ನಾನ್ಯಾಕೆ ದೇಶ ಬಿಟ್ಟೆ?; ತಾಲಿಬಾನ್ ಸರ್ಕಾರ ರಚನೆ ಬೆನ್ನಲ್ಲೇ ಅಶ್ರಫ್ ಘನಿ ಸ್ಪಷ್ಟನೆ
ಕಾಬೂಲ್, ಸೆಪ್ಟೆಂಬರ್ 8: "ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ತೊರೆಯುವುದು ನನ್ನ ಜೀವನದಲ್ಲೇ ಅತ್ಯಂತ ಕಠಿಣ ನಿರ್ಧಾರವಾಗಿತ್ತು," ಎಂದು ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ತಾಲಿಬಾನ್ ಸರ್ಕಾರ ಘೋಷಣೆಯಾದ ಬೆನ್ನಲ್ಲೇ ತಾವು ಅಫ್ಘಾನ್ ತೊರೆಯುವ ನಿರ್ಧಾರ ಹಿಂದಿನ ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷರ ಬಗ್ಗೆ ಉಲ್ಲೇಖಿಸಿದ ಘನಿ, ತನ್ನ "ಸ್ವಂತ ಅಧ್ಯಾಯ" ಕೂಡಾ ಹಿಂದಿನವರ ರೀತಿಯಲ್ಲೇ ದುರಂತವಾಗಿ ಕೊನೆಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕಳೆದ ಆಗಸ್ಟ್ 15ರಂದು ಕಾಬೂಲ್ ನಗರದಲ್ಲಿ ತಾಲಿಬಾನ್ ಉಗ್ರರು ಲಗ್ಗೆ ಇಡುತ್ತಿದ್ದಂತೆ ತಮ್ಮ 15 ಸಚಿವರೊಂದಿಗೆ ಮಾಜಿ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ್ದರು.
'ಮೋಸಗಾರ, ಹೇಡಿ, ಮೂರ್ಖ..!’ಅಬ್ಬಬ್ಬಾ.. ಪ್ರಜೆಗಳ ಶಾಪ ಒಂದಾ.. ಎರಡಾ..?
ಅಫ್ಘಾನಿಸ್ತಾನವನ್ನು ತೊರೆದ ಎರಡ್ಮೂರು ಗಂಟೆಗಳಲ್ಲೇ ತಮ್ಮ ಪಲಾಯನಕ್ಕೆ ಕಾರಣವನ್ನು ತಿಳಿಸಿದ್ದರು. ದೇಶವನ್ನು ತೊರೆಯುವಂತೆ ನನಗೆ ಒತ್ತಾಯಿಸಲಾಗಿತ್ತು, ಅಫ್ಘಾನಿಸ್ತಾನದಲ್ಲಿ ರಕ್ತಪಾತವನ್ನು ತಪ್ಪಿಸುವುದಕ್ಕಾಗಿ ನಾನು ದೇಶದಿಂದ ಹೊರ ಬಂದಿದ್ದೇನೆ ಎಂದು ಅಶ್ರಫ್ ಘನಿ ಹೇಳಿಕೊಂಡಿದ್ದರು. ಮಂಗಳವಾರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವನ್ನು ಘೋಷಿಸಿದೆ. ಈ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮತ್ತೊಂದು ಬಾರಿ ತಾವು ದೇಶದಿಂದ ಹೊರ ಹೋಗಿರುವುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್
ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ.
ನಮ್ಮ ಪ್ರಜೆಗಳನ್ನು ತೊರೆದು ಹೋಗುವ ಉದ್ದೇಶವಿರಲಿಲ್ಲ
ಕಳೆದ ಆಗಸ್ಟ್ 15ರ ಘಟನೆಗಳನ್ನು ಉಲ್ಲೇಖಿಸುತ್ತಾ ಹೇಳಿರುವ ಅಶ್ರಫ್ ಘನಿ ತಮ್ಮ ಇತ್ತೀಚಿನ ಹೇಳಿಕೆಯಲ್ಲಿ, "ಅರಮನೆ ಭದ್ರತೆಯ ಒತ್ತಾಯದ ಮೇರೆಗೆ ಅಫ್ಘಾನಿಸ್ತಾನವನ್ನು ತೊರೆದಿರುವುದಾಗಿ ಹೇಳಿದ್ದಾರೆ. ನಾವು ಅಂದು ದೇಶದಲ್ಲೇ ಉಳಿದುಕೊಂಡಿದ್ದರೆ 1990ರಲ್ಲಿ ನಡೆದ ಅಂತರ್ಯುದ್ಧವು ಮತ್ತೆ ಮರುಕಳಿಸುತ್ತಿತ್ತು. ಕಾಬೂಲ್ ನಗರದ ಬೀದಿ ಬೀದಿಗಳಲ್ಲಿ ನೆತ್ತರು ಹರಿಯುತ್ತಿತ್ತು. ಕಾಬೂಲ್ ಅನ್ನು ತೊರೆಯುವುದು ನನ್ನ ಜೀವನದಲ್ಲೇ ನಾನು ತೆಗೆದುಕೊಂಡ ಒಂದು ಕಠಿಣ ನಿರ್ಧಾರವಾಗಿತ್ತು. ಆದರೆ 60 ಲಕ್ಷ ಜನರ ಜೀವವನ್ನು ಕಾಪಾಡುವುದಕ್ಕೆ ಮತ್ತು ಬಂದೂಕುಗಳು ಸದ್ದು ಮಾಡದಂತೆ ತಡೆಯಲು ಅದೊಂದೇ ಮಾರ್ಗ ಎಂದು ನಾನು ಅಂದುಕೊಂಡಿದ್ದೆನು," ಎಂದು ಅಶ್ರಫ್ ಘನಿ ಹೇಳಿದ್ದಾರೆ.
