ಜೆ. ಪಿ. ನಗರದಲ್ಲೊಂದು ಪಕ್ಕಾ ಪಂಜಾಬಿ ಹೋಟೆಲ್; ಹೆಸರು ಬಾಬಾ ಚಾಟ್ಕೋರಾ
ಊಟದ ನಂತರವೂ ನಾಲಗೆಯನ್ನು ಬಿಟ್ಟು ಕದಲದ ಬೆಣ್ಣೆಯ ಸ್ವಾದ, ಮೃದುಮೃದುವಾದ ಪನ್ನೀರ್, ಇಷ್ಟು ದಪ್ಪದ ಅಮೃತಸರಿ ಬಾಬಾ ಚಾಟ್ಕೋರಾ ಕುಲ್ಚಾ... ಅಂದುಕೊಂಡಿದ್ದಕ್ಕಿಂತ ಅದ್ಭುತವಾಗಿದ್ದ ಲಸ್ಸಿ... ಈ ವಾರ ಹೇಳಿಕೊಳ್ಳುವುದಕ್ಕೆ ಊಟದ ಬಗ್ಗೆ ಎಷ್ಟೊಂದು ವಿಚಾರ ಇದೆ ಗೊತ್ತಾ?
ಈಗ ಹೇಳಲು ಹೊರಟಿರುವುದು ಬೆಂಗಳೂರಿನ ಜೆ. ಪಿ. ನಗರದ ಇಪ್ಪತ್ತನೇ ಮುಖ್ಯರಸ್ತೆಯಲ್ಲಿ ಇರುವ ಬಾಬಾ ಚಾಟ್ಕೋರಾದ ಬಗ್ಗೆ. ರಂಗಶಂಕರ ಇದೆಯಲ್ಲಾ, ಅದರ ಹಿಂಭಾಗದಲ್ಲೇ ಇದೆ ಈ ಬಾಬಾ ಚಾಟ್ಕೋರಾ ಹೋಟೆಲ್. ಪಂಜಾಬಿ ಶೈಲಿಯ ಶುದ್ಧ ಶಾಕಾಹಾರ ಊಟ ಮಾಡಲು ಇಷ್ಟ ಪಡುವವರು ಒಂದು ಸಲ ಭೇಟಿ ನೀಡಬೇಕು ಇಲ್ಲಿಗೆ.
ಜಯನಗರ ಸಬ್ಜ್ ಹೋಟೆಲ್ ನ ಬೊಂಬಾಟ್ ಊಟ ಇನ್ನೂ ಮಾಡಿಲ್ವ!
ಇದರ ಮಾಲೀಕರಲ್ಲಿ ಒಬ್ಬರಾದ ಅಶ್ವಿನ್ ಆಕಲ್ವಾಡಿ ಅವರು ನಮಗೆ ಮಾತಿಗೆ ಸಿಕ್ಕರು. ಆ ಕಾರಣಕ್ಕೆ ವಿಶಿಷ್ಟ ಸ್ವಾದ- ರುಚಿಗೆ ಕಾರಣ ಏನು ಎಂಬ ವಿಚಾರ ಕೂಡ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ರೆಸ್ಟೋರೆಂಟ್ ನಲ್ಲಿ ಗ್ಯಾಸ್ ಒಲೆ ಬಳಸುವುದಿಲ್ಲ, ಬದಲಿಗೆ ಇದ್ದಿಲು ಒಲೆ ಇದೆ. ಉತ್ತರ ಭಾರತದಿಂದ ನಿರ್ದಿಷ್ಟ ಗುಣಮಟ್ಟದ ಆಲೂಗಡ್ದೆ, ಇಂಥದ್ದೇ ಪನ್ನೀರ್ ಎಂದು ಖರೀದಿಸಲಾಗುತ್ತದೆ ಎಂದು ಹೇಳಿದರೆ ವಿನಾ ಎಲ್ಲೆಲ್ಲಿಂದ ಬರುತ್ತವೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.
ಲಸ್ಸಿ ರುಚಿಯ ಗುಟ್ಟು ಬಿಟ್ಟುಕೊಡಲೇ ಇಲ್ಲ
ಇನ್ನು ಲಸ್ಸಿಯ ರುಚಿ ಬಗ್ಗೆ ಬರೆದರೆ ಅದೇ ಪ್ರತ್ಯೇಕ ಲೇಖನ ಆಗಿಬಿಡುತ್ತದೆ. ಏಕೆಂದರೆ, ಅದಕ್ಕೆ ಬಳಸುವ ಹಾಲು ಬೇರೆ. ಅದರ ಬೆಲೆ ದುಬಾರಿ. ಅದಕ್ಕೆ ತಕ್ಕಂತೆ ಅಮೃತ ಎನಿಸುವಂಥ ಲಸ್ಸಿ ಎದುರಿಗಿತ್ತು. ಇದಕ್ಕೆ ಬಳಸುವ ಹಾಲು ಯಾವುದು, ಅದನ್ನಾದರೂ ಹೇಳಿ ಅಂದರೆ ಅಶ್ವಿನ್ ಅವರದು ಮತ್ತದೇ ನಗು. ಒಟ್ಟಿನಲ್ಲಿ ಗುಟ್ಟು ಬಿಟ್ಟುಕೊಡುವುದಿಲ್ಲ ಎಂದು ಶಪಥ ಮಾಡಿದಂತಿದ್ದರು.
ಡಾಬಾ ಶೈಲಿಯ ಅನುಭವದ ಜತೆಗೆ ಏಸಿ, ಸುಮಧುರ ಸಂಗೀತ
ಒಳಗೆ ಹೋದರೆ ಪಂಜಾಬಿ ಡಾಬಾ ಶೈಲಿಯ ಅನುಭವ ನೀಡುವ ಹಾಗೂ ಜತೆಗೆ ಏಸಿ, ಸುಮಧುರ ಸಂಗೀತವೂ ಇರುವ ವಿಭಿನ್ನ- ವಿಶಿಷ್ಟ ಹೋಟೆಲ್ ಇದು. ದಹೀ ಕಿ ಕಬಾಬ್, ಅಫ್ಗಾನಿ ಚಾಪ್ ಸೋಯಾ, ಲಾಲ್ ಮಿರ್ಚ್ ಪನ್ನೀರ್ ಟಿಕ್ಕಾ, ಸೋಯಾ ಮಲಾಯ್ ಚಾಪ್, ಚೋಲೆ ಮಸಾಲ, ರಾಜ್ ಮಾ, ದಾಲ್ ಮಕಾನಿ... ಹೀಗೆ ತಿಂದ ಬಟ್ಟಲುಗಳು ಎತ್ತರೆತ್ತರ ಆಗುತ್ತಾ ಸಾಗಿತು.
ಅಮೃತ್ ಸರಿ ಕುಲ್ಚಾ- ಖಟ್ಟಾ ಮೀಟಾ ಚಟ್ನಿ
ಅಶ್ವಿನ್ ಆಕಲ್ವಾಡಿ ಅವರು ಹೋಟೆಲ್ ನ ಆಹಾರ ಪದಾರ್ಥಗಳ ವಿಶೇಷತೆಗಳನ್ನು ಸಹ ಹೇಳುತ್ತಾ ಹೋದರು. ಅಲ್ಲಿದೆಯಲ್ಲಾ, ಖಟ್ಟಾ ಮೀಟಾ ಚಟ್ನಿ ಅದನ್ನು ಟ್ರೈ ಮಾಡಿ ಅಂದರು. ಅದನ್ನು ಕೊಡುವುದು ಅಮೃತ್ ಸರಿ ಕುಲ್ಚಾ ಜತೆಗಂತೆ. ನಾನಾ ಬಗೆಯ ಕುಲ್ಚಾಗಳಿಗೆ ವಿವಿಧ ರೀತಿಯ ಚಟ್ನಿಗಳು. ಈ ಖಟ್ಟಾ ಮೀಟಾ ಚಟ್ನಿಯ ವಿಶೇಷ ಅಂದರೆ ಪಾನಿ ಪೂರಿಯವರು ಪಾನಿ ಕೊಡ್ತಾರಲ್ಲಾ, ಅದೇ ಪಾನಿಯನ್ನು ಗಟ್ಟಿಯಾಗಿ ಚಟ್ನಿ ಥರ ಮಾಡಿದರೆ ಹೇಗಿರಬಹುದು? ಹಾಗಿತ್ತು ರುಚಿ. ಹೇಳುವುದಕ್ಕಿಂತ ಒಂದು ಸಲ ಟ್ರೈ ಮಾಡಬೇಕು.
ಮಧ್ಯಾಹ್ನ ಹನ್ನೆರಡರಿಂದ ರಾತ್ರಿ ಹನ್ನೊಂದರ ತನಕ
ಇನ್ನು ಈ ಹೋಟೆಲ್ ಗೆ ಯಾಕೆ ಹೋಗಬೇಕು ಅಂತ ತಿಳಿದುಕೊಳ್ಳಬೇಕು ಅಲ್ಲವಾ? ಇಲ್ಲಿ ತಯಾರಿಸುವುದು ಶುದ್ಧಾನುಶುದ್ಧ ಪಂಜಾಬಿ ಅಡುಗೆಗಳು. ಬೆಣ್ಣೆ, ಮೊಸರು, ಪನ್ನೀರ್ ಯಥೇಚ್ಛವಾಗಿ ಇರುತ್ತವೆ. ಕುಲ್ಚಾಗಳು, ರಾಜ್ ಮಾ, ದಾಲ್ ಮಕಾನಿ ಇಂಥವೆಲ್ಲ ಬೇರೆಲ್ಲೇ ತಿನ್ನುವುದಕ್ಕಿಂತ ಪೂರ್ತಿ ಡಿಫರೆಂಟ್. ವಾರದ ಎಲ್ಲ ದಿನ ಮಧ್ಯಾಹ್ನ ಹನ್ನೆರಡರಿಂದ ರಾತ್ರಿ ಹನ್ನೊಂದು ಗಂಟೆ ತನಕ ತೆಗೆದಿರುತ್ತದೆ. ಅಂದ ಹಾಗೆ ಸಸ್ಯಾಹಾರಿಯಲ್ಲಿ ವೆರೈಟಿ ಪ್ರಯತ್ನಿಸಬೇಕು ಅನ್ನೋರು ಇಲ್ಲಿ ಖಂಡಿತಾ ಒಮ್ಮೆ ಟ್ರೈ ಕೊಡಬಹುದು. ಇನ್ನು ಇಲ್ಲಿ ಹೇಳಿರುವುದನ್ನು ಬಿಟ್ಟು, ಬೆರಳು ಮಡಚಿ ಲೆಕ್ಕ ಇಡಲಾಗದಷ್ಟು ಆಹಾರ ಖಾದ್ಯಗಳಿವೆ. ಇನ್ನು ಜೈನ್ ಶೈಲಿಯಲ್ಲಿ ಕೂಡ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ.