗ್ಯ ಸದೃಢವಾಗಿರಲು ಇದು ಮುಖ್ಯ ಕಾರಣ ಎನ್ನಲಾಗಿದೆ.
ಜೂನ್ ತಿಂಗಳಿನಲ್ಲಿ ಪ್ರಸ್ತಾಪ
ಕೊರೊನಾ ವೈರಸ್ ಗೆ ಕೆಂಪು ಇರುವೆ ಚಟ್ನಿ ಬಳಕೆ ಕುರಿತು ಮೊದಲು ಬಾರಿಪಾದ ಎಂಜಿನಿಯರ್ ಹಾಗೂ ಸಂಶೋಧಕ ನಯಾದರ್ ಪದಿಯಾಲ್ ಜೂನ್ ತಿಂಗಳಿನಲ್ಲಿ ಪ್ರಸ್ತಾಪ ಮಾಡಿದ್ದರು. ನಂತರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಕುರಿತು ಯಾವುದೇ ಅಭಿಪ್ರಾಯಕ್ಕೆ ಬರುವ ಮೊದಲು, ಸಂಶೋಧನೆ ನಡೆಸಿ ಮೂರು ತಿಂಗಳ ಒಳಗೆ ಅರ್ಜಿದಾರರಿಗೆ ಸೂಕ್ತ ಆದೇಶ ತಿಳಿಸಿ ಎಂದು ನ್ಯಾಯಪೀಠ ಹೇಳಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸುವುದೇ ಕೆಂಪು ಇರುವೆ ಚಟ್ನಿ?
ಪದಿಯಾಲಾ ಪ್ರಕಾರ, ಈ ಕೆಂಪು ಇರುವೆ ಚಟ್ನಿಯಲ್ಲಿ ಫಾರ್ಮಿಕ್ ಆಮ್ಲ, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು ಮತ್ತು ಕಬ್ಬಿಣದ ಅಂಶಗಳಿವೆ. ಈ ಎಲ್ಲಾ ಅಂಶಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ ಎನ್ನಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ, ಛತ್ತೀಸ್ ಗಡ, ಆಂಧ್ರ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಮೇಘಾಲಯದಲ್ಲಿ ಬುಡಕಟ್ಟು ಜನಾಂಗ ಈ ಕೆಂಪು ಇರುವೆಯನ್ನು ಸೇವಿಸುವುದು ರೂಢಿ. ಇದೇ ಅವರ ಆರೋಗ್ಯದ ಗುಟ್ಟು ಎನ್ನಲಾಗಿದೆ. ಬುಡಕಟ್ಟು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳದಿರಲು ಇದೂ ಕಾರಣವಾಗಿರಬಹುದು ಎಂದಿದ್ದಾರೆ. ಹೀಗಾಗಿ ಕೊರೊನಾ ವಿರುದ್ಧ ಹೋರಾಡಲು ಕೆಂಪು ಇರುವೆ ಚಟ್ನಿ ಪರಿಣಾಮಕಾರಿಯೇ ಎಂಬ ಕುರಿತು ಸಂಶೋಧನೆ ನಡೆಸಲು ಸೂಚಿಸಲಾಗಿದೆ.