ಬಿಜೆಪಿಯೋ ಅಥವಾ ಎದುರಾಳಿಯೋ?: ಅಸ್ಸಾಂನಲ್ಲಿ ಬೋಡೊಲ್ಯಾಂಡ್ ಗೊಂದಲ
ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆಯ ಹಂತದ ಚುನಾವಣೆ ಮಂಗಳವಾರ (ಏ. 6) ನಡೆಯಲಿದೆ. ಅಧಿಕಾರಾರೂಢ ಬಿಜೆಪಿಯ ಆಡಳಿತವನ್ನು ಇಲ್ಲಿನ ಬುಡಕಟ್ಟು ಸಮುದಾಯಗಳು ಯಾವ ರೀತಿ ಒಪ್ಪಿಕೊಂಡಿವೆ ಅಥವಾ ತಿರಸ್ಕರಿಸಿವೆ ಎಂಬುದನ್ನು ಈ ಚುನಾವಣೆ ಬಹಿರಂಗಪಡಿಸಲಿದೆ.
ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದಲ್ಲಿ (ಬಿಟಿಆರ್) ಬೋಡೋ ಸಮುದಾಯ ಪ್ರಬಲವಾಗಿದೆ. ಅಸ್ಸಾಂನ ಅತಿ ದೊಡ್ಡ ಬಡುಕಟ್ಟು ಸಮುದಾಯವಾಗಿರುವ ಬೋಡೋ, ಒಟ್ಟಾರೆ ಜನಸಂಖ್ಯೆಯ ಶೇ 5-6ರಷ್ಟು ಪಾಲನ್ನು ಹೊಂದಿದೆ. ಇಲ್ಲಿ ಪ್ರಬಲವಾಗಿದ್ದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಜಾಗವನ್ನು ಬಿಜೆಪಿ ಆಕ್ರಮಿಸಿಕೊಳ್ಳುವ ಸೂಚನೆಗಳು ಕಂಡುವರುತ್ತಿದೆ. ಬೋಡೋಲ್ಯಾಂಡ್ ಪ್ರದೇಶದಲ್ಲಿ ಬಿಜೆಪಿಯ ಪ್ರವೇಶದ ಪ್ರಯತ್ನ ಬಹುದೊಡ್ಡ ಪರಿವರ್ತನೆಯ ಸೂಚನೆ.
"ಅಸ್ಸಾಂ ಸಮಾಜ ಒಡೆಯುವಂಥ ಪ್ರಚಾರ ಮಾಡುತ್ತಿದೆ ಬಿಜೆಪಿ"
ಕೊಕ್ರಜಾರ್, ಬಕ್ಸಾ, ಉದಲ್ಗುರಿ ಮತ್ತು ಚಿರಾಂಗ್ ಎಂಬ ನಾಲ್ಕು ಜಿಲ್ಲೆಗಳಲ್ಲಿ ಹರಡಿರುವ ಬಿಟಿಆರ್ನಲ್ಲಿ ಏಪ್ರಿಲ್ 6ರಂದು 12 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈಶಾನ್ಯದ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ಆಡಳಿತದ ಸ್ವಾಯತ್ತತೆ ಒದಗಿಸುವ ಸಂವಿಧಾನದ ಆರನೇ ಪರಿಚ್ಛೇದಕ್ಕೆ ಅನುಗುಣವಾಗಿ ಬಿಟಿಆರ್ನಲ್ಲಿ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಆಡಳಿತ ನಡೆಸುತ್ತಿದೆ.
ಈ ಎಲ್ಲಾ 12 ಸ್ಥಾನಗಳನ್ನು ಮಾಜಿ ಉಗ್ರ, ರಾಜಕಾರಣಿ ಹಗ್ರಾಮಾ ಮೊಹಿಲರಿ ನೇತೃತ್ವದ ಬಿಪಿಎಫ್ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಹಾಲಿ ಬಿಜೆಪಿ ಸರ್ಕಾರದ ಮಿತ್ರಪಕ್ಷವಾಗಿ ಮೂವರು ಕ್ಯಾಬಿನೆಟ್ ಮಂತ್ರಿಗಳನ್ನು ಹೊಂದಿದ್ದ ಬಿಪಿಎಫ್, ಚುನಾವಣೆಗೂ ಮುನ್ನ ಬಿಜೆಪಿಯಿಂದ ಬೇರ್ಪಟ್ಟು ಈಗ ಕಾಂಗ್ರೆಸ್ ನೇತೃತ್ವದ ಮಹಾಜೋತ್ ಜೊತೆ ಮೈತ್ರಿ ಮಾಡಿಕೊಂಡಿದೆ.
ಅತ್ತ ಬಿಜೆಪಿ ಆಲ್ ಬೋಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್ಯು) ಮಾಜಿ ಅಧ್ಯಕ್ಷ ಪ್ರೋಮೋಡ್ ಬೊರೊ ನೇತೃತ್ವದ ಯುಪಿಪಿಎಲ್ ಅನ್ನು ತನ್ನ ಹೊಸ ಮಿತ್ರಪಕ್ಷವನ್ನಾಗಿ ಪಡೆದುಕೊಂಡಿದೆ. ಬಿಟಿಆರ್ ವ್ಯಾಪ್ತಿಯ ನಾಲ್ಕು ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದರೆ, ಉಳಿದ ಎಂಟು ಸ್ಥಾನಗಳಿಗೆ ಯುಪಿಪಿಎಲ್ ಸ್ಪರ್ಧಿಸಲಿದೆ. ಅಲ್ಲದೆ ಈ ಎರಡೂ ಪಕ್ಷಗಳು ಮೂರು ಸ್ಥಾನಗಳಲ್ಲಿ 'ಸ್ನೇಹಪೂರ್ವಕ' ಸ್ಪರ್ಧೆಗಳಲ್ಲಿವೆ. ಇದರ ಗುರಿ ಬಿಪಿಎಫ್ ಮತ ಪ್ರಮಾಣವನ್ನು ಕಡಿತಗೊಳಿಸುವುದು. ಯುಪಿಪಿಎಲ್ ಸ್ಪರ್ಧಿಸದ ಏಕೈಕ ಸ್ಥಾನ ಪಾನೆರಿ. ಅಲ್ಲಿ ಬಿಜೆಪಿ ಮಾಜಿ ಬಿಪಿಎಫ್ ನಾಯಕ ಬಿಸ್ವಾಜಿತ್ ಡಿಯಾಮರಿ ಅವರನ್ನು ಕಣಕ್ಕಿಳಿಸಿದೆ.
ಜಾತ್ಯತೀತತೆ ಹಾಗೂ ಕೋಮುವಾದದ ಆಟ ದೇಶಕ್ಕೆ ಹಾನಿ ಮಾಡಿದೆ: ಮೋದಿ
ಈ 12 ಕ್ಷೇತ್ರಗಳ ಹೊರತಾಗಿ, ಬಿಪಿಎಫ್ ಇತರೆ 18 ಸ್ಥಾನಗಳಲ್ಲಿ ಕೂಡ ಬೃಹತ್ ಬೋಡೋ ಸಂಖ್ಯಾಬಲದೊಂದಿಗೆ ಬಿಜೆಪಿಗೆ ಸವಾಲೊಡ್ಡಿದೆ.
ಮಹಾಜೋತ್ ಮೈತ್ರಿಕೂಟದ ಪ್ರಾಬಲ್ಯವನ್ನು ಕಾಗದದ ಮೇಲೆ ಲೆಕ್ಕ ಹಾಕಿದರೆ ಭಾರಿ ಗಟ್ಟಿಯಾಗಿದೆ. ಬೋಡೋ ಮತಗಳನ್ನು ಬಿಪಿಎಫ್ ಮತ್ತು ಬಂಗಾಳಿ ಮಾತನಾಡುವ ಮುಸ್ಲಿಂ ಮತಗಳನ್ನು ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ಸೆಳೆದುಕೊಳ್ಳುತ್ತವೆ ಎಂಬ ನಿರೀಕ್ಷೆಯಿದೆ. ಆದರೆ ಈ ಎರಡೂ ಸಮುದಾಯಗಳು ಪರಸ್ಪರ ಕಡು ವಿರೋಧಿಗಳಾಗಿದ್ದವು ಎಂಬುದನ್ನು ಇತಿಹಾಸ ತೋರಿಸುತ್ತದೆ.
ಕೇಂದ್ರದೊಂದಿಗೆ ಶಾಂತಿ ಒಪ್ಪಂದದ ನಂತರ 2003 ರಲ್ಲಿ ಬಿಟಿಸಿ ರಚನೆಯಾದ ಸಂದರ್ಭದಿಂದ 2020ರವರೆಗೂ ಅಧ್ಯಕ್ಷರಾಗಿದ್ದ 'ಮುಖ್ಯಸ್ಥ' ಎಂದೇ ಹೆಸರಾಗಿರುವ ಹಗ್ರಾಮ ಮೊಹಿಲರಿ ಅವರ ಜನಪ್ರಿಯತೆಗೆ ಈ ಪ್ರದೇಶದಲ್ಲಿ ಸಾಟಿಯಿಲ್ಲ. ಅವರನ್ನು ಅನೇಕರು 'ದೇವರು' ಎಂದೇ ಪರಿಗಣಿಸುತ್ತಾರೆ.
2020ರ ಆರಂಭದಲ್ಲಿ ವ್ಯಾಪಕ ಪ್ರಚಾರ ಪಡೆದ ಕಾರ್ಯಕ್ರಮವೊಂದರಲ್ಲಿ, ಮೋದಿ ಸರ್ಕಾರವು ಬೋಡೋ ದಂಗೆಕೋರರೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು, ಅದರ ನಂತರ 1,600 ಕ್ಕೂ ಹೆಚ್ಚು ಉಗ್ರ ಸಂಘಟನೆಯ ಎನ್ಡಿಎಫ್ಬಿ ಶಸ್ತ್ರಾಸ್ತ್ರಗಳನ್ನು ಕೆಳಕ್ಕಿಟ್ಟಿತು. ಸಹಿ ಮಾಡಿದವರಲ್ಲಿ ಯುಪಿಪಿಎಲ್ನ ಪ್ರಮೋದ್ ಬೋರೊ ಕೂಡ ಇದ್ದರು.
ನಂತರ 2020 ರ ಡಿಸೆಂಬರ್ನಲ್ಲಿ ನಡೆದ ಬಿಟಿಸಿ ಚುನಾವಣೆಯಲ್ಲಿ, 40 ಸ್ಥಾನಗಳ ಪೈಕಿ ಯುಪಿಪಿಎಲ್ 12, ಬಿಜೆಪಿ ಒಂಬತ್ತು (2015 ರಲ್ಲಿ 1 ಸೀಟು ಇತ್ತು), ಬಿಪಿಎಫ್ 17, ಕಾಂಗ್ರೆಸ್ 1 (ಅಭ್ಯರ್ಥಿ ನಂತರ ಬಿಜೆಪಿಗೆ ಸೇರಿದರು) ಮತ್ತು ಇನ್ನೊಂದು ಪಕ್ಷ ಜಿಎಸ್ಪಿ 1 ಸ್ಥಾನಗಳನ್ನು ಗೆದ್ದಿದ್ದವು. ಬಿಪಿಎಫ್ ಅಧಿಕಾರಕ್ಕೆ ಬರದಂತೆ ತಡೆಯಲು ಬಿಜೆಪಿಯು ಯುಪಿಪಿಎಲ್ ಮತ್ತು ಜಿಎಸ್ಪಿ ಜೊತೆ ಕೈಜೋಡಿಸಿತ್ತು.
12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ರಾಜ್ಯಸಭೆಯ ಮಾಜಿ ಸಂಸದ ಮತ್ತು ಯುಪಿಪಿಎಲ್ ಸಂಸ್ಥಾಪಕ ಯು ಜಿ ಬ್ರಹ್ಮ ಹೇಳುತ್ತಾರೆ. "ಹಗ್ರಾಮ ಅವರಿಗೆ ಯಾವುದೇ ನೆಲೆ ಇಲ್ಲ, ಅವರು ಕಾಂಗ್ರೆಸ್ ಮತ್ತು ಎಐಯುಡಿಎಫ್ ಅನ್ನು ಅವಲಂಬಿಸಲಿದ್ದಾರೆ" ಎಂದು ಅವರು ಹೇಳುತ್ತಾರೆ. "ಜನರು ಈಗ ಸರ್ಕಾರದ ಪರವಾದ ಒಲವು ಹೊಂದಿದ್ದಾರೆ. ನಾವು ಬಿಟಿಸಿಯಲ್ಲಿ ಅಧಿಕಾರದಲ್ಲಿದ್ದೇವೆ ಮತ್ತು ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ರಚಿಸಲಿದೆ. ಜನರು ಗೆಲ್ಲುವಂತಹ ಮೈತ್ರಿಕೂಟಕ್ಕೆ ಮತ ಹಾಕುತ್ತಾರೆ'' ಎಂದಿದ್ದಾರೆ.
"ಯುಪಿಪಿಎಲ್ ಜನರನ್ನು ವಿಭಜಿಸುತ್ತಿಲ್ಲ ಅಥವಾ ಬೋಡೋ ಸಮುದಾಯದ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ. ಅದು ಬೋಡೋಲ್ಯಾಂಡ್ನಲ್ಲಿ ವಾಸಿಸುವ ಎಲ್ಲಾ ಸಮುದಾಯಗಳನ್ನೂ ಜತೆಗೆ ತೆಗೆದುಕೊಳ್ಳುತ್ತಿದೆ. ಹಗ್ರಾಮ ಅವರ ರಾಜಕೀಯ ವಿಭಜನೆಯ ಮತ್ತು ಬೋಡೋ ಕೇಂದ್ರಿತವಾಗಿದೆ. ಬೋಡೋಲ್ಯಾಂಡ್ನಲ್ಲಿ ರಕ್ತಪಾತಕ್ಕೆ ಆ ಚಿಂತನೆ ಕಾರಣವಾಗಿದೆ'' ಎಂದು ಆರೋಪಿಸಿದ್ದಾರೆ.
ಈ ಭಾವನೆ ಎಲ್ಲ ಸಮುದಾಯಗಳಲ್ಲಿ ಹರಡಿಕೊಂಡಿದೆ. ಬಂಗಾಳಿ ಭಾಷೆಯನ್ನು ಹೆಚ್ಚಾಗಿ ಮಾತನಾಡುವ ಜನಸಂಖ್ಯೆಯನ್ನು ಹೊಂದಿರುವ ಚಿರಾಂಗ್ ಜಿಲ್ಲೆಯ ಬಿಜ್ನಿ ಪಟ್ಟಣದಲ್ಲಿ, "ಬಿಟಿಆರ್ನಲ್ಲಿನ ಬೋಡೋಯೇತರ ಸುಮದಾಯಗಳು ಯುಪಿಪಿಎಲ್ಅನ್ನು ಸ್ವೀಕರಿಸಿವೆ" ಎಂದು ಸ್ಥಳೀಯ ಬಂಗಾಳಿ ಭಾಷಿಕ ಯುಪಿಪಿಎಲ್ ಮುಖಂಡ ಶುಕಮೊಲ್ ಮೊಲ್ಲಿಕ್ ಹೇಳುತ್ತಾರೆ.
ಮಹಾಜೋತ್ನಲ್ಲಿ ಎಐಯುಡಿಎಫ್ ಸಹಭಾಗಿತ್ವವನ್ನು ಸಮರ್ಥಿಸಿಕೊಳ್ಳುವ ಬಿಪಿಎಫ್, ಈ ವಾದವನ್ನು ನಿರಾಕರಿಸುತ್ತದೆ. "ಇದು ನಾವು ಬೋಡೋಸ್ ಬಗ್ಗೆ ಮಾತ್ರ ಒಲವು ಹೊಂದಿದ್ದೇವೆ ಎಂಬುದು ಬಿಜೆಪಿಯ ಪ್ರಚಾರವಾಗಿದೆ... ಮುಸ್ಲಿಮರು ಎಐಯುಡಿಎಫ್ಅನ್ನು ಬೆಂಬಲಿಸುತ್ತಾರೆ ಎಂಬ ಒಂದೇ ಕಾರಣಕ್ಕಾಗಿಯೇ ನಾವು ಅವರ ಜೊತೆ ಮೈತ್ರಿ ಮಾಡಿಕೊಳ್ಳಬಾರದೇ?" ಎಂದು ಬಿಪಿಎಫ್ ಹಿರಿಯ ಮುಖಂಡ ಕಂಪಾ ಬೊರ್ಗೊಯರಿ ಪ್ರಶ್ನಿಸುತ್ತಾರೆ.
ಬಿಜೆಪಿಯು ನಾಲ್ಕು ವಿಧಾನಸಭೆ ಸ್ಥಾನಗಳನ್ನು ತನಗಾಗಿ ಇರಿಸಿಕೊಳ್ಳುವ ಮೂಲಕ ಬಿಟಿಸಿಯಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಿದೆ. ಇದು ಇತರ ಮಿತ್ರಪಕ್ಷಗಳೊಂದಿಗೆ ಈ ಹಿಂದೆ ಮಾಡಿದಂತೆ ಯುಪಿಪಿಎಲ್ ಅನ್ನು ಕ್ರಮೇಣ ಸ್ವಾಧೀನಪಡಿಸಿಕೊಳ್ಳುವುದರ ಲಕ್ಷಣವಾಗಿದೆ ಎಂದು ಬಿಪಿಎಫ್ ನಾಯಕರು ಎಚ್ಚರಿಕೆ ನೀಡಿದ್ದಾರೆ.
''ನಾವು ಕಾಂಗ್ರೆಸ್ನೊಂದಿಗಿದ್ದಾಗ, ಅದು ಎಂದಿಗೂ ನಮ್ಮನ್ನು ಸೆಳೆದುಕೊಳ್ಳಲು ಪ್ರಯತ್ನಿಸಲಿಲ್ಲ. ಆದರೆ ಅದಕ್ಕಾಗಿ ಬಿಜೆಪಿ ಹಣ ಮತ್ತು ಸ್ನಾಯು ಶಕ್ತಿ ಎರಡನ್ನೂ ಬಳಸುತ್ತದೆ'' ಎಂದು ಬಿಪಿಎಫ್ನ ಬೋರ್ಗೊಯರಿ ಹೇಳಿದ್ದಾರೆ.