ಕೋವಿಡ್-19: ಜೀವ ಉಳಿಸುತ್ತಾ ವೆಂಟಿಲೇಟರ್? ಇದಕ್ಕೇಕೆ ಅಷ್ಟೊಂದು ಹಾಹಾಕಾರ?
ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ದಿನೇ ದಿನೇ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಇಲ್ಲಿಯವರೆಗೂ 12,76,732 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಅದರಲ್ಲಿ 69,545 ಮಂದಿ ಕೋವಿಡ್-19 ನಿಂದ ಈಗಾಗಲೇ ಮೃತಪಟ್ಟಿದ್ದಾರೆ. 45,902 ಮಂದಿ ಇನ್ನೂ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಕೋವಿಡ್-19 ಎಂಬುದು ಶ್ವಾಸಕೋಶವನ್ನು ಬಾಧಿಸಿ, ಮನುಷ್ಯನ ಜೀವ ತೆಗೆಯುವ ಮಾರಕ ರೋಗ. ಕೊರೊನಾ ವೈರಸ್ ಸೋಂಕು ತಗುಲಿದವರ ಪೈಕಿ ಬಹುತೇಕರಿಗೆ ಉಸಿರಾಟ ತೊಂದರೆ ಉಲ್ಬಣವಾಗುತ್ತದೆ. ತೀವ್ರ ಶ್ವಾಸಕೋಶದ ಸಮಸ್ಯೆಯಿಂದ ಬಳಲುವ ರೋಗಿಗಳನ್ನು ಉಳಿಸಿಕೊಳ್ಳಲು ಕೃತಕ ಉಸಿರಾಟದ ವ್ಯವಸ್ಥೆ ಅತ್ಯಗತ್ಯ. ಹೀಗಾಗಿ ವೆಂಟಿಲೇಟರ್ ಬೇಕು.
ಅಚ್ಚರಿ ತಂದ ಅಧ್ಯಯನ: ಕೊರೊನಾ ವೈರಸ್ ಗೆ BCG ಲಸಿಕೆ ರಾಮಬಾಣ?
ಆದರೆ, ಅಮೇರಿಕಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ವೆಂಟಿಲೇಟರ್ ಗಳ ಕೊರತೆ ಎದ್ದು ಕಾಣುತ್ತಿದೆ. ಭಾರತದಲ್ಲೂ ವೆಂಟಿಲೇಟರ್ ಗಳಿರುವುದು ಬೆರಳೆಣಿಕೆಯಷ್ಟು. ಹಾಗಾದ್ರೆ, ಈ ವೆಂಟಿಲೇಟರ್ ಗಳು ಜೀವ ರಕ್ಷಕವೇ.? ಕೊರೊನಾ ಸೋಂಕಿತರೆಲ್ಲರಿಗೂ ವೆಂಟಿಲೇಟರ್ ಅತ್ಯಗತ್ಯವೇ.? ವೆಂಟಿಲೇಟರ್ ನಲ್ಲಿದ್ದರೆ ಸಾವಿನ ದವಡೆಯಿಂದ ಪಾರಾಗಬಹುದೇ.? ಇದಕ್ಕೆ ಏಕೆ ಇಷ್ಟೊಂದು ಹಾಹಾಕಾರ.? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಓದಿರಿ..
ಕೊರೊನಾ ವೈರಸ್ ಸೋಂಕಿನಿಂದ ಆಗುವ ತೊಂದರೆ
ಕೊರೊನಾ ವೈರಸ್ ಗಳು ಶ್ವಾಸ ಕೋಶದ ಒಳ ಪ್ರವೇಶಿಸಿದ ನಂತರ, ಅಲ್ಲಿನ ಗಾಳಿ ಚೀಲಗಳಲ್ಲಿ ಅಂಟಂಟಾದ ಹಳದಿ ದ್ರವ ಸ್ರವಿಸುವಂತೆ ಮಾಡುತ್ತದೆ. ಈ ದ್ರವವು ಗಾಳಿ ಚೀಲದೊಳಗಿನ ಆಕ್ಸಿಜನ್ ಹರಿವಿಗೆ ತಡೆಗೋಡೆಯಾಗಿ ನಿಲ್ಲುತ್ತದೆ. ಇದರಿಂದ ಸರಾಗ ಉಸಿರಾಟದ ಪ್ರಕ್ರಿಯೆಗೆ ಅಡ್ಡಿಯುಂಟಾಗುತ್ತದೆ. ಉಸಿರಾಡಲು ಅತೀವ ಕಷ್ಟವಾದಾಗ ಕೃತಕ ಉಸಿರಾಟದ ವ್ಯವಸ್ಥೆ ಅವಶ್ಯಕ.
ವೆಂಟಿಲೇಟರ್ ಎಂದರೇನು.?
ಉಸಿರಾಟದ ಸಮಸ್ಯೆ ಎದುರಾದಾಗ, ದೇಹಕ್ಕೆ ಅವಶ್ಯಕವಿರುವ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಹೀಗಾದಾಗ, ಮೆದುಳು ಕಾರ್ಯಹೀನ ಸ್ಥಿತಿಗೆ ತಲುಪುತ್ತದೆ. ಇದನ್ನು ತಪ್ಪಿಸಲು ವ್ಯಕ್ತಿಯ ಸ್ವಾಭಾವಿಕ ಉಸಿರಾಟದ ವ್ಯವಸ್ಥೆಯನ್ನು ಬದಲಿಸಿ ಕೃತಕವಾಗಿ ಉಸಿರಾಟದ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ. ಈ ಕೃತಕ ಉಸಿರಾಟದ ವ್ಯವಸ್ಥೆ ಮಾಡಿಕೊಡುವ ಯಂತ್ರವೇ ವೆಂಟಿಲೇಟರ್. ಅರವಳಿಕೆ ನೀಡಿದ ನಂತರ ರೋಗಿಗಳು ಪ್ರಜ್ಞಾಹೀನ ಸ್ಥಿತಿ ತಲುಪಿದ ಬಳಿಕವಷ್ಟೇ ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಮಾಡಲಾಗುತ್ತದೆ. ನುರಿತ ವೈದ್ಯಕೀಯ ಸಿಬ್ಬಂದಿ ವೆಂಟಿಲೇಟರ್ ಗೆ ಕನೆಕ್ಟ್ ಆಗಿರುವ 10 ಇಂಚಿನ ಉದ್ದದ ಟ್ಯೂಬ್ ಅನ್ನು ರೋಗಿಯ ಬಾಯಿ ಮತ್ತು ವಿಂಡ್ ಪೈಪ್ ಒಳಗೆ ಹಾಕುತ್ತಾರೆ. ಆ ಮೂಲಕ ರೋಗಿಯ ಶ್ವಾಸಕೋಶಕ್ಕೆ ಆಕ್ಸಿಜನ್ ಪೂರೈಕೆ ಆಗುತ್ತದೆ. ಹೀಗಾಗಿ ವೆಂಟಿಲೇಟರ್ ಒಂಥರಾ ಜೀವ ರಕ್ಷಕ ಇದ್ದ ಹಾಗೆ.
ಯಾರಿಗೆ ವೆಂಟಿಲೇಟರ್ ಅಗತ್ಯ.?
ಕೊರೊನಾ ವೈರಸ್ ಸೋಂಕು ತಗುಲಿದ ಎಲ್ಲರಿಗೂ ವೆಂಟಿಲೇಟರ್ ನ ಅವಶ್ಯಕತೆ ಇರುವುದಿಲ್ಲ. ತೀವ್ರ ಉಸಿರಾಟದ ಸಮಸ್ಯೆ ಇರುವವರಿಗೆ ಮಾತ್ರ ವೆಂಟಿಲೇಟರ್ ಅನಿವಾರ್ಯ. ವಯಸ್ಸಾದವರು, ಮಧುಮೇಹ, ಬಿಪಿ ಮುಂತಾದ ಕಾಯಿಲೆ ಹೊಂದಿರುವವರಲ್ಲಿ ಕೋವಿಡ್-19 ಕಂಡುಬಂದರೆ ವೆಂಟಿಲೇಟರ್ ಅತ್ಯಗತ್ಯ.
ಆಕ್ಸಿಜನ್ ಹೆಲ್ಮೆಟ್ಸ್ ಬಳಕೆ
ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಸದ್ಯ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು Non-Invasive ವಿಧಾನದ ವೆಂಟಿಲೇಷನ್ ಬಳಸಲಾಗುತ್ತಿದೆ. ಈ ವಿಧಾನದಲ್ಲಿ ಗಂಟಲೊಳಗೆ ಟ್ಯೂಬ್ ಹಾಕುವುದಿಲ್ಲ. ಬದಲಾಗಿ, ಮುಖದ ಸುತ್ತ ಹೆಲ್ಮೆಟ್ ಮಾದರಿಯ ಕವಚ ಇರಿಸಲಾಗಿದ್ದು, ಅದರ ಮೂಲಕವೇ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಜೊತೆಗೆ ಉಸಿರಾಟದ ಹನಿಗಳ ಮೂಲಕ ಕೊರೊನಾ ವೈರಸ್ ಹರಡುವುದನ್ನೂ ಆ ಕವಚ ತಡೆಯುತ್ತದೆ.
