'ಮಿಷನ್ ಕಾಶ್ಮೀರ': ಕಣಿವೆ ರಾಜ್ಯದ ತಳಮಟ್ಟದಲ್ಲಿ ಏನು ನಡೆಯುತ್ತಿದೆ?
ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಾಗಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಿದ ಕೇಂದ್ರ ನಡೆ ಸುತ್ತ ಈವರೆಗೆ ಸಾಕಷ್ಟು ಮಾಹಿತಿ ವಿನಿಮಯ ನಡೆದಿದೆ. ರಾಜ್ಯಸಭೆ, ನಂತರ ಲೋಕಸಭೆಯಲ್ಲಿ ನಡೆದ ಚರ್ಚೆಗಳು ದೇಶದ ಜನರಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
ವಿಪರ್ಯಾಸ ಏನೆಂದರೆ, ಕಳೆದ 76 ಗಂಟೆಗಳ ಅಂತರದಲ್ಲಿ ನಡೆದ ಇಷ್ಟೆಲ್ಲಾ ದೊಡ್ಡ ಬೆಳವಣಿಗೆಗಳ ಸಣ್ಣ ಝಲಕ್ ಕೂಡ ಜಮ್ಮು ಮತ್ತು ಕಾಶ್ಮೀರದ ಜನರಿಗೆ ತಲುಪಿಲ್ಲ.
ಇಷ್ಟಕ್ಕೂ ಜಮ್ಮು ಮತ್ತು ಕಾಶ್ಮೀರದ ಇವತ್ತಿನ ಸ್ಥಿತಿ ಹೇಗಿದೆ? ಅಲ್ಲಿನ ಜನರಿಗೆ ಈವರೆಗೆ ತಲುಪಿರುವ ಮಾಹಿತಿ ಎಷ್ಟು? ಯಾವಾವ ರೂಪದಲ್ಲಿ ಮಾಹಿತಿ ವಿನಿಮಯ ಕಣಿವೆ ರಾಜ್ಯದಲ್ಲಿ ನಡೆಯುತ್ತಿದೆ? ಇವೆಲ್ಲಕ್ಕೂ ಉತ್ತರ ರೂಪದಲ್ಲಿ ಲಭ್ಯವಾಗುತ್ತವೆ ಬಿಡಿಬಿಡಿ ತಳಮಟ್ಟದ ವರದಿಗಳ. ಅವುಗಳ ಒಟ್ಟು ಸಾರವನ್ನು ಇಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
'ಕಾಶ್ಮೀರಕ್ಕಾಗಿ ರಕ್ತದ ಕೊನೆ ಹನಿ ಇರುವ ತನಕ ಹೋರಾಟ'
ಮಿಷನ್ ಕಾಶ್ಮೀರ:
ಅಮರನಾಥ ಯಾತ್ರೆ ನಡೆಯುತ್ತಿದ್ದ ಮಧ್ಯದಲ್ಲೇ ಜಮ್ಮು ಮತ್ತು ಕಾಶ್ಮೀರದ ಆಡಳಿತದ ಹೊಣೆಹೊತ್ತಿದ್ದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಸ್ಥಳೀಯ ದೂರದರ್ಶನದಲ್ಲಿ ಕಾಣಿಸಿಕೊಂಡರು. ಬೆನ್ನಿಗೇ ಒಂದಷ್ಟು ಖಾಸಗಿ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡಲು ಶುರುಮಾಡಿದರು. ಹೀಗೆ ಆರಂಭವಾಯಿತು ಗೃಹ ಸಚಿವ ಅಮಿತ್ ಶಾ ನೇತೃತ್ವದ, ಭಾರತದ ಮಾಧ್ಯಮಗಳು ಬಣ್ಣಿಸಿದ 'ಮಿಷನ್ ಕಾಶ್ಮೀರ' ಇನ್ ಕಣಿವೆ ರಾಜ್ಯ.
ಕಳೆದ ಭಾನುವಾರ ಮಧ್ಯರಾತ್ರಿ ಹೊತ್ತಿಗೆ ದೂರವಾಣಿ ಸಂಪರ್ಕಗಳು, ಅಂತರ್ಜಾಲದ ಸಂಪರ್ಕಗಳನ್ನು ಸಂಪೂರ್ಣವಾಗಿ ಇಲ್ಲಿ ಸ್ಥಗಿತಗೊಳಿಸಲಾಯಿತು. ದೊಡ್ಡ ಮಟ್ಟದ ಮಿಲಿಟರಿ ಪಡೆಗಳು ಜಮ್ಮು, ಲಡಾಕ್, ಕಾಶ್ಮೀರ ಸೇರಿದಂತೆ ಎಲ್ಲಾ ಪ್ರಮುಖ ನಗರಗಳ ರಸ್ತೆಗಳಲ್ಲಿ ಮುಳ್ಳು ಬೇಲಿ ಹಾಕಿ ಕಾವಲಿಗೆ ನಿಂತಿತು. ಒಳಗೆ ಮಲಗಿದ್ದ ಜನರಿಗೆ ವಾರದಿಂದ 'ಏನೋ ನಡೆಯುತ್ತಿದೆ' ಎಂಬ ಗುಮಾನಿ ಇತ್ತಾದರೂ ಇದ್ದಕ್ಕಿದ್ದ ಹಾಗೆ ಸಂಪರ್ಕಗಳನ್ನು ಕಡಿದುಕೊಳ್ಳುತ್ತೇವೆ ಎಂಬುದು ಅರಿಗೆ ಇದ್ದಂತೆ ಇರಲಿಲ್ಲ.
ವಿಡಿಯೋ: ತಣ್ಣಗಾದ ಕಾಶ್ಮೀರದಲ್ಲಿ ಭಾರತದ 'ಜೇಮ್ಸ್ ಬಾಂಡ್' ಸುತ್ತಾಟ
ಇತ್ತ ಮಿಲಿಟರಿ ಪಡೆಗಳು ಕಣಿವೆ ರಾಜ್ಯವನ್ನು ಹತೋಟಿಗೆ ತೆಗೆದುಕೊಳ್ಳುತ್ತಿದ್ದಂತೆ ರಾಜ್ಯಾಪಾಲರು ಆಗಸ್ಟ್ 5ರಿಂದ ಜಾರಿಗೆ ಬರುವಂತೆ ಸೆಕ್ಷನ್ 144 ಜಾರಿಗೆ ತಂದರು. ಗುಂಪುಗೂಡುವುದು, ಸಭೆ ನಡೆಸುದಕ್ಕೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.
ಅತ್ತ ಜಮ್ಮು ಮತ್ತು ಕಾಶ್ಮೀರ ರಾಜ್ಯ ಎಲ್ಲಾ ಆಯಾಮಗಳಲ್ಲೂ ಹತೋಟಿಗೆ ಸಿಕ್ಕ ವೇಳೆಯಲ್ಲೇ ಇತ್ತ ದಿಲ್ಲಿಯಲ್ಲಿ ಗೃಹ ಸಚಿವರು ಕೇಂದ್ರಾಡಳಿ ಪ್ರದೇಶಗಳನ್ನಾಗಿ ವಿಭಜಿಸುವ ರಾಷ್ಟ್ರಪತಿಗಳಿಂದ ಅಂಕಿತ ಪಡೆದುಕೊಂಡ ಬಿಲ್ ಮಂಡಿಸಿದರು. 48 ಗಂಟೆಗಳ ಅಂತರದಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅನುಮೋದನೆಯೂ ದೊರೆಯಿತು.
ಸರಕಾರದ್ದೇ ಸಂವಹನ ಮಾಧ್ಯಮ:
ಕೇಂದ್ರ ಸರಕಾರದ ಈ ಪ್ರಕ್ರಿಯೆ ಇಡೀ ದೇಶದಲ್ಲಿ ಟಿವಿಗಳ ಮೂಲಕ ನೇರ ಪ್ರಸಾರ ಕಾಣುತ್ತಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಜನರಿಗೆ ಮಾಹಿತಿ ತಲುಪುವ ಎಲ್ಲಾ ವ್ಯವಸ್ಥೆಗಳೂ ಬಂದ್ ಆಗಿದ್ದವು. ಸರಕಾರಿ ರೆಡಿಯೋ ನೀಡಿದ ಮಾಹಿತಿಯಷ್ಟೆ ಕಣಿವೆ ರಾಜ್ಯದ ಜನರಿಗೆ ಹೊರ ಜಗತ್ತಿನಿಂದ ಬಂದ ಸಂವಹನವಾಗಿತ್ತು. ಸರಕಾರಿ ಟಿವಿ ನೀಡಿದ ಮಾಹಿತಿಯಷ್ಟೆ ಅವರಿಗೆ ಲಭ್ಯವಾದ ಸಂದೇಶವಾಗಿತ್ತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮನೆ ಬಿಡುತ್ತಿರುವ ಜನ, ಪ್ರವಾಸಿಗರೂ ಇಲ್ಲದ ದಿನ
ಮಂಗಳವಾರವೂ ಕರ್ಫ್ಯೂ ಮುಂದುವರಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಹೊರಗಿನಿಂದ ಬಂದ ಮಾಧ್ಯಮ ಪ್ರತಿನಿಧಿಗಳು ಮಾತ್ರವೇ ಅಲ್ಲಲ್ಲಿ ಕಾಣಿಸುತ್ತಿದ್ದರು. ಫರ್ಸ್ಟ್ ಪೋಸ್ಟ್ ವರದಿಯ ಪ್ರಕಾರ, "ಆಹಾರ ಆಗಲಿ, ವೈದ್ಯಕೀಯ ಸೌಲಭ್ಯಗಳಾಗಲಿ ಇಲ್ಲಿ ಲಭ್ಯ ಇರಲಿಲ್ಲ."
ಬುಧವಾರ ರಾಜಭವನದ ಸಭೆ:
ಬುಧವಾರದ ಹೊತ್ತಿಗೆ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ರಾಜ್ಯದ ಕಾನೂನು ಸುವ್ಯವಸ್ಥೆಯ ಕುರಿತು ಸಭೆ ನಡೆಸಿದರು. ನಂತರ ರಾಜಭವನದಿಂದ ಹೊರಬಿದ್ದ ಪತ್ರಿಕಾ ಹೇಳಿಕೆಯಲ್ಲಿ, "ಕಾನೂನು ಸುವ್ಯವಸ್ಥೆ ಆಶಾದಾಯಕವಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಜನ ಮಾರುಕಟ್ಟೆಗೆ ಬಂದು ತರಕಾರಿ, ದಿನಸಿ ಕೊಳ್ಳುತ್ತಿರುವುದು ಸಮಾಧಾನಕರವಾಗಿದೆ. ವಿದ್ಯುತ್ ಮತ್ತು ನೀರಿನ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಇಲ್ಲ. ಒಟ್ಟಾರೆ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಉತ್ತಮವಾಗಿದೆ,'' ಎಂದು ತಿಳಿಸಲಾಯಿತು.
ಇದಿಷ್ಟು ಬಿಟ್ಟರೆ ಕಣಿವೆ ರಾಜ್ಯದಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ. ಬುಧವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ನೀಡಿದ್ದು ಸುದ್ದಿಯಾಗಿದೆ. ಇಲ್ಲಿನ ಮುಖ್ಯವಾಹಿನಿಯ, ಇಷ್ಟು ದಿನ ಭಾರತದ ಜತೆಗಿದ್ದ ರಾಜಕೀಯ ಪಕ್ಷಗಳ ಮುಖಂಡರ ಕುರಿತು, ಜನಪ್ರತಿನಿಧಿಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ.
'ಕಣಿವೆ ರಾಜ್ಯ ನಡೆದ ಘಟನಾವಳಿಗಳ ಶಾಕ್ನಿಂದ ಇನ್ನೂ ಚೇತರಿಸಿಕೊಳ್ಳುತ್ತಿದೆ. ಕಾಶ್ಮೀರ ಇನ್ನೊಂದು ಸುತ್ತಿನ ರಕ್ತಪಾತಕ್ಕೆ ಬಹುಶಃ ಅಣಿಯಾಗುತ್ತಿದೆ. "ಇದು ನಡೆಯಬಾರದಿತ್ತು. ನನ್ನ ಐಡೆಂಟಿಟಿಯನ್ನು ದರೋಡೆ ಮಾಡಿದರು ಅನ್ನಿಸುತ್ತದೆ.
ಯಾವ ಕಾಶ್ಮೀರಿಯೂ ಇದನ್ನು ಒಪ್ಪಿಕೊಳ್ಳಲಾರರು. ಕಾಶ್ಮೀರ ಇನ್ನೂ ಕೆಟ್ಟ ಸ್ಥಿತಿಯನ್ನು ಎದುರು ನೋಡಲಿದೆ," ಎಂದು ಶ್ರೀನಗರದ ಸರಕಾರಿ ಕಟ್ಟಡವೊಂದರ ಮುಂದೆ ಕಾವಲಿಗೆ ನಿಂತ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ' ಎಂದು ಫರ್ಸ್ಟ್ಪೋಸ್ಟ್ನ ಇವತ್ತಿನ ವರದಿ ಕೊನೆಗೊಂಡಿದೆ.