ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
'ಭಾರತ ಪ್ರಕಾಶಿಸುತ್ತಿದೆ' ಎಂಬ ಎನ್ಡಿಎ ಸರ್ಕಾರದ ಜಾಹೀರಾತಿಗೆ ನಿಜವಾಗುವಂತೆ ಮಾಡಿದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಆರ್ಥಿಕ ಭದ್ರತೆಗಾಗಿ ಹಾಕಿದ ಬುನಾದಿಯನ್ನು ಮರೆಯುವಂತಿಲ್ಲ.
ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡ ವಾಜಪೇಯಿ ಅವರು, ಐದು ವರ್ಷಗಳ ಕಾಲ ಅಧಿಕಾರ ಅವಧಿ ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾಗಿದ್ದಾರೆ. 2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು.
ದೇಶದ ಆರ್ಥಿಕ ಪ್ರಗತಿಗಾಗಿ ಪಿವಿ ನರಸಿಂಹರಾವ್ ಅವರು 1991ರಲ್ಲಿ ಕೈಗೊಂಡ ನಿರ್ಣಯಗಳು, ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ರಮಗಳನ್ನು ಪರಿಗಣಿಸಿ ದೇಶದ ಪ್ರಗತಿಗಾಗಿ ವಾಜಪೇಯಿ ಹಲವು ಯೋಜನೆಗಳನ್ನು ರೂಪಿಸಿದರು.
ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು
ಮೈತ್ರಿ ಸರ್ಕಾರಗಳಿಂದ ಕೂಡಾ ಸರ್ಕಾರ ಆಡಳಿತ ಸಾಧ್ಯ ಎಂದು ತೋರಿಸಿಕೊಟ್ಟರು. ಜಾಗತಿಕವಾಗಿ ಭಾರತವನ್ನು ಸಮರ್ಥ ದೇಶವಾಗಿ ನೋಡಲು ಸಾಧ್ಯವಾಗುವಂಥ ಪರಿಸ್ಥಿತಿ ತಂದರು. ಪ್ರಧಾನಿಯಾಗಿ ವಾಜಪೇಯಿ ಅವರು ಐದು ಅವರ ಆರ್ಥಿಕ ಸಾಧನೆಗಳು ಇಲ್ಲಿವೆ:
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
1. ದೇಶದ ಪ್ರಗತಿಗಾಗಿ ಸಮಗ್ರ ಯೋಜನೆಗಳು
ದೇಶದೆಲ್ಲೆಡೆ ಸಮಗ್ರ ಅಭಿವೃದ್ಧಿಗಾಗಿ ಕೈಗೊಂಡ ರಸ್ತೆ ನಿರ್ಮಾಣ ಯೋಜನೆಗಳ ಫಲವನ್ನು ಈಗ ದೇಶ ಕಾಣುತ್ತಿದೆ. ಸುವರ್ಣ ಚತುಷ್ಪಥ ಯೋಜನೆ, ಪ್ರಧಾನಮಂತ್ರಿ ಗ್ರಾಮ ರಸ್ತೆ ಯೋಜನೆ ಮುಖ್ಯವಾದವು. ಸುವರ್ಣ ಚತುಷ್ಪಥದಲ್ಲಿ ಚೆನ್ನೈ, ಕೋಲ್ಕತಾ, ದೆಹಲಿ ಹಾಗೂ ಮುಂಬೈ ನಗರಗಳಾನ್ನು ಹೆದ್ದಾರಿಗಳ ಜಾಲದ ಮೂಲಕ ಬೆಸೆಯಲಾಗಿದೆ. ಗ್ರಾಮೀಣ ರಸ್ತೆಗಳನ್ನು ಬೆಸೆಯುವ ಯತ್ನದಲ್ಲಿ ಸಫಲ ಕಂಡಿದ್ದು, ಆರ್ಥಿಕ ಪ್ರಗತಿಗೆ ಕಾರಣವಾಯಿತು.
