ದುರಾಸೆಗೆ ಬಲಿಯಾಗುತ್ತಿದೆ ಭೂಮಿ, ಪೆಂಗ್ವಿನ್ ಸಂತತಿಯೂ ಸರ್ವನಾಶ
ಆ ಹಕ್ಕಿಗಳನ್ನ ಕಂಡರೆ ಮುದ್ದು ಮಾಡದವರಿಲ್ಲ, ಎತ್ತಿ ಆಡಿಸಬೇಕು ಅನ್ನದೇ ಇರುವವರಿಲ್ಲ. ನೋಡಲು ಅವು ಎಷ್ಟು ಮುದ್ದಾಗಿ ಕಾಣುತ್ತವೋ, ಅವುಗಳ ತುಂಟಾಟ ಕೂಡ ಅಷ್ಟೇ ಮುಗ್ಧವಾಗಿರುತ್ತದೆ. ಅಂದಹಾಗೆ ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ಪೆಂಗ್ವಿನ್ ಸಂತತಿಯ ಬಗ್ಗೆ. ಹಾರಲಾರದ ಹಕ್ಕಿಗಳು ಈ ಪೆಂಗ್ವಿನ್ಸ್.
ಅಂಟಾರ್ಕ್ಟಿಕ ಭಾಗದಲ್ಲಿ ಮನೆಯ ಮಾಡಿ, ತಮ್ಮದೇ ಸಂಸಾರದ ಜೊತೆ ನೆಮ್ಮದಿಯಾಗಿದ್ದ ಪೆಂಗ್ವಿನ್ಸ್ ಗ್ಯಾಂಗ್ಗೆ ಮಾನವನ ದುರಾಸೆ ಪರಿಣಾಮ ದೊಡ್ಡ ಕಂಟಕ ಎದುರಾಗಿದೆ. ಗ್ಲೋಬಲ್ ವಾರ್ಮಿಂಗ್ ಸಂಕಷ್ಟಕ್ಕೆ ಸಿಲುಕಿರುವ ಪೆಂಗ್ವಿನ್ಸ್ ಸಂತತಿ ನಾಶವಾಗುವ ಹಂತಕ್ಕೆ ಬಂದು ನಿಂತಿದೆ. ಅಷ್ಟಕ್ಕೂ ಉತ್ತರ ಅಂಟಾರ್ಕ್ಟಿಕ ಪೆಂಗ್ವಿನ್ಗಳ ತವರು. ಅದನ್ನ ಬಿಟ್ಟರೆ ಇವು ನೈಸರ್ಗಿಕವಾಗಿ ಕಾಣಸಿಗುವ ಪ್ರದೇಶಗಳು ಭೂಮಿ ಮೇಲೆ ತೀರಾ ಕಡಿಮೆ.
ಅಂಟಾರ್ಟಿಕಾಗಿಂತ ಅಮೆರಿಕ ಚಳಿ ಚಳಿ ಸಿವಾ!
ಹೀಗೆ ನೆಮ್ಮದಿಯಾಗಿ ತಮ್ಮ ತವರು ಭೂಮಿಯಲ್ಲಿದ್ದ ಪೆಂಗ್ವಿನ್ಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಗ್ಲೋಬಲ್ ವಾರ್ಮಿಂಗ್ ಪರಿಣಾಮ ಪೆಂಗ್ವಿನ್ಸ್ ಸಂತಾನೋತ್ಪತ್ತಿ ಮಾಡುವ ಉತ್ತರ ಧ್ರುವ ಪ್ರದೇಶಕ್ಕೆ ಸಮೀಪವಿರುವ ಎಲಿಫ್ಯಾಂಟ್ 'ಐಲ್ಯಾಂಡ್' ನಾಶವಾಗಿ ಹೋಗುತ್ತಿದೆ. ವಿಜ್ಞಾನಿಗಳು 1970-71ರ ನಡುವೆ ಈ ದ್ವೀಪದ ಅಧ್ಯಯನ ನಡೆಸಿದ್ದರು. ಇದೀಗ ಆ ದ್ವೀಪ ಶೇಕಡ 57ರಷ್ಟು ನಾಶವಾಗಿ ಹೋಗಿದೆ. ಹೀಗಾಗಿ ಭವಿಷ್ಯದಲ್ಲಿ ಭೂಮಿಯ ಮೇಲಿಂದ ಪೆಂಗ್ವಿನ್ಗಳ ಸಂತತಿ ಕೂಡ ನಾಶವಾಗುವ ಅಪಾಯ ಎದುರಾಗಿದೆ.
