ಕಾಮತವಾಡದಲ್ಲೊಂದು ಕೌತುಕದ ಮನೆ; ಒಂಬತ್ತು ತಲೆಮಾರು ಕಂಡ ಸೂರು
ಉತ್ತರ ಕನ್ನಡ ಜಿಲ್ಲೆಯಲ್ಲಿ ತಲತಲಾಂತರದ ಕಥೆ ಹೇಳುವ ಪ್ರಾಚೀನ ಕಟ್ಟಡಗಳಿಗೆ ಕೊರತೆ ಇಲ್ಲ. ಪ್ರತಿ ಊರಿನಲ್ಲೂ ಇತಿಹಾಸದ ತುಣುಕಿನಂತೆ ಕಾಣುವ ಕೆಲವು ಕಟ್ಟಡಗಳು ಈಗಲೂ ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತದೆ.
ಬಿಣಗಾ ಗ್ರಾಮದಲ್ಲಿನ ಈ ಬಂಗಲೆಯಂಥ ಮನೆಯೂ ಅಷ್ಟೆ. ಗತಕಾಲದ ಇತಿಹಾಸವನ್ನು ಮೆಲುಕು ಹಾಕುತ್ತಾ ನಿಂತಂತೆ ಕಾಣುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಮಹಾತ್ಮ ಗಾಂಧೀಜಿ ಬಂದು, ಹಳದೀಪುರಕರ್ ಅವರ ಮನೆಯಲ್ಲಿ ಉಳಿದಿದ್ದ ಇತಿಹಾಸ ಬಹುತೇಕ ಕಾರವಾರಿಗರಿಗೆ ತಿಳಿದಿದೆ. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ, ಇದೀಗ ಭಾಗಶಃ ಸೀಬರ್ಡ್ ನೌಕಾನೆಲೆ ವಶವಾಗಿರುವ ಬಿಣಗಾ ಗ್ರಾಮದ ಈ ಒಂದು ಮನೆಯೂ ಅಂತಹದ್ದೇ ಇತಿಹಾಸವನ್ನು ಹೇಳುತ್ತಿದೆ.
ಮನೆಗಿದೆ 400 ವರ್ಷಗಳ ಇತಿಹಾಸ
ಬಿಣಗಾ ಬ್ರಾಹ್ಮಣವಾಡದ ಕಾಮತ್ ಅವರ ಈ ಮನೆಗೆ ನಾಲ್ಕು ನೂರು ವರ್ಷಗಳ ಇತಿಹಾಸವಿದೆ. ಸೀಬರ್ಡ್ ನೌಕಾನೆಲೆಯ ಈ ಭಾಗದ ಪ್ರವೇಶ ದ್ವಾರಕ್ಕೆ ಕಾಮತ್ ಪ್ರವೇಶ ದ್ವಾರ ಎಂದೇ ಹೆಸರಿಡಲಾಗಿದೆ. ಅತ್ಯಂತ ಹಳೆಯದಾಗಿರುವ ಈ ಬಂಗಲೆಯಲ್ಲಿ ಈಗಲೂ ಆ ಮನೆತನದ ಒಂದು ಕುಟುಂಬ ಬಂಗಲೆಯ ಒಂದು ಭಾಗದಲ್ಲಿ ವಾಸಿಸುತ್ತಿದೆ. ಸುಮಾರು ನಾಲ್ಕುನೂರು ವರ್ಷಗಳ ಹಿಂದೆ, ಪೋರ್ಚುಗೀಸರ ಕಾಲದಲ್ಲಿ ಮೂಲತಃ ಪಶ್ಚಿಮ ಬಂಗಾಳದ ‘ಸಫೇಲಾ ಕಾಮತ್' ಎನ್ನುವವರು ಗೋವಾದಿಂದ ಇಲ್ಲಿಗೆ ಬಂದು ನೆಲೆಸಿದ್ದರು. ಬಂಬತ್ತಕ್ಕೂ ಹೆಚ್ಚು ತಲೆಮಾರುಗಳನ್ನು ಕಂಡಿದೆ ಈ ಮನೆ. ಒಟ್ಟು ಎಂಟು ಕುಟುಂಬದ ಐನೂರು ಜನ ಕೂಡು ಕುಟುಂಬವಾಗಿ ಅನ್ಯೋನ್ಯತೆ ಮತ್ತು ಸಂಬಂಧಗಳ ಸಾರವನ್ನು ಹೇಳುವಂತೆ ಅವಿಭಕ್ತ ಕುಟುಂಬವಾಗಿ ಇಲ್ಲಿ ವಾಸ ಮಾಡಿದ್ದರು ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಪತ್ತೆಯಾಯ್ತು ಇತಿಹಾಸದ ಕಥೆ ಹೇಳುವ ಮಹಿಳಾ ನಿಷಿಧಿ ಶಾಸನ
ಬ್ರಾಹ್ಮಣವಾಡಕ್ಕೆ ‘ಕಾಮತವಾಡ' ಎಂದೂ ಹೆಸರಿದೆ. ಮೂರು ಅಂತಸ್ತಿನ ಈ ಬಂಗಲೆಯನ್ನು ಸಾಗವಾನಿ ಮರಗಳಿಂದ ವಿಶೇಷವಾಗಿ ನಿರ್ಮಿಸಲಾಗಿದೆ. ಸುಮಾರು ಒಂದು ಎಕರೆಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಕಟ್ಟಲಾಗಿದ್ದು, ಹಳೆಯ ಕಟ್ಟಡವಾದರೂ ಬಹಳ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.
