ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?
Recommended Video
ಬೆಂಗಳೂರು, ಸೆಪ್ಟೆಂಬರ್ 03 : ಭಾರತದ ಚಂದ್ರಯಾನದ ಸಾಹಸದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ ವಾಕಿಂಗ್ ಮಾಡಿದ್ದಾನೆ. ನಗರದ ಹೊಂಡದಲ್ಲಿರುವ ರಸ್ತೆಯ ಸ್ಥಿತಿಯನ್ನು ಕಟ್ಟಿಕೊಟ್ಟು, ಬಿಬಿಎಂಪಿಗೆ ಚುರುಕು ಮುಟ್ಟುವಂತೆ ಮಾಡಿರುವುದು ಬಾದಲ್ ನಂಜುಂಡಸ್ವಾಮಿ.
ಇವರು ಬಾದಲ್ ನಂಜುಂಡಸ್ವಾಮಿ ನಂಜಯ್ಯ. ನರಸಮ್ಮ ಮತ್ತು ನಂಜಯ್ಯ ದಂಪತಿ ಪುತ್ರರಾಗಿ 1970ರಲ್ಲಿ ಮೈಸೂರಿನಲ್ಲಿ ಜನಿಸಿದ ಬಾದಲ್ ನಂಜುಂಡಸ್ವಾಮಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಲಾವಿದ, ಬರಹಗಾರ, ನಟ, 3ಡಿ ಚಿತ್ರ ಬರಹಗಾರ.
ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!
ಬಾದಲ್ ನಂಜುಂಡಸ್ವಾಮಿ ಸ್ಥಳೀಯ ಆಡಳಿತಕ್ಕೆ ಬಿಸಿ ಮುಟ್ಟಿಸಲು ರಸ್ತೆ ಬದಿಯಲ್ಲಿ ಮಾಡುವ ಕಲಾಕೃತಿಗಳು ದೇಶದ ಗಮನ ಸೆಳೆಯುತ್ತಿವೆ. ಬೆಂಗಳೂರಿನ ರಸ್ತೆಯಲ್ಲಿ ಮೊಸಳೆ ತಂದಿಟ್ಟು ಸುದ್ದಿ ಮಾಡಿದ್ದ ಬಾದಲ್, ನಗರದ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಈಜಾಡುವಂತೆ ಮಾಡಿದ್ದರು.
ಚಿತ್ರಗಳು : ಬೆಂಗಳೂರಿನ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಪ್ರತ್ಯಕ್ಷ!
ಬೆಂಗಳೂರು ಮಹಾನಗರ ಪಾಲಿಕೆ ಮಾತ್ರವಲ್ಲ. ಮೈಸೂರಿನ ಪಾಲಿಕೆಗೂ ಬಾದಲ್ ನಂಜುಂಡಸ್ವಾಮಿ ಬಿಸಿ ಮುಟ್ಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ರಸ್ತೆಯಲ್ಲಿ ಗಗನಯಾತ್ರಿ ವಾಕಿಂಗ್ ಮಾಡುವ ಬಾದಲ್ ಕೈಚಳಕ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ, ಟ್ವೀಟರ್ನಲ್ಲಿ ಟ್ರೆಂಡ್ ಆಗುತ್ತಿದೆ.
ವೈರಲ್ ವಿಡಿಯೋ: ಬೆಂಗಳೂರು ಗಗನಯಾನಿ ಚಂದ್ರಯಾನ ಯಶಸ್ವಿ
ಬಡತನ ಕನಸಿಗೆ ಅಡ್ಡಿಯಾಗಲಿಲ್ಲ
ಬಾದಲ್ ನಂಜುಂಡಸ್ವಾಮಿ ಮೈಸೂರಿನ ಕುಕ್ಕರಹಳ್ಳಿಯವರು. ಶಾಲಾದಿನಗಳಲ್ಲಿಯೇ ಚಿತ್ರ ಬಿಡಿಸುವ ಬಗ್ಗೆ ಅವರಿಗೆ ಅಪಾರವಾದ ಆಸಕ್ತಿ ಇತ್ತು. ಬಡತನ ಅವರ ಕನಸಿಗೆ ಅಡ್ಡಿಯಾಗಲಿಲ್ಲ. ವಿಶ್ವವಿದ್ಯಾಲಯದ ಫೀಸ್ಗಾಗಿ ಸಾಲ ಮಾಡಿ ಪೆಟ್ಟಿ ಅಂಗಡಿ ಖರೀದಿ ಮಾಡಿದರು. ಅಲ್ಲಿ ಚಿತ್ರಗಳನ್ನು ಬರೆಯಲು ಆರಂಭಿಸಿದರು. ಮೈಸೂರಿನ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷಯುಲ್ ಆರ್ಟ್ಸ್ ನಿಂದ 2004ರಲ್ಲಿ ಚಿನ್ನದ ಪದಕದೊಂದಿಗೆ ಪದವಿ ಪೂರೈಸಿದರು.
ಬೆಂಗಳೂರಿಗೆ ಬಂದರು
ಬೆಂಗಳೂರಿಗೆ ಆಗಮಿಸಿದ ಬಾದಲ್ ನಂಜುಂಡಸ್ವಾಮಿ ಕೆಲವು ಕಡೆ ಕೆಲಸ ಮಾಡಿದರು. ಬಳಿಕ ಸ್ವಂತವಾಗಿ ಕೆಲಸ ಆರಂಭಿಸಿದರು. ಕನ್ನಡ ಚಲನಚಿತ್ರ, ನಾಟಕ, ಡಾಕ್ಯುಮೆಂಟರಿ, ಶಾರ್ಟ್ ಫಿಲ್ಮ್ಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಯೂ ಟರ್ನ್, ಲೂಸಿಯಾ, ಲೈಫು ಇಷ್ಟೇನೆ, ಪ್ರಕೃತಿ, ಪೊಲೀಸ್ ಕ್ವಾರ್ಟರ್ಸ್ ಸಿನಿಮಾಗಳಲ್ಲ ಬಾದಲ್ ಕೈಚಳಕ ಅಡಗಿದೆ.
ಬರಹಗಾರರು ಹೌದು
ಹಲವು ಕಪ್ಪು-ಬಿಳುಪಿನ ಪೋಟ್ರೈಟ್ಗಳನ್ನು ಬಾದಲ್ ನಂಜುಂಡಸ್ವಾಮಿ ಬರೆದಿದ್ದಾರೆ. ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪೋಟ್ರೈಟ್ಅನ್ನು ಇವರು ಬಿಡಿಸಿದ್ದು ಅದು ಬಾಂಬೆ ಐಐಟಿಯ ಸ್ಟುಡೆಂಟ್ ಸೆಂಟರ್ನಲ್ಲಿದೆ. ಹಲವಾರು ಕಥೆಗಳನ್ನು ಬಾದಲ್ ಅವರು ಬರೆದಿದ್ದು ರಾಜ್ಯದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವು ಪ್ರಕಟಗೊಂಡಿವೆ.
ಸ್ಟ್ರೀಟ್ ಆರ್ಟ್ ಮೂಲಕ ಜನಪ್ರಿಯ
ಸ್ಟ್ರೀಟ್ ಆರ್ಟ್ ಮೂಲಕ ಬಾದಲ್ ನಂಜುಂಡಸ್ವಾಮಿ ಜನಪ್ರಿಯರಾಗಿದ್ದಾರೆ. ಮೈಸೂರು ಮತ್ತು ಬೆಂಗಳೂರಿನ ರಸ್ತೆಯಲ್ಲಿ ಇವರು ಬರೆದ ಹಲವು ಕಲಾಕೃತಿಗಳು ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿವೆ. ತಕ್ಷಣ ಎಚ್ಚೆತ್ತ ಪಾಲಿಕೆ ಅದನ್ನು ಸರಿ ಮಾಡಿದ್ದೂ ಇದೆ.
2015ರ ಜೂನ್ನಲ್ಲಿ ಬೆಂಗಳೂರಿನ ಸುಲ್ತಾನ್ ಪಾಳ್ಯ ರಸ್ತೆಯ ದೊಡ್ಡ ಹೊಂಡದಲ್ಲಿ ಮೊಸಳೆ ಕಲಾಕೃತಿ ಮಾಡಿದ್ದರು. 2017ರಲ್ಲಿ ರಸ್ತೆಗುಂಡಿಯಲ್ಲಿ ಮತ್ಸ್ಯಕನ್ಯೆ ಈಜಾಡುವಂತೆ ಕಲಾಕೃತಿ ಮಾಡಿ ಪಾಳಿಕೆ ಗಮನಸೆಳೆದಿದ್ದರು.
ಹಲವು ಕಲಾಕೃತಿಗಳು
ಬಾದಲ್ ನಂಜುಂಡಸ್ವಾಮಿ ರಸ್ತೆ, ಕಾರು, ಗೋಡೆಗಳ ಮೇಲೆ ಬಿಡಿಸಿದ ಕಲಾಕೃತಿಗಳು ಜನರ ಗಮನ ಸೆಳೆಯುತ್ತವೆ. ಬಾದಲ್ ರೈಲಿನಲ್ಲಿ ಸಂಚಾರ ಮಾಡುವಾಗ ಬಿಡಿಸಿದ ಚಿತ್ರಗಳನ್ನು 'Colors and beyond' ಎಂಬ ಶೀರ್ಷಿಕೆಯಡಿ ಸುಚಿತ್ರಾದಲ್ಲಿ 2012ರಲ್ಲಿ ಪ್ರದರ್ಶನ ಮಾಡಲಾಗಿತ್ತು. ಹಲವಾರು ಸಂಘ ಸಂಸ್ಥೆಗಳು ಬಾದಲ್ ಅವರ ಕಲೆಗೆ ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.