2. ಖಾಸಗೀಕರಣ
ಆಡಳಿತದಲ್ಲಿ ಪಾರದರ್ಶಕತೆ ಜತೆಗೆ ಅಧಿಕಾರ ವಿಕೇಂದ್ರಕರಣ, ಖಾಸಗೀಕರಣಕ್ಕೂ ಒತ್ತು ನೀಡಿದರು. ಭಾರತ್ ಅಲ್ಯುಮಿನಿಯಂ ಕಂಪನಿ(BALCO) ಹಾಗೂ ಹಿಂದೂಸ್ತಾನ್ ಜಿಂಕ್, ಇಂಡಿಯನ್ ಪೆಟ್ರೋಕೆಮಿಕಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ವಿಎಸ್ಎನ್ಎಲ್ ನಲ್ಲಿ ಹೂಡಿಕೆ ಹಿಂತೆಗೆತ ಪ್ರಮುಖ ನಿರ್ಧಾರವಾಗಿತ್ತು. ಅಂದು ವಾಜಪೇಯಿ ಸರ್ಕಾರ ಇಟ್ಟ ಹೆಜ್ಜೆ ಇಂದಿನ ಮೋದಿ ಸರ್ಕಾರಕ್ಕೆ ಮಾದರಿ ಪ್ರತಿಯಾಯಿತು.
3. ವಿತ್ತೀಯ ಕೊರತೆ ಮೇಲೆ ನಿಗಾ
ವಾಜಪೇಯಿ ಸರ್ಕಾರ ಹೊರ ತಂದ ವಿತ್ತೀಯ ಜವಾಬ್ದಾರಿ ಕಾಯ್ದೆ ಮೂಲಕ ವಿತ್ತೀಯ ಕೊರತೆ ಮೇಲೆ ನಿಗಾ ಇರಿಸಲಾಯಿತು. ಸಾರ್ವಜನಿಕ ವಲಯದ ಉಳಿತಾಯ -0.8% ಜಿಡಿಪಿ (ಆರ್ಥಿಕ ವರ್ಷ 2000) ರಿಂದ 2005ರ ಆರ್ಥಿಕ ವರ್ಷದಲ್ಲಿ 2.3%ಕ್ಕೇರಿತು
4. ಟೆಲಿಕಾಂ ಕ್ರಾಂತಿ
ವಾಜಪೇಯಿ ಸರ್ಕಾರ ಹೊರ ತಂದ ಟೆಲಿಕಾಂ ನೀತಿ ದೇಶದಲ್ಲಿ ಹೊಸ ಕ್ರಾಂತಿ ಮಾಡಿತು. ಆದಾಯ ಹಂಚಿಕೆ ವ್ಯವಸ್ಥೆಯನ್ನು ತಂದು ಟೆಲಿಕಾಂ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧ್ಯವಾಯಿತು. ಭಾರತ್ ಸಂಚಾರ್ ನಿಗಮ ನಿಯಮಿತ ಪ್ರತ್ಯೇಕ ನಿಯಮಾವಳಿಗಳನ್ನು ರೂಪಿಸಿತು. ವಿದೇಶ್ ಸಂಚಾರ್ ನಿಗಮ್ ನಿಯಮಿತ ಹೊಂದಿದ್ದ ಏಕಸ್ವಾಮ್ಯತೆಯನ್ನು ಮುರಿಯಲಾಯಿತು. ದೇಶದೆಲ್ಲೆಡೆ ಟೆಲಿಕಾಂ ಜಾಲ ವಿಸ್ತರಣೆಗೊಂಡಿತು.
5. ಸರ್ವ ಶಿಕ್ಷ ಅಭಿಯಾನ
6 ರಿಂದ 14 ವರ್ಷ ವಯಸ್ಸಿನ ತನಕ ಉಚಿತ ಪ್ರಾಥಮಿಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೆ ತಂದು ಕ್ರಾಂತಿ ಮಾಡಲಾಯಿತು. 2001ರಲ್ಲಿ ಚಾಲನೆ ಸಿಕ್ಕಿ ಯಶಸ್ಸುಗೊಂಡಿತು. ಶಾಲೆ ಬಿಟ್ಟು ತೆರಳುವವರ ಸಂಖ್ಯೆ ಶೇ 60ರಷ್ಟು ಕಡಿಮೆಯಾಯಿತು.