ವರ್ಷಕ್ಕೊಮ್ಮೆ ಸೇರುವ ಕುಟುಂಬ ಸದಸ್ಯರು
ಸದ್ಯಕ್ಕೆ ಈಗ ಇಲ್ಲಿ ವಾಸವಿರುವುದು ಸುರೇಶ ವಿದ್ಯಾಧರ ಕಾಮತ್ ಮತ್ತು ಸುಜಾತ ಸುರೇಶ ಕಾಮತ್ ಎನ್ನುವ ದಂಪತಿ. ಈ ಕುಟುಂಬದ ಎಲ್ಲ ಸದ್ಯಸರು ಬೇರೆ ಬೇರೆ ಕಡೆ ವಾಸವಿದ್ದು, ಎಲ್ಲರೂ ಪ್ರತಿಷ್ಠಿತ ಹುದ್ದೆಯನ್ನು ಹೊಂದಿದ್ದಾರೆ. ಅಮೆರಿಕಾದಲ್ಲಿ ಪ್ರಸಿದ್ಧ ವಿಜ್ಞಾನಿಯಾಗಿರುವ ಪ್ರಶಾಂತ ಕಾಮತ್ ಅವರು ಈ ಮನೆಯವರಾಗಿದ್ದು, ಅವರ ತಾಯಿ ನೂರರ ಆಸುಪಾಸಿನವರು. ಈ ಕುಟುಂಬದಲ್ಲಿ ಇರುವ ಎಲ್ಲರೂ ಬೇರೆ ಬೇರೆ ಕಡೆ ವಾಸವಾಗಿದ್ದು, ವರ್ಷಕ್ಕೆ ಒಂದು ಬಾರಿ ಎಲ್ಲರೂ ಇಲ್ಲಿ ಸೇರಿ ಸಮಯವನ್ನು ಕಳೆಯುವುದು ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಜೊತೆಗೆ ಇನ್ನಿತರ ಮದುವೆ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಸೇರಿ ಸಂಭ್ರಮಿಸುವುದೂ ಇದೆ. ಬಿಣಗಾದ ಕಾಮತವಾಡದ ಈ ಕುಟುಂಬ ಅವಿಭಕ್ತ ಕುಟುಂಬಕ್ಕೆ ಒಂದು ಉತ್ತಮವಾದ ಉದಾಹರಣೆಯಾಗಿ ನಿಂತಿದೆ.
ಕೂಡುಕುಟುಂಬದ ಸಾರ ಹೇಳುವ ಮನೆ
ಕಾಲಘಟ್ಟ ಕ್ರಮಿಸಿದಂತೆ ಮನೆಯವರೆಲ್ಲರೂ ಬೇರೆ ಬೇರೆ ಕಡೆಗಳಲ್ಲಿ ವಾಸವಾದರು. ಇದುವರೆಗೂ ಬಂಬತ್ತು ತಲೆಮಾರನ್ನು ಕಂಡಿದೆ ಈ ಮನೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ, ಅದರ ಮಹತ್ವ ಸಾರುವ ಇಂಥ ಮನೆಗಳನ್ನು ಉಳಿಸುವುದೂ ದೊಡ್ಡ ಸವಾಲೇ ಹೌದು. ಅವಿಭಕ್ತ ಕುಟುಂಬಗಳಲ್ಲಿನ ಒಗ್ಗಟ್ಟು, ಪ್ರೀತಿ, ವಿಶ್ವಾಸ, ಮಾನಸಿಕ ಭದ್ರತೆ, ಒಂದುಗೂಡಿ ಬಾಳುವ ಪರಿಕಲ್ಪನೆ, ಬಬ್ಬರನ್ನೊಬ್ಬರು ಸಹಿಸಿಕೊಳ್ಳುವ ಗುಣ, ತ್ಯಾಗ, ಮನೋಭಾವನೆಗಳು, ಹಿರಿಯರಲ್ಲಿ ಗೌರವ ಇವೆಲ್ಲವೂ ಕೂಡುಕುಟುಂಬದ ಸಾರ ಎನ್ನುತ್ತಾರೆ ಸುರೇಶ್ ಕಾಮತ್ ಅವರು.
ಮೂರು ಗಡಿ ಕಲ್ಲು ಸೇರುವಲ್ಲಿದೆ ಇತಿಹಾಸ ಪ್ರಸಿದ್ಧ ತ್ರ್ಯಂಬಕೇಶ್ವರ ದೇಗುಲ
ಅಪರೂಪದ ಪಾತ್ರೆ ಪಗಡೆಗಳು
ಇಂದಿಗೂ ಈ ಮನೆಯಲ್ಲಿ ಹಿಂದಿನವರ ಕಥೆ ಹೇಳುವ ಹಲವು ಸಾಮಗ್ರಿಗಳಿವೆ. ಅವರು ಬಳಸಿ, ಮುಂದಿನ ಪೀಳಿಗೆಗೆ ಬಿಟ್ಟು ಹೋದ ಪಾತ್ರೆ ಪಗಡೆಗಳಿವೆ. ಹಿಂದಿನ ಚೆಂದದ ಬದುಕನ್ನು ನೆನಪಿಸುವ ಮಕ್ಕಳ ಆಟಿಕೆಗಳು, ಕುರ್ಚಿ ಮೇಜುಗಳು ಹಾಗೂ ಹಿಂದಿನ ಫೋಟೋಗಳು ಇತಿಹಾಸವನ್ನು ಸಾಕ್ಷೀಕರಿಸುತ್ತಿವೆ.