ಚುನಾವಣೆಗೂ ಮುನ್ನ ಸಿದ್ದರಾಮಯ್ಯ, ಡಿಕೆಶಿ ನಡುವಿನ ವಿರಸದ ಮೊದಲ ನಿರ್ಣಾಯಕ ಮೆಟ್ಟಿಲು
ವಿರೋಧ ಪಕ್ಷದವರನ್ನು ಒಂದು ಹಂತಕ್ಕೆ ನಂಬಬಹುದು, ಆದರೆ ಪಕ್ಷದಲ್ಲೇ ಇರುವ ವಿರೋಧಿಗಳನ್ನು ನಂಬುವುದು ಕಷ್ಟ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ಇಬ್ಬರು ನಾಯಕರು.
ನಮ್ಮ ನಡುವೆ ಮನಃಸ್ತಾಪಗಳು ಇಲ್ಲ ಎಂದು ಸಾರ್ವಜನಿಕರ ಮುಂದೆ ಇಬ್ಬರು ನಾಯಕರು ಕಾಣಿಸಿಕೊಂಡರೂ, ಒಳಗೊಳಗಿನ ಕೊತಕೊತ ಅವರ ಮೂಲಕವಿಲ್ಲದಿದ್ದರೂ, ಅವರ ಆಪ್ತರ ಮೂಲಕ ಬಹಿರಂಗವಾಗುತ್ತಿದೆ.
ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಿಗೆ ಅನುದಾನ ಕಡಿತ- ರಾಜ್ಯಕ್ಕೆ ನಿರಾಶಾದಾಯಕ ಬಜೆಟ್: ಸಿದ್ದರಾಮಯ್ಯ
ಭರ್ಜರಿ ಪೂರ್ವತಯಾರಿಯೊಂದಿಗೆ ಮೇಕೆದಾಟು ಪಾದಯಾತ್ರೆಯನ್ನು ಸರಿಯಾದ ದಾರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಡಿ.ಕೆ.ಸುರೇಶ್ ಕರೆದುಕೊಂಡು ಬರುತ್ತಿದ್ದರು. ಆದರೆ, ಕೊರೊನಾ ಮತ್ತು ಹೈಕೋರ್ಟ್ ಚಾಟಿ ಬೀಸಿದ್ದರಿಂದ ಯಾತ್ರೆಯನ್ನು ಮೊಟಕುಗೊಳಿಸಬೇಕಾಯಿತು.
ಯಾತ್ರೆ ಅರ್ಥದಲ್ಲೇ ಸ್ಥಗಿತಗೊಂಡಿದ್ದಕ್ಕೆ ಬಿಜೆಪಿಯವರಿಗಿಂತ ಉಸ್ಸಪ್ಪಾ ಎಂದವರು ಕಾಂಗ್ರೆಸ್ಸಿನಲ್ಲೇ ಇದ್ದಾರೆ ಎನ್ನುವುದನ್ನು ಅರಿಯಲು ವಿಶೇಷ ರಾಜಕೀಯ ಕೋರ್ಸ್ ಏನೂ ಮಾಡಬೇಕಾಗಿಲ್ಲ. ಈಗ, ಒಂದು ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯುವ ಮೂಲಕ ಡಿಕೆಶಿ ಬಣ ಸಿದ್ದರಾಮಯ್ಯನವರ ಬಣಕ್ಕೆ ಬಿಸಿಮುಟ್ಟಿಸಿದೆ. ಇದನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.
