ಮೈಸೂರು ದಸರಾಗೆ ಘನತೆ ತಂದ ಅಶ್ವರೋಹಿ ದಳ...
ಮೈಸೂರು ದಸರಾ ಜಂಬೂಸವಾರಿಗೆ ಮೆರುಗು ನೀಡುವುದರ ಹಿಂದೆ ಮೈಸೂರಿನ ಅಶ್ವರೋಹಿ ಪೊಲೀಸ್ ದಳದ ಪಾತ್ರವಿದೆ. ಮೈಸೂರು ನಗರದಲ್ಲಿ ಅಶ್ವರೋಹಿ ದಳ ದಿನನಿತ್ಯದ ಕರ್ತವ್ಯಗಳನ್ನು ಪಾಲಿಸುವುದರೊಂದಿಗೆ ಅಶ್ವರೋಹಿ ಪಡೆ ದಸರಾ ಜಂಬೂ ಸವಾರಿಯಲ್ಲಿ ಕುದುರೆ ಮೇಲೆ ಶಿಷ್ಟಾಚಾರದ ಉಡುಗೆ ಧರಿಸಿ ಶಿಸ್ತಿನಿಂದ ಸಾಗುತ್ತಾ ನೋಡುಗರ ಗಮನಸೆಳೆಯುತ್ತದೆ.
ಅಶ್ವರೋಹಿ ದಳ ಜಂಬೂಸವಾರಿಗಷ್ಟೇ ಸೀಮಿತವಾಗಿದ್ದಲ್ಲ. ಇದರ ಹಿಂದೆ ರೋಚಕ ಇತಿಹಾಸವೂ ಇದೆ. ಮೈಸೂರು ಮಹಾರಾಜರ ಆಡಳಿತದ ಕಾಲದಲ್ಲಿ ಒಡೆಯರ್ ಕುಟುಂಬದ ರಕ್ಷಣೆಗಾಗಿ ಇಟ್ಟುಕೊಂಡಿದ್ದ ಎಚ್.ಎಚ್.ಎಂ.ಎಂ.ಬಿ.ಜಿ ಅಥವಾ ಮೈಸೂರು ಮಹಾರಾಜರ ಅಶ್ವರೋಹಿ ಅಂಗರಕ್ಷಕ ಪಡೆಯೇ ಇವತ್ತಿನ ಅಶ್ವರೋಹಿ ಪೊಲೀಸ್ ಪಡೆಯಾಗಿದೆ. ಮುಂದೆ ಓದಿ...
ಅಶ್ವರೋಹಿಗಳಿಗೆ ಕಠಿಣ ತರಬೇತಿ
ಅವತ್ತಿನಿಂದ ಇವತ್ತಿನ ತನಕ ಅಶ್ವರೋಹಿ ದಳದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ಯೋಧನೂ ಕಠಿಣ ತರಬೇತಿ ಪಡೆದು ನುರಿತ ಸವಾರನಾಗಿದ್ದು, ಹಿಂದೆ ಪ್ರತಿ ನಿತ್ಯ ರಾಜಪರಿವಾರದವರಿಗೆ ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತಾ ದಸರಾ ಜಂಬೂ ಸವಾರಿಗೆ ಜೀವ ತುಂಬುತ್ತಿದ್ದರು.
ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು..
ಸ್ವಾತಂತ್ರ್ಯ ಪೂರ್ವದಲ್ಲಿ ಒಡೆಯರ್ ಅಧೀನದಲ್ಲಿದ್ದ ಅಶ್ವರೋಹಿ ಅಂಗ ರಕ್ಷಕ ತಂಡವು ಸ್ವಾತಂತ್ರ್ಯದ ಬಳಿಕ ಮೈಸೂರು ರಾಜ್ಯ ಪೊಲೀಸ್ ಸಂಸ್ಥೆಗೆ ಸೇರ್ಪಡೆಗೊಂಡು ಆಧುನಿಕ ಪ್ರಜಾಪ್ರಭುತ್ವದ ಅಶ್ವರೋಹಿ ಪೊಲೀಸ್ ತಂಡವಾಗಿ ಹೊಸ ರೂಪ ತಾಳಿದ್ದು ಇತಿಹಾಸ. ಇವತ್ತು ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತು ಗುಂಪು ನಿಯಂತ್ರಣ, ಸಾರಿಗೆ ನಿಯಂತ್ರಣ, ಸಮೂಹ ನಿಯಂತ್ರಣ, ಕೂಚು, ಶಿಷ್ಟಾಚಾರದ ಬೆಂಗಾವಲು, ಕಾವಲು ಕರ್ತವ್ಯ ಮತ್ತು ರಾತ್ರಿ ಗಸ್ತು ಮುಂತಾದ ಕರ್ತವ್ಯ ನಿರ್ವಹಣೆ ಜವಾಬ್ದಾರಿಯನ್ನು ಮಾಡುತ್ತಿದೆ.
ಒಡೆಯರ್ ಅಧೀನದಲ್ಲಿದ್ದ ಅಶ್ವರೋಹಿ ದಳ
ಅಶ್ವರೋಹಿ ತಂಡದ ಯೋಧರು ಧರಿಸುವ ಪೋಷಾಕು ಅತ್ಯಾಕರ್ಷಕವಾಗಿದ್ದು, ಅವರ ಶಿಷ್ಟಾಚಾರದ ಸಮವಸ್ತ್ರದ ತೊಡುಗೆಯ ಬಣ್ಣ, ಮಾದರಿ, ವಿನ್ಯಾಸ ಮತ್ತು ಅದರೊಡನೆ ಇರುವ ಅಸಂಖ್ಯ ಸಣ್ಣ ಸಣ್ಣ ಅಂಶಗಳನ್ನು ಗಮನಿಸಿದರೆ, ಮೈಸೂರಿನ ಅಂದಿನ ಒಡೆಯರ್ಗಳು ಸಿಬ್ಬಂದಿಯ ಪೋಷಾಕುಗಳ ಕುರಿತು ವಹಿಸುತ್ತಿದ್ದ ವೈಯಕ್ತಿಕ ಕಾಳಜಿ ಮತ್ತು ಅದಕ್ಕೆ ಪೂರಕವಾಗಿದ್ದ ಕಲಾವಂತಿಕೆ ಎದ್ದು ಕಾಣುತ್ತದೆ.
ಏಳು ಮಾದರಿಯ ಆಕರ್ಷಕ ಉಡುಗೆ
ಕಾಲ ಮತ್ತು ಕರ್ತವ್ಯಕ್ಕೆ ತಕ್ಕಂತೆ ಚಳಿಗಾಲದ ಶಿಷ್ಟಾಚಾರದ ಉಡುಗೆ, ಬೇಸಿಗೆಯ ಶಿಷ್ಟಾಚಾರದ ಉಡುಗೆ, ಅರಮನೆಯ ಕಾವಲು ಶಿಷ್ಟಾಚಾರದ ಉಡುಗೆ, ಕ್ವಾರ್ಟರ್ ಗಾರ್ಡ್ ಕಾವಲು ಉಡುಗೆ, ಕಾಲಾ-ಪೀಲಾ ಶಿಷ್ಟಾಚಾರದ ಉಡುಗೆ, ಕೆ.ಎ.ಆರ್.ಪಿ. ಕಾವಲು ಉಡುಗೆ, ಕುದುರೆ ಸವಾರಿ ಮತ್ತು ಕ್ರೀಡಾ ಉಡುಗೆ ಹೀಗೆ ಬದಲಾವಣೆಯ ಸುಮಾರು ಏಳು ಮಾದರಿಯ ಉಡುಗೆಗಳನ್ನು ತೊಡುವುದು ವಿಶೇಷ.
ಅಂಬಾರಿ ಹೊರಲಿರುವ ಅಭಿಮನ್ಯುಗೆ ಜಂಬೂಸವಾರಿ ಹೊಸತೇನಲ್ಲ...
ಅಶ್ವರೋಹಿ ಪಡೆಯ ಸಿಬ್ಬಂದಿ ತಮ್ಮ ಯಾವುದೇ ಕರ್ತವ್ಯಗಳಿಗೆ ಸಿದ್ಧರಾಗಲು ತಮ್ಮ ಕುದುರೆಗಳ ದೈಹಿಕ ಸಿದ್ಧತೆ, ಜೀನು ಮತ್ತು ಬಹು ಬಗೆಯ ಇತರ ಸಲಕರಣೆಗಳ ಬಗ್ಗೆ ಕಾಳಜಿ, ಮುತುವರ್ಜಿ ವಹಿಸುತ್ತಾರೆ. ಅಶ್ವಾರೋಹಿ ತಂಡದ ಶಿಷ್ಟಾಚಾರದ ಸಮವಸ್ತ್ರ ಕಡು ನೀಲಿಯ ಬಣ್ಣದ್ದಾಗಿದ್ದು ಅವರ ಪೇಟಾಗೆ ನೀಲಿ ಮತ್ತು ಬಂಗಾರದ ಬಣ್ಣದ ಮೆರುಗು ಸೇರಿಕೊಂಡಿದೆ.
ಕ್ರೀಡೆಗಳಲ್ಲೂ ಹಿಂದೆ ಬೀಳದ ಪಡೆ
ತಮ್ಮದೇ ಉಡುಗೆಯನ್ನು ತೊಟ್ಟು ಕುದುರೆ ಮೇಲೆ ಕುಳಿತು ಶಿಸ್ತುಬದ್ಧ ಮೆರವಣಿಗೆಯಲ್ಲಿ ಅವರು ಸಾಗುತ್ತಿದ್ದರೆ ಅದನ್ನು ನೋಡುವುದೇ ಹಬ್ಬ. ಇನ್ನು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಕುದುರೆಗಳಿಗೆ ಕೂಡ ತಾಲೀಮು ನಡೆಸಿ ಸರ್ವ ಸಿದ್ಧಗೊಳಿಸಲಾಗುತ್ತದೆ. ಒಟ್ಟಾರೆ ಹೇಳಬೇಕೆಂದರೆ ಮೈಸೂರಿನ ಅಶ್ವಾರೋಹಿ ದಳವು ನಿತ್ಯದ ಕರ್ತವ್ಯವಿರಲಿ, ಮೆರವಣಿಗೆಯಿರಲಿ, ಅಷ್ಟೇ ಏಕೆ ಕ್ರೀಡೆಗಳಲ್ಲಿಯೂ ಹಿಂದೆ ಬೀಳದೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಕ್ರೀಡೆಗಳಲ್ಲೂ ಭಾಗವಹಿಸಿ ಸಾಧನೆಗೈದಿರುವುದನ್ನು ನಾವು ಯಾರೂ ಮರೆಯುವಂತಿಲ್ಲ.