ಅನಂತ್ ಎಂದರೆ... ಕಣ್ಣೀರುಕ್ಕಿಸುವಂತೆ ಆಪ್ತ ಸ್ನೇಹಿತ ಬರೆದ ಸಾಲುಗಳು
ಅನಂತ್ ಕುಮಾರ್ ಅವರಿಗೆ ಸ್ನೇಹಿತರೇನು ಕಡಿಮೆಯೇ? ಅವರನ್ನು ಒಮ್ಮೆ ಭೇಟಿ ಮಾಡಿದರೆ ಸಾಕು ಅವರ ಸ್ನೇಹತ್ವದ ಪರಿಧಿಯೊಳಗೆ ಸೇರಿಸಿಕೊಳ್ಳಬಲ್ಲಂಥ ಚುಂಬಕ ವ್ಯಕ್ತಿತ್ವ ಅವರದು. ಇಂದು ಅನಂತ್ ಅಗಲಿಕೆಯ ಹೊತ್ತಲ್ಲಿ ಅವರ ನೂರಾರು ಸ್ನೇಹಿತರು ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಅಂಥವರಲ್ಲಿ ಅನಂತ್ ಕುಮಾರ್ ಅವರ ಶಾಲಾ-ಕಾಲೇಜು ದಿನಗಳಿಂದಲೂ ಆತ್ಮೀಯ ಸ್ನೇಹಿತರಾಗಿದ್ದ 'ಮೋಹನ್ ಕಾತರ್ಕಿ' ಭಾವುಕ ಸಾಲುಗಳ ಮೂಲಕ ತಮ್ಮ-ಅನಂತ್ ನಡುವಿನ ಒಡನಾಟವನ್ನು ಹಂಚಿಕೊಂಡಿದ್ದಾರೆ.
ಯಾವ ಸಂದರ್ಶನವೂ ಬೇಡ ಎಂದು ಎದ್ದು ಹೊರಟೇಬಿಟ್ಟರು ಅನಂತ್!
ಮೋಹನ್ ಕಾತರ್ಕಿ ಸುಪ್ರೀಂ ಕೋರ್ಟಿನ ವಕೀಲರು. ಆಂತರಿಕ ಜಲ ವಿವಾದದ ಕುರಿತಂತೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರತಿನಿಧಿಸಿರುವ ಅವರು ಅನಂತ್ ಕುಮಾರ್ ಅವರ ಆಪ್ತ ಸ್ನೇಹಿತರು. ಅನಂತ್ ಕುಮಾರ್ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಮೋಹನ್ ಅವರು ಭಾವುಕ ಸಾಲುಗಳಲ್ಲಿ ವ್ಯಕ್ತಪಡಿಸಿದ್ದು ಹೀಗೆ....
ಒಬ್ಬ ಮಹಾನ್ ಸ್ನೇಹಿತ ಇನ್ನಿಲ್ಲ!
"ಅನಂತ್ ಕುಮಾರ್- ಒಬ್ಬ ಮಹಾನ್ ಸ್ನೇಹಿತ ಇನ್ನಿಲ್ಲ! ನಾನು ಈ ದಿನ(ನ.12) ಏಳುತ್ತಿದ್ದಂತೆಯೇ ಈ ಆಘಾತ ಮತ್ತು ಅತೀ ವಿಷಾದದ ಸುದ್ದಿಯನ್ನು ನನ್ನ ಹಳೆಯ ಸ್ನೇಹಿತರೊಬ್ಬರು ತಿಳಿಸಿದರು. ನನ್ನ ಸಹಪಾಠಿ, ಬೆಂಚ್ ಮೇಟ್ ಎಲ್ಲಕ್ಕಿಂತ ಮಿಗಿಲಾಗಿ ನನ್ನ ಒಬ್ಬ ಮಹಾನ್ ಗೆಳೆಯ ಮೃತರಾಗಿದ್ದಾರೆ ಎಂಬ ಸುದ್ದಿ ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದ್ದು. ನಾನು ಮತ್ತು ಅನಂತ್ ಇಬ್ಬರೂ ಹುಬ್ಬಳ್ಳಿಯಲ್ಲಿ ಅಕ್ಕ-ಪಕ್ಕದ ಮನೆಯಲ್ಲಿಯೇ ವಾಸವಿದ್ದೆವು. ಅವರು ಯಾವಾಗಲೂ ಶಾಲೆಗೆ ಹೋಗುವಾಗ ತಮ್ಮ ಸಹೋದರಿ ಮತ್ತು ಸಹೋದರನ ಜೊತೆ ಹೋಗುತ್ತಿದ್ದರು. ಬೆಂಗಳೂರು ಮೂಲದವರಾದರೂ ಅನಂತ್ ಕುಮಾರ್ ಬೆಳೆದಿದ್ದು, ಓದು ಮುಗಿಸಿದ್ದು ಎಲ್ಲಾ ಹುಬ್ಬಳ್ಳಿಯಲ್ಲೇ."
ಹೈಸ್ಕೂಲು ದಿನದಲ್ಲೇ ಜೈಲುವಾಸ!
"ಲ್ಯಾಮಿಂಗ್ಟನ್ ಬಾಯ್ಸ್ ಹೈಸ್ಕೂಲಿನಲ್ಲಿ ಓದುತ್ತಿದ್ದ ಅನಂತ್ ಕುಮಾರ್ ಬಹಳ ಬುದ್ಧಿವಂತ ಹುಡುಗರಾಗಿದ್ದರು. ತಾವು ಲಾಯರ್ ಆಗಿ ನಂತರ ರಾಜಕಾರಣಿಯಾಗುತ್ತೇನೆ ಎಂದು ಆಗಲೇ ಹೇಳುತ್ತಿದ್ದರು. ಅವರಿಗೆ ಆಗಲೇ ತಮ್ಮ ಗುರಿ ಸ್ಪಷ್ಟವಾಗಿತ್ತು. 1975-76 ರಲ್ಲಿ ತುರ್ತುಪರಿಸ್ಥಿತಿಯ ಸಮಯದಲ್ಲಿ ಹೈಸ್ಕೂಲಿನಲ್ಲೇ ಒಂದು ತಂಡವನ್ನು ಕಟ್ಟಿಕೊಂಡು ಪ್ರತಿಭಟನೆಗೆ ಇಳಿದವರು ಅನಂತ್. ತಾವೊಬ್ಬರೇ ಅಲ್ಲದೆ, ಸುಮ್ಮನಿದ್ದ ನಮ್ಮನ್ನೂ 'ಏ, ಅಲ್ಲೇನ್ ಮಾಡ್ತಿದ್ದೀಯಾ? ಬಾ' ಎಂದು ಪ್ರತಿಭಟನೆಗೆ ಸೇರಿಸಿಕೊಂಡು ಧೈರ್ಯ ತುಂಬಿದವರು. ಆ ಸಮಯದಲ್ಲೇ ಜೈಲುವಾಸವನ್ನೂ ಅನುಭವಿಸಿದವರು."
ಅನಂತ್ ಕುಮಾರ್ ಮುಖ್ಯಮಂತ್ರಿ ಆಗಲೇ ಇಲ್ಲ: ಕಾರಣ ಏನು?
ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದ ಅನಂತ್
"1997 ರಲ್ಲಿ ಕೇಂದ್ರ ಸಚಿವರಾದ ನಂತರ ಕರ್ನಾಟಕವನ್ನು ಹಲವು ವಿಷಯಗಳಲ್ಲಿ ಸಮರ್ಥವಾಗಿ ಪ್ರತಿನಿಧಿಸಿದವರು ಅನಂತ್ ಕುಮಾರ್. ಆಂತರಿಕ ಜಲ ವಿವಾದದ ವಿಷಯ ಬಂದಾಗಲಂತೂ ಅವರು ಪಕ್ಷಭೇದ ಮರೆತು ಹೋರಾಡಿದ್ದಾರೆ. ಕಾವೇರಿ ನದಿ ಪ್ರಾಧಿಕಾರ ರಚಿಸುವಲ್ಲಿ ಅನಂತ್ ಕುಮಾರ್ ಕೊಡುಗೆ ಅನನ್ಯ."
