ಅಂಗೈಯಲ್ಲಿ ಫೋನ್ ಇದೆ ಎಂದು ಸಂದೇಶ ರವಾನಿಸುವ ಮುನ್ನ ಓದುವಿರಾ ಈ ಸಂದೇಶ?
ಅದೊಂದು ಕಾಲವಿತ್ತು, ಊರಿನಲ್ಲಿ, ಪರವೂರಿನಲ್ಲಿ ಇರುವ ಬಂಧು ಬಾಂಧವರಿಗೆ ದೂರವಾಣಿ ಕರೆ ಮಾಡಲು ಗಂಟೆ ಗಟ್ಟಲೆ ಕಾಯಬೇಕಿತ್ತು. ಪತ್ರ ತಲುಪಿಸಲು ದಿನಗಟ್ಟಲೆ ವಾರ ಗಟ್ಟಲೆ.... ಆದರೂ ಕರೆ ಮಾಡುತ್ತಿದ್ದೆವು.
ಪತ್ರ ಬರೆಯುತ್ತಿದ್ದೆವು, ಬಹಳ ಪ್ರೀತಿಯಿಂದ, ವಿಶ್ವಾಸದಿಂದ.. ಈಗೊಂದು ಕಾಲ ಬಂದಿದೆ ನೋಡಿ ಎಲ್ಲವೂ ಪಡೆದಿವೆ, ಮಿಂಚಿನ ವೇಗ. ಎಲ್ಲರ ವಿಳಾಸಗಳು, ದೂರವಾಣಿ ಅಂಕೆಗಳು, ಬೆರಳ ತುದಿಯಲ್ಲಿ. ಆದರೂ ಬರೆಯುವ ಅಭ್ಯಾಸ ಬಿಟ್ಟೇ ಹೋಗಿದೆ.
'ಟಿಕ್ಟಾಕ್ ಮನರಂಜನಾ ಆಪ್, ಬ್ಯಾನ್ ಆತುರದ ನಿರ್ಧಾರ': ನಟಿ-ಸಂಸದೆ ನುಸ್ರತ್
ಅಂಕೆ ಸಂಖ್ಯೆಗಳು ಮರೆತೇ ಹೋಗಿವೆ. 'ಹತ್ತಿರವಿದ್ದು ದೂರ ನಿಲ್ಲುವೆವು' ಎಂಬ ಕವಿವಾಣಿಯನ್ನು ಈಗ ಇಲ್ಲಿ ಬಳಸಿದರೆ ತಪ್ಪಿಲ್ಲ ಅಲ್ಲವೇ?
ಯಾರೋ ಯಾರಿಗಾಗಿಯೋ ಯಾವಾಗಲೋ ರೂಪಿಸಿದ ಸಂದೇಶಗಳನ್ನು ಅವರಿವರಿಗೆ ಹಂಚಿ ಧನ್ಯರಾಗುವ ಜನರೇ ಕಾಣಸಿಗುತ್ತಿದ್ದಾರೆ. ಸ್ವಂತಿಕೆಯನ್ನು ಮರೆಯುತ್ತಿದ್ದಾರೆ. ಎಲ್ಲವೂ ಮೊದಲೇ ಸಿದ್ಧವಾಗಿರಬೇಕು ಇವರಿಗೆ. ಸಿದ್ಧ ಉಡುಪುಗಳು, ಸಿದ್ಧಗೊಳಿಸಿದ ಆಹಾರ, ಸಿದ್ಧಪಡಿಸಿದ ಪಾಠ ಪ್ರವಚನಗಳು, ಸಿದ್ಧ ಸಂದೇಶಗಳು, ವಿಡಿಯೋ ತುಣಕುಗಳು...
ನಾವೇ ಇವರಿಗೆ ಮೊದಲು ಕಳಿಸಿದ್ದು ಎಂದು ಅವರು ಕಳಿಸುತ್ತಾರೆ. ಆದರೆ ಸಂದೇಶ ಸ್ವೀಕರಿಸಿದವರಿಗೆ ಅದು ನಾಲ್ಕಾರು ಕಡೆಗಳಿಂದ ಆಗಲೇ ತಲುಪಿರುತ್ತದೆ. ಸಂದೇಶವನ್ನು ನೋಡಿದ್ದು ಕಳಿಸಿದವರಿಗೆ ಗೊತ್ತಾಗುತ್ತದೆ ಎಂಬ ಮುಲಾಜಿಗೆ ಒಳಗಾಗಿ ಅದಕ್ಕೆ ಪ್ರತಿಕ್ರಿಯಿಸುವುದು.
ಹೀಗೆ ಮಾಡಿದ ಕೆಲಸವನ್ನೇ ಮಾಡುತ್ತಾ ಕೂಡುವುದೇ ಒಂದು ದೊಡ್ಡ ಕೆಲಸ. ಇಷ್ಟೆಲ್ಲಾ ಸಾಲದು ಅಂತ, ಈ ಸಂದೇಶವನ್ನು ಎಂಟು ಜನರಿಗೆ ಕಳುಹಿಸಿ, ಹನ್ನೊಂದು ಜನರಿಗೆ ಕಳುಹಿಸಿ ಅದು ಸಿಗುತ್ತದೆ, ಇದು ಸಿಗುತ್ತದೆ ಎನ್ನುವ ಭಾವುಕ ಜನರ ಸಂದೇಶಗಳು ಒಂದೇ ಎರಡೇ..
ಭಾವುಕತೆ, ಹೃದಯವಂತಿಕೆ, ರೋಚಕತೆ ಇವೆಲ್ಲವೂ ಕಳೆದುಹೋಗುತ್ತವೆಯೇ? ಭಾಷಾಪ್ರೇಮ, ಭಾಷಾ ಸೌಂದರ್ಯ ನಶಿಸಿ ಹೋಗುತ್ತವೆಯೇ? ಖಂಡಿತಾ ಇಲ್ಲ. ಈ ಗೊಂದಲಗಳ ನಡುವೆಯೂ ಆಶಾಕಿರಣ ಗೋಚರಿಸುತ್ತಿದೆ. ಅಲ್ಲೊಬ್ಬರು ಇಲ್ಲೊಬ್ಬರು ಹೃದಯವಂತರು ತಮ್ಮ ಮನದ ಮಾತುಗಳ ಸರಮಾಲೆಯ ಪೋಣಿಸಿ, ಭಾವ ಸಂದೇಶಗಳನ್ನು ರಚಿಸಿ ಕಳಿಸುವ ಭಾವುಕತೆಯನ್ನು ಉಳಿಸಿ ಕೊಂಡಿದ್ದಾರೆ ಎನ್ನುವುದೇ ಸಂತೋಷದ ಸಂಗತಿ.
ಮಿತ್ರೋ ಆಪ್ಗೆ ಮತ್ತೆ ಅನುಮೋದನೆ ನೀಡಿದ ಗೂಗಲ್ ಪ್ಲೇ ಸ್ಟೋರ್
ಹೀಗೆ ಸಂದೇಶ ಬರೆಯುವ ಸಂದರ್ಭದಲ್ಲಿ ಸಂದೇಶವನ್ನು ಪಡೆಯುವ ಜನರ ಜೊತೆ ಒಂದು ತಾದಾತ್ಮ್ಯ ಭಾವ ಮೂಡುತ್ತದೆ, ಅದಕ್ಕೊಂದು ಬೆಲೆ ಬರುತ್ತದೆ ಎಂದು ನನಗೆ ಅನಿಸುತ್ತದೆ. ಜೆಟ್ ವೇಗದ ಈ ಪ್ರಪಂಚದಲ್ಲಿ ಸಿದ್ಧವಾಗಿ ಏನು ಸಿಗುತ್ತದೆಯೋ ಅದಕ್ಕೆ ಕೈ ಚಾಚಿ ಕೆಲಸ ಮುಗಿಸಿಬಿಡುವ ಅನಿವಾರ್ಯತೆ ಇದೆ.
ಇದು ತಪ್ಪು ಅಥವಾ ಸರಿ ಎಂದು ತೋರಿಸುವುದು ನನ್ನ ಉದ್ದೇಶವಲ್ಲ. ಆದರೆ ಆ ಅನಿವಾರ್ಯತೆಯಿಂದ ಆಚೆ ಬರಲು ಪ್ರಯತ್ನಿಸಿ, ಪ್ರತಿ ದಿನ ಕನಿಷ್ಠ ನಾಲ್ಕೈದು ಸಂದೇಶಗಳನ್ನು ನಿಮ್ಮ ಪ್ರೀತಿ ಪಾತ್ರರಿಗಾಗಿ ನೀವೇ ರಚಿಸಿ, ಕಳಿಸಿ. ನಿಮ್ಮ ಸೃಜನಶೀಲತೆಯನ್ನೂ ಭಾಷಾ ಜ್ಞಾನವನ್ನೂ ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಿ ಎನ್ನುವುದೊಂದು ವಿನಂತಿ.