ವೆಂಟಿಲೇಟರ್ ನಿಂದಲೂ ಅಪಾಯ.!
ವೆಂಟಿಲೇಟರ್ ಜೀವ ರಕ್ಷಕವಾದರೂ, ಅದರಿಂದ ರೋಗಿಗಳಿಗೆ ಆಪತ್ತು ತಪ್ಪಿದ್ದಲ್ಲ. ವೆಂಟಿಲೇಟರ್ ಅನ್ನು ಸರಿಯಾಗಿ ಅಳವಡಿಸದೆ ಇದ್ದರೆ, ರೋಗಿಯ ಜೀವಕ್ಕೆ ಅಪಾಯ ಎದುರಾಗಬಹುದು. ಇನ್ನು, ವೆಂಟಿಲೇಟರ್ ನಲ್ಲಿ ಇರಿಸುವ ಮುನ್ನ ಕೊಡುವ ಅರವಳಿಕೆಯಿಂದಾಗಿ ಅನೇಕ ಕೋವಿಡ್-19 ರೋಗಿಗಳಿಗೆ ತೊಂದರೆಯಾಗಿದೆ. ಕೆಲವರಿಗೆ ನಡೆದಾಡುವುದೇ ಕಷ್ಟವಾಗಿದ್ದರೆ, ಹಲವರ ಸ್ನಾಯು ಮತ್ತು ನರಗಳಿಗೆ ಹಾನಿಯುಂಟಾಗಿದೆ. ದುರಂತ ಅಂದ್ರೆ, ವೆಂಟಿಲೇಟರ್ ನಲ್ಲಿದ್ದು, ಡಿಸಾರ್ಚ್ ಆದ ಕೆಲವೇ ವಾರಗಳಲ್ಲಿ ಕೋವಿಡ್-19 ರೋಗಿಗಳು ಹಾರ್ಟ್ ಡ್ಯಾಮೇಜ್ ನಿಂದ ಮೃತಪಟ್ಟಿದ್ದೂ ಇದೆ.
ಅಧ್ಯಯನ ಹೇಳುವುದೇನು.?
ಯು.ಎಸ್.ಎ, ಚೀನಾ, ಯೂರೋಪ್ ನಲ್ಲಿ ಕೈಗೊಂಡಿರುವ ಹಲವು ಅಧ್ಯಯನಗಳ ಪ್ರಕಾರ, ವೆಂಟಿಲೇಟರ್ ನಲ್ಲಿದ್ದ ಕೋವಿಡ್-19 ರೋಗಿಗಳ ಪೈಕಿ ಬಹುತೇಕರು ಸಾವನ್ನಪ್ಪಿದ್ದಾರೆ. ಯು.ಕೆ.ನಲ್ಲಿ ವೆಂಟಿಲೇಟರ್ ನಲ್ಲಿದ್ದ 98 ಕೊರೊನಾ ಸೋಂಕಿತ ರೋಗಿಗಳ ಪೈಕಿ 33 ಮಂದಿ ಮಾತ್ರ ಬದುಕುಳಿದಿದ್ದಾರೆ. ವುಹಾನ್ ಮತ್ತು ಚೀನಾದ ಅಂಕಿ-ಅಂಶ ಇನ್ನೂ ಗಾಬರಿ ಹುಟ್ಟಿಸುತ್ತದೆ. ವೆಂಟಿಲೇಟರ್ ನಲ್ಲಿದ್ದ 22 ಮಂದಿ ಪೈಕಿ ಅಲ್ಲಿ ಮೂವರು ಮಾತ್ರ ಡಿಸ್ಚಾರ್ಚ್ ಆಗಿದ್ದಾರೆ.
ಹೆಚ್ಚು ಒತ್ತಡ
ಸಾಮಾನ್ಯ ಉಸಿರಾಟದ ವ್ಯವಸ್ಥೆಗಿಂತ ಭಿನ್ನವಾದ ಉಸಿರಾಟದ ವ್ಯವಸ್ಥೆಯನ್ನ ಕೃತಕ ಉಸಿರಾಟದಲ್ಲಿ ರೂಪಿಸಲಾಗಿರುತ್ತದೆ. ಪೂರ್ಣ ಪ್ರಮಾಣದಲ್ಲಿ ಶ್ವಾಸಕೋಶ ಗಾಳಿ ಪಡೆಯುವಂತೆ ಈ ವೇಳೆ ಮಾಡಲಾಗಿರುತ್ತದೆ. ಇದಕ್ಕೆ ಹೊಂದಿಕೊಂಡ ದೈಹಿಕ ವ್ಯವಸ್ಥೆ ವೆಂಟಿಲೇಷನ್ ನಿಂದ ಹೊರ ಬಂದ ಬಳಿಕ ಸಹಜ ಸ್ಥಿತಿಗೆ ಹೊಂದಿಕೊಳ್ಳಲು ಹೋರಾಟ ನಡೆಸಬೇಕಾಗುತ್ತದೆ. ಇದರಿಂದ ರೋಗಿಯ ಹೃದಯ, ಮೆದುಳು, ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಹೆಚ್ಚಾಗಿ, ಸಾವು ಸಂಭವಿಸುವ ಸಾಧ್ಯತೆ ಅಧಿಕ.
ಬದುಕುವ ಸಾಧ್ಯತೆ ಕಮ್ಮಿ
ಒಮ್ಮೆ ವೆಂಟಿಲೇಟರ್ ಗೆ ಹಾಕಿದರೆ, ವಾರಾನುಗಟ್ಟಲೆ ರೋಗಿಗಳು ಅದರಲ್ಲೇ ಇರಬೇಕು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ರೋಗಿ ದೀರ್ಘಕಾಲ ಇದ್ದರೆ, ಅಂಥವರು ಬದುಕುಳಿಯುವ ಸಾಧ್ಯತೆ ಕಡಿಮೆ ಅಂತಾರೆ ವೈದ್ಯರು. ಅಸಲಿಗೆ, ವೆಂಟಿಲೇಟರ್ ನಿಂದಲೇ ಶ್ವಾಸಕೋಶಕ್ಕೆ ಅಧಿಕ ಆಕ್ಸಿಜನ್ ಪೂರೈಕೆಯಾಗಿ, ಅದರಿಂದ ಹೆಚ್ಚು ಒತ್ತಡ ಸೃಷ್ಟಿಯಾಗಿ ಪುಪ್ಪಸಗಳಿಗೆ ಹಾನಿಯುಂಟಾಗಬಹುದು. ಇನ್ನು ಟ್ಯೂಬನ್ನು ಗಂಟಲೊಳಗೆ ಹಾಕುವುದರಿಂದ ಇತರೆ ವೈರಾಣುಗಳಿಂದ ಸೋಂಕು ತಗುಲುವ ಸಾಧ್ಯತೆಯೂ ಇದೆ.
ಮಾನವ ನಿರ್ಮಿತ ಮೆಷೀನ್ ನಿಂದ ಸಾಧ್ಯವಿಲ್ಲ
ಅಷ್ಟಕ್ಕೂ, ದೇಹಕ್ಕೆ ಕೊರೊನಾ ವೈರಸ್ ಮಾಡುವ ತೀವ್ರಕರ ಹಾನಿಯನ್ನು ವೆಂಟಿಲೇಟರ್ ಸರಿ ಮಾಡುವುದಿಲ್ಲ. 'ಮಾನವ ನಿರ್ಮಿತ ಮೆಷೀನ್' ವೆಂಟಿಲೇಟರ್ ನಿಂದ ಉಸಿರಾಟಕ್ಕೆ ಸಹಾಯ ಮಾಡಬಹುದೇ ಹೊರತು, ಜೀವ ಹಿಡಿದಿಡಲು ಸಾಧ್ಯವಿಲ್ಲ.
ವೆಂಟಿಲೇಟರ್ ಗಳಿಗಾಗಿ ಹಾಹಾಕಾರ
ಇಟಲಿ, ಸ್ಪೇನ್, ಅಮೇರಿಕಾ ಹಾಗೂ ಭಾರತದಲ್ಲೂ ವೆಂಟಿಲೇಟರ್ ಗಳ ಕೊರತೆ ಇದೆ. ತೀವ್ರ ಉಸಿರಾಟದಿಂದ ಬಳಲುವವರಿಗೆ ಸಹಕಾರಿಯಾಗಲು ವೆಂಟಿಲೇಟರ್ ಗಳ ಅವಶ್ಯಕತೆ ಇದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ, ಅದಕ್ಕೆ ಅನುಗುಣವಾದ ವ್ಯವಸ್ಥೆ ಇಲ್ಲದೆ ವೆಂಟಿಲೇಟರ್ ಗಳಿಗಾಗಿ ಹಾಹಾಕಾರ ಆರಂಭವಾಗಿದೆ. ವೆಂಟಿಲೇಟರ್ ಕೊರತೆಯನ್ನು ನೀಗಿಸುವ ಸಲುವಾಗಿ, ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರ ಜಪಿಸುತ್ತಿವೆ.