ಸರಳ, ಸಜ್ಜನಿಕೆಯ ವ್ಯಕ್ತಿತ್ವ
"ವೈಯಕ್ತಿಕವಾಗಿ ಅವರ ಬಗ್ಗೆ ಹೇಳುವುದಾದರೆ ಅನಂತ್ ಕುಮಾರ್ ಅವರು ತೀರಾ ಸರಳ ವ್ಯಕ್ತಿತ್ವದ ಮನುಷ್ಯ. ರಾಜ್ಯದಲ್ಲಿ ಎಷ್ಟೇ ಜಲವಿವಾದಗಳಾದರೂ ಅವುಗಳ ಕುರಿತು ಸಭೆ ನಡೆಸುವಾಗ ಅನಂತ್ ಕುಮಾರ್ ನನ್ನನ್ನು ಹುಡುಕುತ್ತಿದ್ದರು. ಸಭೆಯ ನಂತರ ಅತ್ಯಂತ ಆಪ್ತತೆಯಿಂದ ಮಾತನಾಡುತ್ತ ಜೊತೆಯಲ್ಲೇ ಊಟ ಮಾಡಿ, ತುಂಟ ಬಾಲಕನಂತೆ ಸಣ್ಣ ಪುಟ್ಟ ಗಾಸಿಪ್ ಗಳ ಬಗ್ಗೆ ಮಾತನಾಡುತ್ತಿದ್ದರು!"
ಅನಂತ ಕುಮಾರ್ ಮಾಡಿದ ಮಹತ್ವದ ಸಾಧನೆಗಳೇನು? ವಿವರ ಇಲ್ಲಿದೆ...
ಬಿಜೆಪಿಯಲ್ಲಿರುವ ಕಾಂಗ್ರೆಸ್ಸಿಗ!
"ಅನಂತ್ ಅವರಿಗೆ ಅಡ್ವಾನಿ ಅವರ ಮೇಲೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ಅವರು ತಮ್ಮ ಮಾತಿನಲ್ಲಿ ಆಗಾಗ ಮಹಾತ್ಮಾ ಗಾಂಧಿ ಅವರನ್ನು ಉಲ್ಲೇಖಿಸುತ್ತಲೇ ಇರುತ್ತಿದ್ದರು. ಅದಕ್ಕೆಂದೇ ನಾನು ಆಗಾಗ ತಮಾಷೆ ಮಾಡುತ್ತಿದ್ದೆ, 'ನೀವು ಬಿಜೆಪಿಯಲ್ಲಿರುವ ಕಾಂಗ್ರೆಸ್ಸಿಗ' ಎಂದು!"
ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್
ಮುಖ್ಯಮಂತ್ರಿಯಾಗುವ ಬಗ್ಗೆ...
"ಒಮ್ಮೆ ಅನಂತ್ ಕುಮಾರ್ ನನ್ನನ್ನು ಪ್ರಶ್ನಿಸಿದ್ದರು. 'ಮುಖ್ಯಮಂತ್ರಿಯಾಗುವ ಅವಕಾಶ ನನಗೆ ಸಿಗುತ್ತೆ ಎಂದು ನಿಮಗನ್ನಿಸುತ್ತದೆಯೇ?' ಎಂದು. ಆಗ ನಾನು ಅವರಿಗೆ ಅವರ ಸಾಮರ್ಥ್ಯ ಬಲ್ಲ ಸ್ನೇಹಿತನಾಗಿ ಹೇಳಿದ್ದೆ, 'ನೀವು ಮುಖ್ಯಮಂತ್ರಿಯಾಗುವ ಬಗ್ಗೆ ಯೋಚಿಸಬೇಡಿ. ಅದಕ್ಕಾಗಿ ಪ್ರಯತ್ನಿಸುವುದಕ್ಕೂ ಹೋಗಬೇಡಿ. ನೀವು ರಾಜ್ಯ ರಾಜಕೀಯದಲ್ಲ, ರಾಷ್ಟ್ರ ರಾಜಕೀಯದಲ್ಲಿ ಬೆಳೆಯಿರಿ, ನಿಮಗೆ ಆ ಸಾಮರ್ಥ್ಯವಿದೆ' ಎಂದಿದ್ದೆ. ಆಗ ಅವರು ನನ್ನ ಕೈ ಹಿಡಿದು, 'ನಿಮ್ಮ ಮಾತು ಸರಿ' ಎಂದು ಸಂತಸದಿಂದ ಹೇಳಿದ್ದರು. ರಾಜಕೀಯದಲ್ಲಿ ಅರಳುತ್ತಿರುವ ಹೊತ್ತಲ್ಲೇ ಅವರು ಈ ಜಗತ್ತನ್ನು ಬಿಟ್ಟು ಹೋಗಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು"