ಸಿಖ್ಖರ ಪುಣ್ಯಸ್ಥಳ ಅಮೃತ್ಸರ ಮತ್ತು ಧರ್ಮಶಾಲಾ ಪ್ರವಾಸ ಕಥನ
ಚಂಡೀಘರ್, ವಾಯುವ್ಯ ಭಾರತದಲ್ಲಿನ 'ಶಿವಲಿಕ್' ಶ್ರೇಣಿಯ ಹಿಮಾಲಯ ಪರ್ವತಗಳ ಬಳಿ ಹಾಗೂ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳ ಗಡಿಯಲ್ಲಿದೆ. ಇಲ್ಲಿ ಪ್ರಸಿದ್ಧ ಹೆಸರಾಂತ 'ರಾಕ್ ಗಾರ್ಡನ್' ನಾಲ್ಕು ದಶಕಗಳ ಹಿಂದೆ ನೋಡಿದ್ದು ಈಚೆಗೆ ಸ್ನೇಹಿತರ ಮಗನ ಮದುವೆ ಚಂಡೀಘರ್ ನಲ್ಲಿ ನಡೆದು ಹೋದಾಗ ಅಮೃತ್ಸರ ಮತ್ತು ಧರ್ಮಶಾಲಾ ನೋಡಿಕೊಂಡು ಬರುವ ಅವಕಾಶ ಲಭಿಸಿತು.
ಅವರೂ ಯಾವಾಗಲೂ ನೀವು ರಾಕ್ ಗಾರ್ಡನ್ ನೋಡಿಬಿಟ್ಟಿರುವಿರಿ ಎಂದಾಗಲೆಲ್ಲಾ ನಾನು ಈಗ ಏನೇನು ಬದಲಾವಣೆಯಾಗಿದೆಯೋ ಎಂದು ಹೇಳುತ್ತಿದ್ದಕ್ಕೆ ಸರಿಯಾಗಿ, ಸ್ವಾಗತವೇ ಕಲ್ಲು ಬಂಡೆಗಳ ಜೋಡಣೆಯ ಮೇಲೆ 1988ರಲ್ಲಿ ಹೊಸದಾಗಿ ಮಾಡಿದ್ದು ಓದಿದಾಗ, ಹಿಂದೆ ಬಂದಿದ್ದಾಗ ಚಿಕ್ಕದಾದ ಪಾರ್ಕ್, ಸಣ್ಣ ಸಣ್ಣ ಕಲ್ಲುಗಳ ಮೇಲೆ ನಡೆದಿದ್ದೆಲ್ಲಾ ನೆನಪಾಯಿತು.
ಈಗ ವಿಶಾಲವಾಗಿ ಎರಡು ಕಡೆಯಲ್ಲೂ ಕಲ್ಲುಗಳಲ್ಲಿ ಕಲಾಕೃತಿಯ ಪ್ರಾಣಿ ಪಕ್ಷಿ, ಗಿಡ ಮರ, ಮನುಷ್ಯರು, ಸೈನಿಕರು, ಮಡಕೆ ಕುಡಿಕೆ, ವನ್ಯರಾಶಿ, ಜಲಪಾತ, ಒಂದು ಕಡೆ ಬೇವಿನ ಮರದ ತರಹ, ಅದಕ್ಕೆ ಭಕ್ತರು ಬಣ್ಣ ಬಣ್ಣದ ಬಟ್ಟೆ ಕಟ್ಟಿದ್ದರೆ, ಅದರ ಪಕ್ಕದಲ್ಲಿ ನಾನೇನು ಕಡಿಮೆ ಎಂದು ಎತ್ತರಕ್ಕೆ ಕವಲೊಡೆದ ಕಳ್ಳಿ ಗಿಡ. ಇನ್ನೂ ಮುಂದೆ ಬಂದಾಗ ಗುಹೆಯ ಒಳಗೆ ಮತ್ತು ಬೀಸು ಕಲ್ಲಿನ ತರಹದ ಚಪ್ಪಡಿ ಕಲ್ಲಿನ ಮೇಲೆ ನಡಿಗೆ ಎಲ್ಲಾ ನೋಡಿಕೊಂಡು ಗೊಂಬೆ ಪ್ರದರ್ಶನಾಲಯಕ್ಕೆ ಬಂದೆವು. ಇದು ಮಾತ್ರ ಬಹಳ ಸೃಜನಾತ್ಮಕವಾಗಿದೆ ಎನ್ನಿಸಿತು. ದಿನ ಪೂರ್ತಿ ಕಳೆದು ಬರುವ ಹಾಗೆ ಚೆನ್ನಾಗಿ ಮಾಡಿರುವರು. ಅಲ್ಲಿಗೆ ಹತ್ತಿರದಲ್ಲೇ ಇದ್ದ ಗುಲಾಬಿ ಹೂವಿನ ವೃಂದಾವನ ಮತ್ತು ಲೇಕ್ ಭೇಟಿಕೊಟ್ಟೆವು.
