ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ. ಸಿ ಎನ್ ಮಂಜುನಾಥ್ ಸಂದರ್ಶನ
Recommended Video
ವೈದ್ಯೋ ನಾರಾಯಣೋ ಹರಿಃ ಎನ್ನುವ ಒಂದು ಮಾತಿದೆ. ಕೇವಲ ವ್ಯಾವಹಾರಿಕ ಮನೋಭಾವನೆಯಿಂದ ತಮ್ಮ ಸೇವಾಧರ್ಮವನ್ನು ಮತ್ತು ಕರ್ತವ್ಯ ಪ್ರಜ್ಞೆಯನ್ನೂ ಮರೆಯದೇ, ತಮ್ಮ ವೈದ್ಯಕೀಯ ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿದವರಲ್ಲಿ ಒಬ್ಬರು ಜಯದೇವ ಹೃದೋಗ ಸಂಸ್ಥೆಯ ನಿರ್ದೇಶಕರಾದಂತಹ ಡಾ. ಸಿ ಎನ್ ಮಂಜುನಾಥ್ ಅವರು.
ಸರಕಾರೀ ಸ್ವಾಮ್ಯದ ಆಸ್ಪತ್ರೆಯೊಂದನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಹೇಗೆ ತೆಗೆದುಕೊಂಡು ಹೋಗಬಹುದು ಎಂದು ತೋರಿಸಿಕೊಟ್ಟ, ಡಾ. ಮಂಜುನಾಥ್, ಜಯದೇವ ಆಸ್ಪತ್ರೆಯನ್ನು ಇನ್ನೂ ಬೆಳೆಸಬೇಕು ಎನ್ನುವ ಕನಸು, ಗುರಿಯನ್ನು ಹೊಂದಿದ್ದಾರೆ.
ಸಿಎಂ ಕುಮಾರಸ್ವಾಮಿ ಆರೋಗ್ಯ ಹೇಗಿದೆ? ಎಚ್ಡಿಕೆ ಭಾವ ಡಾ. ಮಂಜುನಾಥ್ ಸ್ಪಷ್ಟನೆ
'ಒನ್ ಇಂಡಿಯಾ' ಜೊತೆಗಿನ ಸಂದರ್ಶನದಲ್ಲಿ ಡಾ. ಮಂಜುನಾಥ್ ಹಲವಾರು ವಿಚಾರಗಳ ಬಗ್ಗೆ ಮಾತನ್ನಾಡಿದ್ದಾರೆ. ಅವರ ಸಂದರ್ಶನದ ಪ್ರಮುಖಾಂಶ ಇಂತಿದೆ:
ಪ್ರ: 1988ರಲ್ಲಿ ಕೆಎಂಸಿ, ಮಣಿಪಾಲದಲ್ಲಿ ಡಿಎಂ ಮುಗಿಸಿದ ನಂತರ, ಡಾಕ್ಟರ್ ಆಗಿ ಮೊದಲು ಸೇವೆ ಸಲ್ಲಿಸಿದ ಆಸ್ಪತ್ರೆಯಾವುದು?
ಡಾ.ಮಂಜುನಾಥ್: ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಾನು ಎಂಡಿ ಮಾಡುತ್ತಿರಬೇಕಾದರೆ ನಾನು ಅಸಿಸ್ಟೆಂಟ್ ಸರ್ಜನ್ ಆಗಿ ನೇಮಕವಾದೆ. ಮೊದಲು ಮೂರು ತಿಂಗಳು, ಕೆ ಆರ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದೆ. ಅಲ್ಲಿಂದ ಡಿಎಂ ಮಾಡಲು, ಕೆಎಂಸಿ ಮಣಿಪಾಲಿಗೆ ಸೇರಿಕೊಂಡೆ. ಜನವರಿ 1989ರಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಸೇರಿಕೊಂಡೆ.
ನಾನು ಪ್ರಾಧ್ಯಾಪಕನಾಗಿ ಸೇರಿಕೊಂಡೆ
ಪ್ರ: ಜಯದೇವ ಆಸ್ಪತ್ರೆಗೆ ನೀವು ಸೇರಿಕೊಂಡಾಗ ನಿರ್ದೇಶಕರಾಗಿ ಸೇರಿಕೊಂಡ್ರಾ?
ಡಾ.ಮಂಜುನಾಥ್: ಇಲ್ಲ, ನಾನು ಪ್ರಾಧ್ಯಾಪಕನಾಗಿ ಸೇರಿಕೊಂಡೆ. ನಂತರ, ಹಂತಹಂತವಾಗಿ ನನ್ನ ಸರ್ವಿಸಿಗೆ ಅನುಗುಣವಾಗಿ 1996ರಲ್ಲಿ ನನಗೆ ಪ್ರೊಫೆಸರ್ ಆಗಿ ಪ್ರಮೋಷನ್ ಸಿಕ್ತು. 2006ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ಜವಾಬ್ದಾರಿಯನ್ನು ತೆಗೆದುಕೊಂಡೆ.
ಪ್ರ: ಸರಕಾರೀ ಸ್ವಾಮ್ಯದ ಆಸ್ಪತ್ರೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯವಾಯಿತು?
ಡಾ.ಮಂಜುನಾಥ್: ಸರಕಾರೀ ಕಾಲೇಜುಗಳಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಓದುತ್ತಾರೆ. ಪ್ರಮುಖವಾದ ಸಮಸ್ಯೆ ಏನಂದರೆ, ಸರಕಾರೀ ಆಸ್ಪತ್ರೆಗಳ ನಿರ್ವಹಣೆ ಚೆನ್ನಾಗಿರುವುದಿಲ್ಲ. ಜನರಲ್ಲಿ ಸರಕಾರೀ ಆಸ್ಪತ್ರೆಯೆಂದರೆ ಒಳ್ಲೆಯ ಭಾವನೆಯಿಲ್ಲ. ಬಹಳಷ್ಟು ಬಾರಿ ಅಂದುಕೊಂಡಿದ್ದೆ, ನನಗೆ ಸರಕಾರೀ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿದರೆ, ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಅಂದುಕೊಂಡಿದ್ದೆ. ಅದರಲ್ಲಿ ನಾವು ಯಶಸ್ವಿಯಾಗಿದ್ದೇನೆ.
ಗುಣಮಟ್ಟದ ಚಿಕಿತ್ಸೆ ನೀಡಬೇಕು ಎನ್ನುವುದೇ ನನ್ನ ಸಂಕಲ್ಪ
ಪ್ರ: ರೋಗಿಗಳು, ರೋಗಿಯ ಕಡೆಯವರು ನಿಮ್ಮಲ್ಲಿ ದೇವರನ್ನು ಕಾಣುತ್ತೇವೆ ಎನ್ನುತ್ತಾರೆ, ಇದಕ್ಕೆ ಪ್ರೇರಣೆಯಾದ ಘಟನೆಯಿದೆಯಾ?
ಡಾ.ಮಂಜುನಾಥ್: ನಾವು ಯಾವುದೇ ರೋಗಿಗೆ ಚಿಕಿತ್ಸೆ ಕೊಡುವಾಗ, ಅವರೊಬ್ಬರನ್ನು ಮಾತ್ರ ನೋಡುವುದಿಲ್ಲ, ಅವರ ಮನೆಯ ಕಡೆಯವರನ್ನೂ ನೋಡಬೇಕಾಗುತ್ತದೆ. ರೋಗಿಗೆ ನಾವು ನೀಡುವ ಚಿಕಿತ್ಸೆ ಫಲಕಾರಿಯಾದರೆ, ಇಡೀ ಕುಟುಂಬವೇ ಸಂತೋಷದಿಂದ ಬಾಳಬಹುದು. ಪ್ರಾಣ ಎನ್ನುವುದು ಬಹಳ ಮುಖ್ಯ. ಇಡೀ ಕುಟುಂಬ ಅವರನ್ನು ನಂಬಿಕೊಂಡು ಇರುತ್ತದೆ.
ಹಣ, ಡಾಕ್ಯುಮೆಂಟ್ಸ್, ಇನ್ಸೂರೆನ್ಸ್ ಇರಲಿ, ಇರದೇ ಇರಲಿ.. ಗುಣಮಟ್ಟದ ಚಿಕಿತ್ಸೆ ನೀಡಬೇಕು ಎನ್ನುವುದೇ ನನ್ನ ಸಂಕಲ್ಪ, ಅದೇ ರೀತಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಸಮಾಜದಲ್ಲಿ ನಾವು ಒಬ್ಬರಿಗೆ ಸಹಾಯ ಮಾಡಿದರೆ, ನಾಲ್ಕು ಜನ ನಮ್ಮ ಕಷ್ಟಕ್ಕೆ ನಿಲ್ಲುತ್ತಾರೆ. ಐವತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದೇವೆ. (ನನ್ನ ಗಮನಕ್ಕೆ ಬಂದ) ಹಣಯಿಲ್ಲದೇ ಯಾವುದೇ ರೋಗಿಗಳನ್ನು ವಾಪಸ್ ಕಳುಹಿಸಿದ ಘಟನೆ ನಡೆದಿಲ್ಲ.
ಮಾವ ಎಚ್ ಡಿ ದೇವೇಗೌಡ್ರ ಬಗ್ಗೆ ಅವರ ಅಳಿಯ ಡಾ. ಸಿ ಎನ್ ಮಂಜುನಾಥ್ ಹೇಳುವುದೇನು?
ಚಿಕಿತ್ಸೆ ಅನ್ನೋದು ರೋಗಕ್ಕಿಂತ ಹೆಚ್ಚು ನೋವು ಕೊಡಬಾರದು
ಪ್ರ: Treatment First Payment Next" ಅನ್ನೋ conceptನಲ್ಲಿ ಸಂಸ್ಥೆಯನ್ನು ನಡೆಸುತ್ತಾ ಬಂದ್ರಿ. ಸರಕಾರದ ಪ್ರೋತ್ಸಾಹ ಹೇಗಿದೆ?
ಡಾ.ಮಂಜುನಾಥ್: ಹೌದು, ಈ ಕಾನ್ಸ್ಪೆಟ್ ಅನ್ನು ನಾನು ಜಾರಿಗೆ ತಂದೆ, ಪ್ರಾಣ ಹೋದ ಮೇಲೆ ಫೈಲ್ ಕಟ್ಟಿಕೊಂಡು ಏನು ಮಾಡಲು ಸಾಧ್ಯ? ವೈದ್ಕಕೀಯ ಕ್ಷೇತ್ರ ಬಹಳ ಸೂಕ್ಷ್ಮವಾದದ್ದು. ಆಸ್ಪತ್ರೆಗೆ ರೋಗಿಗಳು ಬಂದಾಗಲೇ ತುಂಬಾ ನೊಂದಿರುತ್ತಾರೆ. ನೊಂದು ಬಂದ ರೋಗಿಗಳನ್ನು ನೋಯಿಸಬಾರದು ಎನ್ನುವುದು ನನ್ನ ಕೆಲಸದ ಶೈಲಿ.
ಚಿಕಿತ್ಸೆ ಅನ್ನೋದು ರೋಗಕ್ಕಿಂತ ಹೆಚ್ಚು ನೋವು ಕೊಡಬಾರದು. ರೋಗಿಗಳಿಗೆ ಆತ್ಮವಿಶ್ವಾಸ ತುಂಬಾ ಬೇಕಾಗುತ್ತದೆ. ಸರಕಾರದಿಂದ ಜಯದೇವ ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎನ್ನುವುದು ಸುಳ್ಳು. ಬೇರೆ ವೈದ್ಯಕೀಯ ಕಾಲೇಜಿಗೆ ಎಷ್ಟು ಅನುದಾನ ಕೊಡುತ್ತಾರೋ, ಅಷ್ಟೇ ಅನುದಾನ ನಮಗೂ ಸಿಗುತ್ತಿರುವುದು. ಸಿಬ್ಬಂದಿ ವರ್ಗದವರೂ ಉತ್ತಮವಾದ ಕೆಲಸವನ್ನು ಮಾಡುತ್ತಾ ಬರುತ್ತಿದ್ದಾರೆ.
ನೂರ ಇಪ್ಪತ್ತು ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್
ಪ್ರ: ಜಯದೇವ ಆಸ್ಪತ್ರೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಇಟ್ಟುಕೊಂಡಿದ್ದೀರಾ?
ಡಾ.ಮಂಜುನಾಥ್: ಬೆಂಗಳೂರಿನಲ್ಲಿ 650, ಮೈಸೂರಿನಲ್ಲಿ 450, ಕಲಬುರಗಿಯಲ್ಲಿ 110 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಾವು ಹೊಂದಿದ್ದೇವೆ. ಬೆಂಗಳೂರು, ರಾಜಾಜಿನಗರದ ESI ಆಸ್ಪತ್ರೆಯಲ್ಲೂ ಅರವತ್ತು ಬೆಡ್ಡಿನ ಆಸ್ಪತ್ರೆಯನ್ನು ಮಾಡಿದ್ದೇವೆ. ಒಂದೇ ಸೂರಿನಲ್ಲಿ 650 ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆ ನಮ್ಮ ದೇಶದಲ್ಲಿ ಎಲ್ಲೂ ಇಲ್ಲ.
ಆದರೂ, ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ನೂರ ಇಪ್ಪತ್ತು ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ಅನ್ನು ಕಟ್ಟುವ ಯೋಜನೆಯಿದೆ. ಅದಕ್ಕೆ ಕ್ಯಾಬಿನೆಟ್ ಕೂಡಾ ಒಪ್ಪಿಗೆಯನ್ನು ಕೊಟ್ಟಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಿ, ಮುಂದಿನ ವರ್ಷದಲ್ಲಿ ಈ ಹೊಸ ಬ್ಲಾಕ್ ಅನ್ನು ತೆರೆಯುವ ಯೋಜನೆಯಿದೆ.
ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು
ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶ?
ಪ್ರ: ಹೃದಯಕ್ಕೆ ಅಳವಡಿಸುವ ಸ್ಟಂಟ್ ಅನ್ನು ಮೋದಿ ಸರಕಾರ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ, ಈ ಬಗ್ಗೆ?
ಡಾ.ಮಂಜುನಾಥ್: ಜಯದೇವ ಆಸ್ಪತ್ರೆಯಲ್ಲಿ ಕೇಂದ್ರ ಸರಕಾರ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಕಡಿಮೆ ಬೆಲೆಯಲ್ಲಿ (ಮೂವತ್ತರಿಂದ ನಲವತ್ತು ಸಾವಿರ) ಇದನ್ನು ಒದಗಿಸುತ್ತಿದ್ದೇವೆ. ಕೇಂದ್ರ ಸರಕಾರದ ಈ ಯೋಜನೆ ಒಳ್ಳೆಯದೇ, ಆದರೆ, ಪ್ರೈಸ್ ಕ್ಯಾಪ್ ಅಳವಡಿಸಿರುವುದರಿಂದ ಹೊಸ ಹೊಸ ಸ್ಟೆಂಟ್ ಗಳು ದೇಶಕ್ಕೆ ಬರುವುದಿಲ್ಲ. ಡಾಲರ್ ಬೆಲೆ ಏರಿರುವುದು, ಜಿಎಸ್ಟಿ ಮುಂತಾದವುಗಳಿಂದ, ಇದರ ಲಾಭ ರೋಗಿಗಳಿಗೆ ಸಿಗುತ್ತಿಲ್ಲ.
ಪ್ರ: ವೈದ್ಯಕೀಯ ಕ್ಷೇತ್ರವನ್ನು ಆರಿಸುವ ವಿದ್ಯಾರ್ಥಿಗಳಿಗೆ ನಿಮ್ಮ ಸಂದೇಶ?
ಡಾ.ಮಂಜುನಾಥ್: ವೈದ್ಯಕೀಯ ಕ್ಷೇತ್ರವನ್ನು noble profession ಎಂದೇ ಕರೆಯಲಾಗುತ್ತದೆ. ಈ ಕ್ಷೇತ್ರದಲ್ಲಿ ಒಂದೇ ಡಿಗ್ರಿಗೆ ನಮ್ಮ ವೃತ್ತಿ ಮುಗಿಯುವುದಿಲ್ಲ. ಜಾಸ್ತಿ ಕಾಲ ಓದಬೇಕಾಗುತ್ತದೆ, 30-32ವರ್ಷ ಓದಬೇಕಾಗುತ್ತದೆ. ಜೊತೆಗೆ, ಈ ಕ್ಷೇತ್ರವನ್ನು ಆರಿಸಿಕೊಂಡವರಿಗೆ ಅಗಾಧವಾದ ತಾಳ್ಮೆ ಬೇಕಾಗುತ್ತದೆ. ಇಲ್ಲಿ ಹಣ ಕೂಡಲೇ ಸಂಪಾದಿಸಲು ಸಾಧ್ಯವಾಗುವುದಿಲ್ಲ. ವೈದ್ಯರನ್ನು ಸಮಾಜ ಗುರುತಿಸುತ್ತೆ, ರೋಗಿಗಳು ಪೂಜೆ ಮಾಡುತ್ತಾರೆ.