ಟಿಕೆಟ್ ರಾಜಕೀಯ: ಬಿಜೆಪಿ ಬಿಟ್ಟು ಕಾಂಗ್ರೆಸ್ ಕಡೆಗೆ ಆಕಾಂಕ್ಷಿಗಳು
ಸಿ.ಎಂ.ಇಬ್ರಾಹಿಂ ಅವರು ಸಿದ್ದರಾಮಯ್ಯನವರ ಆಪ್ತರು
ಅತ್ಯುತ್ತಮ ವಾಗ್ಮಿಯಾಗಿರುವ ಸಿ.ಎಂ.ಇಬ್ರಾಹಿಂ ಅವರು ಸಿದ್ದರಾಮಯ್ಯನವರ ಆಪ್ತರು ಎನ್ನುವುದು ಗೊತ್ತಿರುವ ವಿಚಾರ. ನನಗೂ, ಕೆಪಿಸಿಸಿ ಅಧ್ಯಕ್ಷರ ಕಾರ್ಯಶೈಲಿಗೂ ಆಗಿ ಬರುವುದಿಲ್ಲ ಎಂದು ಕಾಂಗ್ರೆಸ್ ವೇದಿಕೆಯಲ್ಲೇ ಇಬ್ರಾಹಿಂ ಹೇಳಿದವರು. ಕಾಂಗ್ರೆಸ್ ತೊರೆಯಲು ಒಂದು ಹೆಜ್ಜೆ ಹೊರಗಿಟ್ಟಿದ್ದ ಇಬ್ರಾಹಿಂ ಅವರನ್ನು ಹೇಗೂ ಮನವೊಲಿಸಿ ಉಳಿಸಿಕೊಳ್ಳಲಾಗಿತ್ತು. ಆದರೆ, ಬಯಸಿದ್ದ ಸ್ಥಾನ ಬೇರೆಯವರ ಪಾಲಾದ ನಂತರ ಇಬ್ರಾಹಿಂ ಅವರ ಸಹನೆ ಕಟ್ಟೆಯೊಡೆದಿದೆ. ಕಾಂಗ್ರೆಸ್ ತೊರೆಯುವುದಾಗಿ ಹೇಳಿಕೆ ನೀಡಿದ್ದು ಒಂದು ಕಡೆಯಾದರೆ, ಇವರ ರಾಜೀನಾಮೆಯ ಎಫೆಕ್ಟ್ ಪಕ್ಷದಲ್ಲಿ ಮಾರ್ದನಿಸಲು ಆರಂಭಿಸಿದೆ.
ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಎನ್ನುವ ಲೆಕ್ಕಾಚಾರದಲ್ಲಿದ್ದ ಇಬ್ರಾಹಿಂ
ಇನ್ನೇನು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ನನಗೇ ಎನ್ನುವ ಲೆಕ್ಕಾಚಾರದಲ್ಲಿದ್ದ ಇಬ್ರಾಹಿಂ ಅವರಿಗೆ ಬಿಗ್ ಶಾಕ್ ಎದುರಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗಿಂತಲೂ ಹೈಕಮಾಂಡ್ ಲೆವೆಲಿನಲ್ಲಿ ಪ್ರಾಬಲ್ಯರಾಗಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಆ ಸ್ಥಾನ ದಕ್ಕಿದೆ. ಇದೇ, ಸಿದ್ದರಾಮಯ್ಯನವರ ವಿರುದ್ದ ಡಿ.ಕೆ.ಶಿವಕುಮಾರ್ ಉರುಳಿಸಿದ ಬುಗುರಿ ಎಂದು ವಿಶ್ಲೇಷಿಸಲಾಗುತ್ತಿದೆ. ಅದಕ್ಕೆ ಕಾರಣ ಇಲ್ಲದಿಲ್ಲ..
ಬಿ.ಕೆ.ಹರಿಪ್ರಸಾದ್ ನೇಮಕಕ್ಕೆ ಯಾವುದೇ ವಿರೋಧವನ್ನು ವ್ಯಕ್ತ ಪಡಿಸಲಿಲ್ಲ
ಹಿಂದುಳಿದ ವರ್ಗವನ್ನು ಪ್ರತಿನಿಧಿಸುವ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹಾಗಾಗಿ, ಅಲ್ಪಸಂಖ್ಯಾತ ಸಮುದಾಯದವರೊಬ್ಬರನ್ನು ವಿಧಾನ ಪರಿಷತ್ತಿನ ಸ್ಥಾನಕ್ಕೆ ನೇಮಿಸುವುದು ಸಿದ್ದರಾಮಯ್ಯನವರ ಉದ್ದೇಶವಾಗಿತ್ತು. ಆದರೆ ಈ ಲೆಕ್ಕಾಚಾರ ಕಾರ್ಯರೂಪಕ್ಕೆ ಬಂದರೆ ಹಿನ್ನಡೆಯಾಗುತ್ತದೆ ಎನ್ನುವುದನ್ನು ಅರಿತ ಡಿ.ಕೆ.ಶಿವಕುಮಾರ್ ಅವರು ಬಿ.ಕೆ.ಹರಿಪ್ರಸಾದ್ ನೇಮಕಕ್ಕೆ ಯಾವುದೇ ವಿರೋಧವನ್ನು ವ್ಯಕ್ತ ಪಡಿಸಲಿಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ. ಬಿ.ಕೆ.ಹರಿಪ್ರಸಾದ್ ಹಿಂದುಳಿದ ವರ್ಗದ ಸಮುದಾಯದವರು.
ರಾಜಕೀಯದಲ್ಲಿ ಯಾರೂ ಶತುಗಳಿಲ್ಲ, ಮಿತ್ರರಂತೂ ಇಲ್ಲವೇ ಇಲ್ಲ
ಹರಿಪ್ರಸಾದ್ ಅವರು ತಮ್ಮದೇ ನೆಟ್ವರ್ಕ್ ಅನ್ನು ಹೊಂದಿರುವವರು, ಜೊತೆಗೆ, ದೆಹಲಿಯಲ್ಲಿ ಇವರ ಮಾತಿಗೆ ಬೆಲೆಯಿದೆ ಎನ್ನುವುದು ಒಂದು ಲೆಕ್ಕಾಚಾರ. ಇನ್ನೊಂದು ಇವರು ಸಿದ್ದರಾಮಯ್ಯನವರ ಬಣದಲ್ಲಿ ಗುರುತಿಸಿಕೊಂಡವರಲ್ಲ. ಅಲ್ಲಿಗೆ, ಎರಡು ರೀತಿಯಲ್ಲಿ ಸಿದ್ದರಾಮಯ್ಯನವರಿಗೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಂದು, ಹಿಂದುಳಿದ ವರ್ಗದ ಇನ್ನೊಂದು ನಾಯಕ ಮಂಚೂಣಿಯಲ್ಲಿ ಬಂದಿದ್ದು , ಇನ್ನೊಂದು ಇಬ್ರಾಹಿಂ ಅವರಿಗೆ ಆ ಸ್ಥಾನ ತಪ್ಪಿಸಿದರು ಎಂದು ಅಲ್ಪಸಂಖ್ಯಾತರಲ್ಲಿ ಸಿದ್ದರಾಮಯ್ಯ ವಿರುದ್ದ ಸಣ್ಣಮಟ್ಟಿನ ಸಿಟ್ಟು ಏಳುವಂತೆ ಮಾಡಿದ್ದು. ಚುನಾವಣೆಗೆ ಇನ್ನೂ ಹದಿನಾಲ್ಕು ತಿಂಗಳು ಇದ್ದರೂ, ಈ ಬೆಳವಣಿಗೆ ಯಾವ ರೀತಿಯಲ್ಲಿ ತಿರುವನ್ನು ಪಡೆದುಕೊಳ್ಳಲಿದೆ ಎನ್ನುವುದರ ಮೇಲೆ ಕಾಂಗ್ರೆಸ್ ಭವಿಷ್ಯ ನಿಲ್ಲಬಹುದು. ಕೊನೆಯದಾಗಿ ಇಷ್ಟೇ.. ರಾಜಕೀಯದಲ್ಲಿ ಯಾರೂ ಶತುಗಳಿಲ್ಲ, ಮಿತ್ರರಂತೂ ಇಲ್ಲವೇ ಇಲ್ಲ..
Recommended Video