ಫೆಬ್ರವರಿ ತಿಂಗಳಿನಲ್ಲಿ ಭಾರತ ಮತ್ತು ಪಾಕಿಸ್ತಾನ ಗಲಾಟೆಯಲ್ಲಿ ವಿಮಾನ ಸಂಚಾರವೆಲ್ಲಾ ರದ್ದಾಗಿ ಪ್ರಯಾಣಿಕರಿಗೆಲ್ಲಾ ತುಂಬಾ ತೊಂದರೆಯಾಗಿತ್ತು ಹಾಗೂ ನಮ್ಮ ಭಾರತದ ಸೈನಿಕ ಅಭಿನಂದನ್ ವರ್ಧಮಾನ್ ರವರ ಸಾಹಸದ ಕೆಲಸ ಮತ್ತು ಅವರನ್ನು ಬಂಧಿಸಿದ್ದು ಆಗಿ, ನಂತರ ಶಾಂತ ರೀತಿಯಲ್ಲಿ ಪೂರ್ಣಗೊಂಡಿದ್ದರಿಂದ ನಮಗೆ ಅಮೃತಸರಕ್ಕೆ ಹೋಗಲು ಏನೂ ತೊಂದರೆಯಾಗಲಿಲ್ಲ.
ಅಸಂಖ್ಯಾತ ಓದುಗರ ಆಗ್ರಹದ ಮೇರೆಗೆ, ಬೆಂಗಳೂರು ಭಾಗ 2
ದುರ್ಗಿಯಾನ ದೇವಸ್ಥಾನ ವಿಶಾಲವಾದ ಜಾಗದಲ್ಲಿ ಇದೆ. ಅಮೃತಸರದಲ್ಲಿ ಕ್ರಿ.ಪೂ. 326ರಲ್ಲಿ ಅಲೆಗ್ಸಾಂಡರ್ ಕಾಲದಿಂದಲೂ ಯುದ್ಧದ ಮೈದಾನದಲ್ಲಿ ಹೋರಾಡಿದ ಯುದ್ಧ ವೀರರಿಗೆ 'ಯುದ್ಧ ವೀರರ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ ' ಮಾಡಿದ್ದಾರೆ. ಕಾರ್ಗಿಲ್ ಯುದ್ಧ ಮತ್ತು ಚಾಲ್ತಿಯಲ್ಲಿರುವ ಪ್ರಾಕ್ಸಿ ಯುದ್ಧದವರೆಗೆ ಅಲೆಗ್ಸಾಂಡರ್ ದಿನಗಳಿಂದಲೂ ಪಂಜಾಬ್ ಪವಿತ್ರ ಮಣ್ಣಿನ ಮೇಲೆ ಬೇಕಾದಷ್ಟು ಬಲಿದಾನವಾಗಿವೆ.
ಇದು ಆರನೇ ಗುರು ಗುರುಹರಗೋಬಿಂದ್ ಸಿಂಗ್ ಸಮಯದಲ್ಲಿ ವಿಕಸನಗೊಂಡಿತು. ಈ ಉದ್ದೇಶಿತ ಪ್ರಾಜೆಕ್ಟನ್ನು ಯುದ್ಧವೀರರ ಸ್ಮಾರಕ ಮತ್ತು ಸಂಗ್ರಹಾಲಯ ಎಂದು ಹೆಸರಿಸಲಾಗಿದೆ ಮತ್ತು ಆರನೇ ಗುರುವಿನವರೆಗೆ ಕಾರ್ಗಿಲ್ ಕಾರ್ಯಾಚರಣೆಗಳವರೆಗೆ ತ್ಯಾಗಗಳು ಮತ್ತು ವೀರರ ಕಾರ್ಯಗಳನ್ನು ಪ್ರತಿನಿಧಿಸುವ ಎಂಟು ಗ್ಲಾಲರಿಗಳನ್ನು ಬಹಳ ಕೂಲಂಕಷವಾಗಿ ವಿಮರ್ಶಿಸಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಒಂಬತ್ತನೆಯ ಗ್ಯಾಲರಿ ಮೇಲೆ 45 ಮೀಟರ್ ಎತ್ತರದ ಕತ್ತಿಗಳನ್ನು ಸ್ಥಾಪಿಸಿದ್ದಾರೆ. ಅಲ್ಲಿಂದ ಸೀದಾ ವಾಘಾ ಬಾರ್ಡರ್ ರಿಟ್ರೀಟ್ ಸೆರೆಮನಿ ನೋಡಲು ಬಂದೆವು. ಒಂದು ಕಡೆ ಭಾರತ ಮತ್ತೊಂದು ಕಡೆ ಪಾಕಿಸ್ತಾನ. ಸುಮಾರು 45 ನಿಮಿಷಗಳ ಕಾಲದ ಮನರಂಜನೆಯ ವಾತಾವರಣ, ಪರಿಸರ, 'ಒಂದೇ ಮಾತರಂ' ಕೂಗು, ರಾಷ್ಟ್ರಧ್ವಜದ ಮೆರವಣಿಗೆ ಎಲ್ಲಾ ನಮ್ಮ ದೇಶಭಕ್ತಿಯನ್ನು ತೋರಿಸುತ್ತಿದ್ದು ಅದ್ಭುತವಾಗಿತ್ತು.
ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು
ಅಮೃತಸರ ಎಂದಕೂಡಲೇ ಸ್ವರ್ಣ ಮಂದಿರ ನೋಡಲೇಬೇಕಲ್ಲ. 1577ರಲ್ಲಿ ನಿರ್ಮಿಸಲಾದ ಬೆರಗುಗೊಳಿಸುವ ಚಿನ್ನದ ದೇವಸ್ಥಾನವಿದು. ದೇವಾಲಯದ ಗುಮ್ಮಟವು 750 ಕೆ.ಜಿ ಶುದ್ಧ ಚಿನ್ನದಿಂದ ಕಟ್ಟಲ್ಪಟ್ಟಿದೆ. ಶ್ರೀ ಹರ್ ಮಂದಿರ್ ಸಾಹಿಬ್ ಚಿನ್ನದ ದೇವಸ್ಥಾನದ ಅಧಿಕೃತ ಹೆಸರು. ದೇವಾಲಯದ ಸುತ್ತಲೂ ಪವಿತ್ರ ಕೊಳ ಮತ್ತು ಸಿಖ್ ಪ್ರದೇಶದ ಮುಖ್ಯ ಕಟ್ಟಡಗಳ ಕಾಂಪ್ಲೆಕ್ಸ್ ಇದೆ. ಈ ಕಾಂಪ್ಲೆಕ್ಸ್ ಎಂಬುದು ಸಿಖ್ ಧರ್ಮದ ಪ್ರಮುಖ ಯಾತ್ರಾಸ್ಥಳವಾಗಿದೆ ಮತ್ತು ಅದನ್ನು 'ದರ್ಬಾರ್ ಸಾಹಿಬ್' ಎಂದೂ ಕರೆಯಲಾಗುತ್ತಿದೆ.
ಅಮೃತಸರದ ಸ್ವರ್ಣಮಂದಿರ ಪಂಜಾಬಿಗಳಿಗೆ ಪವಿತ್ರ ಜಾಗ ಹಾಗೂ ಸ್ವರ್ಣಮಂದಿರ ಎಂದ ಕೂಡಲೇ ಅವರು ಭಾವಪರವಶರಾಗುತ್ತಾರೆ. ಮಂದಿರದ ಒಳಗೆ ಹೋಗಲು ಪಾದರಕ್ಷೆ ತೆಗೆದು, ಕಾಲು ತೊಳೆದುಕೊಂಡು ಗಂಡಸರು ತಲೆಗೆ ಕೆಂಪು ಬಟ್ಟೆ ಸುತ್ತಿಕೊಂಡು, ಹೆಂಗಸರು ಸೀರೆಯ ಸೆರಗು ತಲೆಮೇಲೆ ಹಾಕಿಕೊಂಡು ಹೋಗಬೇಕು. ಅಲ್ಲಿಯ ಪ್ರಸಾದವು 'ಗುಳಕ್ಕನೆ ನುಂಗುವಂತಹ ಶೀರಾ'ದ ರುಚಿಯೇ ರುಚಿ!
ದೇಶಭಕ್ತಿ ಎಲ್ಲಾ ಬದ್ನೆಕಾಯಿ ಅನ್ನೋರು ಅಂಡಮಾನ್ ನೋಡಬೇಕು
ನಾವು ಬೆಳಗಿನ ದರ್ಶನ ಮಾಡಿ, ಮಾರ್ಗದಲ್ಲೇ ಇರುವ ಜಲಿಯನ್ ವಾಲಾ ಭಾಗ್ ಗೆ ಬಂದೆವು. ಜಲಿಯನ್ ವಾಲಾ ಭಾಗ್ ಹತ್ಯಾಕಾಂಡವು 13ನೆ ಏಪ್ರಿಲ್ 1919ರಂದು ಅಮೃತಸರದ ಹತ್ಯಾಕಾಂಡದ ಸ್ಥಳವೆಂದು ಕರೆಯಲ್ಪಡುತ್ತಿತ್ತು. ಗೇಟ್ ಒಳಗೆ ಹೋದಕೂಡಲೇ ಸುಂದರವಾದ ಉದ್ಯಾನವನ ನೋಡುತ್ತಾ ಹೋಗಬಹುದು ಹಾಗೂ ಮುಗ್ಧ ಜನರ ಜೀವನವನ್ನು ತೆಗೆದುಕೊಂಡ ಭಯಾನಕತೆಯನ್ನು ನೋಡುವ ಒಂದು ಸ್ಥಳವಾಗಿದೆ. ಅದನ್ನು ನೋಡಿ ನಮಗೆ ಉಕ್ಕಿ ಬರುವ ಭಾವನೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಲ್ಲಿ 36 ಬುಲೆಟ್ಗಳ ಚಿಹ್ನೆಯನ್ನು ನೋಡಬಹುದು. ಬಾವಿಯನ್ನು ನೋಡಿದ ಜನರು ಎಲ್ಲಿಗೆ ಹೋಗಿರಬಹುದೆಂದು ಊಹಿಸಬಹುದು!
ಧರ್ಮಶಾಲಾ : ಧರ್ಮಶಾಲಾ ಕಾಂಗ್ರಾ ಜಿಲ್ಲೆಯ ಪ್ರಧಾನ ಕಚೇರಿಯಾಗಿದೆ. ಇದನ್ನು ಮೊದಲು 'ಭಗ್ಸು' ಎಂದು ಕರೆಯಲಾಗುತ್ತಿತ್ತು. ಧರ್ಮಶಾಲಾ ಮೂಲದ ಟಿಬೇಟಿಯನ್ ಸರ್ಕಾರದ ಮುಖ್ಯಸ್ಥ ಮತ್ತು ಧಾರ್ಮಿಕ ಮುಖಂಡರಾಗಿರುವ ದಲೈಲಾಮ ಮತ್ತು ಕೇಂದ್ರ ಟಿಬೆಟನ್ನ ಆಡಳಿತದ ಮುಖ್ಯಸ್ಥರುಗಳು ಇರುವ ಜಾಗ. ಕಾಂಗ್ರಾದಿಂದ 18 ಕಿ.ಮೀ ದೂರದಲ್ಲಿದೆ. ಇದನ್ನು ಅಪ್ಪರ್ ಧರ್ಮಶಾಲಾ (ಅಮೇರಿಕಾ ತರಹ) McLeod Ganj ಎನ್ನುವರು.
ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ
ಇಲ್ಲಿ ಎಚ್.ಪಿ.ಸಿ.ಏ ಕ್ರಿಕೆಟ್ ಮೈದಾನ, ಪೊಲೀಸ್ ಮೈದಾನ (ಇಲ್ಲಿ ಸಂಜಯ್ ಗಾಂಧೀ ಮತ್ತು ಮೋದಿಯವರು ಭಾಷಣ ಮಾಡಿರುವರಂತೆ) ವಾರ್ ಮೆಮೋರಿಯಲ್ - ಇದು ತುಂಬಾ ವಿಭಿನ್ನವಾಗಿದೆ. ಟೀ ಗಾರ್ಡನ್, ನಡ್ಡಿ ಎತ್ತರದ ಭಾಗದ ನೋಡುವ ಜಾಗ, ದಾಲ್ ಲೇಕ್, ಚಿನ್ಮಯ ತಪೋವನ, ಬುದ್ಧನ ದೇವಸ್ಥಾನವಿದೆ. ಈ ಆವರಣದಲ್ಲೇ ದಲೈಲಾಮ ವಾಸಿಸುವರು. ಇಷ್ಟಲ್ಲದೆ ಧರ್ಮಶಾಲಾ ಶಕ್ತಿಪೀಠಕ್ಕೆ ಹೆಸರುವಾಸಿಯಾಗಿದೆ. ವಜ್ರೇಶ್ವರಿ ಶಕ್ತಿಪೀಠದಲ್ಲಿ ಸತಿ ಅಮ್ಮನವರ ವಕ್ಷಸ್ಥಲದ ಎಡಭಾಗ ಬಿದ್ದಿತೆನ್ನಲಾಗಿದೆ. ಇದು ಟೀ ಗಾರ್ಡ ನ್ ಗೆ ಹತ್ತಿರವಾಗೇ ಇದೆ.
ಅಲ್ಲಿಂದ ಬಾಗ್ ಸುನಾಗ್ ಶಿವ ಮಂದಿರಕ್ಕೆ ಹೋದೆವು. ಇದು ಉದ್ಭವ ಶಿವ ಲಿಂಗ, ಗುಹೆಯೊಳಗಿದೆ. ಎರಡನೆಯ ಶಕ್ತಿಪೀಠ ಜ್ವಾಲಾಮುಖಿ. ಅದ್ಭುತಗಳನ್ನೊಳಗೊಂಡ ಶಕ್ತಿಪೀಠ. ಸತಿ ದೇವಿಯರ ನಾಲಿಗೆ (ಜಿಹ್ವಾ) ಚೂರಾಗಿ ಬಿದ್ದಿತೆನ್ನಲಾಗಿದೆ. ಇದು ಹನ್ನೊಂದು ಚಿಕ್ಕ, ದೊಡ್ಡ ಜ್ವಾಲೆಗಳಾಗಿ ಪ್ರಕಟಗೊಂಡಿದೆ. ಯಾವ ಇಂಧನದ ಸಹಾಯವಿಲ್ಲದೆಯೇ ಪುರಾತನ ಮಂದಿರದ ಗೋಡೆಗಳಲ್ಲಿ ಅನಾದಿಕಾಲದಿಂದ ಉರಿಯುತ್ತಿರುವ ಜ್ವಾಲೆಗಳಿವು. ಮಂದಿರದೊಳಗೆ ಉರಿಯುತ್ತಿರುವ ಈ ಸ್ವಾಭಾವಿಕ ಜ್ವಾಲೆಗಳಿಂದ ಮಂದಿರಕ್ಕೆ ಯಾವ ಹಾನಿಯು ಸಂಭವಿಸಿಲ್ಲ. ಇದನ್ನು ಪವಾಡವೆಂದೇ ಹೇಳಬೇಕು.
ಮೊದಲಿಗೆ ಎರಡು ದೊಡ್ಡ ಜ್ವಾಲೆಗಳು ಕಾಣಿಸುತ್ತೆ. ನಾವು ಅದಷ್ಟೇ ಎಂದುಕೊಂಡಿದ್ದೆವು. ನಂತರ ಅಲ್ಲಿಯವರು ಹೇಳಿ ಅದರ ಪಕ್ಕದಲ್ಲೇ ಇನ್ನೊಂದು ಸಣ್ಣ ಜ್ವಾಲೆ ಮತ್ತು ಪ್ರದಕ್ಷಿಣೆ ಮಾಡುವಾಗ ಇನ್ನು ನಾಲ್ಕು ಜ್ವಾಲೆಗಳು ಕಂಡುಬಂತು. ಮಂದಿರಕ್ಕೆ ಹೋಗುವುದರ ರಸ್ತೆಯೂ ಸಂದಿ ಗೊಂದಿಯಲ್ಲಿ ಆಟೋನಲ್ಲಿ ರೋಲರ್ಕೋಸ್ಟರ್ ತರಹ ಹೋದೆವು. ಭಕ್ತಾದಿಗಳು ಎಲ್ಲ ಕ್ಯೂನಲ್ಲಿ ಭಕ್ತಿಯಿಂದ ನೂಕುನುಗ್ಗಲು ಇಲ್ಲದಂತೆ ದರ್ಶನ ಪಡೆದಿದ್ದು ತುಂಬಾ ಸಮಾಧಾನವಾಯಿತು. ಮೂರನೆಯ ಶಕ್ತಿಪೀಠ ಚಿಂತಪೂರಣಿ ಬೇರೆಕಡೆ ಇದ್ದಿದ್ದರಿಂದ ಹೋಗಲಾಗಲಿಲ್ಲ. ಎರಡು ದಿವಸಗಳು ಧರ್ಮಶಾಲಾನಲ್ಲಿ ಕಳೆದಿದ್ದೆ ಗೊತ್ತಾಗದೆ ಪಂಜಾಬ್ ಮತ್ತು ಹಿಮಾಚಲ್ ಪ್ರದೇಶದ ಹಿಮದ ಬೆಟ್ಟಗಳ ಪ್ರಕೃತಿ ಸೌಂದರ್ಯದ ಪ್ರವಾಸ ತುಂಬಾ ಚೆನ್ನಾಗಿತ್ತು.