ನೂರಾರು ಪ್ರಾಣಿ, ಪಕ್ಷಿಗಳು ಕಣ್ಮರೆ..!
ಅದು ಯಾವಾಗ ಮಾನವ ಆಧುನಿಕತೆ ಸೆಳೆತಕ್ಕೆ ಒಳಗಾದನೋ, ಅಂದಿನಿಂದಲೂ ಭೂಮಿ ಮೇಲಿನ ಇತರ ಜೀವಿಗಳಿಗೆ ನೆಮ್ಮದಿಯೇ ಇಲ್ಲ. ಈಗಾಗಲೇ ಮಾನವನ ದುರಾಸೆ ಪರಿಣಾಮ ನೂರಾರು ಬಗೆಯ ಪ್ರಾಣಿಗಳು, ಪಕ್ಷಿಗಳು ಹಾಗೂ ಸಸ್ಯ ಸಂತತಿ ನಾಶವಾಗಿ ಹೋಗಿದೆ. ಇದೀಗ ಆ ಸರದಿ ಪೆಂಗ್ವಿನ್ಸ್ ಪಾಲಿಗೆ ಬಂದು ನಿಂತಿದೆ. ಉತ್ತರ ಧ್ರುವ ಪ್ರದೇಶದಲ್ಲಿ ತಾಪಮಾನ ಏರಿಕೆ ಪರಿಣಾಮ ಭಾರಿ ಪ್ರಮಾಣದಲ್ಲಿ ಹಿಮ ಕರಗುತ್ತಿದೆ. ಹೀಗಾಗಿ ಪೆಂಗ್ವಿನ್ಗಳು ಬದುಕುವ ವಾತಾವರಣವೇ ನಾಶವಾಗುತ್ತಿದೆ. ಮತ್ತೊಂದು ಕಡೆ ಆಹಾರದ ಸಮಸ್ಯೆಯೂ ಈ ಮುದ್ದು ಮುದ್ದು ಹಕ್ಕಿಗಳಿಗೆ ಕಾಡುತ್ತಿದೆ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತ ಪೆಂಗ್ವಿನ್ಗಳು ತಮ್ಮ ಸಂತಾನೋತ್ಪತ್ತಿ ಮಾಡುವ ಅನಿವಾರ್ಯತೆ ಎದುರಾಗಿದೆ.
ಹಿಮ ಕರಗಿದರೆ ರಷ್ಯನ್ನರಿಗೆ ಖಷಿ..!