ನನ್ನ ಶ್ರಮವನ್ನು ನಾನೇ ವ್ಯರ್ಥಗೊಳಿಸುವ ಉದ್ದೇಶವೇ ಇರಲಿಲ್ಲ
"ಪ್ರಜಾಪ್ರಭುತ್ವ, ಸಮೃದ್ಧ ಮತ್ತು ಸಾರ್ವಭೌಮ ರಾಜ್ಯವನ್ನು ನಿರ್ಮಿಸಲು ಅಫ್ಘಾನ್ ಜನರಿಗೆ ಸಹಾಯ ಮಾಡಲು ನಾನು ನನ್ನ ಜೀವನದ 20 ವರ್ಷಗಳನ್ನು ಮೀಸಲಿಟ್ಟಿದ್ದೇನೆ. ಅಂಥ ಜನರನ್ನು ಅಥವಾ ಆ ದೃಷ್ಟಿಕೋನವನ್ನು ತ್ಯಜಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ನಾನು ಅವುಗಳನ್ನು ವಿವರವಾಗಿ ತಿಳಿಸುತ್ತೇನೆ" ಎಂದು ಹೇಳಿಕೆಯಲ್ಲಿ ಅಶ್ರಫ್ ಘನಿ ಸ್ಪಷ್ಟಪಡಿಸಿದ್ದಾರೆ.
ನಾಲ್ಕು ಕಾರುಗಳಲ್ಲಿ ಹಣ ತೆಗೆದುಕೊಂಡು ಹೋದ ಆರೋಪ
ನಾಲ್ಕು ಕಾರು ಮತ್ತು ಒಂದು ಹೆಲಿಕಾಪ್ಟರ್ ತುಂಬ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಕಾಬೂಲ್ ನಗರದ ರಷ್ಯಾದ ರಾಯಭಾರಿ ಮಾಡಿರುವ ಗಂಭೀರ ಆರೋಪವನ್ನು ಅಶ್ರಫ್ ಘನಿ ತಳ್ಳಿ ಹಾಕಿದ್ದಾರೆ. ಈ ಆರೋಪವು ಸಂಪೂರ್ಣ ಮತ್ತು ಸ್ಪಷ್ಟ ಸುಳ್ಳು ಎಂದಿರುವ ಅವರು, ಕಳೆದೊಂದು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಭ್ರಷ್ಟಾಚಾರ ಎಂಬ ಪಿಡುಗನ್ನು ದುರ್ಬಲಗೊಳಿಸಲಾಗಿತ್ತು. ನನ್ನ ಬಳಿ ಅನುವಂಶೀಯವಾಗಿ ಪಡೆದುಕೊಂಡಿರುವ ಸಾಕಷ್ಟು ಹಣವಿದೆ ಎಂದಿರುವ ಅಶ್ರಫ್ ಘನಿ, ತಮ್ಮ ಪತ್ನಿಯ ಕುಟುಂಬದ ಪಿತ್ರಾರ್ಜಿತ ಮತ್ತು ಅವರ ತಾಯ್ನಾಡಿನ ಲೆಬನಾನ್ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಆಸ್ತಿಗಳ ವಿವರವನ್ನು ಸಾರ್ವಜನಿಕವಾಗಿ ಘೋಷಿಸಿದರು. ಅಲ್ಲದೇ "ನನ್ನ ಆಪ್ತ ಸಹಾಯಕರು ತಮ್ಮ ಹಣಕಾಸನ್ನು ಸಾರ್ವಜನಿಕ ಲೆಕ್ಕಪರಿಶೋಧನೆಗೆ ಸಲ್ಲಿಸಲು ಸಿದ್ಧರಾಗಿದ್ದಾರೆ, ಮತ್ತು ನಾನು ಇತರ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳನ್ನು ಹಾಗೆ ಮಾಡಲು ಪ್ರೋತ್ಸಾಹಿಸುತ್ತೇನೆ ಮತ್ತು ಒತ್ತಾಯಿಸುತ್ತೇನೆ," ಎಂದು ಘನಿ ಬರೆದಿದ್ದಾರೆ.
