ಓವೈಸಿ ಕಣ್ಣು ಬಂಗಾಳದ ಮೇಲೆ: ಬಿಜೆಪಿಗೆ ಲಾಭದ ನಿರೀಕ್ಷೆ
ಇತ್ತೀಚಿನ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಸಾಧನೆ ಮಾಡಿರುವ ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಇ-ಇಟ್ಟೆಹದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಇಳಿಸಲು ಸಿದ್ಧತೆ ನಡೆಸಿದೆ.
ಬಿಹಾರದಲ್ಲಿ ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಓವೈಸಿ, ಸಿಎಎ ಮತ್ತು ಎನ್ಆರ್ಸಿಯಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು. ಅದೇ ರೀತಿಯ ತಂತ್ರವನ್ನು ಅವರು ಪಶ್ಚಿಮ ಬಂಗಾಳದಲ್ಲಿಯೂ ಅಳವಡಿಸುವ ನಿರೀಕ್ಷೆಯಿದೆ. ಹಾಗೆಯೇ ಓವೈಸಿ ಮುಸ್ಲಿಂ ಮತಗಳನ್ನು ಕಲೆಹಾಕುವುದು ಬಿಜೆಪಿಗೆ ಹಿಂದೂ ಮತಗಳನ್ನು ಪಡೆದುಕೊಳ್ಳುವ ಅನುಕೂಲವನ್ನು ಸಹ ಕಲ್ಪಿಸಿಕೊಡಲಿದೆ.
ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆ: ಪ್ರಮುಖ ನಿರ್ಧಾರ ತೆಗೆದುಕೊಂಡ ಅಮಿತ್ ಶಾ
ಎಐಎಂಐಎಂ ಪಕ್ಷವು ಬಿಜೆಪಿಯ 'ಬಿ ಟೀಮ್' ಎಂಬ ಆರೋಪವಿದೆ. ಇದನ್ನು ಓವೈಸಿ ಮತ್ತು ಬಿಜೆಪಿ ಇಬ್ಬರೂ ಅಲ್ಲಗಳೆದಿದ್ದಾರೆ. ಆದರೂ ಕಠೋರವಾದಿ ಮುಸ್ಲಿಂ ಮುಖಗಳು ಚುನಾವಣೆಯಲ್ಲಿ ಇಳಿಯುವುದು ಪಕ್ಷಕ್ಕೆ ಹಿಂದೂ ಮತಗಳನ್ನು ಸೆಳೆಯಲು ಅನುಕೂಲ ಮಾಡಿಕೊಡಲಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ. ಮುಂದೆ ಓದಿ.
ಹಿಂದೂ ಮತಗಳಿಗೆ ಅನುಕೂಲ
'ಕಾಂಗ್ರೆಸ್, ಎಡಪಕ್ಷಗಳು ಅಥವಾ ಟಿಎಂಸಿ ಅಭ್ಯರ್ಥಿಗಳು ಮಾಡಲಾಗದ್ದನ್ನು ಎಐಎಂಐಎಂ ಅಭ್ಯರ್ಥಿಗಳು ಮಾಡಬಲ್ಲರು. ಪಕ್ಷ, ಅದರ ಸಿದ್ಧಾಂತ ಮತ್ತು ಅದು ಎತ್ತುವ ವಿಚಾರಗಳು ಹಿಂದೂ ಮತಗಳು ಮತ್ತು ಭಾಗಶಃ ಎನ್ನಲಾಗುವ ಮತಗಳನ್ನು ಸಹ ನಮ್ಮ ಕಡೆ ಸೆಳೆಯಬಲ್ಲವು' ಎಂದು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿರುವ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಮುಸ್ಲಿಂ ಮತದಾರರ ಕ್ಷೇತ್ರಗಳು
ಬಿಜೆಪಿ ನಾಯಕರ ಪ್ರಕಾರ 294 ಕ್ಷೇತ್ರಗಳ ಪೈಕಿ ಉತ್ತರ ಮತ್ತು ದಕ್ಷಿಣ ಬಂಗಾಳದಲ್ಲಿನ 75-80 ಕ್ಷೇತ್ರಗಳಲ್ಲಿ ವ್ಯಾಪಕವಾಗಿರುವ ಮುಸ್ಲಿಂ ಮತದಾರರು ಫಲಿತಾಂಶವನ್ನು ನಿರ್ಧರಿಸಬಲ್ಲರು. 2019ರ ಸಂಸತ್ ಚುನಾವಣೆಯ ಬಳಿಕ ಇಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಗೆ ಪ್ರಮುಖ ಎದುರಾಳಿಯಾಗಿ ಬಿಜೆಪಿ ಇತ್ತೀಚೆಗೆ ಬೆಳೆದು ನಿಂತಿದೆ. ಬಂಗಾಳವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಬಿಜೆಪಿ ಈಗಾಗಲೇ ತೀವ್ರ ಪ್ರಚಾರ ಆರಂಭಿಸಿದೆ.
ತೃಣಮೂಲ ಕಾಂಗ್ರೆಸ್ ಈಗ ಮಮತಾ ಕೈಯಲ್ಲಿಲ್ಲ: ಶಾಸಕ ಮಿಹಿರ್
ಬಂಗಾಳದಲ್ಲಿ ಮುಸ್ಲಿಂ ಜನಸಂಖ್ಯೆ
ಬಂಗಾಳದ ಜನತೆಯಲ್ಲಿ ಶೇ 27ರಷ್ಟು ಮುಸ್ಲಿಮರಿದ್ದಾರೆ. ಮಾಲ್ಡಾ, ಉತ್ತರ ದಿನಜ್ಪುರ ಮತ್ತು ಮುರ್ಷಿದಾಬಾದ್ನಲ್ಲಿ ಶೇ 50ಕ್ಕಿಂತಲೂ ಅಧಿಕ ಮುಸ್ಲಿಂ ಜನಸಂಖ್ಯೆ ಇದೆ. ಇನ್ನು ಬಿರ್ಭುಮ್, ಉತ್ತರ ಮತ್ತು ದಕ್ಷಿಣ 24 ಪರಗಣ, ಹೌರಾ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ನಾಲ್ಕನೇ ಒಂದರಷ್ಟು ಮುಸ್ಲಿಂ ಜನಸಂಖ್ಯೆ ಇದೆ.
ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಎಐಎಂಐಎಂ 20 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವುಗಳಲ್ಲಿ ಬಂಗಾಳದ ಗಡಿಭಾಗದಲ್ಲಿರುವ ಮುಸ್ಲಿಂ ಪ್ರಾಬಲ್ಯದ ಸೀಮಾಂಚಲ ಪ್ರದೇಶದ 14 ಸೀಟುಗಳಿದ್ದವು. ಇದರಲ್ಲಿ ಪಕ್ಷ ಐದು ಸೀಟುಗಳಲ್ಲಿ ಗೆದ್ದಿತ್ತು.
ಓವೈಸಿ ಚುನಾವಣಾ ಲೆಕ್ಕಾಚಾರ
ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಮುದಾಯವನ್ನು ಕಡೆಗಣಿಸಲಾಗಿದೆ. ರಾಜ್ಯದಲ್ಲಿನ ಮುಸ್ಲಿಮರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ದೇಶದ ಇತರೆ ಭಾಗಗಳಲ್ಲಿರುವ ಮುಸ್ಲಿಮರ ಸ್ಥಿತಿಗಿಂತಲೂ ಹೀನಾಯವಾಗಿದೆ ಎಂದು ಓವೈಸಿ ಇತ್ತೀಚೆಗೆ ಆರೋಪಿಸಿದ್ದರು.
ಮೂಲಗಳ ಪ್ರಕಾರ ಓವೈಸಿ ಬಂಗಾಳ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರು ಧ್ವನಿ ಎತ್ತಲು ಬಯಸಿರುವ ವಿಚಾರಗಳನ್ನು ಬೇರೆ ದಿಕ್ಕಿಗೆ ಹೊರಳಿಸದ ಯುವ ಮುಸ್ಲಿಂ ಮುಖಗಳನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದ್ದಾರೆ. ಬಿಹಾರದಲ್ಲಿ ಪಕ್ಷದ ಅಭ್ಯರ್ಥಿಗಳು ಸಿಎಎ ಮತ್ತು ಎನ್ಆರ್ಸಿಯಂತಹ ವಿಚಾರಗಳನ್ನು ಪ್ರಮುಖವಾಗಿ ಬಿಂಬಿಸಿದ್ದರು. ಆದರೆ ವಿರೋಧಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಸುದೀರ್ಘ ಕಾಲದಿಂದ ಮುಸ್ಲಿಂ ಸಮುದಾಯದ ಬೆಂಬಲ ಪಡೆದಿದ್ದರೂ ಈ ವಿಚಾರಗಳಿಂದ ದೂರವೇ ಇದ್ದವು.
ಹಿಂದೂ ಮತಗಳನ್ನು ಸೆಳೆಯುವ ತಂತ್ರ
ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆ ಮತ್ತು ಮತ ಬ್ಯಾಂಕ್ ರಾಜಕಾರಣ ಅಥವಾ ಓಲೈಕೆ ರಾಜಕೀಯದ ವಿರುದ್ಧ ಪ್ರಚಾರ ನಡೆಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿದ ಕ್ರಮಗಳ ವಿರುದ್ಧ ಪ್ರಚಾರ ನಡೆಸುತ್ತಿರುವುದರಿಂದ ಟಿಎಂಸಿ ತನ್ನ ಅಲ್ಪಸಂಖ್ಯಾತ ಪರ ಹೇಳಿಕೆಗಳನ್ನು ಕಡಿಮೆ ಮಾಡುವಂತೆ ಮಾಡಿದೆ.
'ಈಗ ಟಿಎಂಸಿ ಮತ್ತು ಕಾಂಗ್ರೆಸ್ ಎರಡೂ ಮೃದು ಹಿಂದುತ್ವ ಧೋರಣೆಯನ್ನು ಅಳವಡಿಸಿಕೊಳ್ಳುತ್ತಿವೆ. ಇನ್ನೊಂದಡೆ ಮುಸ್ಲಿಂ ಮತದಾರರು ಮುಖ್ಯವಾಗಿ ಯುವಜನರು ತಮ್ಮ ಪರವಾಗಿ ಧ್ವನಿ ಎತ್ತುವ ಓವೈಸಿ ಅವರೊಂದಿಗೆ ತಮ್ಮ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆ. ಇದು ಹಿಂದೂಗಳನ್ನು ಖಂಡಿತವಾಗಿಯೂ ಎಚ್ಚರಿಸುತ್ತದೆ' ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.