ಹೌದು ಇದು ಕಷ್ಟವೆನಿಸಿದರೂ ಸತ್ಯ. ರಷ್ಯಾದ ಸೈಬೀರಿಯಾ ಭಾಗ ಉತ್ತರ ಧ್ರುವ ಪ್ರದೇಶಕ್ಕೆ ಸಮೀಪದಲ್ಲೇ ಇದ್ದು, ತುಂಬಾ ದೊಡ್ಡದಾದ ಪ್ರಾಂತ್ಯವಾಗಿದೆ. ಇಲ್ಲಿನ ಜನರು ಚಳಿಯ ಅಬ್ಬರಕ್ಕೆ ರೋಸಿ ಹೋಗಿದ್ದಾರೆ. ಈ ನಡುವೆ ಕೆಲವು ದಶಕಗಳಿಂದ ಸೈಬೀರಿಯಾ ಭಾಗದಲ್ಲಿ ಬಿಸಿ ಹೆಚ್ಚಾಗುತ್ತಾ ಹೋಗುತ್ತಿದ್ದು, ಹಿಮದ ಪ್ರಮಾಣ ಕಡಿಮೆಯಾಗುತ್ತಿದೆ. ಅಷ್ಟೇ ಏಕೆ ಸೈಬೀರಿಯಾ ತಾಪಮಾನದಲ್ಲೂ ಏರಿಕೆ ಕಂಡುಬರುತ್ತಿದೆ. ಇದು ಇನ್ನಷ್ಟು ಹೆಚ್ಚಾದರೆ ನಾವು ಎಲ್ಲರಂತೆ ಜೀವನ ನಡೆಸಬಹುದು, ಹಿಮದಿಂದ ಮುಕ್ತಿ ಪಡೆಯಬಹುದು ಎಂಬ ಮಹದಾಸೆ ರಷ್ಯ ದೇಶದ ಸೈಬೀರಿಯನ್ನರಿಗೆ ಇದೆ. ಆದರೆ ತಾಪಮಾನ ಏರಿಕೆ ಇತರ ಜೀವಿಗಳಿಗೆ ಕಂಟಕವಾಗುತ್ತಿದೆ.
ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್
ಭೂಮಿ ಮೇಲೆ ನೀರು ನುಗ್ಗುತ್ತೆ..!
ಇತ್ತೀಚೆಗೆ ವಿಜ್ಞಾನಿಗಳು ಸಂಶೋಧನೆ ನಡೆಸುವಾಗ, ಕ್ಯಾಮರಾ ಕಣ್ಣಿಗೆ ನೂರಾರು ಕಿಲೋಮೀಟರ್ ಉದ್ದದ ಹಿಮದ ಗಡ್ಡೆ ಕಂಡಿತ್ತು. ಇದು ಈವರೆಗೂ ಸಂಶೋಧನೆ ಮಾಡಿರುವ ಅತ್ಯಂತ ದೊಡ್ಡ ಹಿಮಗಡ್ಡೆ ಎನ್ನಲಾಗಿದೆ. ಈ ಹಿಮಗಡ್ಡೆ ಉತ್ತರ ಧ್ರುವ ಪ್ರದೇಶದಿಂದ ಬಿರುಕುಬಿಟ್ಟು, ಕರಗುತ್ತಾ ಸಮುದ್ರದಲ್ಲಿ ತೇಲಿ, ತೇಲಿ ಸಾಗುತ್ತಿತ್ತು. ಇದೊಂದು ಉದಾಹರಣೆ ಅಷ್ಟೇ, ಉತ್ತರ ಧ್ರುವದಲ್ಲಿ ಏನಾಗುತ್ತಿದೆ ಎಂಬ ಪೂರ್ಣ ಮಾಹಿತಿ ವಿಜ್ಞಾನಿಗಳಿಗೂ ಸಿಕ್ಕಿಲ್ಲ. ಅಂದರೆ ನೀವೆ ಊಹಿಸಿಕೊಳ್ಳಿ ಉತ್ತರ ಧ್ರುವದ ಹಿಮ ಯಾವ ಪ್ರಮಾಣದಲ್ಲಿ ಕರಗುತ್ತಿದೆ ಎಂಬುದನ್ನ. ಹೀಗೆ ಹಿಮ ಕರುಗುತ್ತಿರುವ ಪರಿಣಾಮ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾ ಸಾಗಿ, ಭೂಮಿ ಮೇಲೆ ನೀರು ನುಗ್ಗುವ ಆತಂಕವಿದೆ. ಅದರಲ್ಲೂ ಕರಾವಳಿ ಪ್ರದೇಶಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.
ಸೈಬೀರಿಯಾ ಪ್ರಾಂತ್ಯದಲ್ಲಿ ಏನಾಗುತ್ತಿದೆ..?
ಜಗತ್ತಿಗೆ ಶೇಕಡ 10ರಷ್ಟು ಆಕ್ಸಿಜೆನ್ ಪೂರೈಕೆ ಆಗುತ್ತಿರುವುದು ರಷ್ಯಾದ ಕಾಡುಗಳಿಂದ. ಅದರಲ್ಲೂ ರಷ್ಯಾದ ಅರಣ್ಯ ಸಂಪತ್ತು ಬಹುಪಾಲು ಅವಲಂಬಿಸಿರುವುದು ಸೈಬೀರಿಯಾ ಮೇಲೆ. ಆದರೆ ಗ್ಲೋಬಲ್ ವಾರ್ಮಿಂಗ್ನ ವ್ಯತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ. ಸೈಬೀರಿಯಾದಲ್ಲಿ ಹಬ್ಬಿರುವ ಕಾಡ್ಗಿಚ್ಚು ಮಾನವನ ವಿನಾಶಕ್ಕೆ ನಾಂದಿ ಹಾಡಿದಂತಿದೆ. ಏಕೆಂದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಹಬ್ಬಿರುವ ಅರಣ್ಯ ಪ್ರದೇಶ ಹಾಗೂ ಅಲ್ಲಿನ ಮಣ್ಣು ಭಾರಿ ಪ್ರಮಾಣದಲ್ಲಿ ಕಾರ್ಬನ್ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಇದೀಗ ಹೊತ್ತಿರುವ ಕಾಡ್ಗಿಚ್ಚಿನ ಪರಿಣಾಮ ಊಹೆಗೂ ನಿಲುಕದಷ್ಟು ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ವಾತಾವರಣ ಸೇರುತ್ತಿದೆ. ಈಗಾಗಲೇ 250 ಮೆಗಾಟನ್ ಕಾರ್ಬನ್ ಸೈಬೀರಿಯಾ ಕಾಡ್ಗಿಚ್ಚಿನಿಂದ ವಾತಾವರಣ ಸೇರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇಕಡ 35ರಷ್ಟು ಹೆಚ್ಚಾಗಿದೆ.
ಚಳಿ ಚಳಿ ತುಂಬಾ ಚಳಿ..!
ಸೈಬೀರಿಯಾ ರಷ್ಯಾದ ಪ್ರಮುಖ ಪ್ರಾಂತ್ಯಗಳಲ್ಲಿ ಒಂದು. ಸೈಬೀರಿಯಾ ಉತ್ತರ ಧ್ರುವ ಪ್ರದೇಶದಿಂದ ಕೇವಲ 6 ಸಾವಿರ ಕಿಲೋಮೀಟರ್ ದೂರದಲ್ಲಿದೆ. ಈಗ ನೀವೆ ಊಹಿಸಿ, ಇಲ್ಲಿ ಚಳಿಯ ಪ್ರಮಾಣ ಹೇಗಿರಬಹುದು ಎಂಬುದನ್ನ. ಇಲ್ಲಿ ವರ್ಷವೆಲ್ಲಾ ಚಳಿಯೇ ಆವರಿಸಿರುತ್ತದೆ. ಅದೆಷ್ಟರಮಟ್ಟಿಗೆ ಎಂದರೆ ಬೇಸಿಗೆ ಬಂದರು ಕೂಡ ಉಷ್ಣಾಂಶ 15 ಡಿಗ್ರಿ ಮೀರುವುದಿಲ್ಲ. ಹಾಗಾದರೆ ಚಳಿಗಾಲವನ್ನು ನೀವೇ ಊಹೆ ಮಾಡಿಕೊಳ್ಳಿ. ಉದಾಹರಣೆಗೆ 1884ರಲ್ಲಿ ದಾಖಲಾಗಿದ್ದ 7.8 ಡಿಗ್ರಿ ಉಷ್ಣಾಂಶ ರಾಜ್ಯ ರಾಜಧಾನಿಯ ಇತಿಹಾಸದಲ್ಲಿ ಅಂತ್ಯಂತ ಕನಿಷ್ಠವಾಗಿದೆ. ಇಷ್ಟು ಚಳಿಗೆ ಇಡೀ ಬೆಂಗಳೂರು ನಡುಗಿ ಹೋಗಿತ್ತು. ಹಾಗೆ ನೋಡಿದರೆ ಸೈಬೀರಿಯಾ ಪ್ರಾಂತ್ಯದಲ್ಲಿ ಇದು ಮಾಮೂಲಿ ತಾಪಮಾನ, ಅಲ್ಲಿ ಬೇಸಿಗೆಯಲ್ಲೂ ಇಷ್ಟೇ ಕನಿಷ್ಠ ತಾಪಮಾನ ಇರುತ್ತದೆ. ಹೀಗಾಗಿ ಅಲ್ಲಿನ ಭೂಮಿ ಸದಾ ತೇವದಿಂದ ಕೂಡಿರುತ್ತದೆ.
ಚಳಿಯಲ್ಲೂ ಬೆಂಕಿ ಹೊತ್ತಿಕೊಂಡಿದೆ
ಇಷ್ಟು ಕನಿಷ್ಠ ತಾಪಮಾನ ಇರುವ ಪ್ರದೇಶ ಸೈಬೀರಿಯಾದಲ್ಲೂ ಕಾಡ್ಗಿಚ್ಚು ಹಬ್ಬಿದೆ. ಸೈಬೀರಿಯಾದ ನಗರಗಳ ಮೇಲೆ ಕಾರ್ಬನ್ ಮೋಡಗಳು ರಾರಾಜಿಸುತ್ತಿವೆ. ಲಕ್ಷಾಂತರ ಎಕರೆ ಕಾಡಿಗೆ ಬೆಂಕಿ ಬಿದ್ದಿದ್ದು, ಬೆಂಕಿ ನಂದಿಸಲು ರಷ್ಯಾ ಸರ್ಕಾರ ಪರದಾಡುತ್ತಿದೆ. ತಾಪಮಾನ ಹೆಚ್ಚಾಗಿರುವ ಪ್ರದೇಶದಲ್ಲಿ ಕಾಡ್ಗಿಚ್ಚು ಹೊತ್ತುವುದು ಮಾಮೂಲಿ ಎನ್ನಬಹುದು. ಆದರೆ ಇಲ್ಲಿ ಆಗಿರುವುದು ಉಲ್ಟಾ, ಚಳಿ ಮತ್ತು ತೇವಾಂಶ ಇದ್ದರೂ ಕಾಡು ಧಗಧಗನೆ ಹೊತ್ತಿ ಉರಿಯುತ್ತಿದೆ. ತೇವಾಂಶ ಹೆಚ್ಚಿರುವ ಪರಿಣಾಮ ಭಾರಿ ಪ್ರಮಾಣದ ಮಾಲಿನ್ಯ ಉಂಟಾಗುತ್ತಿದೆ.
ಸಸ್ಯಗಳ ಪಳಿಯುಳಿಕೆ ಇದಕ್ಕೆ ಕಾರಣ
ಆರ್ಕಟಿಕ್ ತಪ್ಪಲು ಪ್ರದೇಶದಲ್ಲಿ ಸದಾ ಕಾಲ ತೇವ ಇರುವ ಹಿನ್ನೆಲೆಯಲ್ಲಿ, ಅಲ್ಲಿನ ವಾತಾವರಣಕ್ಕೆ ಒಗ್ಗುವ ಸಸ್ಯ ಸಂಕುಲ ಹರಡಿಕೊಂಡಿದೆ. ಆದರೆ ಕ್ಲಿಷ್ಟಕರ ಸಂದರ್ಭದಲ್ಲಿ ಬಹುಪಾಲು ಸಸ್ಯಗಳು ಈ ತೇವಾಂಶದಲ್ಲಿ ಕೊಳೆತುಬಿಡುತ್ತವೆ. ಕೊಳೆತ ಸಸ್ಯ ಒಣಗಲು ಅಲ್ಲಿ ಅವಕಾಶವೇ ಇಲ್ಲ. ವರ್ಷವಿಡೀ ಸರಿಯಾಗಿ ಬಿಸಿಲನ್ನೇ ಕಾಣದ ನೆಲದಲ್ಲಿ ಕೊಳೆತ ಸಸ್ಯಗಳ ರಾಶಿ ಲಕ್ಷಾಂತರ ವರ್ಷಗಳಿಂದ ಹರಡಿಕೊಂಡಿದೆ. ಈಗ ಸೈಬೀರಿಯಾ ಭಾಗದಲ್ಲಿ ಬಿದ್ದ ಬೆಂಕಿ ಕಾಡಿನ ಜೊತೆಗೆ, ಕೊಳೆತ ಸಸ್ಯಗಳನ್ನೂ ಸುಡುತ್ತಿದೆ. ಹೀಗಾಗಿ ಸಹಜವಾಗಿ ಕಾರ್ಬನ್ ಡೈಆಕ್ಸೈಡ್ ಹಾಗೂ ಕಾರ್ಬನ್ ಮೊನಾಕ್ಸೈಡ್ ಯಥೇಚ್ಛವಾಗಿ ವಾತಾವರಣಕ್ಕೆ ಸೇರುತ್ತಿದೆ. ಇದು ಹೀಗೆ ಮುಂದುವರಿದರೆ ಓಝೋನ್ ಪದರಕ್ಕೆ ಭಾರಿ ಪ್ರಮಾಣದ ಹಾನಿ ಕಟ್ಟಿಟ್ಟಬುತ್ತಿ.
Recommended Video
ಬಿಸಿ ಹೊಗೆ ಧ್ರುವ ಪ್ರದೇಶದತ್ತ ನುಗುತ್ತಿದೆ..!
ಸೈಬೀರಿಯಾ ಅರಣ್ಯದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ಕಾರ್ಬನ್ ವಿಷ ಮಿಶ್ರಿತ ಗಾಳಿಯನ್ನ ಉತ್ತರ ಧ್ರುವ ಪ್ರದೇಶದ ಕಡೆಗೆ ತಳ್ಳುತ್ತಿದೆ. ಈಗಾಗಲೇ ಉತ್ತರ ಧ್ರುವದಲ್ಲಿ ಬಹುಪಾಲು ಮಂಜು ಕರಗಿಹೋಗಿದೆ. ಈ ಮಧ್ಯೆ ಕಾರ್ಬನ್ ವಿಷ ಹಾಗೂ ಬಿಸಿಗಾಳಿ ಅದೇ ಮಂಜು ಆವರಿತ ಪ್ರದೇಶದ ಕಡೆಗೆ ನುಗ್ಗುತ್ತಿರುವುದು ವಿನಾಶಕ್ಕೆ ನಾಂದಿ ಹಾಡಿದೆ. ಧ್ರುವ ಪ್ರದೇಶದಲ್ಲಿ ಹರಡಿರುವ ಹಿಮ ಮತ್ತಷ್ಟು ಕರಗುವಂತೆ ಈ ಗಾಳಿ ಪ್ರಚೋದಿಸುತ್ತಿದೆ. ಹೀಗೆ ಆದರೆ ಮುಂದಿನ ದಿನಗಳಲ್ಲಿ ಸಮುದ್ರದ ಮಟ್ಟ ಏರಿಕೆಯಾಗುವ ಜೊತೆಗೆ, ಭೂಮಿಯ ತಾಪಮಾನ ಹಿಡಿತಕ್ಕೆ ಸಿಗದಷ್ಟು ಹೆಚ್ಚಬಹುದೆಂದು ವಿಜ್ಞಾನಿಗಳು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.