ದೇಶ ತೊರೆಯುವ ಮೂಲಕ ರಕ್ತಪಾತ ತಡೆಯುವ ಯತ್ನ
ಕಳೆದ ಆಗಸ್ಟ್ 15ರ ಭಾನುವಾರ ಮೊದಲು ಕಾಬೂಲ್ ಹೊರವಲಯಕ್ಕೆ ತಾಲಿಬಾನ್ ಉಗ್ರರು ಲಗ್ಗೆ ಇಟ್ಟರು. ಅಫ್ಘಾನ್ ಸರ್ಕಾರಕ್ಕೆ ಅಲ್ಲಿಂದಲೇ ಸಂದೇಶ ರವಾನಿಸಿದ ತಾಲಿಬಾನ್ ಶಾಂತಿಯುತ ರೀತಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಎಚ್ಚರಿಕೆ ನೀಡಿತು. ತಾಲಿಬಾನ್ ಕಾಬೂಲ್ ನಗರದಲ್ಲಿ ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳು ಅಲರ್ಟ್ ಆದರು. ಸಂಜೆ ವೇಳೆಗೆ ತಮ್ಮ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೋಹಿಬ್ ಜೊತೆಗೆ ಓಮನ್ ರಾಷ್ಟ್ರಕ್ಕೆ ಹಾರಿದರು.
"60 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕಾಬೂಲ್ ನಗರದಲ್ಲಿ ರಕ್ತಪಾತದ ಮೂಲಕ "ದೊಡ್ಡ ಮಾನವ ದುರಂತ" ಸಂಭವಿಸದಿರಲಿ ಎಂದು ನಾನು ದೇಶ ತೊರೆದಿದ್ದೇನೆ. ಯುದ್ಧ ಪೀಡಿತ ರಾಷ್ಟ್ರವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ತನ್ನ ಮುಂದಿನ ಉದ್ದೇಶವನ್ನು ಬಹಿರಂಗ ಪಡಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ತಮ್ಮ ಭವಿಷ್ಯದ ಬಗ್ಗೆ ಗೊಂದಲಮಯವಾಗಿ ಯೋಚಿಸುತ್ತಿರುವ ಸಾರ್ವಜನಿಕರಿಗೆ ಧೈರ್ಯ ತುಂಬಬೇಕಿದೆ," ಎಂದು ಅಶ್ರಫ್ ಘನಿ ಈ ಹಿಂದೆಯೂ ಹೇಳಿದ್ದರು. ಅಫ್ಘಾನಿಸ್ತಾನ ತೊರೆದ ಬಳಿಕ ಅಧ್ಯಕ್ಷ ಅಶ್ರಫ್ ಘನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. "ತಾಲಿಬಾನ್ ಸಶಸ್ತ್ರ ಪಡೆಯಾಗಿ ರಾಷ್ಟ್ರಪತಿ ಭವನಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ನಾನು ಏನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ಸವಾಲಿನ ಪ್ರಶ್ನೆ ಆಗಿತ್ತು. ಕಳೆದ 20 ವರ್ಷಗಳಿಂದ ನಾನು ಯಾವ ರಾಷ್ಟ್ರವನ್ನು ರಕ್ಷಿಸುವುದಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೆನೋ ಇಂದು ಅದೇ ನೆಚ್ಚಿನ ದೇಶವನ್ನು ಬಿಟ್ಟು ಹೋಗುವಂತಾ ಸ್ಥಿತಿ ಎದುರಾಗಿದೆ," ಎಂದಿದ್ದಾರೆ.
ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಇತಿಹಾಸ
ಶೈಕ್ಷಣಿಕ ತಕ್ಷ ಹಾಗೂ ಅರ್ಥಶಾಸ್ತ್ರಜ್ಞರಾದ ಅಶ್ರಫ್ ಘನಿ ಅಫ್ಘಾನಿಸ್ತಾನದ 14ನೇ ಅಧ್ಯಕ್ಷರಾಗಿದ್ದರು. 2014ರ ಸಪ್ಟೆಂಬರ್ 20ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 2019ರ ಸಪ್ಟೆಂಬರ್ 28ರಂದು ಎರಡನೇ ಬಾರಿಗೆ ಅಫ್ಘಾನ್ ಅಧ್ಯಕ್ಷ ಸ್ಥಾನದ ಗದ್ದುಗೆ ಏರಿದ್ದರು. ಸುದೀರ್ಘ ಪ್ರಕ್ರಿಯೆಯ ನಂತರ ಕಳೆದ ಫೆಬ್ರವರಿ 2020ರಲ್ಲಿ ಅವರನ್ನು ವಿಜೇತರೆಂದು ಘೋಷಿಸಲಾಗಿದ್ದು, ಕಳೆದ ವರ್ಷ ಮಾರ್ಚ್ 9ರಂದು ಎರಡನೇ ಅವಧಿಗೆ ಅಧ್ಯಕ್ಷರಾಗಿ ಅಶ್ರಫ್ ಘನಿ ಪ್ರಮಾಣವಚನ ಸ್ವೀಕರಿಸಿದರು. ಶಿಕ್ಷಣದಿಂದ ಮಾನವಶಾಸ್ತ್ರಜ್ಞರಾಗಿದ್ದ ಅವರು ಈ ಹಿಂದೆ ಹಣಕಾಸು ಸಚಿವರಾಗಿ ಮತ್ತು ಕಾಬೂಲ್ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು.