ಜೈಲುವಾಸಿ ಮಗ ಎಂಎಲ್ಎ ಆಗಲು 84 ವರ್ಷ ವಯಸ್ಸಿನ ತಾಯಿಯ ಶ್ರಮ ಸಾರ್ಥಕ
ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಸಾಮಾಜಿಕ ಹೋರಾಟಗಾರ ಅಖಿಲ್ ಗೊಗಾಯಿ ಅವರು ಜೈಲಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅಸ್ಸಾಂ ರಾಜ್ಯದ ಮೊದಲ ಶಾಸಕ ಎನಿಸಿಕೊಂಡಿದ್ದಾರೆ.
ಸದ್ಯ ಜೈಲಿನಲ್ಲಿರುವ ಅಖಿಲ್ ಅವರು ಶಿವಸಾಗರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರಭಿ ರಾಜ್ಕೊವಾರಿ ಅವರನ್ನು 12,000 ಮತಗಳ ಅಂತರದಿಂದ ಅಖಿಲ್ ಸೋಲಿಸಿದ್ದಾರೆ. ಅಖಿಲ್ ಗೊಗಾಯಿ ಪರ ಪ್ರಚಾರ ನಡೆಸಿದ ಅವರ ತಾಯಿ ನೆಮ್ಮದಿಯಿಂದ ಮಗನ ಬರುವಿಕೆಗಾಗಿ ಕಾದಿದ್ದಾರೆ. ಈ ವಯಸ್ಸಿನಲ್ಲಿ ವಿಶ್ರಾಂತಿ ಜೀವನ ಅನುಭವಿಸುತ್ತಾ ಮನೆಯಲ್ಲಿರಬಹುದಾಗಿತ್ತು.
ಆದರೆ, ಮಗನ ಹೋರಾಟಕ್ಕೆ ಸಾಥ್ ನೀಡಲು 84 ವರ್ಷ ವಯಸ್ಸಿನ ಪ್ರಿಯಾದಾ ಗೊಗಾಯಿ ನಿರ್ಧರಿಸಿದರು. ಯುಎಪಿಎ ಕಾಯ್ದೆ ಉಲ್ಲಂಘನೆಯಡಿ ಡಿಸೆಂಬರ್ 2019ರಿಂದ ಬಂಧಿತರಾಗಿರುವ ಅಖಿಲ್ ಪರ ಬೆಂಬಲಿಗರನ್ನು ಪ್ರಿಯಾದಾ ಅವರು ಸಂಪರ್ಕಿಸಿ, ಒಟ್ಟುಗೂಡಿಸಿ, ಕ್ಷೇತ್ರದ ಜನರ ಬಳಿ ತೆರಳಿದರು. ಪ್ರಿಯಾದಾ ಅವರ ಮನವಿಗೆ ಪುರಸ್ಕರಿಸಿದ ಜನತೆ ಇಂದು ಗೆಲುವು ಕೊಟ್ಟಿದ್ದಾರೆ.
126 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನ ಗಳಿಸಿದ್ದು, ಮತ್ತೆ ಅಧಿಕಾರಕ್ಕೇರಿದೆ. ಕಾಂಗ್ರೆಸ್ 29 ಸ್ಥಾನ, ಎಐಯುಡಿಜಿ, ಎಜಿಪಿ 16 ಹಾಗೂ 9 ಸ್ಥಾನ ಪಡೆದುಕೊಂಡಿದೆ. ಬಿಡಿಎಫ್, ಸಿಪಿಐ(ಎಂ) ಹಾಗೂ ಯುಪಿಪಿಎಲ್ ಕ್ರಮವಾಗಿ 4,1 ಹಾಗೂ 6 ಸ್ಥಾನ ಗಳಿಸಿವೆ.
ಜೈಲಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ
ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರಚೋದನಕಾರಿ ಭಾಷಣ, ಪ್ರತಿಭಟನೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಅಖಿಲ್ ಅವರು ಜೈಲಿಗೆ ಹೋಗಬೇಕಾಯಿತು. ಮಾಹಿತಿ ಹಕ್ಕು ಕಾಯ್ದೆ ಹೋರಾಟಗಾರರಾಗಿರುವ 47 ವರ್ಷ ವಯಸ್ಸಿನ ಅಖಿಲ್ ಅವರು ರೈಜೋರ್ ದಳ ಎಂಬ ಹೊಸ ಪಕ್ಷವನ್ನು ಸ್ಥಾಪಿಸಿ, ಸ್ವತಂತ್ರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಜೈಲಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅಸ್ಸಾಂ ರಾಜ್ಯದ ಮೊದಲ ಶಾಸಕ ಎನಿಸಿಕೊಂಡಿದ್ದಾರೆ.
ವಯೋ ಸಹಜ ಅನಾರೋಗ್ಯ ಲೆಕ್ಕಿಸದ ಪ್ರಿಯದಾ
84 ವರ್ಷದ ಪ್ರಿಯದಾ ಗೊಗೊಯ್ ಅವರಿಗೆ ವಯೋ ಸಹಜ ಕಣ್ಣಿನ ತೊಂದರೆ ಇದೆ ಮತ್ತು ಹೃದಯದ ತೊಂದರೆಗಳಿವೆ. ಆದರೆ ಅವರ ಆತ್ಮವಿಶ್ವಾಸಕ್ಕೆ ಕಾರ್ಯಕರ್ತರು ಮಾರು ಹೋಗಿದ್ದಾರೆ. ಒಂದು ವರ್ಷದಿಂದ #FreeAkhilGogoi ಅಭಿಯಾನವನ್ನು ನಡೆಸುತ್ತಿರುವ ಈ ತಾಯಿ, ಜನತೆಯ ಅಭಿಪ್ರಾಯ ಸಿಕ್ಕಿರುವುದು ನ್ಯಾಯಾಲಯಕ್ಕೂ ತಲುಪಿ, ತನ್ನ ಮಗ ಸ್ವತಂತ್ರಗೊಳ್ಳುತ್ತಾನೆ ಎಂದು ಕಾದಿದ್ದಾರೆ. ವೃದ್ಧಾಪ್ಯದಲ್ಲಿ ಅವರ ಹೋರಾಟವು ಅನೇಕರಿಗೆ ಸ್ಪೂರ್ತಿದಾಯಕವಾಗಿ ಪರಿಣಮಿಸಿದೆ.
ಆರ್ ಟಿ ಐ ಕಾರ್ಯಕರ್ತ ಅಖಿಲ್ ನಿರಂತರ ಹೋರಾಟ
47 ವರ್ಷ ವಯಸ್ಸಿನ ರೈತ ಮುಖಂಡ, ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಅಖಿಲ್ ಅವರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಶಾನ್ಯರಾಜ್ಯಗಳಲ್ಲಿ ಪರಿಸರ ವಿರೋಧಿ ಅಣೆಕಟ್ಟು ನಿರ್ಮಾಣ ಯೋಜನೆ, ಭೂ ಹಗರಣಗಳ ವಿರುದ್ಧ ಹೋರಾಟ ನಡೆಸಿದ್ದಾರೆ. ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದರೆ 1.90 ಕೋಟಿ ಅಸ್ಸಾಮಿಗಳಿಗೆ ತೊಂದರೆಯಾಗಲಿದೆ. 1971ರ ಹಿಂದೂ ಬೆಂಗಾಲಿ ವಲಸಿಗರಿಗೆ ನೀಡಿದ್ದ ಪೌರತ್ವಕ್ಕೆ ಬೆಲೆ ಸಿಗುವುದಿಲ್ಲ ಎಂದು ಅಖಿಲ್ ವಿರೋಧ ವ್ಯಕ್ತಪಡಿಸಿದ್ದರು.
|
ಹೋರಾಟಗಾರ್ತಿ ಮೇಧಾ ಪಾಟ್ಕರ್ ಬೆಂಬಲ
ಅಸ್ಸಾಂ ವಿಧಾನಸಭೆ ಚುನಾವಣೆ 2021ರಲ್ಲಿ ಸ್ಪರ್ಧಿಸಿದ ಅಖಿಲ್ ಅವರ ಪರ ತಾಯಿ ಪ್ರಿಯೊದಾ ಗೊಗಾಯಿ ಪ್ರಚಾರ ನಡೆಸಿ, ತನ್ನ ಮಗನಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕಿದೆ ಎಂದು ಪ್ರಚಾರ ಭಾಷಣದಲ್ಲಿ ಕೇಳಿಕೊಂಡರು. ಹೋರಾಟಗಾರ್ತಿ ಮೇಧಾ ಪಾಟ್ಕರ್, ಸಂದೀಪ್ ಪಾಂಡೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು.
ಜನರ ಆಶೀರ್ವಾದದಿಂದ ನನ್ನ ಮಗ ಅಖಿಲ್ ಇಂದು ವಿಧಾನಸಭೆಗೆ ಆಯ್ಕೆಯಾಗಿದ್ದಾನೆ. ಈಗ ಜನರಿಗಾಗಿ ಕೆಲಸ ಮಾದಬೇಕಾಗಿದೆ. ಅಸ್ಸಾಂ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ, ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಿದೆ ಎಂದು ಅಖಿಲ್ ತಾಯಿ ಪ್ರಿಯೋದಾ ಪ್ರತಿಕ್ರಿಯಿಸಿದ್ದಾರೆ.